ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ಯಾಮಲಾ ಮಾಧವ


 ಶ್ಯಾಮಲಾ ಮಾಧವ


ಶ್ಯಾಮಲಾ ಮಾಧವ ಅವರು ಪ್ರಸಿದ್ಧ ಬರಗಾರ್ತಿ.  

ಶ್ಯಾಮಲಾ ಅವರು 1949ರ ಜೂನ್ 29ರಂದು ಮಂಗಳೂರಿನ ಸಮೀಪದ ಕೊಡಿಯಾಲಗುತ್ತು ಪ್ರದೇಶದ ಮನೆಯಲ್ಲಿ ಜನಿಸಿದರು.  ತಂದೆ ನಾರಾಯಣ ಉಚ್ಚಿಲ್ ಅವರು ಸೋಮೇಶ್ವರ ಉಚ್ಚಿಲದ 'ಶಾಲಾ ಕರೆಸ್ಪಾಂಡೆಂಟ್' ಆಗಿ ಶೈಕ್ಷಣಿಕ ಕ್ಷೇತ್ರ ಮತ್ತು ಸಹಕಾರಿ ಕ್ಷೇತ್ರದಲ್ಲಿ ದುಡಿದರು. ನೂರೊಂದನೇ ವಯಸ್ಸಿನಲ್ಲಿ ನಮ್ಮ ನಡುವೆ ಇರುವ ಇವರ ತಾಯಿ ವಸಂತಿ ಅವರು ಬೆಸೆಂಟ್ ಶಾಲೆಯಲ್ಲಿ ಪಿ.ಟಿ. ಹಾಗೂ ಗೈಡಿಂಗ್ ಶಿಕ್ಷಕಿಯಾಗಿ, ಶಿಸ್ತು, ಸೇವೆ, ದಕ್ಷತೆಗೆ ಪ್ರಸಿದ್ಧರಾದವರು. 

ಮನೆಯ ಪರಿಸರದಲ್ಲಿ ತಂದೆಯವರು ತಮ್ಮ ಪುಸ್ತಕ ಸಂಗ್ರಹಾಲಯದಲ್ಲಿ ಸಂಗ್ರಹಿಸಿಟ್ಟ ಪುಸ್ತಕಗಳಿಂದ ಶ್ಯಾಮಲಾ ಅವರಿಗೆ  ಓದುವ ಹವ್ಯಾಸ, ಸಹಜವೆಂಬಂತೆ  ಬಂದಿತ್ತು. ಇವರು ಹನ್ನೊಂದರ  ಹರೆಯದಲ್ಲಿ ರಚಿಸಿದ 'ಕಡಲಿನ ಕರೆ' ಕವಿತೆ 'ರಾಷ್ಟಬಂಧು' ಪತ್ರಿಕೆಯಲ್ಲಿ ಪ್ರಕಟವಾಗಿತ್ತು. 

ಮುಂದೆ ಮಾಧವ ಅವರನ್ನು ಮದುವೆಯಾದ ಶ್ಯಾಮಲಾ ಅವರು  ಮುಂಬೈಗೆ ಬಂದರು.  ಪತ್ನಿಯ ಅದಮ್ಯ ಸಾಹಿತ್ಯಾಸಕ್ತಿಯನ್ನು ಮನಗಂಡ ಮಾಧವರು,  ಅವರಿಗೆ ಮುಂಬೈನ  ಮೈಸೂರ್ ಅಸೋಸಿಯೇಷನ್, ಕರ್ನಾಟಕ ಸಂಘ, ಮತ್ತು ಮುಂಬಯಿ ಕನ್ನಡ ಸಂಘಗಳಲ್ಲಿ ಸದಸ್ಯತ್ವವನ್ನು ಕೊಡಿಸಿದರು. ಈ ಸಂಸ್ಥೆಗಳಲ್ಲಿದ್ದ ಅಪರೂಪದ ಪುಸ್ತಕಗಳು ಮತ್ತು ಆಕರ ಗ್ರಂಥಗಳು, ಶ್ಯಾಮಲಾ ಅವರ ಜ್ಞಾನಾಕಾಂಕ್ಷೆಗೆ ವಿಸ್ತಾರ ನೀಡಿದವು. 

ನಾಡಿನ ಎಲ್ಲ ನಿಯತ ಕಾಲಿಕಗಳಲ್ಲಿ ಮತ್ತು ಅಂತರಜಾಲ  ಮಾಧ್ಯಮಗಳಲ್ಲಿ  ಶ್ಯಾಮಲಾ ಅವರ  ಕಥೆ, ಕವನ, ಲೇಖನ, ಅನುವಾದಗಳು ಮುಂತಾದ ಬರಹಗಳು  ಮೂಡಿಬಂದಿವೆ. 'ಸೃಜನಾ' ಮುಂಬಯಿ ಕನ್ನಡ ಲೇಖಕಿಯರ ಬಳಗದ ಸಂಚಾಲಕಿಯಾಗಿ ಸಹಾ ಅವರು ಬರಹ,  ಕೃತಿ ಸಂಪಾದನೆ, ಕಾರ್ಯಕ್ರಮ ಆಯೋಜನೆ, ಕಮ್ಮಟ, ಸಾಹಿತ್ಯ ಶಿಬಿರ ಮುಂತಾದ ಅನೇಕ ಮಹತ್ವದ ಕಾರ್ಯಕ್ರಮಗಳನ್ನು ನಡೆಸಿದವರು. 

ಶ್ಯಾಮಲಾ ಮಾಧವ ಅವರು ಹಿಂದಿಯ ಪ್ರಸಿದ್ಧ ಕಾದಂಬರಿ 'ಆಲಂಪನಾ', ಪ್ರಸಿದ್ಧ ಇಂಗ್ಲಿಷ್ ಕೃತಿಗಳಾದ 'ಗಾನ್ ವಿತ್ ದ ವಿಂಡ್', 'ಫ್ರಾಂಕಿನ್ ಸ್ಟೈನ್', 'ಜೇನ್ ಏರ್', 'ವುದರಿಂಗ್ ಹೈಟ್ಸ್', ರಾಮಯ್ಯ ರೈ ಅವರ 'ಪೊಲೀಸ್ ಡೈರಿ', ಎಂ.ಆರ್ ಪೈ ಅವರ ‘ಆ್ಯನ್ ಅನ್ ಕಾಮನ್ ಕಾಮನ್ ಮ್ಯಾನ್' ಮುಂತಾದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. 'ಯಾತ್ರಿ' ಎಂಬ ಕೃತಿಯನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ
ವಿಲ್ ಡ್ಯುರಾಂಟ್ ಅವರ 'ದ ಸ್ಟೋರಿ ಆಫ್ ಸಿವಿಲೈಸೇಷನ್' ಗ್ರಂಥವನ್ನು, ಅಂಬೇಡ್ಕರ್ ಬರಹ ಮತ್ತು ಭಾಷಣಗಳ ಸಂಪುಟವನ್ನು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿರುವುದನ್ನು  ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿದೆ. 'ಆ ಲೋಕ' ಕಥಾಸಂಕಲನ, 'ಬದುಕು ಚಿತ್ರ ಚಿತ್ತಾರ' ಲೇಖನ ಸಂಪುಟ, ವಾಸ್ತವವಾದದ ಸಾಹಿತಿ ರಾಮಚಂದ್ರ ಉಚ್ಚಿಲ ಕೃತಿಗಳನ್ನು ಮೂಡಿಸಿದ್ದಾರೆ. ಅರುಂಧತಿ ರಾಯ್ ಅವರ 'ದ ಗಾಡ್ ಆಫ್ ಸ್ಮಾಲ್ ಥಿಂಗ್ಸ್' ಕೃತಿಯನ್ನೂ   ಕನ್ನಡಕ್ಕೆ ಅನುವಾದಿಸಿದ್ದಾರೆ. 'ನಾಳೆ ಇನ್ನೂ ಕಾದಿದೆ' ಎಂಬ ಇವರ ಆತ್ಮಕಥನ ಪ್ರಕಟಗೊಂಡಿದೆ.  ಶ್ಯಾಮಲಾ ಅವರು ತಮ್ಮ ಪುತ್ರನನ್ನು  ಕಳೆದುಕೊಂಡ ನೋವನ್ನು ಅಕ್ಷರಕ್ಕಿಳಿಸಿ ಹೆಣೆದ ನುಡಿಹಾರವೇ  'ತುಷಾರ ಹಾರ'.

ಶ್ಯಾಮಲಾ ಮಾಧವ ಅವರಿಗೆ  ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಎಚ್.ವಿ ಸಾವಿತ್ರಮ್ಮ ಪ್ರಶಸ್ತಿ, ಎಸ್.ವಿ ಪರಮೇಶ್ವರ ಭಟ್ಟ ಪ್ರಶಸ್ತಿ,  ಕನ್ನಡ ಸಾಹಿತ್ಯ ಪರಿಷತ್ತಿನ ಮಹಾರಾಷ್ಟ್ರ ಘಟಕದ ಗೌರವ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ, ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಗೌರವ ಪ್ರಶಸ್ತಿ, ಉಳ್ಳಾಲ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯೂ ಸೇರಿದಂತೆ ಅನೇಕ ಗೌರವಗಳು  ಸಂದಿವೆ. 

ಶ್ಯಾಮಲಾ ಮಾಧವ ಅವರಿಗೆ ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Shyamala Madhav 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ