ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆರ್. ಎನ್. ದೊರೆಸ್ವಾಮಿ


 ಆರ್. ಎನ್. ದೊರೆಸ್ವಾಮಿ


ವಿದ್ವಾನ್ ಆರ್. ಎನ್. ದೊರೆಸ್ವಾಮಿ ಸಂಗೀತ ಕ್ಷೇತ್ರದ ಕಲಾರತ್ನರೆನಿಸಿದ್ದವರು.

ದೊರೆಸ್ವಾಮಿ 1916ರ ಡಿಸೆಂಬರ್ 12ರಂದು  ರುದ್ರಪಟ್ಟಣದಲ್ಲಿ ಜನಿಸಿದರು. ತಂದೆ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ನಾಲಾ ವೆಂಕಟರಾಮಯ್ಯ, ತಾಯಿ ಸಾವಿತ್ರಮ್ಮ. ಸಂಗೀತ ತಾಯಿಯಿಂದ ಬಂದ ಬಳುವಳಿ. 

ದೊರೆಸ್ವಾಮಿ ಸೇಲಂ ದೊರೆಸ್ವಾಮಿ ಅಯ್ಯಂಗಾರ್ಯರಲ್ಲಿ ಸಂಗೀತದ ಪ್ರಥಮ ಶಿಕ್ಷಣ ಪಡೆದರು. ವೀಣೆ ವೆಂಕಟಗಿರಿಯಪ್ಪನವರಲ್ಲಿ ಶಿಷ್ಯವೃತ್ತಿ ಕೈಗೊಂಡರು.  ಗುರುಗಳ ಜೊತೆಯಲ್ಲಿ ಉತ್ತರ ಭಾರತ ಪ್ರವಾಸದ ಸಂದರ್ಭದಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಮದರಾಸಿನ ಆಕಾಶವಾಣಿಯಲ್ಲಿ ಹಲವಾರು ಬಾರಿ ಇವರ ಸಂಗೀತ ಕಾರ್ಯಕ್ರಮಗಳ ಪ್ರಸಾರವಾಯಿತು. 

ದೊರೆಸ್ವಾಮಿ ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಕೆಲಕಾಲ ಸಂಗೀತ ಅಧ್ಯಾಪಕರಾಗಿ, ಕರ್ನಾಟಕ ಸರಕಾರ ನಡೆಸುವ ಸಂಗೀತ ಪರೀಕ್ಷಾ ಮಂಡಲಿಯ ಮುಖ್ಯ ಪರೀಕ್ಷಕರಾಗಿ, ಸಂಗೀತ ಕಲಾಭಿವರ್ಧಿನಿ ಸಭಾ ಸಂಸ್ಥೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 

ಭಾರತೀಯ ಸಂಗೀತ ವಾದ್ಯಗಳು ಸಾಕ್ಷ್ಯಚಿತ್ರಕ್ಕಾಗಿ ಗುರುಗಳೊಡನೆ ವೀಣಾವಾದನ ಕಚೇರಿ ನಡೆಸಿಕೊಟ್ಟರು. ಟಿ. ಚೌಡಯ್ಯನವರೊಡನೆ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾದರು. ರಾಮೋತ್ಸವ, ಗಣೇಶೋತ್ಸವಗಳಲ್ಲಿ ಗಾಯನ ಮತ್ತು ವೀಣಾವಾದನದ ಕಚೇರಿಗಳನ್ನು ನಡೆಸಿದರು.

ದೊರೆಸ್ವಾಮಿ ಅವರಿಗೆ ಮೈಸೂರಿನ ಸರಸ್ವತಿ ಗಾನ ಕಲಾಮಂದಿರದ ತ್ಯಾಗರಾಜ ಆರಾಧನಾ ಮಹೋತ್ಸವದಲ್ಲಿ ವೈಣಿಕ ವಿದ್ಯಾವಾರಿಧಿ ಪ್ರಶಸ್ತಿ, ಕಲಾಭಿವರ್ಧಿನಿ ಸಭಾದಿಂದ ಗಾನರತ್ನಾಕರ, ಬಿ. ದೇವೇಂದ್ರಪ್ಪನವರ ಹನುಮಜ್ಜಯಂತಿ ಉತ್ಸವದಲ್ಲಿ ವೈಣಿಕ ಪ್ರವೀಣ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾತಿಲಕ, ಬೆಂಗಳೂರಿನ ಗಾಯನ ಸಮಾಜದ ಸಂಗೀತ ಸಮ್ಮೇಳನದ ಅಧ್ಯಕ್ಷತೆ ಮತ್ತು ಸಂಗೀತ ಕಲಾರತ್ನ ಬಿರುದು, ರಾಜ್ಯೋತ್ಸವ ಪ್ರಶಸ್ತಿ, ಚೌಡಯ್ಯ ಸ್ಮಾರಕ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದವು.

ಆರ್. ಎನ್. ದೊರೆಸ್ವಾಮಿ ಅವರು 2002ರ ಆಗಸ್ಟ್ 17ರಂದು ಈ ಲೋಕವನ್ನಗಲಿದರು.

Great Veena Vidwan R. N.  Doreswamy


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ