ಈಚನೂರು ಜಯಲಕ್ಷ್ಮೀ
ಈಚನೂರು ಜಯಲಕ್ಷ್ಮೀ
ಈಚನೂರು ಜಯಲಕ್ಷ್ಮೀ ಕನ್ನಡದ ಜನಪ್ರಿಯ ಕಥೆಗಾರ್ತಿಯರಲ್ಲಿ ಒಬ್ಬರು.
ಜಯಲಕ್ಷ್ಮಿಯವರು 1947ರ ಜೂನ್ 21ರಂದು ತುಮಕೂರು ಜಿಲ್ಲೆ, ತಿಪಟೂರು ತಾಲ್ಲೂಕಿನ, ಈಚನೂರು ಗ್ರಾಮದಲ್ಲಿ ಜನಿಸಿದರು. ತಂದೆ ಪ್ರಸಿದ್ಧ ಸೂತ್ರದಬೊಂಬೆ ಕಲಾವಿದಾರಾದ ಸೀತಾರಾಮಯ್ಯ. ತಾಯಿ ಸಾವಿತ್ರಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಹುಟ್ಟಿದೂರಿನಲ್ಲಿ ಪೂರೈಸಿದ ಜಯಲಕ್ಷ್ಮೀ ಅವರು ತಿಪಟೂರು ಕಲ್ಪತರು ಕಾಲೇಜಿನಲ್ಲಿ ಬಿ.ಎ. ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು.
ಉದ್ಯೋಗಕ್ಕಾಗಿ ಅಧ್ಯಾಪನವನ್ನು ಆಯ್ದುಕೊಂಡ ಜಯಲಕ್ಷ್ಮೀ ಅವರು ‘ಶಿಶುಗೃಹ’ ಪ್ರೌಢಶಾಲೆಯಲ್ಲಿ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿದರು.
ಈಚನೂರು ಜಯಲಕ್ಷ್ಮೀ ಅವರು ಕಲಾವಿದರ ಮನೆತನದಲ್ಲಿ ಹುಟ್ಟಿದ್ದರಿಂದ ಸಾಹಿತ್ಯ, ಸಾಂಸ್ಕೃತಿಕ ಜಗತ್ತಿನೆಡೆಗೆ ಸೆಳೆತ ಸಹಜವಂಬಂತೆ ಇತ್ತು. ತಂದೆಯವರ ಕಲಾವಂತಿಕೆ ಒಂದೆಡೆ ಪ್ರೇರಣೆಯಾಯ್ತು. ಮತ್ತೊಂದೆಡೆ ತಾಯಿಯವರು ಹಾಡುತ್ತಿದ್ದ ಹಾಡುಗಳು, ಓದಿ ಹೇಳುತ್ತಿದ್ದ ರಾಮಾಯಣ, ಮಹಾಭಾರತ ಕಥಾನಕಗಳಿಂದ ಪ್ರೇರಿತರಾಗಿ ಸಾಹಿತ್ಯದತ್ತ ಮನಸ್ಸು ಹರಿಯಿತು. ಎಳೆವೆಯಿಂದಲೇ ಬರವಣಿಗೆ ಮಾಡಲಾರಂಭಿಸಿದರು.
ಈಚನೂರು ಜಯಲಕ್ಷ್ಮೀ ಅವರ ಮೊದಲ ಕತೆ ‘ಮುತ್ತಿನ ಓಲೆ’ ಸುಧಾ ವಾರಪತ್ರಿಕೆಯಲ್ಲಿ ಪ್ರಕಟಗೊಂಡಿತು. ಮುಂದೆ ಅವರ 250ಕ್ಕೂ ಹೆಚ್ಚು ಕತೆ/ಕಾದಂಬರಿಗಳು ಪ್ರಕಟಗೊಂಡವು. ಆಕಾಶವಾಣಿಯಲ್ಲಿ ಇವರ ರೂಪಕಗಳು ಪ್ರಸಾರಗೊಂಡವು. ಹಿಮದ ಹೂವು, ನೆನಪಿನ ನಾವೆ ಮೆಗಾ ಧಾರಾವಾಹಿಯಾಗಿ ಮೂಡಿದವು. ಇವರು ಬರೆದ ಬೀಜ, ಅನವರತ, ಚಂಡು, ಮೊದಲಾದ ಕತೆಗಳು ಕಿರುತೆರೆಯಲ್ಲಿ ಕಥೆಯಾಗಿ ಪ್ರಸಾರಗೊಂಡವು. ಇವರ 'ಮುಂಜಾನೆಯ ಮಂಜು' ಚಲನಚಿತ್ರವಾಗಿದೆ.
ಈಚನೂರು ಜಯಲಕ್ಷ್ಮೀ ಅವರ ಕಾದಂಬರಿಗಳಲ್ಲಿ ಬಾಳಪಲ್ಲವಿ, ಮೋಡದ ಮನೆ, ಹೆಜ್ಜೆಮೂಡದ ಹಾದಿ, ಆಗಂತುಕರು, ಕನಸುಗಳು, ಅಂತರ್ಗೀತ, ಗಿರಿದರ್ಶಿನಿ, ಹಿಮತೊಳೆದ ಹೂವು, ನಾಂದಿ, ಅಗ್ನಿರೇಖೆ, ಸಮಶ್ರುತಿ, ಚುಕ್ಕಿ ತಪ್ಪಿದ ರಂಗೋಲಿ, ಕಡಲಿನ ಒಡಲು, ಸ್ವಪ್ನಸೌಧ, ಅಸಹಾಯಕರು, ಮಾನಸರಾಗ, ಹಳೆಬೇರು ಹೊಸ ಚಿಗುರು, ಹಿಮದ ಬೊಂಬೆ, ವಸಂತ ಪಲ್ಲವಿ, ಪ್ರೇಮಬಂಧನ, ಚೈತ್ರದ ಹಾಡು ಮುಂತಾದವು ಸೇರಿವೆ.
ಈಚನೂರು ಜಯಲಕ್ಷ್ಮೀ ಅವರ ಕಥೆಗಳು ಒಳಗೂ ಹೊರಗೂ, ಒಮ್ಮೊಮ್ಮೆ, ಅಂತರಾಳದೊಳಗೊಂದು ಕಿರುದನಿ, ನಂಬಿಕೆ, ಬೊಂಬೆಯಾಟ ಮುಂತಾದ ಅನೇಕ ಕಥಾಸಂಕಲನಗಳಲ್ಲಿ ಮೂಡಿವೆ.
On the birthday of popular novelist Echanur Jayalakshmi
ಕಾಮೆಂಟ್ಗಳು