ಜೆ. ಸೋಮಯಾಜಿ
ಜಯರಾಮ ಸೋಮಯಾಜಿ
ಜಯರಾಮ ಸೋಮಯಾಜಿ - ನಳಿನಿ ಸೋಮಯಾಜಿ ದಂಪತಿಗಳು ನಮ್ಮ ನಡುವೆ ಇರುವ ವಿಶಾಲವ್ಯಾಪ್ತಿಯ ಸಾಹಿತ್ಯ, ಕಲೆ, ಶಿಕ್ಷಣ, ಪರಿಸರ ಮತ್ತು ಸಾಂಸ್ಕೃತಿಕ ಪ್ರೀತಿಗಳ ನೆಲೆಯಂತಿರುವವರು. ಈ ದಂಪತಿಗಳು ಭಾರತದಲ್ಲಷ್ಟೇ ಅಲ್ಲದೆ ಆಫ್ರಿಕಾದ ಹಲವು ದೇಶಗಳು ಮತ್ತು ಮಧ್ಯಪ್ರಾಚ್ಯದ ದುಬೈ ಪ್ರದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವುದರ ಜೊತೆಗೆ ಕನ್ನಡ ಸಾಂಸ್ಕೃತಿಕ ಪರಿಸರದ ವಿಸ್ತಾರಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಇಂದು ಪೂಜ್ಯ ಜಯರಾಮ ಸೋಮಯಾಜಿ ಅವರ ಜನ್ಮದಿನ.
ಜಯರಾಮ ಸೋಮಯಾಜಿ ಅವರು ಸಾಲಿಕೇರಿ ಬ್ರಹ್ಮಾವರದ ಹತ್ತಿರದ ಬಿರ್ತಿ ಎಂಬಲ್ಲಿ 1948ರ ಜೂನ್ 21ರಂದು ಜನಿಸಿದರು. ತಂದೆ ಅಲ್ಲಿಯ ಶ್ರೀ ದುರ್ಗಾಪರಮೇಶ್ವರಿ ವೀರಭದ್ರ ದೇವಸ್ಥಾನದ ಅರ್ಚಕರಾದ ವೆಂಕಟ್ರಮಣ ಸೋಮಯಾಜಿ. ತಾಯಿ ಕಾವೇರಿ. ಹಾರಾಡಿ ವಿದ್ಯಾಮಂದಿರ ಶಾಲೆಯಲ್ಲಿ ಜಯರಾಮ ಸೋಮಯಾಜಿ ಅವರ ವಿಧ್ಯಾಭ್ಯಾಸ ಆರನೇ ಕ್ಲಾಸಿನವರೆಗೆ ನಡೆದು ಏಳನೇ ಕ್ಲಾಸಿಗೆ ಬ್ರಹ್ಮಾವರದ ಎಸ್.ಎಮ್.ಎಸ್. ಹೈಸ್ಕೂಲಿಗೆ ಸೇರಿದರು. 1964ರಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ, ಡಿಸ್ಟಿಂಕ್ಷನ್ನಿನಲ್ಲಿ ಉತ್ತೀರ್ಣರಾಗಿ ಉಡುಪಿಯಲ್ಲಿಯ ಎಮ್.ಜಿ.ಎಮ್. ಕಾಲೇಜಿಗೆ ಪಿಯುಸಿ. ವಿಜ್ಞಾನ ವಿಭಾಗಕ್ಕೆ ಸೇರಿದರು. ಆಗ ಕು.ಶಿ.ಹರಿದಾಸ ಭಟ್ಟರು ಕಾಲೇಜಿನ ಪ್ರಾಂಶುಪಾಲರಾಗಿದ್ದರು. 12ಕಿಲೋಮೀಟರ್ ಏರುತಗ್ಗುಗಳ ಸೈಕಲ್ ಪಯಣದಲ್ಲಿ ಓದು ಸಾಗಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. 1965ರಲ್ಲಿ ಗಣಿತ, ಭೌತಶಾಸ್ತ್ರ, ರಸಾಯನ ಶಾಸ್ತ್ರಗಳನ್ನಾಯ್ದು ಬಿ.ಎಸ್ಸಿ ಸೇರಿದರು. 1968 ಮಾರ್ಚ್ ತಿಂಗಳಲ್ಲಿ ಆರನೇ ರ್ಯಾಂಕ್ ಪಡೆದು ಬಿ.ಎಸ್ಸಿ ಪದವಿ ಗಳಿಸಿದರು. 1968-70 ಅವಧಿಯಲ್ಲಿ ಮೈಸೂರು ಮಾನಸ ಗಂಗೋತ್ರಿಯಲ್ಲಿ ಎಂ. ಎಸ್ಸಿ ಓದಿ ಮೂರನೇ ರ್ಯಾಂಕ್ ಸಾಧನೆ ಮಾಡಿದರು.
ಜಯರಾಮ ಸೋಮಯಾಜಿ ಅವರು ಸುರತ್ಕಲ್ ಇಂಜಿನಿಯರಿಂಗ್ ಕಾಲೇಜಿಗೆ ಎಮ್.ಟೆಕ್. ಓದಿಗೆ ಸೇರಿದರಾದರೂ ರುಚಿಸದೆ ಮೂರು ತಿಂಗಳಿಗೆ ಬಿಟ್ಟು, 1970 ರ ಅಕ್ಟೋಬರ ತಿಂಗಳಲ್ಲಿ ಮಣಿಪಾಲ ಇಂಜಿನಿಯರಿಂಗ್ ಕಾಲೇಜಿಗೆ ಭೌತಶಾಸ್ತ್ರದ ಉಪನ್ಯಾಸಕರಾಗಿ ಸೇರಿದರು. ಇದೇ ಸಮಯದಲ್ಲಿ ವಿದೇಶಕ್ಕೆ ಹೋಗಿ ಕೆಲಸ ಮಾಡುವ ಹಂಬಲ ಮೂಡಿತು. ಆಫ್ರಿಕಾದ ಸಿಯಾರ ಲಿಯೋನ್ ದೇಶದ ಫ್ರಿಟೌನ್ ಎಂಬಲ್ಲಿ ಅಧ್ಯಾಪನಕ್ಕೆ ಸೇರಿದರು. 1974ರಲ್ಲಿ ನೈಜಿರಿಯಾ ದೇಶದ ಗೊಂಬೆ ಎಂಬ ಊರಿನಿಂದ ಪ್ರಾರಂಭಗೊಂಡು, ಆಫ್ರಿಕ ಖಂಡದ ಸಣ್ಣ ದೇಶ ದಿ ಗ್ಯಾಂಬಿಯಾ, ನೈಜಿರಿಯಾದ ಗೊಂಗೊಲ ರಾಜ್ಯದ ರಾಜಧಾನಿ ಯೋಲ, ಗುಯುಕ್ ಎಂಬ ಗ್ರಾಮ ಮುಂತಾದೆಡೆಗಳಲ್ಲಿ ಸೇವೆ ಸಲ್ಲಿಸಿದರು. ಹೋದೆಡೆಯಲ್ಲೆಲ್ಲ ತಮ್ಮ ಜ್ಞಾನ ಸಂಪತ್ತನ್ನು ವಿದ್ಯಾರ್ಥಿಗಳೊಡನೆ ಹಂಚಿದ್ದಲ್ಲದೆ ಅಲ್ಲಿನ ಸ್ಥಳೀಯರು ಮತ್ತು ಭಾರತೀಯ ಸಮುದಾಯದೊಡನೆ ಆತ್ಮೀಯ ಬಾಂಧವ್ಯ ಹೊಂದಿದ್ದರು.
ಜಯರಾಮ ಸೋಮಯಾಜಿ ಅವರು 1986ರಲ್ಲಿ ದುಬೈಗೆ ಬಂದರು. ಅಲ್ಲಿನ ಜೆಮ್ಸ್ ಸಮೂಹದ ಪ್ರತಿಷ್ಟಿತ ಅವರ್ ಓನ್ ಇಂಗ್ಲಿಷ್ ಸಂಸ್ಥೆಯಲ್ಲಿ ಅಧ್ಯಾಪನ ಆರಂಭಿಸಿದರು. ಎರಡು ದಶಕಗಳಿಗೂ ಮೀರಿದ ಕಾಲ ದುಬೈನಲ್ಲಿದ್ದ ಸಂದರ್ಭದಲ್ಲಿ ಜಯರಾಮ ಸೋಮಯಾಜಿ - ನಳಿನಿ ಸೋಮಯಾಜಿ ದಂಪತಿಗಳು ದುಬೈ ಕರ್ನಾಟಕ ಸಂಘದ ಕಾರ್ಯಕ್ರಮದಲ್ಲಿ ಸಕ್ರಿಯರಾಗಿದ್ದರು. ದುಬೈ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದರು. ದುಬೈ ಕನ್ನಡ ಸಂಘವೆಂದರೆ ಅತ್ಯಂತ ಕ್ರಿಯಾಶೀಲ ಎಂಬ ಪ್ರಸಿದ್ಧಿ ಮೂಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕನ್ನಡದ ಸಂಘದ ಚಟುವಟಿಕೆಗಳೇ ಅಲ್ಲದೆ ಈ ದಂಪತಿಗಳು ಅನೇಕ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಯುನೈಟೆಡ್ ಅರಾಬ್ ಎಮಿರೇಟ್ಸ್ ದೇಶದಲ್ಲಿನ ಭಾರತೀಯ ಮನಗಳನ್ನು ಒಂದೆಡೆ ಕೂಡಿಸಿದ ಕೆಲಸ ಮಾಡುತ್ತಾ ಬಂದಿದ್ದರು.
ಎರಡು ದಶಕಗಳಿಗೂ ಹೆಚ್ಚು ಕಾಲದ ದುಬೈ ವಾಸದ ನಂತರ ಕನ್ನಡದ ಮಣ್ಣಿನಲ್ಲಿ ವಿಶ್ರಾಂತ ಜೀವನಕ್ಕೆ ಬಂದ ಜಯರಾಮ ಸೋಮಯಾಜಿ ಅವರು ತಮ್ಮ ಕುಟುಂಬದೊಡನೆ ವಿಜ್ಞಾನ ಶಿಕ್ಷಣ ಮತ್ತು ಸಾಂಸ್ಕೃತಿಕ ಆಸಕ್ತಿಗಳಲ್ಲಿ ನಿರಂತರ ಸಕ್ರಿಯರಾಗಿದ್ದಾರೆ. ಸೋಮಯಾಜೀಸ್ ಲರ್ನಿಂಗ್ ಸೆಂಟರ್ ನಡೆಸುತ್ತಿದ್ದಾರೆ. ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದಾರೆ. ಸೋಮಯಾಜಿ ದಂಪತಿಗಳು ಬ್ಲಾಗ್ ಬರವಣಿಗೆ, ಯೂ ಟ್ಯೂಬ್ ಚಾನಲ್ ಮತ್ತು ಫೇಸ್ಬುಕ್ ಅಂತಹ ಮಾಧ್ಯಮಗಳಲ್ಲಿ ತಮ್ಮ ಅನೇಕ ಉತ್ತಮ ಅಭಿರುಚಿಗಳನ್ನು ತೆರೆದಿಡುತ್ತಾ ಎಲ್ಲರೊಂದಿಗೆ ಅನುಪಮ ಬಾಂಧವ್ಯ ಹೊಂದಿದ್ದು ನಮಗೆಲ್ಲ ಪ್ರೇರಣೆ ಆಗಿದ್ದಾರೆ.
ಪೂಜ್ಯ ಹಿರಿಯರಾದ ಜಯರಾಮ ಸೋಮಯಾಜಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ಸಾರ್, ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. ನಮಸ್ಕಾರ.
Happy birthday Jayarama Somayaji Sir 🌷🙏🌷
ಕಾಮೆಂಟ್ಗಳು