ಗೋಕುಲ ನಿರ್ಗಮನ 21
ಗೋಕುಲ ನಿರ್ಗಮನ 21
(ಮಹಾನ್ ಕವಿ ಪು. ತಿ. ನರಸಿಂಹಾಚಾರ್ಯರ ಕೃತಿ)
ಕೃಷ್ಣ
ಎನಿತಿನಿದು ಎನಿತಿನಿದು ನಿಮ್ಮ ಕೂಡಿರಲು ಕಾಡ ಜನ ಊರ ಜನರೆಲ್ಲ ಹರಸಿರಲು ಸೊಗದ ಕೋಡೊಳೆ ನಿಂತೆ ಇದಕಿಲ್ಲ ಮಿಗಿಲು ಮುನಿಯದೇ ನಾಚದೇ ರಾಧೆ ಬಳಿಯಿರಲು- ಒಲುಮೆ ಹೂರಣದಂತಿರುವ ರಾಧೆ –
ಓ ರಾಧೇ ರಾಧೇ ಎಲ್ಲಿ ರಾಧೆ?
ಎಲ್ಲರೂ
ಓ ರಾಧೇ ರಾಧೇ ಎತ್ತ ರಾಧೆ
ತಂದೆಯ ಕಂಡಂಜಿ ಹೋದಳೋ
ತಿರುಗಿ ಬಾರಳೋ_ಓ ರಾಧೆ_
ಕೃಷ್ಣ
(ಕಳವಳದಿಂದ)
ಹಾಡು : ರಾಗ - ಕೌಪಿ
ಎಲ್ಲವಳೆಲ್ಲವಳೆಲ್ಲವಳು - ನಿಲ -
ದಾಡುವ ಕಂಗಳ ಸೊಲ್ಲವಳು ||ಪ||
ಗಿಡಗಳ ಮರೆಯಿಂದಾರಿಗು ತೋರದೆ
ನನ್ನನೆ ನೋಡುವ ಮರುಳವಳು - ಕೆಂ-
ದಾವರೆ ಕೆನ್ನೆಯ ಕುರುಳವಳು
ಕಂಗಳು ಬೆರೆಯಲು ಎದೆ ಮೊಗಕೇರಿತೋ ಎನೆ ಚೆನ್ನೊಲುಮೆಯ ಹೊಗರವಳು ಹಿಂ_
ದಿರಿಸುವ ನಾಚಿಕೆಯೊಗರವಳು
ನನ್ನನೆ ನೆನೆವ ನಿದ್ದೆಗೆ ಸುಳಿವ
ಕನಸಂತೆಲ್ಲವ ಕಾಂಬವಳು_ನಾ_
ನೊಬ್ಬನೆ ದಿಟವೆಂದೆಂಬವಳು
ಈ ಕಣ್ಣಾ ತುಟಿ ಈ ನಗೆ ಆ ನಡೆ
ಈ ಕೊಂಕೆಲ್ಲವ ಪಡೆದವಳು_ಅಹ
ಎಂತೋ ಎನ್ನೆದೆ ತಡೆದವಳು
ಎಲ್ಲವಳೆಲ್ಲವಳೆಲ್ಲವಳು - ನಾ
ನುಡಿಸುವ ಕೊಳಲಿನ ಸೊಲ್ಲವಳು
ಎಲ್ಲರೂ
ಎಲ್ಲವಳೆಲ್ಲವಳೆಲ್ಲವಳು_ನಮ
ಕೃಷ್ಣನ ಹಂಬಲ ಸೊಲ್ಲವಳು
ಗಿಡದೆಡೆಯೇ
ದಡದೆಡೆಯೇ
ಹೊನ್ನಯ ಬಂಡೆಯ ಬುಡದೆಡೆಯೇ
ಕೊಳದೆಡೆಯೇ
ಮಳಲೆಡೆಯೇ
ನೈದಿಲೆಯರಳಿಹ ಕೆರೆಯದೆಯೇ
ಎಲ್ಲವಳೆಲ್ಲವಳೆಲ್ಲವಳು - ನಮ
ಕೃಷ್ಣನ ಹೃದಯವ ಬಲ್ಲವಳು-
ರಾಸಯನರ್ಧಕೆ ತಡೆದವಳು
ಹಾಡನು ವಾಡಂ ಗೈದವಳು
ಸುವ್ವಿಗೆ ಸುಯ್ಯಲ ತಂದವಳು - ನಮ
ಕೃಷ್ಣನ ಹೃದಯದಿ ನಿಂದವಳು -
ಎಲ್ಲವಳೆಲ್ಲವಳೆಲ್ಲವಳು - ನಮ್ಮ
ಕೃಷ್ಣನ ಹಂಬಲ ಸೊಲ್ಲವಳು
ರಾಗ_ಉದಯರವಿಚಂದ್ರಿಕಾ
ಎಲೌ ರಾಧೇ ರಾಧೇ ಗಿರಿಧರಹೃದುನ್ಮಾದನಕರೀ
ಸಖೀ, ಎಲ್ಲೌ, ಎಲ್ಲೌ ಮುರಲಿಯುಲುಹೂ ನಿಂತಿತಮಮಾ
'ಪ್ರಿಯೇ, ತೋರೌ ತೋರೌ' ಎನುತ ಕೊಳಲಂ
ಮೋನಗೊಳಿಸು_
ತ್ತಿಗೋ ಓಪಂ ಪೋಪಂ ಬನವನಲೆಯಲ್ ತೊರೆಯುತೆಮ್ಮಂ
( ರಾಧೆಯನ್ನು ಹುಡುಕಲು ಹೋಗಿದ್ದ ಕೆಲವರು ಗೋಪಿಯರು ಈ ವೇಳೆಗೆ ಹಿಂದಕ್ಕೆ ಬರುತ್ತಾರೆ )
ಹೊಸದಾಗಿ ಬಂದವರು
ಬನವೆಲ್ಲಾ ಹುಡುಕಿದೆವೆಲ್ಲಾ
ರಾಧೆಯು ಕಾಣಲೆ ಇಲ್ಲಾ
( ಕೃಷ್ಣ ಕೊಳಲನ್ನು ಸೊಂಟಕ್ಕಿರಿಸಿ ಖಿನ್ನನಾಗಿ ಬಂಡೆಯ ಮೇಲೆ ಕುಳಿತುಕೊಳ್ಳುತ್ತಾನೆ )
ಹಾ, ಕೊಳಲನಿಳಿಸಿ ಖಿನ್ನನಾದನಲ್ಲಾ
ನಮ್ಮೆಲ್ಲರ ನಲ್ಲ
***********
ಕೃಷ್ಣನಿಗೆ ಮತ್ತೆ ಗೋಪ ಗೋಪಿಯರನ್ನು ಕಂಡು ಸಂತಸವಾಯಿತು. ಇದಕ್ಕಿಂತ ಸೊಗಸು ಬೇರೇನಿದೆ ಎನ್ನುವನು. ಎಲ್ಲರೂ ನನ್ನನ್ನು ಹರಸಿರುವಿರಿ. ಒಲಿದ ರಾಧೆ ಬಳಿಯಲ್ಲಿದ್ದರೆ ಇನ್ನೂ ಚೆನ್ನ. ಒಲುಮೆಯ ಹೂರಣದಂತಿರುವ ರಾಧೆ ಕಾಣಿಸುತ್ತಿಲ್ಲ. ಎಲ್ಲಿರುವಳೋ...
ಎಲ್ಲರಿಗೂ ಅದು ಅರಿವಾಗುವುದು. ತಂದೆಯನ್ನು ಕಂಡು ಅಂಜಿ ಹೋದಳೋ ಎನ್ನುವರು. ತಿರುಗಿ ಬಾರಳೋ ಏನೋ ಎಂಬ ಸಂಶಯ
ಕೃಷ್ಣನಿಗೆ ಕಳವಳವಾಗುವುದು. ಇಲ್ಲಿ ರಾಧೆಯ ವರ್ಣನೆಯೊಂದಿಗೆ ಅವನ ವಿರಹವೂ ಸೇರಿದೆ. ಎಲ್ಲಿ ಅವಳು? ನನ್ನನ್ನೇ ಸದಾ ನೋಡುವವಳು, ಒಲುಮೆಯ ಹೃದಯದವಳು.ನಾನೇ ಕನಸು ಮನಸಿನಲ್ಲಿಯೂ ಕಾಣುವವನು ಎಂದವಳು. ಆ ಕಣ್ಣು, ತುಟಿ, ನಗೆ, ಕೊಂಕು, ಬಿಂಕಗಳನ್ನು ಹೊಂದಿದ ಚೆಲುವೆ ಎಲ್ಲಿರುವಳು? ನಾನು ನುಡಿಸುವ ಕೊಳಲಿನ ಧ್ವನಿಯೇ ಅವಳು.
ಈಗ ಉಳಿದವರೂ ಸೇರಿ ಹಾಡುವರು. ನಮ್ಮ ಕೃಷ್ಣನ ಚೆಲುವೆ, ಅವನ ಹಂಬಲವನ್ನೇ ಹೊತ್ತವಳು ಎಲ್ಲಿರುವಳು/ ಗಿಡದ ಕಡೆಯೇ, ನದಿಯ ದಡದಲ್ಲಿಯೇ, ಬಂಡೆಯೆಡೆಯೇ, ಕೊಲದ ಹತ್ತಿರವೇ,ಮಳಲಿನಲ್ಲಿಯೇ, ನೈದಿಲೆಗಳು ತುಂಬಿರುವ ಕೆರೆಯಲ್ಲಿಯೇ ಎಂದು ಕಾತರಿಸುವರು.
ಕೃಷ್ಣನ ಹೃದಯದಲ್ಲಿ ನಿಂತವಳು ರಾಧೆ. ಈ ರಾಸನೃತ್ಯವನ್ನು ಅರ್ಧಕ್ಕೇ ನಿಲ್ಲಿಸಿ ಎಲ್ಲಿಗೆ ಹೋದಳು? ಸಖೀ, ರಾಧೇ, ಕೃಷ್ಣನ ಹೃದಯೇಶ್ವರೀ...ಎಲ್ಲಿರುವೆ? ನೀನಿಲ್ಲದೆ ಕೃಷ್ಣನು ಮೌನವಾಗಿ ನಮ್ಮನ್ನು ತೊರೆದು ಹೋಗುತ್ತಿರುವನು. ಕೊಳಲೂ ಮೌನವಾಗಿದೆ.
ರಾಧೆಯನ್ನು ಹುಡುಕಿಕೊಂಡು ಹೋದವರು ಬಂದು ಸಿಗಲಿಲ್ಲವೆಂದು ಹೇಳುವರು. ಕೃಷ್ಣನು ಕೊಳಲನ್ನು ಸೊಂಟಕ್ಕೆ ಸಿಕ್ಕಿಸಿ ಖಿನ್ನನಾಗಿ ಒಂದು ಬಂಡೆಯ ಮೇಲೆ ಕುಳಿತುಕೊಳ್ಳುವನು. ಎಲ್ಲರಿಗೂ ಕಳವಳ.
ಭಾವಾರ್ಥ: ಸುಬ್ಬುಲಕ್ಷ್ಮಿ Lrphks Kolar
ಕಾಮೆಂಟ್ಗಳು