ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಬ್ರಾಯ ಚೊಕ್ಕಾಡಿ


 ಸುಬ್ರಾಯ ಚೊಕ್ಕಾಡಿ


ಸುಬ್ರಾಯ ಚೊಕ್ಕಾಡಿ ಅವರು ಕನ್ನಡದ  ಖ್ಯಾತ ಕವಿ,  ಕಥೆಗಾರ, ವಿಮರ್ಶಕ ಮತ್ತು ವಿದ್ವಾಂಸರು.

ಸುಬ್ರಾಯ ಚೊಕ್ಕಾಡಿಯವರು 1940ರ ಜೂನ್ 29ರಂದು ಸುಳ್ಯ ತಾಲ್ಲೂಕಿನ ಚೊಕ್ಕಾಡಿಯಲ್ಲಿ ಜನಿಸಿದರು. ಅವರ ತಂದೆ ಯಕ್ಷಗಾನ ಭಾಗವತರಾದ ಗಣಪಯ್ಯನವರು ಮತ್ತು  ತಾಯಿ ಸುಬ್ಬಮ್ಮನವರು. 

ಸುಬ್ರಾಯ ಚೊಕ್ಕಾಡಿ ಅವರ ಪ್ರಾಥಮಿಕ ಶಿಕ್ಷಣ ಚೊಕ್ಕಾಡಿಯಲ್ಲಿ ನೆರವೇರಿತು. ಹೈಸ್ಕೂಲು ಓದಿದ್ದು ಪಂಜ ಎಂಬಲ್ಲಿ. ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಕನ್ನಡದಲ್ಲಿ ಎಂ.ಎ ಪದವಿ ಪಡೆದರು. ತಂದೆ ಯಕ್ಷಗಾನ ಕವಿ, ಭಾಗವತರಾದುದರಿಂದ ಕಿವಿಗೆ ಬೀಳುತ್ತಿದ್ದ ಲಯಬದ್ಧ ಹಾಡುಗಳು, ಹೈಸ್ಕೂಲಿಗೆ ನಡೆದು ಹೋಗುವಾಗ ಕಾಡಿನ ಮಧ್ಯೆ ಕೇಳುತ್ತಿದ್ದ ನೀರಿನ ಝುಳು ಝುಳು ನಾದ, ಹಕ್ಕಿಗಳ ಕಲರವ, ಮರಗಳ ಮರ್ಮರತೆಯಿಂದ ಪ್ರಭಾವಿತರಾಗಿ ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಅವರಿಗೆ ಕವನ ಕಟ್ಟುವ ಕಾಯಕ ಪ್ರಾರಂಭವಾಗಿತ್ತು. "ಚೊಕ್ಕಾಡಿ ಅವರು ಹಕ್ಕಿಗಳ ಬಗ್ಗೆ, ಎಲೆಗಳ ಬಗ್ಗೆ ಬರೆದಾಗ ಅವು ನನ್ನ ಕಣ್ಣಿಗೆ ಕಟ್ಟಿದ ಹಾಗೆ ಕಾಣುತ್ತವೆ" ಎನ್ನುತ್ತಾರೆ ಕೆ. ವಿ. ತಿರುಮಲೇಶರು.

ಸುಬ್ರಾಯ ಚೊಕ್ಕಾಡಿಯವರು ಉದ್ಯೋಗಕ್ಕಾಗಿ ಆಯ್ದುಕೊಂಡದ್ದು ಶಿಕ್ಷಕ ವೃತ್ತಿ. ಸುಳ್ಯ, ಪೈಲೂರು, ಕುಕ್ಕುಜಡ್ಕ ಶಾಲೆಗಳಲ್ಲಿ 39ವರ್ಷಕಾಲ ಸಹಾಯಕ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದರು. ಗ್ರಾಮೀಣ ಪ್ರದೇಶದಲ್ಲಿದ್ದೇ ವಿಶ್ವವ್ಯಾಪಿ ದೃಷ್ಟಿಯನ್ನು ಹೊಂದಬಹುದೆಂದು ಕಂಡುಕೊಂಡರು.  ಸಾರ್ತೃ, ಕಮೂ ಮೊದಲಾದವರನ್ನೂ ಒಳಗೊಂಡು ವಿಶ್ವಕಾವ್ಯದ ಬಗ್ಗೆಯೂ ಸಾಕಷ್ಟು ಅಧ್ಯಯನ ಮಾಡಿದ್ದರು.  ಅಡಿಗ, ಅನಂತಮೂರ್ತಿ, ಲಂಕೇಶರ ಸಂಪರ್ಕ ಅವರಿಗಿತ್ತು.  ಲಂಕೇಶರ ಮೊದಲ ನಾಟಕವನ್ನು ಪ್ರಕಟಿಸಿದ್ದು ಚೊಕ್ಕಾಡಿಯವರೇ.  ಸಾಹಿತ್ಯದ ಹೊಸ ವಿಚಾರಗಳನ್ನು ಚರ್ಚಿಸುವುದಕ್ಕೆ ಹಳ್ಳಿಯಲ್ಲಿ 'ಸುಮನಸಾ' ಎಂಬ ವಿಚಾರ ವೇದಿಕೆಯನ್ನೂ ಕಟ್ಟಿ ಬೆಳೆಸಿ ಹತ್ತಾರು ಉತ್ತಮ ಕೃತಿಗಳ ಪ್ರಕಟಣೆಗೆ ಕಾರಣರಾದರು. ಕಾವ್ಯ, ನಾಟಕ, ಯಕ್ಷಗಾನ, ಹರಿಕಥೆ, ಸಂಘಟನೆ, ಶಿಕ್ಷಣ, ಸಾಮಾಜಿಕ ಹೋರಾಟ, ಪ್ರಕಾಶನ, ಕೃಷಿ ಇತ್ಯಾದಿಯಾಗಿ ಅವರೊಬ್ಬ ಸಕ್ರಿಯ ಸರ್ವಾಂತರ್ಯಾಮಿ.

ತಾವು ಎಳೆವೆಯಿಂದಲೇ ಅನುಭವಿಸಿದ ಕಷ್ಟ ಕಾರ್ಪಣ್ಯದ ದಿನಗಳು, ನೋವಿನ, ಅವಮಾನದ, ಅಸಹಾಯಕತೆಯ ಘಟನೆಗಳಿಗೆ ಅವರು  ಪ್ರತಿಭಟನೆಯ ರೂಪ ನೀಡಿದ್ದು ಮೂರ್ತ ಕಾವ್ಯರೂಪದಲ್ಲಿ. ಹೀಗೆ ತಮ್ಮ ಅಂತರಂಗವನ್ನು ಸಂಕೇತ, ಪ್ರತಿಮೆ, ರೂಪಕಗಳ ಮೂಲಕ ಹೊರಹಾಕಿದಾಗ ಕವಿಯೊಬ್ಬನ ಆವಿರ್ಭಾವವಾಯಿತು. ಹೀಗೆ ಮೂಡಿಬಂದ ಕವನಗಳು ನಾಡಿನ ಪ್ರಮುಖ ಪತ್ರಿಕೆಗಳೆಲ್ಲದರಲ್ಲೂ ಪ್ರಕಟಗೊಂಡವು.  ಜನಮನಗಳಲ್ಲೂ ನಲಿದವು.  

ಸುಬ್ರಾಯ ಚೊಕ್ಕಾಡಿಯವರು ರಚಿಸಿದ  ಕವನ ಸಂಕಲನಗಳಲ್ಲಿ ತೆರೆ, ಬೆಟ್ಟವೇರಿದ ಮೇಲೆ, ನಿಮ್ಮವೂ ಇರಬಹುದು, ಮೊನ್ನೆ ಸಿಕ್ಕವರು, ಇದರಲ್ಲಿ ಅದು, ಇನ್ನೊಂದು ಬೆಳಗು, ಮಾಗಿಯ ಕೋಗಿಲೆ, ಗೀತೆಗಳು-ಹಾಡಿನ ಲೋಕ, ಬಂಗಾರದ ಹಕ್ಕಿ ಪ್ರಮುಖವಾದದ್ದು. 1970ರಲ್ಲಿ ಪ್ರಕಟವಾದ ಅವರ ಮೊದಲ ಕವನ ಸಂಕಲನ ‘ತೆರೆ’ ಬಳಿಕ ಬಂದ ಇನ್ನಿತರ ಒಂಭತ್ತು ಕವನ ಸಂಕಲನಗಳು ಸೇರಿ ಒಟ್ಟು ಹತ್ತು ಕವನ ಸಂಕಲನಗಳು ‘ಚೊಕ್ಕಾಡಿಯ ಹಕ್ಕಿಗಳು’ ಎಂಬ 2010ರಲ್ಲಿ ಪ್ರಕಟವಾದ ಸಮಗ್ರ ಕಾವ್ಯ ಸಂಗ್ರಹದಲ್ಲಿ ದೊರಕುತ್ತವೆ. 

ಚೊಕ್ಕಾಡಿ ಅವರು ಒಂದು ಕಾದಂಬರಿ (ಸಂತೆಮನೆ) ಕಥಾ ಸಂಕಲನ (ಬೇರುಗಳು) ನಾಲ್ಕು ವಿಮರ್ಶಾ ಸಂಕಲನಗಳು (ದ.ಕ. ಕಾವ್ಯ ಸಮೀಕ್ಷೆ ಒಳಹೊರಗು, ಕೃತಿ ಶೋಧ, ಸಮಾಲೋಕ) ಹಾಗೂ ಒಂದು ಸಂಪಾದಿತ ಕೃತಿ (ದ.ಕ. ಕಾವ್ಯ) ಪ್ರಕಟಿಸಿದ್ದಾರೆ. ಸುಬ್ರಾಯ ಚೊಕ್ಕಾಡಿಯವರ ಬರಹಗಳ ಆಧಾರಿತ ಕ್ಯಾಸೆಟ್ ಹಾಗೂ ಸಿಡಿಗಳಲ್ಲಿ ಮಿಲನ, ಮಾನಸ, ಬೆಣ್ಣೆ ಕದ್ದ ನಮ್ಮ ಕೃಷ್ಣ, ವನಸಿರಿ, ಅನುರಾಗ, ಸಲ್ಲಾಪ, ಹುಣ್ಣಿಮೆ, ನೂಪುರ, ಸಿರಿಗನ್ನಡ, ದೀಪ, ಭಾವ ಚಿತ್ತಾರ, ನಿನ್ನ ಬಾಂದಳದಂತೆ ಪ್ರಖ್ಯಾತಗೊಂಡಿವೆ.    ಅವರು  ಕೆಲವು ಚಲನಚಿತ್ರಗಳಿಗೂ  ಗೀತೆಗಳನ್ನು ಬರೆದಿದ್ದಾರೆ.   “ನನಗೆ  ಕಾವ್ಯದ ಎಲ್ಲ ರೀತಿಗಳ ಬಗ್ಗೆಯೂ, ಪ್ರೀತಿ, ಗೌರವ ಇದೆ. ಗಂಭೀರ ಕವಿತೆ ಮೇಲು, ಲಘು ಕವಿತೆ ಇಲ್ಲವೇ ಹಾಡು ಕೀಳು ಎಂದು ನಾನು ಭಾವಿಸಲಾರೆ” ಎಂದು ಚೊಕ್ಕಾಡಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಚೊಕ್ಕಾಡಿ ಅವರ  ಕಾವ್ಯಬೆಳವಣಿಗೆಯನ್ನು ವ್ಯಾಖ್ಯಾನಿಸುವ  ವಿಮರ್ಶಕ  ಎಸ್. ಆರ್.  ವಿಜಯಶಂಕರ್  ಅವರು  “ಯಕ್ಷಗಾನದ ವಾತಾವರಣದಿಂದ ಬಂದ ಚೊಕ್ಕಾಡಿ ತಮ್ಮ ಕಾವ್ಯ ವ್ಯವಸಾಯದ ಮೊದಲ ಹಂತಗಳಲ್ಲಿ ಅಡಿಗರಿಂದ ಪ್ರಭಾವಿತರಾದರು. ಮುಂದೆ ಅಡಿಗರ ಕಾವ್ಯ ಮಾರ್ಗದಿಂದ ಬೇರೆಯಾಗಲು ಹೊಸ ದಾರಿಗಳನ್ನು ಅರಸಿದರು.  ಒಂದು ರೀತಿಯಲ್ಲಿ ಚೊಕ್ಕಾಡಿ ತಮ್ಮ ಸ್ವಂತಿಕೆಯ ಹುಡುಕಾಟದ ಮಾರ್ಗದಲ್ಲಿ ನವೋದಯ, ನವ್ಯ, ಪ್ರಗತಿಶೀಲ, ಬಂಡಾಯ, ಬಂಡಾಯೋತ್ತರ ಹೀಗೆ ವಿವಿಧ ಕಾವ್ಯ ಚಳವಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಾ, ಬೇರ್ಪಡಿಸುತ್ತಾ ತಮ್ಮದೇ ಹಾದಿಯಲ್ಲಿ ಪಯಣಿಸುವ ಪ್ರಯತ್ನ ಮಾಡುತ್ತಾ ಹೋದರು. ಈ ಪಯಣದಲ್ಲಿ ಚೊಕ್ಕಾಡಿಯವರು ಅನೇಕ ರೀತಿಯ ಹಾಗೂ ವಿವಿಧ ಮನೋಸ್ಥಿತಿಗಳ ಕವನಗಳನ್ನು ರಚಿಸಿದರು”  ಎನ್ನುತ್ತಾರೆ.

‘ನನ್ನ ಪುಟ್ಟ ಪ್ರಪಂಚ’ ಎಂಬ ಕವನದಲ್ಲಿ ಚೊಕ್ಕಾಡಿ  ಹೀಗೆ ಹೇಳುತ್ತಾರೆ:

ಮರಗಿಡ ಪ್ರಾಣಿ ಪಕ್ಷಿಗಳ ನನ್ನ
ಪುಟ್ಟ ಪ್ರಪಂಚದ ಒಳಗೆ ಒಮ್ಮೊಮ್ಮೆ
ಮನುಷ್ಯರೂ ನುಸುಳಿಕೊಳ್ಳುತ್ತಾರೆ ಅನಾಮತ್ತಾಗಿ- ಸುತ್ತ ಸೇರಿದ್ದ
ಮರಗಿಡ ಬಳ್ಳಿಗಳು, ಅಳಿಲು, ಗುಬ್ಬಿ, ಬೆಳಕ್ಕಿಗಳು ಸುತ್ತ
ಮಾಯೆಯ ಬಟ್ಟೆ ನೇಯುತ್ತಿರಲು ಅಪರಿಚಿತರಾಗಮನಕ್ಕೆ
ಗಡ ಬಡಿಸಿ, ಚೆಲ್ಲಾಪಿಲ್ಲಿಯಾಗುತ್ತಾವೆ…

ಚೊಕ್ಕಾಡಿಯವರ ಕಾವ್ಯದ ಬಗ್ಗೆ ಹೇಳುವ ಯು. ಆರ್. ಅನಂತಮೂರ್ತಿ "ಚೊಕ್ಕಾಡಿಯವರಲ್ಲಿ ಎರಡು ದೊಡ್ಡ ಗುಣಗಳಿವೆ.  ಅವು ವಿನಯ ಮತ್ತು ಪ್ರಾಮಾಣಿಕತೆ. ಆ ಎರಡು ಗುಣಗಳು ಇವೆಯೆಂದು ಗ್ಯಾರಂಟಿ ಆದಮೇಲೆಯೇ ನಾವು ಕವಿಯನ್ನು ನಮ್ಮ ಒಳಗಿನಿಂದ ಆಲಿಸಲು ತಯಾರಾಗುತ್ತೇವೆ.  ಹೀಗೆ ನಾವು ಆಲಿಸಬಹುದಾದ ನಮ್ಮ ನಡುವಿನ ಚೊಕ್ಕಾಡಿಯವರು ಗೋಪಾಲಕೃಷ್ಣ ಅಡಿಗರ ನಂತರ ಬರೆಯುತ್ತಿರುವ ಮುಖ್ಯ ಕವಿಗಳಲ್ಲಿ ಒಬ್ಬರೆಂದು ಗುರುತಿಸಲು ನನಗೆ ಸಂತೋಷವಾಗುತ್ತದೆ" ಎಂದು ಗುರುತಿಸುತ್ತಾರೆ.

ಸುಬ್ರಾಯ ಚೊಕ್ಕಾಡಿಯವರಿಗೆ ಸಂದ ಗೌರವ ಪ್ರಶಸ್ತಿಗಳಲ್ಲಿ 65ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, ಸುಳ್ಯ ತಾಲ್ಲೂಕು 5ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ದಕ್ಷಿಣ ಕನ್ನಡ  ಜಿಲ್ಲಾ 15ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ವರ್ಧಮಾನ ಪ್ರಶಸ್ತಿ, ಮುದ್ದಣ ಪ್ರಶಸ್ತಿ, ಮೃತ್ಯುಂಜಯ ಸಾರಂಗ ಮಠ ಪ್ರಶಸ್ತಿ, ಕರ್ನಾಟಕಶ್ರೀ, ಕೆ. ಎಸ್.  ನರಸಿಂಹಸ್ವಾಮಿಗಳ  ಹೆಸರಿನಲ್ಲಿ  ನೀಡಲಾಗುವ  ಕಾವ್ಯಶ್ರೀ  ಪ್ರಶಸ್ತಿ,  ಮಾಸ್ತಿ ಪ್ರಶಸ್ತಿ, 2016ರ  ವರ್ಷದಲ್ಲಿ  ಸಂದ  ಕರ್ನಾಟಕ  ಸಾಹಿತ್ಯ ಅಕಾಡೆಮಿಯ  ಗೌರವ ಮುಂತಾದವು ಸೇರಿವೆ. ಅವರಿಗೆ ಅರ್ಪಿತವಾದ  ಗೌರವಗ್ರಂಥ ‘ಮುಕ್ತ ಹಂಸ.’

ಕಳೆದ ಮಾರ್ಚ್ 28ರಂದು ಸುಬ್ರಾಯ ಚೊಕ್ಕಾಡಿ ಅವರ ಅನುಭವ ಕಥನ "ಕಾಲದೊಂದೊಂದೇ ಹನಿ...." ಪ್ರಕಟಗೊಂಡು ಜನಪ್ರಿಯಗೊಂಡಿದೆ. “ಬದುಕಿನಲ್ಲಿ ಬರುವ ಎಲ್ಲ ನೋವು ನಲಿವುಗಳಲ್ಲೂ ತನ್ಮಯನಾಗಿ ಭಾಗವಹಿಸು; ಆದರೆ ದೂರದಲ್ಲಿ ನಿಂತು ನೋಡು" ಎಂಬುದು ಚೊಕ್ಕಾಡಿಯವರು ಈ ಆತ್ಮಕಥನದಲ್ಲಿ ನೀಡುತ್ತಿರುವ ದರ್ಶನ ಎಂದು ಹರೀಶ್ ಕೇರ ತಮ್ಮ ಮುನ್ನುಡಿಯಲ್ಲಿ ಕಾಣಿಸುತ್ತಾರೆ.

ಸುಬ್ರಾಯ ಚೊಕ್ಕಾಡಿಯವರ ಶಿಷ್ಯರಾದ ಹಲವಾರು ಗೆಳೆಯರು ಹೇಳುವುದನ್ನು ಕೇಳಿದ್ದೇನೆ “ಎಷ್ಟು ಸವಿಯಾದ ನೆನಪು ಅದು” ಎಂದು.  ಆ ಮಾತು ಕೇಳಿದಾಗಲೆಲ್ಲಾ ಆ ಕಾಲದ ಸಹೃದಯ ಶಿಕ್ಷಕ ವೃಂದವನ್ನು ನೆನೆದಾಗ ಸ್ವತಃ ಸುಬ್ರಾಯ ಚೊಕ್ಕಾಡಿಯವರ ಕವನ “ಎಂಥಾ ದಿನಗಳವು, ಮರೆಯಾಗಿ ಹೋದವು, ಮಿಂಚಂಥ ದಿನಗಳವು ಇನ್ನೆಂದೂ ಬಾರವು” ನೆನಪಾಗುತ್ತದೆ.

ಈ ಹಿರಿಯ ಸಹೃದಯರ ಜೀವನ, ಸುಖ ಸಂತಸ ಸೌಭಾಗ್ಯಗಳಿಂದ ನಳನಳಿಸುತ್ತಿರಲಿ ಎಂಬುದು ಅವರ ಅಭಿಮಾನಿಗಳೆಲ್ಲರ ಆತ್ಮೀಯ ಹಾರೈಕೆ.

ಚಿತ್ರಕೃಪೆ: ಶಿವ ಸುಬ್ರಮಣ್ಯ, ಎ. ಎನ್.ಮುಕುಂದ್ ಮತ್ತು ಇತರರು

On the birth day of our great poet Subraya Chokkady Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ