ಶಂಕರನಾರಾಯಣ ಸಾಮಗ
ಮಲ್ಪೆ ಶಂಕರನಾರಾಯಣ ಸಾಮಗ
ಮಲ್ಪೆ ಶಂಕರನಾರಾಯಣ ಸಾಮಗರು ಯಕ್ಷಗಾನ ಪಟುವಾಗಿ, ಹರಿಕಥಾ ದಾಸರಾಗಿ, ಗಾಂಧಿವಾದಿಯಾಗಿ, ಜನಾನುರಾಗಿಗಳಾಗಿ ಪ್ರಸಿದ್ಧರಾಗಿದ್ದವರು.
ಶಂಕರನರಾಯಣ ಸಾಮಗರು 1911ರ ಡಿಸೆಂಬರ್ 11ರಂದು ಉಡುಪಿಯ ಬಳಿಯ ಮಲ್ಪೆಯಲ್ಲಿ ಜನಿಸಿದರ. ತಂದೆ ಲಕ್ಷ್ಮೀನಾರಾಯಣ ಸಾಮಗ. ತಾಯಿ ಲಕ್ಷ್ಮೀ ಅಮ್ಮ. ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ.ವರೆಗೆ ಓದಿದರು.
ಶಂಕರನರಾಯಣ ಸಾಮಗರು ಸ್ವಾತಂತ್ರ್ಯ ಚಳವಳಿಯ ಗಾಳಿ ಬೀಸತೊಡಗಿದಾಗ ಗಾಂಧೀಜಿಯವರ ವಿಚಾರಧಾರೆಗೆ ಮನಸೋತು ಚಳವಳಿ ದಾರಿ ಹಿಡಿದರು. ಹರಿದಾಸ ವೃತ್ತಿ ಆರಂಭಿಸಿ ಗಾಂಧೀಜಿ ವಿಚಾರಧಾರೆಯನ್ನು ಹರಿಕಥೆಯ ಮೂಲಕ ಪ್ರಚಾರಪಡಿಸಿದವರಲ್ಲಿ ಸಾಮಗರು ಅಗ್ರಗಣ್ಯರು. ಚಳವಳಿಯಿಂದ ಎರಡುಬಾರಿ ಸೆರೆಮನೆವಾಸ ಅನುಭವಿಸಿದರು. ಸೆರೆವಾಸದ ಸಮಯವನ್ನು ಜ್ಞಾನಾರ್ಜನೆಗಾಗಿ ಬಳಸಿಕೊಂಡು ಹಿರಿಯ ಕೈದಿಗಳಿಂದ ಯಕ್ಷಗಾನ ಅರ್ಥವಂತಿಕೆ ಕಲಿತರು. ಯಕ್ಷಗಾನದ ಪ್ರಮುಖ ಪ್ರಭೇದವಾದ ತಾಳಮದ್ದಲೆಗೆ ತಾರ್ಕಿಕಜ್ಞಾನ, ಸ್ಮರಣಶಕ್ತಿ ಮತ್ತು ಪಾಂಡಿತ್ಯಗಳಿಂದ ಹೊಸರೂಪ ಕೊಟ್ಟು, ಕರಾವಳಿ ಕರ್ನಾಟಕದಾದ್ಯಂತ ಕಲೆಯ ಪ್ರಚಾರ ಕೈಗೊಂಡರು.
ಶಂಕರನಾರಾಯಣ ಸಾಮಗರು ದೇವಿಮಹಾತ್ಮೆ, ಯಕ್ಷಗಾನ, ಸೌರಭ, ದೇವರು ಮುಂತಾದ ಕೃತಿಗಳನ್ನು ರಚಿಸಿ ಪ್ರಕಟಿಸಿದರು. ಸರಕಾರ ಕೊಟ್ಟ ಭೂಮಿಯಲ್ಲಿ ‘ಗಾಂಧೀ ಗುಡಿ’ ತೆರೆದು ಕೃಷಿಕರಿಗೆ ಮಾರ್ಗದರ್ಶನ ನೀಡಿದರು. ನಲವತ್ತು ವರ್ಷಕಾಲ ಯಕ್ಷಗಾನ ಕಲಾಸೇವೆ ಮಾಡಿದರು.
ಶಂಕರನಾರಾಯಣ ಸಾಮಗರಿಗೆ ಯಕ್ಷಗಾನ ಕಲಾಸೇವೆಗಾಗಿ ಕೇಂದ್ರ ಸರಕಾರದಿಂದ ಪ್ರಶಸ್ತಿ ಮತ್ತು ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಗಳು ಸಂದವು. ಅವರಿಗೆ ಅಭಿಮಾನಿಗಳು ಅರ್ಪಿಸಿದ ಅಭಿನಂದನ ಗ್ರಂಥ ‘ಆಶುವೈಭವ’.
ಮಲ್ಪೆ ಶಂಕರನಾರಾಯಣ ಸಾಮಗರು 1999ರ ಆಗಸ್ಟ್ 1ರಂದು ಈ ಲೋಕವನ್ನಗಲಿದರು.
On the birth Anniversary of Great Yakshakana artiste and scholar Malpe Shankaranarayana Samaga 🌷🙏🌷
ಕಾಮೆಂಟ್ಗಳು