ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಓಹೋ ಹಿಮಾಲಯ


 ಓಹೋ ಹಿಮಾಲಯ


ಇಂದು ಅಂತರರಾಷ್ಟ್ರೀಯ ಪರ್ವತಗಳ ದಿನ.  ನಮಗೆ ಭಾರತ ಎಂಬ ಕಲ್ಪನೆ ಮೂಡುವುದೇ ದೇಶದ ಭೂಪಟದ ಶಿರೋಭಾಗವನ್ನು ವಿಶಾಲವಾಗಿ ಭವ್ಯವಾಗಿ ವ್ಯಾಪಿಸಿರುವ ಹಿಮಾಲಯ ಪರ್ವತದ ಮೂಲಕ.  ಅದನ್ನು ಅಲ್ಲಲ್ಲಿ ಕಿಂಚಿತ್ತು ಕಂಡವರಿಗೂ ಹೃದಯದಲ್ಲದೇನೊ ಭಕ್ತಿ.

ಹಿಮಾಲಯವು ಭಾರತ, ಚೀನ, ನೇಪಾಲ, ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ಸರಹದ್ದುಗಳನ್ನು ದಕ್ಷಿಣ ಏಷ್ಯದ ಉತ್ತರ ಭಾಗದಲ್ಲಿ ವ್ಯಾಪಿಸಿರುವ ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ ಪರ್ವತ ಶ್ರೇಣಿ. ಇದು ಮಡಿಕೆ ಪರ್ವತಗಳಿಂದ ಕೂಡಿದ್ದು ಸದಾ ಹಿಮದಿಂದಾವೃತವಾಗಿರುತ್ತದೆ.  ಇದನ್ನು ಹಿಮಾಲಯ ಎಂದು ಮಾತ್ರವಲ್ಲದೆ ಹಿಮಾವನ್, ಹಿಮಾದ್ರಿ ಅಥವಾ ಹಿಮಾಚಲ್ ಎಂದು ಸಹ ಕರೆಯುವರು. 

ಹಿಮಾಲಯವು ಭಾರತದ ಉತ್ತರದ ಗಡಿಯಲ್ಲಿ ಅದ್ಭುತವಾದ ಗೋಡೆಯಂತಿದ್ದು, ಅವು ಪಶ್ಚಿಮ-ಪೂರ್ವಾಭಿಮುಖವಾಗಿ ಸಿಂಧೂ ನದಿ ಕಣಿವೆಯಿಂದ ಬ್ರಹ್ಮಪುತ್ರ ನದಿ ಕಣಿವೆಯವರೆಗೆ ಸುಮಾರು 2400 ಕಿಮೀ ಉದ್ದವಾಗಿ ಅವಿಚ್ಛಿನ್ನವಾಗಿ ಹಬ್ಬಿವೆ. ದಕ್ಷಿಣ-ಉತ್ತರವಾಗಿ ಸುಮಾರು 200 ರಿಂದ 500 ಕಿಮೀಗಳು ಅಗಲವಾಗಿವೆ. ಈ ಪರ್ವತಗಳು ಸುಮಾರು 5 ಲಕ್ಷ ಚ.ಕಿಮೀ ವಿಸ್ತೀರ್ಣವುಳ್ಳ ಪ್ರದೇಶವನ್ನು ಆವರಿಸಿವೆ. ಮಧ್ಯ ಏಷ್ಯದ ಪಾಮಿರ್ ಗ್ರಂಥಿಯಿಂದ ಅನೇಕ ಪರ್ವತ ಸರಣಿಗಳು ಪ್ರಾರಂಭಗೊಂಡು ವಿವಿಧ ದಿಕ್ಕುಗಳಿಗೆ ಹರಡಿವೆ. ಹಿಮಾಚಲ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರ ಭಾಗಗಳಲ್ಲಿ ಅಗಲವಾಗಿದ್ದು ಪೂರ್ವಕ್ಕೆ ಹೋದಂತೆ ಕಿರಿದಾಗುತ್ತವೆ. ಈ ಪರ್ವತಗಳು ನೇಪಾಲ ವಲಯದಲ್ಲಿ ಅತ್ಯಂತ ಎತ್ತರವಾಗಿವೆ. ಭಾರತದ ಕಡೆಗೆ ಕಡಿದಾದ ಮತ್ತು ಟಿಬೆಟ್ ಕಡೆಗೆ ಇಳಿಜಾರಿನಿಂದ ಕೂಡಿವೆ.

ಹಿಮಾಲಯ ಪರ್ವತ ಸಮುಚ್ಛಯವು, ಕಡಿದಾದ ಇಳಿಜಾರು, ಸದಾಹಿಮದಿಂದ ಆವೃತವಾದ ಭಾಗಗಳು, ಆಳವಾದ ಕಣಿವೆಗಳು, ಯೌವನಾವಸ್ಥೆಯ ನದಿಗಳು, ಸಂಕೀರ್ಣವಾದ ಭೂಗರ್ಭದ ರಚನೆ ಮತ್ತು ಉತ್ತಮವಾದ ಸಮಶೀತೋಷ್ಣ ವಲಯದ ಸಸ್ಯವರ್ಗ ಮುಂತಾದವುಗಳನ್ನು ಉಷ್ಣವಲಯದಲ್ಲಿ ಹೊಂದಿದೆ.
ಹಿಮಾಲಯ ಸರಣಿಯ ಪರ್ವತಗಳು ಒಂದಕ್ಕೊಂದು ಸರಪಳಿಯಂತೆ ಬೆಸೆದು ಎತ್ತರವಾಗಿವೆ. ಸು. 14 ಪರ್ವತಗಳು ಸರಾಸರಿ ಸಮುದ್ರಮಟ್ಟದಿಂದ 8000 ಮೀಟರ್‍ಗಳಿಗಿಂತ ಎತ್ತರವಾಗಿಯೂ ಸು. 20 ಪರ್ವತಗಳು 7500 ಮೀಗಿಂತ ಎತ್ತವಾಗಿಯೂ ಸುಮಾರು 94 ಪರ್ವತಗಳು 7300 ಮೀ ಗಿಂತಲೂ ಎತ್ತರವಾಗಿ ಇವೆ.

ಹಿಮಾಲಯ ಪರ್ವತದ ಉಗಮದ ಬಗ್ಗೆ ಹಲವಾರು ಸಂಶೋಧಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಅವರಲ್ಲಿ ಸ್ಪೇಟ್, ಡಿ.ಎನ್. ವಾಡಿಗರ್, ಎಂ.ಎಸ್. ಕೃಷ್ಣನ್ ಮತ್ತು ವ್ಯಾಗರ್ ಮೊದಲಾದವರು ಸೇರಿದ್ದಾರೆ. ಹಿಮಾಲಯ ಪ್ರದೇಶವು ಸು. 120 ಮಿಲಿಯನ್ ವರ್ಷಗಳ ಹಿಂದೆ ಟಿಥಿಸ್ ಎಂಬ ವಿಶಾಲವಾದ ಸಾಗರ ಒಂದರ ಭಾಗವಾಗಿದ್ದಿತು. ಮಯೋಸೆನ್ ಭೂ ಯುಗದಲ್ಲಿ ಟಿಥಿಸ್ ಸಾಗರದ ಉತ್ತರದಲ್ಲಿದ್ದ ಅಂಗಾರ ಮತ್ತು ದಕ್ಷಿಣದಲ್ಲಿದ್ದ ಗೊಂಡ್ವಾನ ಭೂ ಭಾಗಗಳ ಒತ್ತಡದಿಂದಾಗಿ ಸಾಗರ ತಳದ ಶಿಲಾಸ್ತರಗಳು ಮೇಲಕ್ಕೆ ಮಡಿಕೆಗೊಳ್ಳುವ ಮೂಲಕ ಹಿಮಾಲಯ ಪರ್ವತಗಳು ನಿರ್ಮಾಣಗೊಂಡಿತೆಂದು ಭೂಗರ್ಭಶಾಸ್ತ್ರಜ್ಞರ ಅಭಿಪ್ರಾಯ. 

ಸರ್ ಸಿಡ್ನಿ ಬುರ್ರೇಡ್‍ರವರು ಹಿಮಾಲಯದ ಒಟ್ಟು ಉದ್ದ ಹಾಗೂ ಅಲ್ಲಿ ಕಂಡುಬರುವ ನದಿಕಣಿವೆಯನ್ನು ಆಧರಿಸಿ ನಾಲ್ಕು ಪ್ರಮುಖ ವಿಭಾಗಗಳಾಗಿ ವಿಂಗಡಿಸಿದ್ದಾರೆ.

ಪಂಜಾಬ್ ಹಿಮಾಲಯ: ಸಿಂಧೂ ಮತ್ತು ಸಟ್ಲೇಜ್ ನದಿಯ ಒಟ್ಟು 560 ಕಿಮೀ ಉದ್ದವಾದ ಪ್ರದೇಶವನ್ನು ಪಂಜಾಬ್ ಹಿಮಾಲಯವೆಂದು ಕರೆಯುವರು. ಇದು ವಿಸ್ತಾರವಾದ ಜಮ್ಮು ಮತ್ತು ಕಾಶ್ಮೀರ, ಹಿಮಾಚಲಪ್ರದೇಶ ಮುಂತಾದವುಗಳನ್ನೂ ಒಳಗೊಂಡಿರುವುದರಿಂದ ಕಾಶ್ಮೀರ ಮತ್ತು ಹಿಮಾಚಲ್ ಹಿಮಾಲಯಗಳೆಂದು ಕರೆಯಲಾಗಿದೆ. ಇಲ್ಲಿ ಕಾರಕೋರಮ್, ಲಡಕ್, ಪಿರ್ ಪಂಜಾಲ್, ಜಾಷರ್ ಮತ್ತು ಧಾವ್ಲೂ ದಾರ್ ಪರ್ವತ ಸರಣಿಗಳು ಕಂಡುಬರುತ್ತವೆ. ಇಲ್ಲಿ 3444 ಮೀ. ಎತ್ತರದ ಜೋಜಿಲಾ ಮಾರ್ಗ ಉತ್ತಮವಾಗಿದೆ. ಇಲ್ಲಿ ದಿಬ್ಬಗಳು, ಸರೋವರಗಳು, ಕಣಿವೆಗಳು ಕಂಡುಬರುತ್ತವೆ.

ಕುಮಾವೋನ್ ಹಿಮಾಲಯ: ಇದು ಉತ್ತರ ಪ್ರದೇಶದ ಉತ್ತರದಲ್ಲಿದ್ದು ಸಟ್ಲೀಜ್‍ನಿಂದ ಕಾಳಿನದಿಯವರೆಗೆ ಹರಡಿದ್ದು ಸು. 38000 ಚ.ಕಿಮೀ. ಕ್ಷೇತ್ರವನ್ನು ಆವರಿಸಿದೆ. ಇಲ್ಲಿ ಅನೇಕ ಎತ್ತರವಾದ ಶಿಖರಗಳಿವೆ. ಉದಾ: ನಂದಾದೇವಿ, ಕಾಮೆಟ್, ಬದ್ರಿನಾಥ್, ಕೇದಾರ್‍ನಾಥ್, ನಂದಾಕೋಲ್, ಗಂಗೋತ್ರಿ ಅಲ್ಲದೆ ಅನೇಕ ಸರೋವರಗಳು ಮತ್ತು ಗಿರಿಧಾಮಗಳು ಕಂಡುಬರುತ್ತವೆ. ಗಿರಿಧಾಮಗಳಲ್ಲಿ ಡೆಹರಾಡೂನ್, ನೈನಿಥಾಲ್, ಮುಸ್ಸೂರಿ ಮತ್ತು ಭೀಮತಾಲ್‍ಗಳು ಪ್ರಮುಖವಾದವು.

ನೇಪಾಲ ಹಿಮಾಲಯ: ಇದು ಕಾಳಿನದಿಯಿಂದ ಟಿಸ್ತಾ ನದಿಯವರೆಗೆ ಸುಮಾರು 800 ಕಿಮೀ. ಉದ್ದವಾಗಿದ್ದು 1.19ಲಕ್ಷ ಚ.ಕಿಮೀ. ಪ್ರದೇಶವನ್ನಾವರಿಸಿದೆ. ಈ ಭಾಗದಲ್ಲಿ ಅನೇಕ ಎತ್ತರವಾದ ಶಿಖರಗಳು ಇವೆ. ಉದಾ: ಧವಳಗಿರಿ, ಅನ್ನಪೂರ್ಣ, ಮೊನಸ್ಲು, ಮೌಂಟ್ ಎವರೆಸ್ಟ್, ಮಾಕೂಲು, ಕಾಂಚನಜುಂಗ ಮುಂತಾದವು. ಸಿಕ್ಕಿಂ ಶ್ರೇಣಿಯು ಇಲ್ಲಿಯೇ ಕಂಡುಬರುತ್ತದೆ. ಇವುಗಳಲ್ಲದೆ ಡಾರ್ಜಿಲಿಂಗ್ ಹಿಮಾಲಯಗಳು ಪಶ್ಚಿಮ ಬಂಗಾಲ ಮತ್ತು ಭೂತಾನ ಹಿಮಾಲಯಗಳು ಹಂಚಿಕೆಯಾಗಿವೆ.

ಅಸ್ಸಾಂ ಹಿಮಾಲಯ: ಇದು ಟಿಸ್ತಾ ನದಿಯಿಂದ ಬ್ರಹ್ಮಪುತ್ರನದಿ ಕಣಿವೆಯ ಮ್‍ಚಬಾರ್ವ ಶಿಖರದವರೆಗೆ ಸು. 720 ಕಿಮೀ. ದೂರ ಹಬ್ಬಿದೆ. ಸು. 67,500 ಚ.ಕಿಮೀ. ಕ್ಷೇತ್ರವನ್ನಾವರಿಸಿದೆ. ಇಲ್ಲಿನ ಅನೇಕ ಶಿಖರಗಳು 300 ಮೀ. ಗಿಂತಲೂ ಎತ್ತರವಾಗಿವೆ. ಅವುಗಳಲ್ಲಿ ಪಾಹುನ್ರಿ ಮತ್ತು ಕುಲ್ಹಾ ಕಾಂಗಿ ಶಿಖರಗಳು ಪ್ರಮುಖವಾದವು.

ಹಿಮಾಲಯ ಪರ್ವತ ಭಾರತ ವಾಯುಗುಣದ ಮೇಲೆ ತನ್ನದೇ ಆದ ಪ್ರಭಾವವನ್ನು ಬೀರುತ್ತಿದೆ. ಪ್ರಪಂಚದ ಬೇರೆಯಾವ ದೇಶದಲ್ಲಿಯೂ ಇಷ್ಟು ಗಾಢವಾಗಿ ಒಂದು ಪರ್ವತ ಶ್ರೇಣಿಯು ಪ್ರಭಾವವನ್ನು ಬೀರಿಲ್ಲ. ಉತ್ತರ ಭಾರತದ ಬಹುತೇಕ ನದಿಗಳು ಹುಟ್ಟುವುದೇ ಈ ಪರ್ವತಾವಳಿಗಳ ಮೂಲದಿಂದ. ನೇಪಾಲ, ಭೂತಾನ, ಟಿಬೆಟ್, ಕಾಶ್ಮೀರಗಳು ಇದರಲ್ಲಿ ಅಂತರ್ಗತವಾಗಿವೆ. ಹಿಮಾಲಯ ಭಾರತ ಉಪಖಂಡದ ಸಮಾಜ ಹಾಗೂ ಸಂಸ್ಕೃತಿಗಳ ಮೇಲೆಯೂ ಮೂಲಭೂತ ಪ್ರಭಾವ ಬೀರಿದೆ. ಇಲ್ಲಿ ಹುಟ್ಟಿ ವಿಕಾಸವಾದ ಮತಧರ್ಮಗಳು ತತ್ತ್ವ ದರ್ಶನಗಳು ಇದರಿಂದ ಪ್ರಭಾವಿತವಾಗಿವೆ. 

ಪ್ರಕೃತಿಯ ವೈಭವ ಮತ್ತು ಬಲಿಷ್ಠತೆಯ ಮುಂದೆ ಮನುಷ್ಯನ ಅಸ್ತಿತ್ವ ಗೌಣವೆಂಬ ಭಾವನೆ ಹಿಂದಿನ ಋಷಿಮುನಿಗಳ ಕಾಲದಿಂದಲೂ ಜನಮಾನಸದಲ್ಲಿ ಮನೆ ಮಾಡಿತ್ತು. ಸಾಕ್ಷಾತ್ ಪರಮೇಶ್ವರ ಇಲ್ಲಿರುವ ಕೈಲಾಸದಲ್ಲಿ ನೆಲೆಸಿರುವನೆಂದು ಸನಾತನ ಧರ್ಮದ ಅನುಯಾಯಿಗಳು ನಂಬಿದ್ದರು. ಇಲ್ಲಿ ನೆಲೆಸಿ ತಪಸ್ಸು ಮಾಡುವವರ ಸಂಖ್ಯೆ ಇಂದೂ ಗಣನೀಯವಾಗಿದೆ. ಇಲ್ಲಿನ ಅಮರನಾಥ, ಬದರಿನಾಥ, ಮಾನಸಸರೋವರ, ಹರದ್ವಾರ, ಋಷಿಕೇಶ, ಕೇದಾರ, ಕಠ್ಮಂಡು ಮೊದಲಾದ ಪವಿತ್ರ ಸ್ಥಳಗಳು ಇಂದಿಗೂ ಹಿಂದೂ ಭಕ್ತರನ್ನು ಆಕರ್ಷಿಸುತ್ತಿವೆ. ಬುದ್ಧನ ಕಪಿಲವಸ್ತು ಇರುವುದೂ ಈ ವಲಯದಲ್ಲೇ. ಈ ವಲಯ ಸಾಹಸಿಗರಿಗೆ ಸವಾಲಾಗಿದೆ. ವಿಜ್ಞಾನಿಗಳಿಗೆ ಅದ್ಭುತವಾಗಿದೆ. ಪ್ರವಾಸಿಗರಿಗೆ ಆನಂದದ ಸೆಲೆಯಾಗಿದೆ.

Our great Himalayas - International Mountains Day

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ