ಸ್ವಾತಂತ್ರ್ಯ ನೋಟ - 9
ಸ್ವಾತಂತ್ರ್ಯ ನೋಟ - 9
ಇದೇ ಕಾಲದಲ್ಲಿ ಕಾಂಗ್ರೆಸ್ಸಿನಲ್ಲಿ ಮಂದಗಾಮಿ ಮತ್ತು ಉಗ್ರಗಾಮಿ ಗುಂಪು ಬೆಳೆಯಿತು. ಮಂದಗಾಮಿಗಳು ಬ್ರಿಟಿಷರ ಔದಾರ್ಯದಲ್ಲಿ ನಂಬಿಕೆ ಇದ್ದವರು. ಬ್ರಿಟಿಷರ ಆಡಳಿತ ಇಲ್ಲಿ ಇದ್ದಂತೆ ಸಾಮಾಜಿಕ ಮತ್ತು ರಾಜಕೀಯ ಸುಧಾರಣೆ ಬಯಸಿದವರು; ತಕ್ಷಣ ಸ್ವಾತಂತ್ರ್ಯ ಬೇಕೆಂದು ಬಯಸಿದವರಲ್ಲ, ವೈಜ್ಞಾನಿಕ ಸುಧಾರಣೆಗಳಲ್ಲಿ ನಂಬಿಕೆಯಿಟ್ಟವರು. ಫಿರೋಜಾಷಾ ಮೆಹ್ತಾ ದಾದಾಬಾಯಿ ನವರೋಜಿ, ಗೋಪಾಲಕೃಷ್ಣ ಗೋಖಲೆ ಮಂದಗಾಮಿಗಳ ನಾಯಕರು.
ಪೂರ್ಣ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಉಗ್ರಗಾಮಿಗಳಲ್ಲಿ ತಿಲಕ್, ಬಿಪಿನ್ಚಂದ್ರಪಾಲ್ ನಾಯಕರು. ಈ ಎರಡು ಗುಂಪುಗಳ ನಡುವಿನ ಭಿನ್ನಾಭಿಪ್ರಾಯ ವಿಕೋಪಕ್ಕೆ ಹೋಗಿ 1907ರ ಸೂರತ್ ಕಾಂಗ್ರೆಸ್ಸಿನಲ್ಲಿ ವಿಭಜನೆಗೆ ಕಾರಣವಾಯಿತು.
ವೈಸ್ರಾಯ್ ಕರ್ಜನ್ 1905ರಲ್ಲಿ ಬಂಗಾಳದ ವಿಭಜನೆ ಮಾಡಿದಾಗ ವಂಗಭಂಗ ವಿರೋಧಿ ಹಾಗೂ ಸ್ವದೇಶಿ ಚಳವಳಿ, ವಿದೇಶೀ ಬಹಿಷ್ಕಾರ, ರಾಷ್ಟ್ರೀಯ ಶಿಕ್ಷಣ ಮುಂತಾದ ಚಳವಳಿಗಳು ಪ್ರಾರಂಭವಾದವು. ಲಾಲ್, ಬಾಲ್, ಪಾಲ್, ಎಂದು ಪ್ರಸಿದ್ಧರಾದ ಬಾಲಾ ಲಜಪತ್ರಾಯ್, ಲಾಲ ಗಂಗಾಧರ ತಿಲಕ್ ಮತ್ತು ಬಿಪಿನ್ಚಂದ್ರಪಾಲ್ ಇವರುಗಳು ಚಳವಳಿಯ ನಾಯಕರಾದರು.
ಚಳವಳಿಯನ್ನು ವಿರೋಧಿಸಿದ ಸುರೇಂದ್ರನಾಥಬ್ಯಾನರ್ಜಿ ಜನಪ್ರಿಯತೆಗೆ ಎರವಾದರು. ರಾಷ್ಟ್ರ ಭಕ್ತಿಗೀತೆಗಳನ್ನು ಹಾಡುತ್ತ ಪ್ರಭಾತಫೇರಿ ನಡೆಸುವುದು, ವಿದೇಶೀ ವಸ್ತು ಮಾರಾಟದ ಅಂಗಡಿಗಳ ಮುಂದೆ ಪ್ರದರ್ಶನ, ವಿದೇಶೀವಸ್ತುಗಳ ನಾಶ ಸಾಮಾನ್ಯವಾಯಿತು. ಇದರಿಂದ ಅನೇಕರ ಬಂಧನ, ಶಿಕ್ಷೆಗಳೂ ಆದುವು. ತಿಲಕರಿಗೆ 1908ರಲ್ಲಿ ಆರು ವರ್ಷ ಶಿಕ್ಷೆಯಾಯಿತು. ಲಾಲಾಲಜಪತರಾಯ್ ಅವರನ್ನು ಗಡೀಪಾರು ಮಾಡಿದರು. ಚಳವಳಿಯ ಹಿಂದೆಯೇ ಕ್ರಾಂತಿಕಾರಿಗಳ ಚಟುವಟಿಕೆ ಹೆಚ್ಚಿ ಅಲಿಪುರ್ ಬಾಂಬ್ ಪ್ರಕರಣ (1908) ನಾಸಿಕದ ಕಲೆಕ್ಟರ್ ಜಾಕ್ಸನ್ನ ಕೊಲೆ(1909) ಮುಂತಾದ ಘಟನೆಗಳಾದುವು. ಕ್ರಾಂತಿಕಾರರ ವಿರುದ್ಧ ಉಗ್ರ ಕಾರ್ಯಾಚರಣೆ ಕೈಗೊಳ್ಳಲಾಯಿತು.
1907ರಲ್ಲಿ ಸೂರತ್ನಲ್ಲಿ ಕಾಂಗ್ರೆಸ್ ಒಡೆಯಿತು. ಮಂದಗಾಮಿಗಳ ಪಕ್ಷ ಎತ್ತಿ ಹಿಡಿಯುವ ಉದ್ದೇಶದಿಂದ 1909ರಲ್ಲಿ ಮಿಂಟೋಮಾರ್ಲೆ ಸುಧಾರಣೆಗಳನ್ನು ಸುಧಾರಣೆಗಳನ್ನು ಜಾರಿಗೆ ತಂದರು. ಕಾಂಗ್ರೆಸ್ಸಿನಲ್ಲಿ ಮಂದಗಾಮಿಗಳ ಮೇಲ್ಗೈಯಾಯಿತು. ಆದರೆ ಈ ಸುಧಾರಣೆಗಳಿಂದ ಭಾರತೀಯರಿಗೆ ನಿರೀಕ್ಷಿತ ಲಾಭವೇನೂ ಸಿಗಲ್ಲಿಲ್ಲ. 1915ರಲ್ಲಿ ಗೋಖಲೆ ಮತ್ತು ಫಿರೋಜ್ ಷಾ ಮೆಹ್ತಾ ತೀರಿಕೊಂಡದ್ದರಿಂದಲೂ 1941ರಲ್ಲಿ ತಿಲಕರು ಜೈಲಿನಿಂದ ಮರಳಿದ್ದರಿಂದಲೂ ಕಾಂಗ್ರೆಸ್ಸಿನ ಮಂದಗಾಮೀನಾಯಕರು ವಿಶೇಷ ಕ್ರೀಯಾಶೀಲರಾಗಿ ಇಲ್ಲದ್ದರಿಂದಲೂ ಮಂದಗಾಮಿ ಪಕ್ಷ ದುರ್ಬಲವಾಯಿತು. 1915ರ ಮುಂಬೈ ಕಾಂಗ್ರೆಸ್ಸಿನಲ್ಲಿ ಆನಿಬೆಸೆಂಟರ ಭಾಷಣದಲ್ಲೇ ತೀವ್ರಗಾಮಿಗಳು ಮೇಲ್ಮೈ ಸಾಧಿಸುತ್ತಿದ್ದುದರ ಸುಳಿವು ಕಾಣಬರುತ್ತದೆ. 1916ರ ಲಕ್ನೋ ಕಾಂಗ್ರೆಸ್ಸಿನಲ್ಲಿ ಮತ್ತೆ ತೀವ್ರಗಾಮಿಗಳು ಕಾಂಗ್ರೆಸ್ಸಿಗೆ ಮರಳಿದರು .
1919ರ ಜಲಿಯನ್ವಾಲಾ ದುರಂತ ಹಾಗೂ ಮುಂದೆ 1920ರಲ್ಲಿ ಕಾಂಗ್ರೆಸ್ಸಿನ ನಾಯಕತ್ವ ಗಾಂಧೀಜಿಯ ಕಡೆ ಬಂದು ಅವರು ಅಸಹಕಾರ ಚಳವಳಿ ಹೂಡಿದ ಘಟನೆಗಳಿಂದ ಮಂದಗಾಮಿಗಳು ಹಿನ್ನಡೆ ಕಂಡರು. ಆದರೆ ಮಂದಗಾಮಿಗಳಾದ ಶ್ರೀನಿವಾಸ ಶಾಸ್ತ್ರಿ, ತೇಜ್ ಬಹದೂರ್ ಸಪ್ರು, ಚಮನ್ ಲಾಲ್ ಸೆಟಲ್ವಾಡ್ ಮುಂತಾದವರು ಇಂಡಿಯನ್ ಲಿಬರಲ್ ಫೆಡರೇಶನ್ ಕಟ್ಟಿದರು. ತಿಲಕರೂ ಅನಿಬೆಸೆಂಟರೂ 1916ರಲ್ಲಿ ಪ್ರತ್ಯೇಕ ಹೋಮ್ ರೂಲ್ ಲೀಗ್ ಸ್ಥಾಪಿಸಿ ಜನಜಾಗೃತಿಗೆ ಪ್ರಯತ್ನಿಸಿದರು.
ಕ್ರಾಂತಿಕಾರಿ ಚಟುವಟಿಕೆಗಳು ಬೆಳೆಯುತ್ತ ಸಾಗಿದುವು. ಜ್ಯಾಕ್ಸನ್ ಕೊಲೆಯಿಂದ ಸಾವರ್ಕರ್ ಹಾಗೂ ಅವರ ಸೋದರರು ಬಂಧಿತರಾಗಿ ದೀರ್ಘಕಾಲ ಕರಿನೀರ ಶಿಕ್ಷೆಗೆ ಗುರಿಯಾದರು. ಬಂಗಾಳದಲ್ಲಿ ಅಲಿಪುರ್ ಬಾಂಬ್ (1908) ಪ್ರಕರಣದ ವಿಚಾರಣೆಯಾಗಿ ಖುದಿರಾಮನಿಗೆ ಫಾಶಿಯಾದಾಗ ಆ ಬಗ್ಗೆ ಬರೆದ ಲೇಖನಕ್ಕಾಗಿಯೇ ತಿಲಕರಿಗೆ ಶಿಕ್ಷೆಯಾಯಿತು. ಬಂಗಾಲದ ಮನಿಕ್ತೊಲಾ ಹಾಗೂ ಇತರ ಕಡೆ ಬ್ರಿಟಿಷರಿಗೆ ದೊರೆತ ವಸ್ತುಗಳಿಂದಾಗಿ ಕ್ರಾಂತಿಕಾರಿಗಳನೇಕರ ಬಂಧನವಾಯಿತು.
ಅರವಿಂದಘೋಷರು ಪಾಂಡಿಚೆರಿಗೆ (ಪುದುಚೇರಿ) ಹೋಗಿ ಬಂಧನ ತಪ್ಪಿಸಿಕೊಂಡರು. ಕನ್ನಯಲಾಲ್ದತ್ತ, ಎಸ್. ಎಸ್ ಬೋಸರ ವಿಚಾರಣೆಯಾಗಿ ಅವರಿಗೆ ಫಾಶಿಯಾಯಿತು. ಈ ಪ್ರಕರಣದ ಮಾಫಿ ಸಾಕ್ಷಿದಾರನಾದ ನರೇಂದ್ರ ಗೋಸಾಯಿ, ಖುದಿರಾಮನನ್ನು ಬಂಧಿಸಿದ ಪೊಲೀಸ್ಅಧಿಕಾರಿ, ಅವನ ವಿರುದ್ಧ ಖಟ್ಲೆಯ ಸರ್ಕಾರೀ ವಕೀಲ ಮುಂತಾದವರನ್ನು ಕ್ರಾಂತಿಕಾರಿಗಳು ಕೊಂದರು. ಇದೇ ಕಾಲದಲ್ಲಿ ಪಾಂಡಿಚೇರಿಯಲ್ಲಿ ತರಬೇತಿ ಪಡೆದ ಮಂಜಿ ಅಯ್ಯರ್ 1911ರಲ್ಲಿ ತಿನ್ನವೆಲ್ಲಿ ಮ್ಯಾಜಿಸ್ಟ್ರೇಟನಿಗೆ ಗುಂಡಿಕ್ಕಿಕೊಂದು ಫಾಶಿಗೇರಿದ. ಇದರ ಹಿಂದೆಯೇ ದೆಹಲಿಯಲ್ಲಿ ಹಾರ್ಡಿಂಜ್ ಮೇಲೆ ಬಾಂಬ್ ಎಸೆದು ರಾಸ್ ಬಿಹಾರಿ ಬೋಸ್ ಪರಾರಿಯಾದರು. ಈ ದೆಹಲಿ ಬಾಂಬ್ ಪ್ರಕರಣದಲ್ಲಿ ಮಾಸ್ಟರ್ ಅಮೀರ್ಚಂದ್ಭಾಯಿ, ಬಾಲಮುಕುಂದ್ ಮುಂತಾದವರಿಗೆ ಫಾಶಿಯಾಯಿತು (1914).
ಲಂಡನ್ನಿಂದ ಪ್ಯಾರಿಸ್ಸಿಗೆ ಹೋಗಿದ್ದ ಶ್ಯಾಮಜಿ ಕೃಷ್ಣವರ್ಮ ಕ್ರಾಂತಿಕಾರೀ ಚಟುವಟಿಕೆ ಮತ್ತು ಭಾರತ ಪರ ಪ್ರಚಾರ ನಡೆಸಿದರು. ಜರ್ಮನಿಯ ಸ್ಟಟ್ಗಾರ್ಟ್ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾಜಶಾಸ್ತ್ರಜ್ಞರ ಸಭೆಯಲ್ಲಿ ಭಾರತದ ರಾಷ್ಟ್ರಧ್ವಜ ತಯಾರಿಸಿ ಪ್ರದರ್ಶಿಸಲು ಕಾಮಾರನ್ನು ಕಳುಹಿಸಿದವರೇ ಅವರು. ಅಲ್ಲದೆ ಬರ್ಲಿನ್ನಿನಲ್ಲಿ ನೆಲಸಿದ್ದ ಕ್ರಾಂತಿಕಾರಿ ವೀರೇಂದ್ರನಾಥ ಚಟ್ಟೋಪಾಧ್ಯಾಯರ ಕೂಡ ಅವರಿಗೆ ಸಂಬಂಧವಿತ್ತು. ಲಾಲಾಹರದಯಾಳರು ಲಂಡನ್ನಿಂದ ಅಮೇರಿಕಕ್ಕೆ ತೆರಳಿ ಅಲ್ಲಿ ಡಾ. ಖಾನಖೋಜೆ ಅವರ ನೆರವಿನಿಂದ ಘದರ್ ಪಕ್ಷ ಸ್ಥಾಪಿಸಿ (1912) ಅಲ್ಲಿಯ ಭಾರತೀಯರನ್ನು ಸಂಘಟಿಸಿದರು. ಒಂದನೆಯ ಮಹಾಯುದ್ಧದ ಕಾಲದಲ್ಲಿ ಭಾರತದಲ್ಲಿ ಕ್ರಾಂತಿನಡೆಸುವ ಯೋಜನೆ ಹಾಕಿದರು. ಜರ್ಮನಿಗೆ ಹೋಗಿ ಅಲ್ಲಿಯ ಸರ್ಕಾರದ ನೆರವಿನಿಂದ ಕಾಬೂಲ್ನಲ್ಲಿ ಸ್ವತಂತ್ರ ಭಾರತದ ತಾತ್ಕಾಲಿಕ ಸರ್ಕಾರವನ್ನು ರಾಜಾ ಮಹೇಂದ್ರಪ್ರತಾಪರ ನೇತೃತ್ವದಲ್ಲಿ ಸ್ಥಾಪಿಸಿದರು (1915). ಫೆಬ್ರುವರಿ 21ಕ್ಕೆ ಇಡೀ ಭಾರತದಲ್ಲಿ ದಂಗೆ ಎಬ್ಬಿಸಬೇಕೆಂದು ಯೋಚಿಸಿದರು. ರಾಸ್ ಬಿಹಾರ್ ಬೋಸ್ ಮುಂತಾದವರು ಇದರ ಹಿನ್ನೆಲೆಯಲ್ಲಿ ಇದ್ದರು. ಆದರೆ ಇದರ ಗುಟ್ಟು ಕೃಪಾಲ್ಸಿಂಗ್ ಎಂಬವನಿಂದ ಬ್ರಿಟಿಷರಿಗೆ ತಿಳಿದು ಲಾಹೋರ್ ಒಳಸಂಚಿನ ಖಟ್ಲೆ ಎಂದು ಪ್ರಸಿದ್ಧವಾದ ಈ ಹಲವು ಪ್ರಕರಣಗಳಲ್ಲಿ 291 ಜನರ ವಿಚಾರಣೆಯಾಗಿ 42 ಜನರಿಗೆ ಫಾಶಿ, 114 ಜನರಿಗೆ ಕರಿನೀರು ಶಿಕ್ಷೆ ಆಯಿತು (1915). ಕರ್ತಾರ್ಸಿಂಗ್, ಭಾಯಿಪರಮಾನಂದ, ಜಗತ್ಸಿಂಗ್, ಗಣೇಶ ಪಿಂಗಳ್ ಇವರ ಬಗ್ಗೆ ಫಾಶಿ ಶಿಕ್ಷೆ ಪ್ರಕಟಿಸಿದಾಗ ಅವರು ಸಂತಸದಿಂದ ನಲಿದಾಡಿದರು. ಆದರೆ ಭಾಯಿ ಪರಮಾನಂದರಿಗೆ ಫಾಶಿಯ ಬದಲು ಜೀವಾವಧಿ ಶಿಕ್ಷೆಕೊಟ್ಟರು.
ಮಾಹಿತಿ ಆಧಾರ: ಮೈಸೂರು ವಿಶ್ವಕೋಶ
ನಾಳೆ ಮುಂದುವರೆಸೋಣ...
ಕಾಮೆಂಟ್ಗಳು