ಕೇಶವಾನಂದ ಭಾರತೀ
ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ
ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಹೆಸರು ಭಾರತೀಯ ಸಂವಿಧಾನದ ಮೂಲಹಕ್ಕುಗಳ ಕುರಿತಾದ ವಿಚಾರಣೆಯ ಸಂಬಂಧಿತವಾಗಿ ಬಹುಪ್ರಸಿದ್ಧವಾದದ್ದು.
ಕೇರಳದ ಕಾಸರಗೋಡಿನ ಶಂಕರಾಚಾರ್ಯ ಸಂಸ್ಥಾನಂ ಎಡನೀರು ಮಠಾಧೀಶರಾದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರು 1940ರ ಡಿಸೆಂಬರ್ 9ರಂದು ಜನಿಸಿದರು.
ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಹೆಸರು ಧಾರ್ಮಿಕ, ಶಿಕ್ಷಣ, ಕಲೆ ಮುಂತಾದ ಕ್ಷೇತ್ರಗಳಲ್ಲಿ ಅವರು ವಹಿಸಿದ ಪಾತ್ರಗಳಿಂದ ಕೂಡಾ ಸ್ಮರಣಿಯವೆನಿಸಿದೆ.ಅವುಗಳನ್ನು ಹೀಗೆ ಗುರುತಿಸಬಹುದು:
- ಎಷ್ಟೇ ಸವಾಲು ಕಷ್ಟ ಎದುರಾದರೂ ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಶಾಲೆಗಳನ್ನು ಸ್ಥಾಪಿಸಿ ದಶಕಗಳಿಂದ ಮುನ್ನಡೆಸಿಕೊಂಡು ಬಂದದ್ದು;
- ಕಲಾಪ್ರೇಮಿಯಾಗಿ, ಕಲಾವಿದರ ಅದರಲ್ಲೂ ಯಕ್ಷಗಾನಕಲಾವಿದರ ಬದುಕು ಬವಣೆಗಳಿಗೆ ಸ್ಪಂದಿಸಿದ ಸಹೃದಯಿಯಾಗಿದ್ದು;
- ಯಕ್ಷಗಾನ ಮೇಳಕಟ್ಟಿ ಪೌರಾಣಿಕ ಪ್ರಸಂಗ ಪ್ರದರ್ಶನಗಳನ್ನು ಬೆಳೆಸಿದ್ದು;
- ಸ್ವಯಂ ಭಾಗವತಿಕೆ ನಿರ್ವಹಿಸಿದ ಕಲಾವಿದರಾಗಿದ್ದದ್ದು;
- ಶ್ರೀ ಸಂತಾನ ಗೋಪಾಲಕೃಷ್ಣ ದಕ್ಷಿಣಾಮೂರ್ತಿಯ ಶ್ರದ್ಧೆಯ ಆರಾಧಕರಾಗಿದ್ದದ್ದು.
ಹೀಗೆ ಹಲವು ವಿಚಾರಗಳಲ್ಲಿ ಕೇಶವಾನಂದ ಭಾರತೀ ಸ್ವಾಮೀಜಿಯವರನ್ನು ಜನ ನೆನೆಯುತ್ತಾರೆ.
1970ರಲ್ಲಿ ಕೇಶವಾನಂದ ಭಾರತಿ ಮತ್ತು ಕೇರಳ ಸರ್ಕಾರದ ನಡುವಿನ ಪ್ರಕರಣ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಸುಪ್ರೀಂ ಕೋರ್ಟಿನ ದೊಡ್ಡ ಪೀಠದಲ್ಲಿ ನಿರಂತರ 68 ದಿನಗಳ ಕಾಲ ಈ ವಿಚಾರಣೆ ನಡೆಯಿತು.
1970ರ ಫೆಬ್ರವರಿ ತಿಂಗಳು ಕೇರಳ ಸರ್ಕಾರ ಭೂಸುಧಾರಣೆ ಕಾಯ್ದೆಯ ಹೆಸರಲ್ಲಿ ಕಾಸರಗೋಡಿನ ಬಳಿಯಿರುವ ಎಡನೀರು ಮಠಕ್ಕೆ ಸೇರಿದ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳಲು ನಿರ್ಧರಿಸಿ, ಈ ಕುರಿತು ನೋಟಿಸ್ ಜಾರಿ ಮಾಡಿತು. ಆದರೆ ಸರ್ಕಾರದ ಈ ನಡೆಗೆ ಎಡನೀರು ಮಠದ ಶ್ರೀ ಕೇಶವಾನಂದ ಭಾರತಿಯವರು ವಿರೋಧ ವ್ಯಕ್ತಪಡಿಸಿದರು.
ಆಗ ಅವರ ನೆರವಿಗೆ ಬಂದವರು ಪ್ರಖ್ಯಾತ ನ್ಯಾಯವಾದಿ, ನ್ಯಾಯಶಾಸ್ತ್ರಜ್ಞ ನಾನಿ ಫಾಲ್ಕಿವಾಲಾ ಅವರು. ಫಾಲ್ಕಿವಾಲಾ ಅವರು ಸ್ವಾಮೀಜಿಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಮನವೊಲಿಸಿದರು. ಅವರೇ ಅರ್ಜಿದಾರರ ಪರವಾಗಿ ವಕಾಲತ್ತು ವಹಿಸಿದ್ದರು. ಸರ್ಕಾರದ ಹಸ್ತಕ್ಷೇಪವಿಲ್ಲದೆ ಧಾರ್ಮಿಕ ಸಂಸ್ಥೆಯೊಂದು ತನ್ನ ಸ್ವಾಮ್ಯದ ಆಸ್ತಿಯನ್ನು ನಿರ್ವಹಿಸುವ ಹಕ್ಕಿನ ಬಗ್ಗೆಯೂ ಅರ್ಜಿಯಲ್ಲಿ ಪ್ರಸ್ತಾಪವಿತ್ತು. ಈ ಪ್ರಕರಣ ಕೇವಲ ಮಠದ ಆಸ್ತಿಗೆ ಸಂಬಂಧಿಸಿದ ವಿಚಾರಕ್ಕಷ್ಟೇ ಅಲ್ಲದೇ, ಮೂಲಭೂತ ಹಕ್ಕುಗಳ ಮಾನ್ಯತೆಯ ಬಗ್ಗೆಯೂ ವಿಸ್ತೃತ ಚರ್ಚೆಗೆ ನಾಂದಿ ಹಾಡಿತು.
1972ರ ಅಕ್ಟೋಬರ್ 31ರಂದು ಆರಂಭವಾದ ವಾದ- ಪ್ರತಿವಾದಗಳು 1973ರ ಮಾರ್ಚ್ 23ಕ್ಕೆ ಮುಗಿದವು. ಈ ವಿಚಾರಣೆಯ ಸಂಬಂಧವಾಗಿ ಬಂದ ತೀರ್ಪನ್ನು ಭಾರತದ ನ್ಯಾಯಶಾಸ್ತ್ರದ ಇತಿಹಾಸದಲ್ಲಿ ಹಾಗೂ ಭಾರತದ ಸಂವಿಧಾನದ ಕುರಿತಾದ ವಿಚಾರದಲ್ಲಿ ಮಹತ್ತರವಾದ ಮೈಲಿಗಲ್ಲೆಂದು ಪರಿಗಣಿಸಲಾಗಿದೆ. ಇನ್ನೊಂದು ವಿಶೇಷತೆ ಎಂದರೆ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅತೀ ದೊಡ್ಡ ನ್ಯಾಯಪೀಠ, ಅಂದರೆ 13 ಸದಸ್ಯರ ಸಾಂವಿಧಾನಿಕ ನ್ಯಾಯಪೀಠವು ಈ ವಿಚಾರಣೆಯನ್ನು ಕೂಲಂಕಷವಾಗಿ ಪರಿಶೀಲಿಸಿದ್ದು.
"ಸಂವಿಧಾನಕ್ಕೆ ತಿದ್ದುಪಡಿ ತರುವ ಅಧಿಕಾರ ಸಂಸತ್ತಿಗೆ ಇದೆಯೇನೋ ಸರಿ. ಆದರೆ, ಈ ಅಧಿಕಾರ ಬಳಸಿ ಸಂಸತ್ತು ಸಂವಿಧಾನವನ್ನು ಹೇಗೆ ಬೇಕಿದ್ದರೂ ತಿದ್ದಬಹುದೇ?" ಎಂಬ ಪ್ರಶ್ನೆ ಕೇಶವಾನಂದ ಭಾರತಿ ಪ್ರಕರಣದಲ್ಲಿ ಪ್ರಮುಖ ಪ್ರಶ್ನೆಯಾಗಿ ಎದುರಾಯಿತು. ಆಗ ಸುಪ್ರೀಂ ಕೋರ್ಟ್, ಸಂವಿಧಾನಕ್ಕೆ ತರುವ ಯಾವುದೇ ತಿದ್ದುಪಡಿಯು ಅದರ ಮೂಲ ಸ್ವರೂಪಕ್ಕೆ, ಅಂದರೆ, ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರುವಂತಿರಬಾರದು ಎಂದು ಅಭಿಪ್ರಾಯಪಟ್ಟಿತು. ಅಲ್ಲದೆ ಪರಿಚ್ಛೇದ (ಶೆಡ್ಯೂಲ್) 9ರಲ್ಲಿ ಶಾಸಕಾಂಗದಲ್ಲಿ ನಿರ್ಣಯಿಸಲಾದ ಸಾಂವಿಧಾನಿಕ ತಿದ್ದುಪಡಿಗಳು ನ್ಯಾಯಿಕ ಸಮಿತಿಗಳಿಂದ ಅಧ್ಯಯನಕ್ಕೊಳಪಟ್ಟ ನಂತರವೇ ತಿದ್ದುಪಡಿಗೊಳ್ಳುವಂತೆಯೂ ಹೊಸ ಮಾರ್ಗಸೂಚಿ ಜಾರಿ ಮಾಡಿತು.
ಈ ತೀರ್ಪಿನ ನಂತರ ಆಘಾತಕಾರಿ ಬೆಳವಣಿಗೆಯೊಂದೂ ನಡೆಯಿತು. ಇಂದಿರಾ ಸರ್ಕಾರ, ನ್ಯಾಯಮೂರ್ತಿಗಳಾದ ಕೆ.ಎಸ್. ಹೆಗ್ಡೆ, ಜೆ.ಎನ್.ಶೀಲತ್ ಮತ್ತು ಎ.ಎನ್. ಗ್ರೋವರ್ ಎಂಬ ಮೂವರ ಹಿರಿತನವನ್ನು ಬದಿಗಿರಿಸಿ ನ್ಯಾಯಮೂರ್ತಿ ಎ.ಎನ್.ರೇ ಅವರನ್ನು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಿತು. (ಎ.ಎನ್.ರೇ. ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದರು!) ಪ್ರಕರಣದಲ್ಲಿ ನ್ಯಾಯಮೂರ್ತಿಗಳಾದ ಕೆ.ಎಸ್. ಹೆಗ್ಡೆ, ಜೆ.ಎನ್.ಶೀಲತ್ ಮತ್ತು ಎ.ಎನ್. ಗ್ರೋವರ್ ಬಹುಮತದ ಪರವಾಗಿ ಇದ್ದದ್ದು ಇಂದಿರಾ ಸರ್ಕಾರದ ಮುನಿಸಿಗೆ ಕಾರಣವಾಗಿತ್ತು. ಎ.ಎನ್. ರೇ. ಅವರನ್ನು ಸಿಜೆಐ ಆಗಿ ನೇಮಿಸಿದ್ದನ್ನು ಭಾರತೀಯ ಕಾನೂನು ಇತಿಹಾಸದಲ್ಲೇ ಕರಾಳ ದಿನ ಎಂದು ಪರಿಗಣಿಸಲಾಗಿದೆ.
ಕೇಶವಾನಂದ ಭಾರತಿ ಸ್ವಾಮೀಜಿ 2020ರ ಸೆಪ್ಟೆಂಬರ್ 6ರಂದು ನಿಧನರಾದರು. ಅವರು ಧಾರ್ಮಿಕ ಗುರುಗಳೂ, ನ್ಯಾಯದ ಹೋರಾಟಕ್ಕೆ ಹೆಸರದವರೂ, ಶಿಕ್ಷಣ ಮತ್ತು ಕಲೆಗೆ ಜೊತೆ ನಿಂತವರೂ ಆಗಿ ಸ್ಮರಣೀಯರಾಗಿದ್ದಾರೆ.
On the birth anniversary of Sri Keshavananda Bhartathi
ಕಾಮೆಂಟ್ಗಳು