ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಟಿ. ಗುರುರಾಜಪ್ಪ


 ಟಿ. ಗುರುರಾಜಪ್ಪ


ಪಿಟೀಲು ವಿದ್ವಾಂಸರಾಗಿದ್ದ ಮೈಸೂರು ಟಿ. ಚೌಡಯ್ಯನವರ ತಮ್ಮಂದಿರಾದ ಟಿ. ಗುರುರಾಜಪ್ಪನವರು ಸಹಾ ಮಹಾನ್ ಸಂಗೀತ ವಿದ್ವಾಂಸರು.

ಗುರುರಾಜಪ್ಪ  ತಿರುಮಕೂಡಲು ನರಸೀಪುರದಲ್ಲಿ 1905ರ ಜುಲೈ 9ರಂದು ಜನಿಸಿದರು. ತಂದೆ ಅಗಸ್ತೇಗೌಡರು ಮತ್ತು  ತಾಯಿ ಸುಂದರಮ್ಮ.

ಸಂಗೀತಗಾರರ ಮನೆತನದಲ್ಲಿ ಬೆಳೆದ ಗುರುರಾಜಪ್ಪನವರಿಗೂ ಸಂಗೀತದತ್ತ ಆಸಕ್ತಿ ಮೂಡಿತು. ಎಸ್‌.ಎಸ್‌. ಎಲ್‌.ಸಿ.ಯ ನಂತರ ಬಿಡಾರಂ ಕೃಷ್ಣಪ್ಪನವರ ಬಳಿ ಪಿಟೀಲು ಕಲಿಯಲಾರಂಭಿಸಿದರು. ಅನೇಕ ಕಚೇರಿಗಳಲ್ಲಿ ಗುರುಗಳಾದ  ಬಿಡಾರಂ ಕೃಷ್ಣಪ್ಪನವರಿಗೆ  ಪಿಟೀಲು ಸಹಕಾರ ನೀಡಿದರು. ಅಣ್ಣ ಟಿ. ಚೌಡಯ್ಯನವರೊಡನೆ ದೇಶಾದ್ಯಂತ ದ್ವಂದ್ವ ಪಿಟೀಲು ವಾದನ ಕಚೇರಿ ನಡೆಸಿದರು. 

ಟಿ. ಗುರುರಾಜಪ್ಪನವರು 1939ರಲ್ಲಿ ತಿರುಚನಾಪಳ್ಳಿ ಆಕಾಶವಾಣಿಯಲ್ಲಿ ‘ಎ’ ದರ್ಜೆ ಕಲಾವಿದರಾಗಿ ನೇಮಕಗೊಂಡರು. ಅನೇಕ ರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳಲ್ಲಿ ಇವರ  ಪಿಟೀಲು ವಾದನ ನಡೆಯಿತು. ಜಿ.ಎನ್‌.ಬಿ., ಅರಿಯಾಕುಡಿ ರಾಮಾನುಜ ಅಯ್ಯಂಗಾರ್, ಚೆಂಬೈವೈದ್ಯನಾಥ ಭಾಗವತರ್, ಆಲತ್ತೂರು ಸಹೋದರರು ಮುಂತಾದವರ ಕಚೇರಿಗಳಿಗೆ ಪಿಟೀಲಿನ ಪಕ್ಕವಾದ್ಯ ನೀಡಿದರು. ತಮಿಳುನಾಡಿನ ಹಲವಾರು ಗಣ್ಯ ಸಂಗೀತಗಾರರ ಎದುರಿನಲ್ಲಿ ಇವರಿಗೆ ವಜ್ರದ ಕಾಪುತೊಡಿಸಿ ಸನ್ಮಾನ ಸಂದಿತು. ತಮಿಳುನಾಡಿನಾದ್ಯಂತ ಇವರ  ಸಂಗೀತ ಕಚೇರಿಗಳು ನಡೆದವಲ್ಲದೆ ದೇಶವಿದೇಶಗಳಿಂದ ಆಹ್ವಾನ ಬಂದು, ಸಿಲೋನ್‌, ಸಿಂಗಪೂರ್, ಇಂಗ್ಲೆಂಡ್‌ ಮುಂತಾದ ದೇಶಗಳಲ್ಲಿ ಹೆಸರಾಂತ ಚಿತ್ರನಟ ಮತ್ತು  ಸಂಗೀತಗಾರರಾದ ತ್ಯಾಗರಾಜ ಭಾಗವತರೊಡನೆ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.   

ಗುರುರಾಜಪ್ಪನವರು 1953ರಲ್ಲಿ ಮೈಸೂರು ಆಕಾಶವಾಣಿ ಕಲಾವಿದರಾಗಿ ಸೇರ್ಪಡೆಗೊಂಡರು. ತಮಿಳುನಾಡಿನಿಂದ ವರ್ಗವಾದಾಗ ತಮಿಳುನಾಡಿನ ಸಂಗೀತ ಪ್ರೇಮಿಗಳು ವಜ್ರದುಂಗುರ ನೀಡಿ ಸನ್ಮಾನಿಸಿ, ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದರು.  ಗುರುರಾಜಪ್ಪನವರು 1957ರಲ್ಲಿ ಬೆಂಗಳೂರು ಆಕಾಶವಾಣಿಯಲ್ಲಿ ‘ಎ’ ದರ್ಜೆ ಕಲಾವಿದರಾಗಿ ನೇಮಕಗೊಂಡರು. ಮನೆಯಲ್ಲೇ ಗುರುಕುಲ ಪದ್ಧತಿಯಲ್ಲಿ ಶಿಷ್ಯರಿಗೆ ಸಂಗೀತ ಶಿಕ್ಷಣ ನೀಡಿದರು.  ಮಧುರೆ ವೇಣುಗೋಪಾಲ್‌, ಕಿಳಿನಲ್ಲೂರು ರಂಗಸ್ವಾಮಿ, ನಟರಾಜನ್‌, ವೈದ್ಯನಾಥನ್‌ ಮುಂತಾದ ಅನೇಕ ಪ್ರಸಿದ್ಧರು ಇವರ ಶಿಷ್ಯರಾಗಿದ್ದರು.  

ಗುರುರಾಜಪ್ಪನವರು 1972ರ ಮೇ 22ರಂದು  ಈ ಲೋಕವನ್ನಗಲಿದರು.   

On the birth anniversary of great violonist T. Gururajappa

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ