ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದಾನಪ್ಪ ಜತ್ತಿ ಶಾಸ್ರಿ

 

ದಾನಪ್ಪ ಜತ್ತಿ ಶಾಸ್ರಿ


ದಾಸಪ್ಪ ಜತ್ತಿ ಶಾಸ್ತ್ರಿಗಳು ಪ್ರವಚನಕಾರರಾಗಿ, ಕೀರ್ತನಕಾರರಾಗಿ ಹೆಸರಾಗಿದ್ದವರು.

ದಾನಪ್ಪ ಜತ್ತಿ ಶಾಸ್ತ್ರಿಯವರು1938ರ ಆಗಸ್ಟ್ 31ರಂದು  ವಿಜಾಪುರ ಜಿಲ್ಲೆಯ ತಿಕೋಟದಲ್ಲಿ ಜನಿಸಿದರು. ತಂದೆ ಸಿದ್ರಾಮಪ್ಪ ಜತ್ತಿ, ತಾಯಿ ದೊಡ್ಡಮ್ಮ. ಪ್ರಾರಂಭಿಕ ಶಿಕ್ಷಣ ತಿಕೋಟದಲ್ಲಿ ನಡೆಯಿತು. ಓದು ಮುಂದುವರೆಸಲಾಗದ ಪರಿಸ್ಥಿತಿ
ಏರ್ಪಟ್ಟಿತು.  ಆದರೆ ಪ್ರವಚನ, ಕೀರ್ತನೆ ಹೇಳುವ ಕಲೆ ಬಾಲ್ಯದಿಂದಲೇ ಸಿದ್ಧಿಸಿದ ವಿದ್ಯೆಯಾಗಿತ್ತು. 

ದಾನಪ್ಪ ಜತ್ತಿ ಶಾಸ್ರಿಗಳು ಚಿಕ್ಕ ವಯಸ್ಸಿನಿಂದಲೇ ರಂಗಭೂಮಿಯತ್ತ ಆಕರ್ಷಿತರಾದರು. ಸ್ತ್ರೀ ಪಾತ್ರದಲ್ಲಿ ಅಪಾರ ಜನಮೆಚ್ಚುಗೆ ಗಳಿಸಿದರು. ಧಾರವಾಡದ ಆಕಾಶವಾಣಿ ಕೇಂದ್ರದಿಂದ ಇವರ ಹಲವಾರು ನಾಟಕಗಳು ಭಿತ್ತರಗೊಂಡವು. ವಿಜಾಪುರ, ಬೆಳಗಾವಿ, ಧಾರವಾಡ, ರಾಯಚೂರು, ಬಳ್ಳಾರಿ, ಬಾಗಲಕೋಟೆ, ಗದಗ ಮುಂತಾದ ಕಡೆಗಳಲ್ಲಿ, ಮಹಾರಾಷ್ಟ್ರದ ಕೆಲವು ಪಟ್ಟಣಗಳಲ್ಲಿ ಕರ್ನಾಟಕ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಾಗೂ ರಾಜ್ಯ ಸಂಗೀತ ಮತ್ತು ನೃತ್ಯ ಅಕಾಡಮಿಯ ವತಿಯಿಂದ ಇವರ ಕಾರ‍್ಯಕ್ರಮಗಳ ಏರ‍್ಪಾಡು ನಡೆದವು 

ದಾನಪ್ಪ ಜತ್ತಿ ಶಾಸ್ರಿಗಳು ಬಸವಾದಿ ಪ್ರಥಮರ ಚರಿತ್ರೆ, ದಾಸ ಸಾಹಿತ್ಯ, ವಚನ ಸಾಹಿತ್ಯಗಳ ದಾರ್ಶನಿಕ ತತ್ತ್ವ ನಿರೂಪಣೆ, ಸಂಗೀತದೊಂದಿಗೆ ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಭಾವೈಕ್ಯತೆಯ ಮತ್ತು ರಾಷ್ಟ್ರೀಯ ಪ್ರಜ್ಞೆಯೊಂದಿಗೆ ಜನಸಮುದಾಯಕ್ಕೆ ಮುಟ್ಟಿಸುವಲ್ಲಿ ಮಹಾನ್ ಪ್ರತಿಭಾವಂತರೆನಿಸಿದ್ದರು. 

ದಾನಪ್ಪ ಜತ್ತಿ ಶಾಸ್ರಿಗಳು ಹಲವಾರು ಸಾಹಿತ್ಯ ಕೃತಿಗಳ ರಚನೆ ಮಾಡಿದ್ದರು.  ಇವುಗಳಲ್ಲಿ ಕಥಾಸಂಕಲನ: ಅಮೂಲ್ಯ ಕಾಣಿಕೆ;
ಕವನ ಸಂಕಲನ: ಭಾವ ಸೌರಭ; ಹನಿಗವನ ಸಂಕಲನ: ಭಾವತರಂಗ, ಸಂಪಾದನೆಗಳು: ಬಸವತತ್ತ್ವ ದರ್ಶನ, ವಚನ ಸಂಕಲನ-ವಚನಾಮೃತ; ಉಪನ್ಯಾಸಮಾಲಿಕೆ ಕೃತಿ-ಶರಣರು ನಕ್ಕಾಗ ಮುಂತಾದವು ಸೇರಿವೆ.

ದಾನಪ್ಪ ಜತ್ತಿ ಶಾಸ್ರಿಗಳ ಹಲವಾರು ಕಥೆ, ಕವಿತೆ, ಹನಿಗವನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ನಾಡಿನ ಹಲವಾರು ಕವಿಗಳು ಇವರನ್ನು ಕುರಿತು ಬರೆದ ಕವಿತಾ ಸಂಕಲನಗಳು “ಬೆಳ್ಳಿ ಸಿರಿ” ಮತ್ತು “ಗುಮ್ಮಟ ನಾಡಿನ ಕೀರ್ತನಕಾರ” ಎಂಬ ಹೆಸರಿನಿಂದ ಪ್ರಕಟಗೊಂಡವು. 

ದಾನಪ್ಪ ಜತ್ತಿ ಶಾಸ್ರಿಗಳಿಗೆ ಕರ್ನಾಟಕ ರಾಜ್ಯ ಸಂಗೀತ ಮತ್ತು ನೃತ್ಯ ಅಕಾಡಮಿಯ ವತಿಯಿಂದ ಕಥಾ ಕೀರ್ತನಕ್ಕಾಗಿ ‘ಕರ್ನಾಟಕ ಕಲಾತಿಲಕ’ ಎಂಬ ಬಿರುದಿನೊಂದಿಗೆ ಪ್ರಶಸ್ತಿ, ಸನ್ಮಾನ ಸಂದಿತು.  ಇವರ ಐವತ್ತೈದನೆಯ ವಯಸ್ಸಿನಲ್ಲಿ ಸ್ನೇಹಿತರು, ಅಭಿಮಾನಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ದಾನಸಿರಿ' 

ದಾನಪ್ಪ ಜತ್ತಿ ಶಾಸ್ತ್ರಿಗಳು 2005 ಡಿಸೆಂಬರ್ 10ರಂದು ನಿಧನರಾದರು.

On birth anniversary of great scholar Dasappa Jatti Shastry 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ