ಕುಂದ್ಮುಲ್ ರಂಗರಾವ್
ಕುದ್ಮುಲ್ ರಂಗರಾವ್
ಕುದ್ಮುಲ್ ರಂಗರಾವ್ ಮಹಾನ್ ಸಮಾಜ ಸುಧಾರಕರು. ಮಹಾತ್ಮ ಗಾಂಧೀಜಿಯವರು ಸಹಾ ಕುದ್ಮುಲ್ ರಂಗರಾವ್ ಅವರಿಂದ ಪ್ರಭಾವಿತರಾಗಿ ಅವರನ್ನು ಗುರುವರ್ಯ ಎಂದು ಸ್ತುತಿಸಿದ್ದಾರೆ.
ರಂಗರಾವ್ ಅವರು ಕಾಸರಗೋಡಿನ ಕುದ್ಮುಲ್ ಎಂಬ ಸಣ್ಣ ಗ್ರಾಮದಲ್ಲಿ 1859ರ ಜೂನ್ 29ರಂದು ಜನಿಸಿದರು. ತಂದೆ ದೇವಪ್ಪಯ್ಯ. ತಾಯಿ ಗೌರಿ. ಬಹು ಕಷ್ಟದಿಂದಲೇ ಬಾಲ್ಯ ಶಿಕ್ಷಣವನ್ನು ಕಾಸರಗೋಡಿನಲ್ಲಿ ಮುಗಿಸಿ ಉದ್ಯೋಗಕ್ಕಾಗಿ ಮಂಗಳೂರಿಗೆ ಬಂದರು.
ಇವರ ಪತ್ನಿ ರುಕ್ಮಿಣಿ ದೇವಿ. ಇವರಿಗೆ 3 ಮಂದಿ ಗಂಡು ಮಕ್ಕಳು ಮತ್ತು 3 ಮಂದಿ ಹೆಣ್ಣು ಮಕ್ಕಳು.
ಕುದ್ಮುಲ್ ರಂಗರಾವ್ ಮಂಗಳೂರಿನಲ್ಲಿ ಎಂಟು ರೂಪಾಯಿ ಸಂಭಳಕ್ಕೆ ಶಿಕ್ಷಕರಾಗಿ ದುಡಿಯುತ್ತಾ ಮಟ್ರಿಕ್ಯುಲೇಷನ್ ಮುಗಿಸಿ ಅಂಚೆ ತೆರಪಿನ ಶಿಕ್ಷಣ ಪಡೆದರು. ಹೀಗೆ ಪ್ಲೀಡರ್ಷಿಪ್ ಪರೀಕ್ಷೆ ಪಾಸು ಮಾಡಿದರು. ಇದು ಅವರಿಗೆ ತಮ್ಮ ಅರ್ಜಿದಾರರ ಪರವಾಗಿ ಕೋರ್ಟಿನಲ್ಲಿ ವಾದ ಮಾಡುವ ಅರ್ಹತೆ ತಂದಿತು. ಮಂಗಳೂರಿನಲ್ಲಿ ವಕೀಲರಾಗಿ ಕಾರ್ಯ ಆರಂಭಿಸಿದರು. ಇವರು ಬಡಜನರ ಲಾಯರ್ ಎಂದು ಹೆಸರು ಪಡೆದರು. ಬಡಜನರ ಕಷ್ಟಕಾರ್ಪಣ್ಯಗಳಿಗೆ ಅವರ ಹೃದಯ ಮರುಗುತ್ತಿತ್ತು.
ಒಂದೆಡೆ ಬ್ರಿಟಿಷರು, ಮತ್ತೊಂದೆಡೆ ಭೂಮಾಲಿಕರ ಹಿಡಿತವಿದ್ದ ಆ ದಿನಗಳಲ್ಲಿ ಶೋಷಣೆಗೊಳಗಾದವರ ಕಡೆ ಯಾರ ಗಮನವೂ, ಕಾಳಜಿಯೂ ಇಲ್ಲದ ವಾತಾವರಣವಿತ್ತು. ಜಾತೀಯ ವರ್ಣಭೇದಗಳಿಂದ ನಲುಗಿದವರ ಪಾಡಂತೂ ಹೇಳತೀರದಾಗಿತ್ತು. ಹೃದಯವಂತಿಕೆ ತುಂಬಿದ ಉದಾರ ಹೃದಯಿಗಳಾದ ಕುದ್ಮುಲ್ ರಂಗರಾವ್ ಅವರಿಗೆ ಈ ವಾತಾವರಣ ಜಿಗುಪ್ಸೆ ಹುಟ್ಟಿಸಿತು.
ಮಂಗಳೂರಲ್ಲಿ 1870ರಲ್ಲಿ ಬ್ರಹ್ಮಸಮಾಜದ ಶಾಖೆ ಆರಂಭವಾಯಿತು. ಕುದ್ಮುಲ್ ರಂಗರಾವ್ ಇದರಿಂದ ಪ್ರಭಾವಿತರಾಗಿದ್ದರು. 'ಪ್ರಗತಿಗೆ ವಿದ್ಯೆಯೇ ಮೂಲ' ಎಂದು ನಂಬಿದ್ದ ರಂಗರಾವ್ ಶೋಷಿತ ವರ್ಗದ ಸಮುದಾಯದ ಮಕ್ಕಳಿಗೆ ವಿದ್ಯೆ ನೀಡುವ ಕುರಿತು ಚಿಂತಿಸಿದರು. ಸಿರಿವಂತರು ಮತ್ತು ಜಾತೀಯ ಪ್ರಭೃತಿಗಳಾದ ತಮ್ಮವರೇ ಆದ ಜನರ ವಿರೋಧಗಳನ್ನೂ ಲೆಕ್ಕಿಸದೆ ಕಂಕನಾಡಿ, ಮೂಲ್ಕಿ , ಬೋಳೂರು, ಉಡುಪಿ, ಬನ್ನಂಜೆ, ನೇಜಾರು, ಅತ್ತಾವರ, ಬಾಬುಗುಡ್ಡೆ, ದಡ್ಡಲ್ ಕಾಡುಗಳಲ್ಲಿ ಹಿಂದುಳಿದವರಿಗಾಗಿ ಉಚಿತ ಶಾಲೆಗಳನ್ನು ತೆರೆದರು. ಆ ಶಾಲೆಗಳನ್ನು 'ಪಂಚಮ ಶಾಲೆ'ಗಳೆಂದು ಕರೆಯುತಿದ್ದರು. ಮಕ್ಕಳನ್ನು ಶಾಲೆಗೆ ಕಳುಹುವುದನ್ನು ಪ್ರೋತ್ಸಾಹಿಸಲು ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದರು. ಮಕ್ಕಳನ್ನು ಶಾಲೆಗೆ ಕಳುಹಿಸುವ ಪೋಷಕರಿಗೆ ದಿನಕ್ಕೆ ಎರಡು ಪೈಸೆ ಪ್ರೋತ್ಸಾಹ ಧನ ನೀಡುತ್ತಿದ್ದರು. ಅಶುಭ್ರವಾಗಿ ಕಂಡ ಮಕ್ಕಳಿಗೆ ತಾವೇ ಸ್ನಾನ ಮಾಡಿಸಿ ಅವರೊಡನೆ ಊಟ ಮಾಡಿ, ಆ ಬಡಜನರ ಗುಡಿಸಲುಗಳಲ್ಲೇ ಮಲಗಿ ಆ ಕುಟುಂಬದವರ ಹೃದಯ ಗೆಲ್ಲುತ್ತಿದ್ದರು. ಅನೇಕ ಜೀತದಾಳುಗಳನ್ನು, ಅವರನ್ನು ಹಿಂಸಿಸಿ ಶೋಷಿಸುತ್ತಿದ್ದ ಮಾಲೀಕರಿಂದ ಸ್ವತಂತ್ರರನ್ನಾಗಿಸಿದರು. ಅವರನ್ನು ಎಷ್ಟೇ ಹೆದರಿಸಿದರೂ ಅವರ ಧೈರ್ಯ ಸಾಹಸಗಳು ಕಡಿಮೆಯಾಗಲಿಲ್ಲ. ವಿಧವಾ ಪುನಃವಿವಾಹ ಮತ್ತು ಅಂತರಜಾತೀಯ ವಿವಾಹಗಳಿಗೆ ಪ್ರೋತ್ಸಾಹ ಕೊಟ್ಟರು. ವಿಧವೆಯಾದ ತಮ್ಮ ಮಗಳು ರಾಧಾಬಾಯಿಯನ್ನು ಮದುವೆ ಆಗಲು ಬಂದ ಪಿ. ಸುಬ್ಬರಾಯನ್ ಎಂಬವರೊಂದಿಗೆ ವಿವಾಹ ಮಾಡಿ ಮಾದರಿಯಾಗಿ ನಡೆದರು.
ಮಹಾತ್ಮ ಗಾಂಧೀಜಿ ಅವರು ಕುದ್ಮುಲ್ ರಂಗರಾವ್ ತಮಗೆ ಪ್ರೇರಣೆ, ಅಸ್ಪೃಶ್ಯರನ್ನು ಮೇಲೆತ್ತುವ ನಿಟ್ಟಿನಲ್ಲಿ ಅವರು ತಮಗೆ ಗುರು ಎಂದು ಶ್ಲಾಘಿಸಿದ್ದಾರೆ.
ಕುದ್ಮುಲ್ ರಂಗರಾವ್ ಹಿಂದುಳಿದವರಿಗೆ ವೃತ್ತಿಪರ ಶಿಕ್ಶಣ ನೀಡಲು ಶೇಡಿಗುಡ್ಡೆ ಎಂಬಲ್ಲಿ ಕೈಗಾರಿಕಾ ತರಬೇತಿ ಶಾಲೆ ಪ್ರಾರಂಭಿಸಿದರು. ತಾವು ಸ್ಥಾಪಿಸಿದ ಶಾಲೆಗಳಲ್ಲಿ ಮತ್ತು ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ಬಡಗಿ, ನೇಯ್ಗೆ, ತೋಟಗಾರಿಕೆ, ಕಸೂತಿ, ರೇಶ್ಮೆ ಹುಳು ಸಾಕಾಣಿಕೆ ಇತ್ಯಾದಿ ವೃತ್ತಿಗಳನ್ನು ಅವಲಂಬಿಸಲು ಅಗತ್ಯವಾದ ತರಬೇತಿಯನ್ನು ಕೊಡಿಸಿ ಸ್ವಾವಲಂಬಿ ಜೀವನಕ್ಕೆ ದಾರಿ ತೋರಿದರು. ಕೊರಗ ಜನಾಂಗದವರಿಗೆ ಕೋರ್ಟುಗುಡ್ಡೆ ಬಳಿ ಸಾಲು ಮನೆಗಳನ್ನು ಕಟ್ಟಿಸಿದರು. ಕುಲಕಸುಬಿನಲ್ಲಿ, ಗುಡಿ ಕೈಗಾರಿಕೆಗಳಲ್ಲಿ ತೊಡಗಲು ನೆರವಾದರು. ಹಿಂದುಳಿದವರ ಆರ್ಥಿಕ ಅಭಿವೃಧ್ಧಿಗಾಗಿ, ಸಹಕಾರ ಬೆಳವಣಿಗೆಗಾಗಿ ಕೋರ್ಟ್ ಹಿಲ್ಸ್ ನಲ್ಲಿ 'ಆದಿ ದ್ರಾವಿಡ ಸಹಕಾರ ಸಂಘ' ಸ್ಥಾಪಿಸಿದರು.
ಕುದ್ಮಲ್ ರಂಗರಾವ್ ಅವರ ನಿಸ್ವಾರ್ಥ ಸೇವೆ ಎಲ್ಲೆಡೆ ಖ್ಯಾತಿ ಪಡೆಯಿತು. ತಮ್ಮಲ್ಲಿದ್ದ ಹಣ ಖರ್ಚಾಗಿ ಖಾಲಿ ಕೈ ಆದ ಸಮಯದಲ್ಲಿ ತಮ್ಮ ಕಾರ್ಯದಲ್ಲಿ ಪಾಲ್ಗೊಳ್ಳಲು ಅನೇಕರಿಗೆ ಪತ್ರಬರೆದರು. ಅನೇಕರು ತಮಗೆ ಕಳುಹಿಸಿದ ಪುಸ್ತಕಗಳನ್ನು ಗ್ರಂಥಾಲಯವಾಗಿಸಿದರು.
ಕುದ್ಮುಲ್ ರಂಗರಾವ್ 1928ರ ಜೂನ್ 30ರಂದು ನಿಧನರಾದರು. ಈ ಮಹಾನ್ ಚೇತನಕ್ಕೆ ಶರಣು.
On the birth anniversary of great social reformer Kudmul Rangarao
ಕಾಮೆಂಟ್ಗಳು