ಜೈಜಗದೀಶ್
ಜೈಜಗದೀಶ್
ಜೈಜಗದೀಶ್ ಕನ್ನಡ ಚಲನಚಿತ್ರರಂಗದ ಸುಂದರ ನಟ. ಚಿತ್ರ ನಿರ್ಮಾಣ ಮತ್ತು ನಿರ್ದೇಶನಗಳನ್ನೂ ಮಾಡಿದ್ದಾರೆ.
ಜೈಜಗದೀಶ್ 1954ರ ಜೂನ್ 29ರಂದು ಜನಿಸಿದರು. ಸೋಮವಾರ ಪೇಟೆಯ ಅನುಕೂಲಸ್ಥ ಕುಟುಂಬಕ್ಕೆ ಸೇರಿದ ಜೈಜಗದೀಶ್ ಮೈಸೂರಿನಲ್ಲಿ ಓದುತ್ತಿದ್ದ ದಿನಗಳಲ್ಲಿ ಚಿತ್ರನಿರ್ಮಾಪಕರಾಗಿದ್ದ ಗೆಳೆಯ ಮುಕುಂದ್ ಅವರ ಮೂಲಕ ಪುಟ್ಟಣ್ಣ ಕಣಗಾಲ್ ಅವರನ್ನು ಭೇಟಿಮಾಡಿದರು.
ಜೈಜಗದೀಶ್ 1976ರಲ್ಲಿ ಪುಟ್ಟಣ್ಣ ಕಣಗಾಲ್ ಅವರ 'ಫಲಿತಾಂಶ' ಚಿತ್ರದ ನಾಯಕನಾದರು. ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದರು. ಆದರೆ 'ಫಲಿತಾಂಶ'ದ ಬಾಕ್ಸ್ ಆಫೀಸ್ ಫಲಿತಾಂಶ ಉತ್ತಮವಾಗದ ಪರಿಣಾಮ, ಇವರಿಗೆ ಸಿಕ್ಕ ಪ್ರಧಾನ ಪಾತ್ರಗಳ ಸಂಖ್ಯೆ ಕಡಿಮೆ ಎನ್ನಬೇಕು. ನಾಯಕನ ಸ್ನೇಹಿತ, ಅಸಹಿಷ್ಣು-ನಕಾರಾತ್ಮಕ ವ್ಯಕ್ತಿಪಾತ್ರ, ಹಲವು ನಾಯಕರ ಜೊತೆ ಒಬ್ಬ, ಹೀಗೆ ಹಲವು ವಿಭಿನ್ನ ಪಾತ್ರಗಳಲ್ಲಿ ಸೇರಿದಂತೆ ಅವರು ನಟಿಸಿರುವ ಚಿತ್ರಗಳ ಸಂಖ್ಯೆ 300ಕ್ಕೂ ಹೆಚ್ಚು. ಕನ್ನಡವಲ್ಲದೆ ಕೆಲವು ಇತರ ಭಾಷಾ ಚಿತ್ರಗಳಲ್ಲೂ ನಟಿಸಿದ್ದರು.
ಫಲಿತಾಂಶ ಅಲ್ಲದೆ ಬೆಂಕಿಯಲ್ಲಿ ಅರಳಿದ ಹೂವು, ಪಡುವಾರ ಹಳ್ಳಿ ಪಾಂಡವರು, ಗಾಳಿ ಮಾತು, ಬಂಧನ, ತಾಯಿಕನಸು ಮುಂತಾದವುಗಳಲ್ಲಿ ಜೈಜಗದೀಶ್ ಎದ್ದುಕಂಡರು.
ವೃತ್ತಿ ಮತ್ತು ಕೌಟುಂಬಿಕ ಜೀವನದಲ್ಲಿ ಹಲವು ಏರಿಳಿತಗಳನ್ನು ಕಂಡ ಜೈಜಗದೀಶ್ ನಟಿ, ನಿರ್ಮಾಪಕಿ ಮತ್ತು ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್ ಅವರನ್ನು ವರಿಸಿದ್ದಾರೆ. ಹಲವು ಚಿತ್ರಗಳ ನಿರ್ಮಾಣ ಮಾಡಿದ್ದಾರೆ. ಇವುಗಳಲ್ಲಿ ಭೂಮಿತಾಯಿಯ ಚೊಚ್ಚಲ ಮಗ, ಓ ಪ್ರೇಮವೆ, ಕೋತಿಗಳು ಸಾರ್ ಕೋತಿಗಳು, ಕಾಂಚನಗಂಗಾ, ರಾಣಿಮಹಾರಾಣಿ, ಹೂವುಹಣ್ಣು, ಮುಂಗಾರಿನ ಮಿಂಚು, ಈ ಬಂಧನ, ವಾರೆ ವಾಹ್ ಮುಂತಾದವು ಸೇರಿವೆ. 'ಮದನ' ಎಂಬ ಚಿತ್ರವನ್ನು ಜೈಜಗದೀಶ್ ನಿರ್ದೇಶಿಸಿದ್ದರು. ಇವರ ನಿರ್ಮಾಣದ ವಿಷ್ಣುವರ್ಧನ್ - ಜಯಪ್ರದಾ ನಟಿಸಿದ 'ಈ ಬಂಧನ' ಚಿತ್ರವನ್ನು ಪತ್ನಿ ವಿಜಯಲಕ್ಷ್ಮೀ ಸಿಂಗ್ ನಿರ್ದೇಶಿಸಿದರು.
ಜೈಜಗದೀಶ್ 'ವಕಯಾಮಾ ಕರಾಟೆ-ಡೂ ಇಂಡಿಯಾದ' ಅಧ್ಯಕ್ಷರೂ ಆಗಿದ್ದಾರೆ.
ಜೈಜಗದೀಶ್ ನಿರ್ಮಾಣದ ಮುಂಗಾರಿನ ಮಿಂಚು, ಕುರಿಗಳು ಸಾರ್ ಕುರಿಗಳು, ಹೂವು ಹಣ್ಣು ಮುಂತಾದವು ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳಲ್ಲಿ ಹೆಸರುಮಾಡಿವೆ.
On the birthday of actor Jai Jagadish
ಕಾಮೆಂಟ್ಗಳು