ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭರ್ತೃಹರಿ


 ಭರ್ತೃಹರಿ 


ಭರ್ತೃಹರಿ ಸಂಸ್ಕೃತ ಸಾಹಿತ್ಯದಲ್ಲಿ ಪ್ರಸಿದ್ದ ವಿದ್ವಾಂಸ. ಈತನ ಕಾಲ ಸುಮಾರು ಏಳನೆಯ ಶತಮಾನ. 

ಭರ್ತೃಹರಿ ಕಾವ್ಯ ಎಷ್ಟು ಪ್ರಸಿದ್ಧವೋ ವ್ಯಕ್ತಿತ್ವ ಅಷ್ಟೇ ಅಜ್ಞಾತ. ಈತನ ಕಾಲ ಮತ್ತು ಜೀವನದ ಬಗೆಗೆ ಏನೂ ತಿಳಿಯದು. ಹೀಗಾಗಿ ದಂತ ಕಥೆಗಳು ವಿಪುಲ. ದಂತಕಥೆಯ ಆಧಾರದ ಮೇಲೆ ಈತನನ್ನು ಶಕವರ್ಷ ಸ್ಥಾಪಕ ವಿಕ್ರಮಾಂಕನ ಅಣ್ಣನಾದರೂ,  ಈತನಲ್ಲಿ ರಾಜವೈಭವದ ಯಾವ ಸೊಂಕೂ ಕಾಣದು. ಆದ್ದರಿಂದ ಇವೆಲ್ಲ ದಂತಕಥೆಯೇ ಹೊರತು ವಿಷಯಕ್ಕೆ ಮಹತ್ತ್ವವಿಲ್ಲ ಎಂದು ವಿದ್ವಾಂಸರ ಅಭಿಪ್ರಾಯ.

ಭರ್ತೃಹರಿಯ ಗ್ರಂಥಗಳು ವಾಕ್ಯಪದೀಯ, ಸುಭಾಷಿತ ತ್ರಿಶತೀ ಎಂಬ ಎರಡು ಗ್ರಂಥಗಳು. ವಾಕ್ಯಪದೀಯ ವ್ಯಾಕರಣಶಾಸ್ತ್ರದ ದಾರ್ಶನಿಕ ತತ್ತ್ವಗಳನ್ನು ವಿವರಿಸುವ ಗ್ರಂಥ. ಈ ಗ್ರಂಥದಲ್ಲಿ ಸುಮಾರು 2,000 ಶ್ಲೋಕಗಳಿವೆ. ಎಲ್ಲವೂ ಅನುಷ್ಟುಪ್ ಛಂದಸ್ಸಿನಲ್ಲಿ ಬರೆದವು. ವಾಕ್ಯ ಮತ್ತು ಪದವನ್ನು ಅಧಿಕರಿಸಿ ಬರೆದ ಗ್ರಂಥ ವಾಕ್ಯಪದೀಯ. ವಾಕ್ಯ ಪದೀಯದಲ್ಲಿರುವ ವಿಷಯ ಗಹನವಾದದ್ದು. ಕೈಯಟ, ಭಟ್ಟೋಜೀದೀಕ್ಷಿತ, ನಾಗೇಶಭಟ್ಟ ಮುಂತಾದ ವೈಯಾಕರಣರು ವಾಕ್ಯಪದೀಯವನ್ನು ಅತ್ಯಂತ ಪ್ರಾಮಾಣಿಕವೆಂದು ಗೌರವಿಸಿ ತಮ್ಮ ಗ್ರಂಥಗಳಲ್ಲಿ ಇದರಿಂದ ವಾಕ್ಯಗಳನ್ನು ಉದ್ಧರಿಸಿದ್ದಾರೆ.

ಸುಭಾಷಿತ ತ್ರಿಶತೀ  ಕೃತಿಯಲ್ಲಿ ನೀತಿಶತಕ, ಶೃಂಗಾರಶತಕ, ವೈರಾಗ್ಯಶತಕಗಳೆಂಬ ಮೂರು ಶತಕಗಳಿವೆ. ಒಂದೊಂದು ಶತಕದಲ್ಲಿ 100 ಶ್ಲೋಕಗಳಂತೆ ಒಟ್ಟು 300 ಶ್ಲೋಕಗಳಿವೆ. ಇದನ್ನು ಅಬ್ರಹಾಮ್ ರೋಜರ್ ಎಂಬ ಪಾಶ್ಚಾತ್ಯ ಪಂಡಿತ 1651ರಲ್ಲಿಯೇ ಡಚ್ ಭಾಷೆಗೆ ಅನುವಾದಿಸಿದ. ಶಿಲ್ಹಣನೆಂಬ ವೈಷ್ಣವ ಕವಿ ತನ್ನ ಸುಭಾಷಿತ ಸಂಗ್ರಹದಲ್ಲಿ ಭರ್ತೃಹರಿಯ ತ್ರಿಶತಿಯಿಂದ ಅನೇಕ ವಿಷಯಗಳನೋ ಕವಿತಾಪಾದಗಳನೋ ಎರವಲಾಗಿ ಪಡೆದಿದ್ದಾನೆ. ತ್ರಿಶತಿಯ ಶೈಲಿ ಸರಳ ಮನೋಹರ ಹೃದಯಸ್ಪರ್ಶಿಯಾಗಿದೆ. ನೀತಿಶತಕದಲ್ಲಿ ಮೂರ್ಖಪದ್ಧತಿ ವಿದ್ವತ್ ಪದ್ಧತಿ ಮುಂತಾದ ಹತ್ತು ಪ್ರಕರಣಗಳೂ ಶೃಂಗಾರ ಶತಕದಲ್ಲಿ ಐದು ಪ್ರಕರಣಗಳೂ ವೈರಾಗ್ಯಶತಕದಲ್ಲಿ ಐದು ಪ್ರಕರಣಗಳೂ ಇವೆ.

ನೀತಿಶತಕದಲ್ಲಿ ಭರ್ತೃಹರಿ ಸಜ್ಜನರ ಸ್ನೇಹದ ಬಗೆಗೆ ಈ ರೀತಿ ಹೇಳುತ್ತಾನೆ :

ದುರ್ಜನರ ಸ್ನೇಹ ಪೂರ್ವಾಹ್ಣದ ನೆರಳಿನಂತೆ ಮೊದಲು ದೊಡ್ಡದಾಗಿದ್ದು ಕ್ರಮೇಣ ಕ್ಷಯಿಸುತ್ತಾ ಹೋಗುವುದು. ಸಜ್ಜನರ ಸ್ನೇಹ ಅಪರಾಹ್ಣದ ನೆರಳಿನಂತೆ.

ಶೃಂಗಾರ ಶತಕದಲ್ಲಿ ವಿರಹಿ ದುಃಖವನ್ನು ಈ ರೀತಿ ತೋಡಿಕೊಳ್ಳುತ್ತಾನೆ:

ದೀಪವಿದೆ, ಅಗ್ನಿಇದೆ, ನಕ್ಷತ್ರ, ರತ್ನ ಚಂದ್ರರು ಪ್ರಕಾಶಿಸುತ್ತಿದ್ದಾರೆ. ಆದರೂ ನನ್ನ ಹರಿಣಲೋಚನೆ ಇಲ್ಲದ್ದರಿಂದ ಜಗತ್ತೆಲ್ಲ ನನ್ನ ಪಾಲಿಗೆ ಕತ್ತಲೆಯಿಂದ ತುಂಬಿಹೋಗಿದೆ.

ವೈರಾಗ್ಯಶತಕದಲ್ಲಿ ನಿತ್ಯಸಂತುಷ್ಟನಾದ ವಿರಕ್ತ ರಾಜನಿಗೆ ಹೇಳುವ ಮಾತಿದು:

ಎಲೈ ರಾಜನೆ, ನಾವು ನಾರು ಬಟ್ಟೆಗಳಿಂದ ಸಂತುಷ್ಟರಾಗಿದ್ದೇವೆ, ನೀನು ವಿಚಿತ್ರವಾದ ರೇಷ್ಮೆಯ ಬಟ್ಟೆಗಳಿಂದ ಸಂತುಷ್ಟನಾಗಿದ್ದೀಯೆ. ನಮ್ಮಿಬ್ಬರ ಸಂತೋಷವೂ ಒಂದೇ. ಇದರಲ್ಲಿ ವಿಶೇಷವಿಲ್ಲದ್ದೇ ಒಂದು ವಿಶೇಷ. ಯಾವನಿಗೆ ಧನದ ಆಸೆ ಹೆಚ್ಚಾಗಿದೆಯೋ ಅವನೇ ದರಿದ್ರ. ಮನಸ್ಸು ತೃಪ್ತವಾದಾಗ ಧನಿಕನಾರು? ದರಿದ್ರನಾರು? 

Great Sanskrit scholar Bartruhari of 7th century 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ