ವಿಕ್ಕು ವಿನಾಯಕರಾಮ್
ವಿಕ್ಕು ವಿನಾಯಕರಾಮ್
ಯಾವುದೇ ಕರ್ನಾಟಕ ಸಂಗೀತ ಕಚೇರಿಗೆ ಹೋದರೂ ನನಗೆ ಎಲ್ಲಕ್ಕಿಂತ ಮೊದಲು ಗಮನ ಸೆಳೆಯುವುದು ವೇದಿಕೆಯ ಮೇಲೆ ರಾರಾಜಿಸುವ ಮಣ್ಣಿನ ಮಡಕೆ. ಎಂಥ ಶ್ರೀಮಂತಿಕೆಯ ಸಂಗೀತದಲ್ಲಿ ಮಣ್ಣಿನ ಮಡಕೆಗೊಂದು ಅದ್ಭುತ ಸ್ಥಾನವಿದೆ!
ಘಟಂ ಅಂಥಹ ಶ್ರೇಷ್ಠ ಸುನಾದದ ವಾದ್ಯವನ್ನು ಮಡಕೆ ಎಂದು ಕರೆದೆ ಎಂದು ಅನ್ಯಥಾ ಭಾವಿಸಬೇಡಿ. ಮಣ್ಣಿಂದ ಕಾಯ ಮಣ್ಣಿಂದ. ಮಣ್ಣಿನಿಂದ ಮೂಡಿದ ಮಡಕೆಯಲ್ಲಿಯೂ ನಾದ ಕಂಡ ವಿಶಿಷ್ಟ ಕಣ್ಣನ್ನು, ಸೃಷ್ಟಿಕರ್ತ ಭುವಿಯಲ್ಲಿ ಕೆಲವು ಮಹಾನುಭಾವರಿಗೆ ನೀಡಿದ್ದಾನೆ. ಅಂಥಹ ಮಹಾನುಭಾವರು ವಿಕ್ಕು ವಿನಾಯಕರಾಮ್. ಇಂದು ಘಟಂ ವಿಶ್ವದೆಲ್ಲೆಡೆ ಪ್ರಸಿದ್ಧಿಗೊಂಡಿರುವುದರಲ್ಲಿ ಅವರ ಅಪಾರ ಕೊಡುಗೆಯಿದೆ.
ವಿಕ್ಕು ತೇತಕುಡಿ ಹರಿಹರ ವಿನಾಯಕರಾಮ್ ಅವರು 1942ರ ಆಗಸ್ಟ್ 11ರಂದು ಜನಿಸಿದರು. ತಂದೆ ಕಲೈಮಾಮಣಿ ಟಿ.ಆರ್. ಹರಿಹರ ಶರ್ಮ. ಅವರೂ ಸಂಗೀತಗಾರರು ಹಾಗೂ ಶಿಕ್ಷಕರಾಗಿದ್ದರು. ಅಪ್ಪ ಅಮ್ಮ ಮೊದಲಿಟ್ಟ ಹೆಸರು ರಾಮಶೇಷನ್ ಎಂದು. ಚಿಕ್ಕ ಮಗುವಾಗಿದ್ದ ರಾಮಶೇಷನಿಗೆ ವಿಪರೀತ ಜ್ವರ ಬಂತು. ಬೇರೆ ಬೇರೆ ವೈದ್ಯರ ಬಳಿ ಹೋಗಿ ತೋರಿಸಿದರೂ ಜ್ವರ ಗುಣವಾಗಲೇ ಇಲ್ಲ. ಆಸ್ಪತ್ರೆಯ ಸಹವಾಸದಿಂದ ಬೇಸತ್ತ ಇವರ ತಂದೆ, ಮಗುವನ್ನು ಚೆನ್ನೈನಲ್ಲಿರುವ ಒಂದು ಗಣೇಶನ ಗುಡಿ ಮುಂದೆ ಮಲಗಿಸಿ ‘ದೇವರೇ ನೀನೇ ನನ್ನ ಮಗುವನ್ನು ಕಾಪಾಡಬೇಕು’ ಎಂದು ಬೇಡಿಕೊಂಡರು. ಮಗು ಉಳಿಯಿತು. ದೇವರಿಗೆ ನಮಿಸಿದ ತಂದೆ ಕೆಲವೇ ದಿನಗಳಲ್ಲಿ ರಾಮಶೇಷನ್ ಹೆಸರನ್ನು ‘ವಿಕ್ಕು ವಿನಾಯಕರಾಮ್’ ಎಂದು ಬದಲಿಸಿದರು.
ವಿಕ್ಕು ಅವರು ಹದಿಮೂರನೇ ವಯಸ್ಸಿನ ವೇಳೆಗೆ ಲಯವಾದ್ಯ ನುಡಿಸಲಾರಂಭಿಸಿದ್ದರು. ಮಣ್ಣಿನ ಮಡಕೆಯಲ್ಲಿ ನಾದ, ಲಯ, ತಾಳವನ್ನು ಲೀಲಾಜಾಲವಾಗಿ ಪಡಿಮೂಡಿಸುವ ಇವರು ಸಂಗೀತ ತಾಳದ ತ್ರಿಶ್ರ, ಚತುರಶ್ರ, ಖಂಡ, ಮಿಶ್ರ ಹೀಗೆ ಎಲ್ಲ ‘ನಡೆ’ಗಳಲ್ಲೂ ಅದ್ಭುತ ಚಮತ್ಕಾರವನ್ನು ಶ್ರುತಪಡಿಸಿದ್ದಾರೆ.
1955ರ ಮಾರ್ಚ್ 5ರಂದು ತಮಿಳುನಾಡಿನ ತೂತುಕುಡಿಯಲ್ಲಿ ನಡೆದ ರಾಮನವಮಿ ಸಂಗೀತೋತ್ಸವದಲ್ಲಿ ವಿಕ್ಕು ಅವರ ಮೊದಲ ಕಛೇರಿ ನಡೆಯಿತು. ಮಗನ ನುಡಿಸುವಿಕೆಗೆ ಕೇಳುಗರ ಪ್ರತಿಕ್ರಿಯೆ ಕಂಡ ತಂದೆಯ ಕಣ್ಣಲ್ಲಿ ಆನಂದಬಾಷ್ಪ ಮೂಡಿತು. ಮಗ ಭವಿಷ್ಯದಲ್ಲಿ ಉತ್ತಮ ಘಟಂ ಪರಿಣಿತನಾಗಬೇಕು ಆಗಬೇಕು ಎಂಬ ಕನಸು ಆ ಕಂಗಳಲ್ಲಿ ಮೂಡಿತ್ತು. ಆ ಕನಸು ಔನ್ನತ್ಯದ ರೂಪದಲ್ಲಿ ಫಲಿಸಿರುವುದನ್ನು ಸಮಸ್ತ ವಿಶ್ವವೇ ಇಂದು ಕಂಡಿದೆ.
ವಿಕ್ಕು ವಿನಾಯಕರಾಮ್ ಮದ್ರಾಸಿನ ಆಕಾಶವಾಣಿಯಲ್ಲಿ ಕೆಲ ಕಾಲ ಲಯವಾದ್ಯಗಾರರಾಗಿ ದುಡಿದರು. ಆಗ ಎಂ.ಎಸ್. ಸುಬ್ಬಲಕ್ಷ್ಮಿ ಅವರ ಅನೇಕ ಧ್ವನಿಮುದ್ರಿತ ಗಾಯನಗಳಿಗೆ ಘಟಂ ನುಡಿಸಿದ್ದರು. ಎಂ.ಎಲ್.ವಿ, ಶೆಮ್ಮಂಗುಡಿ, ಚೆಂಬೈ ಮುಂತಾದ ದಿಗ್ಗಜರು ಇವರೊಂದಿಗೆ ಒಡನಾಡಿದ್ದೂ ಇದೇ ದಿನಗಳಲ್ಲಿ.
1966ರಲ್ಲಿ ಅಮೆರಿಕದ ವಿಶ್ವ ಸಂಸ್ಥೆಯಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಕಚೇರಿ. ಅಲ್ಲಿ ವಿಕ್ಕು ಅವರದೇ ಘಟಂ ಪಕ್ಕವಾದ್ಯ. ಎಂ. ಎಸ್ ಅವರ ಮಾಧುರ್ಯಭರಿತ ಗಾಯನದಂತೆಯೇ ವಿಕ್ಕು ಅವರ ಘಟಂ ವಾದನವೂ ಕೂಡ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ವಿಕ್ಕು ಪ್ರಖ್ಯಾತ ಕಲಾವಿದರಾದ ಡಾ. ಎಂ. ಬಾಲಮುರಳಿಕೃಷ್ಣ, ಜಿ.ಎನ್. ಬಾಲಸುಬ್ರಹ್ಮಣ್ಯಂ, ಮಧುರೈ ಮಣಿ ಅಯ್ಯರ್, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಮಹಾರಾಜಪುರ ಸಂತಾನಂ ಹೀಗೆ ಎಲ್ಲ ದಿಗ್ಗಜರೊಂದಿಗೆ ಘಟಂ ನುಡಿಸುತ್ತಾ ಸಾಗಿದರು.
1970ರಲ್ಲಿ ವಿಕ್ಕುಅವರು ‘ಶಕ್ತಿ’ ಎಂಬ ಸಂಗೀತ ತಂಡದ ಮೂಲಕ ಗಿಟಾರ್ ವಾದಕ ಜಾನ್ ಮೆಕ್ಲಾಗ್ಲಿನ್, ತಬಲಾ ಮಾಂತ್ರಿಕ ಉಸ್ತಾದ್ ಜಾಕೀರ್ ಹುಸೇನ್ ಹಾಗೂ ಪಿಟೀಲು ವಾದಕ ಎಲ್. ಶಂಕರ್ ಅವರೊಂದಿಗೆ ಅನೇಕ ವಿಶ್ವ ಮಟ್ಟದ ಕಛೇರಿಗಳಲ್ಲಿ ಘಟಂ ನುಡಿಸಿ ಈ ವಾದ್ಯವನ್ನು ಮತ್ತಷ್ಟು ಜನಪ್ರಿಯಗೊಳಿಸಿದರು.
ವಿಕ್ಕು ಲಯವಾದ್ಯ ಘಟಂನಲ್ಲಿ ಅನೇಕ ಪ್ರಯೋಗಶೀಲತೆಗಳನ್ನು ಮೂಡಿಸಿದ್ದಾರೆ. ಅವರು ಬರೀ ತಾಳಗಳನ್ನಷ್ಟೇ ಅಲ್ಲದೆ ಶ್ಲೋಕಗಳನ್ನೂ ವಿಧವಿಧವಾಗಿ ನುಡಿಸಿದ್ದಾರೆ. ‘ಗಣಪತಿ ತಾಳನಂ’ ಎಂಬ ‘ಜತಿ’ಯನ್ನೂ ಸೃಷ್ಟಿಸಿದ್ದಾರೆ. ಇದನ್ನು ಕೊನ್ನಕೋಲ್ನಲ್ಲೂ ಅವರು ಪ್ರಸ್ತುತಪಡಿಸಿದ್ದಾರೆ. ಮಗ ಸೆಲ್ವ ಗಣೇಶ ಅವರು ಹಾಡುವ ಗಣಪತಿ ಶ್ಲೋಕವನ್ನು ಯಥಾವತ್ತಾಗಿ ಘಟಂನಲ್ಲಿ ಸಂಗೀತವಾಗಿ ಹರಿಸಿದ್ದರು.
ವಿಕ್ಕು ವಿನಾಯಕರಾಮ್ ಅವರು ಘಟಂನಲ್ಲಿ ಸೋಲೊ ಕಚೇರಿ, ಜುಗಲ್ಬಂದಿ, ಪಕ್ಕವಾದ್ಯ ಹೀಗೆ ಎಲ್ಲ ತೆರನಾಗಿ ನುಡಿಸಿ ಈ ವಾದ್ಯವನ್ನು ಅತ್ಯಂತ ಜನಪ್ರಿಯಗೊಳಿಸಿದ್ದಾರೆ. ತಬಲಾ ಮಾಂತ್ರಿಕ ಜಾಕೀರ್ ಹುಸೇನ್, ಪಂ.ಶಿವಕುಮಾರ್ ಶರ್ಮ, ಅಮ್ಜದ್ ಅಲಿ ಖಾನ್, ಪಂ. ಹರಿಪ್ರಸಾದ್ ಚೌರಾಸಿಯ, ಪಂ. ಜಸರಾಜ್... ಮುಂತಾದ ದಿಗ್ಗಜರ ಜತೆಗೂ ವಿಕ್ಕು ಘಟಂ ನುಡಿಸಿದ್ದಾರೆ. ಘಟಂನಲ್ಲಿ ಜಾಸ್, ಫ್ಯೂಷನ್ ಸಂಗೀತವೂ ಸೊಗಸಾಗಿ ಕೇಳುತ್ತದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಪಂ. ಹರಿಪ್ರಸಾದ್ ಚೌರಾಸಿಯ ಅವರೊಂದಿಗೆ ಲೆಕ್ಕವಿಲ್ಲದಷ್ಟು ಕಚೇರಿ ನೀಡಿರುವ ವಿಕ್ಕು ಅವರು, ಒಮ್ಮೆ ಚೌರಾಸಿಯ ಅವರೊಂದಿಗೆ ಜರ್ಮನಿಗೆ ಪ್ರಯಾಣ ಮಾಡುತ್ತಿದ್ದರು. ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಿಂದ ಕಛೇರಿ ನಡೆಯುವ ಸ್ಥಳಕ್ಕೆ ನಾಲ್ಕು ಗಂಟೆಗಳ ಅಂತರವಿತ್ತು. ವಿಮಾನನಿಲ್ದಾಣದಲ್ಲಿ ಘಟಂ ಇದ್ದ ಟ್ರಾಲಿ ಬ್ಯಾಗ್ ಅನ್ನು ತಳ್ಳಿಕೊಂಡು ಹೋಗುವಾಗ ಇಳಿಜಾರಿನಲ್ಲಿ ಆಯತಪ್ಪಿ ಬ್ಯಾಗ್ ಬಿದ್ದು ಘಟಂ ಒಡೆದು ಹೋಯಿತು. ಸಂಜೆಯ ಕಚೇರಿಗೆ ಶ್ರುತಿ ಮಾಡಿ ಚೆನ್ನಾಗಿ ತಯಾರಾಗಿದ್ದ ವಿಕ್ಕು ಅವರಿಗೆ ಇದು ಅನಿರೀಕ್ಷಿತವಾಗಿತ್ತು. ಆಗ ಚೌರಾಸಿಯ, ‘ಘಟಂ ಇಲ್ಲದಿದ್ದರೆ ಬೇಡ, ‘ಕೊನ್ನಕೋಲ್’ ಮೂಲಕ ಬಾಯಿಯಲ್ಲೇ ತಾಳಗಳನ್ನು ಹೇಳಿ’ ಎಂದು ಸಮಾಧಾನದ ಸಲಹೆ ನೀಡಿದರು. ಒಂದೂವರೆ ಗಂಟೆ ಕಛೇರಿಯಲ್ಲಿ ‘ಕೊನ್ನಕೋಲ್’ ಅನ್ನೇ ಪ್ರಸ್ತುತಪಡಿಸುವ ತೀರ್ಮಾನಕ್ಕೆ ಬಂದರೂ ವಿಕ್ಕು ಅವರ ಸಮಯಪ್ರಜ್ಞೆ ಅಲ್ಲಿ ಕೆಲಸ ಮಾಡಿತ್ತು. ಒಡೆದುಹೋದ ಘಟಂ ಅನ್ನು ದಾರ ಹಾಗೂ ವಿಶಿಷ್ಟವಾದ ಅಂಟಿನ ಮೂಲಕ ಮತ್ತೆ ಒಂದುಗೂಡಿಸಿ ಶ್ರುತಿ ಮಾಡಿದಾಗ ಘಟಂ ನಾದದಲ್ಲಿ ಏನೂ ವ್ಯತ್ಯಾಸವಾಗಲಿಲ್ಲ. ಕಚೇರಿ ಸುಗಮವಾಗಿ ನಡೆಯಿತು!
ವಿಕ್ಕು ಅವರು ಅನೇಕ ಶಿಷ್ಯರನ್ನೂ ಸಂಗೀತಲೋಕಕ್ಕೆ ನೀಡಿದ್ದಾರೆ. ಕಳೆದ 5 ದಶಕಗಳಿಗೂ ಹೆಚ್ಚು ಕಾಲದಿಂದ ವಿಕ್ಕು ಅವರ ಶಿಷ್ಯೆಯಾಗಿರುವವರು ಕರ್ನಾಟಕದ ಖ್ಯಾತ ಘಟಂ ವಾದಕಿ ಸುಕನ್ಯಾ ರಾಮಗೋಪಾಲ್ ಅವರು.
ವಿಕ್ಕು ವಿನಾಯಕರಾಮ್ ಅವರಿಗೆ ಪ್ರತಿಷ್ಠಿತ ಗ್ರಾಮ್ಮಿ ಪ್ರಶಸ್ತಿ, ಪದ್ಮಶ್ರೀ (2002), ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (2012), ಪದ್ಮಭೂಷಣ (2014), ‘ಸಂಗೀತ ಕಲಾ ಆಚಾರ್ಯ’ ಪ್ರಶಸ್ತಿ, ಕರ್ನಾಟಕ ಸರ್ಕಾರ ನೀಡುವ ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ, ಮದ್ರಾಸ್ ಮ್ಯೂಸಿಕ್ ಅಕಾಡೆಮಿ ‘ಜೀವಮಾನದ ಸಾಧನೆ ಪ್ರಶಸ್ತಿ’ ಮುಂತಾದ ಅನೇಕ ಗೌರವಗಳು ಸಂದಿವೆ. ಈ ಹಿರಿಯ ಸಂಗೀತಾಚಾರ್ಯರಿಗೆ ನಮನ ನಮನ.
On the birth day of legendary Grammy Award–winning percussionist Vikku Vinayakram Sir
ಕಾಮೆಂಟ್ಗಳು