ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿದ್ಯಾ ಭರತನಹಳ್ಳಿ


ವಿದ್ಯಾ ಭರತನಹಳ್ಳಿ

ವಿದ್ಯಾ ಭರತನಹಳ್ಳಿ ಅವರು ಪತ್ರಿಕೋದ್ಯಮ ಹಾಗೂ  ಕವಿತೆ ಮತ್ತು ಕಥಾಲೋಕದಲ್ಲಿನ ಮಹತ್ವದ ಸಾಧಕಿ.
 
ಡಿಸೆಂಬರ್ 9 ವಿದ್ಯಾ ಭರತನಹಳ್ಳಿ ಅವರ ಹುಟ್ಟುಹಬ್ಬ. ಇವರು ಪ್ರಸಿದ್ಧ ಸಾಹಿತಿ, ನಾ.ಸು. ಭರತನಹಳ್ಳಿಯವರ ಸುಪುತ್ರಿ. ವಿದ್ಯಾ ಅವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.  ಪತಿ ಉಮೇಶ ಹೆಗಡೆ ರವಿ ಬೆಳಗೆರೆ ಅವರ ಪ್ರಾರ್ಥನಾ ಶಾಲೆಯಲ್ಲಿ ಪ್ರಧಾನ ಕಾರ್ಯನಿರ್ವಾಹಣಾ ಅಧಿಕಾರಿಗಳಾಗಿದ್ದಾರೆ.  ಪುತ್ರಿ ಪೂರ್ವಿ ಅವರು ಅಮೆರಿಕದಲ್ಲಿ ಈಗ ಎಂ. ಎಸ್. ಮುಗಿಸಿದ್ದಾರೆ. 
 
ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸಿದ ವಿದ್ಯಾ ಅವರು ಸಂಯುಕ್ತ ಕರ್ನಾಟಕ ಸಾಪ್ತಾಹಿಕ ವಿಭಾಗ, ಕರ್ಮವೀರ ಪತ್ರಿಕೆಗಳಲ್ಲಿ ಹಲವಾರು ವರ್ಷ ಉಪ ಸಂಪಾದಕಿಯಾಗಿ ಸೇವೆ ಸಲ್ಲಿಸಿದ್ದಲ್ಲದೆ ‘ಹಾಯ್ ಬೆಂಗಳೂರ್' ಪತ್ರಿಕೆಯಲ್ಲಿ ಎರಡು ವರ್ಷ ಕೆಲಸ ಮಾಡಿದರು.

ವಿದ್ಯಾ ಅವರ ಕವಿತೆಗಳು ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ವಿಜಯ ಕರ್ನಾಟಕ, ವಿಜಯವಾಣಿ, ಮಯೂರ, ತುಷಾರ, ಉತ್ಥಾನ, ತರಂಗ, ಲಂಕೇಶ್ ಪತ್ರಿಕೆ, ಸಂಕ್ರಮಣ, ಸುದ್ದಿಸಂಗಾತಿ, ಅಭಿಮಾನಿ, , ಓ ಮನಸೇ, ಹಾಯ್ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ  ಮತ್ತು ಅವುಗಳ ವಿಶೇಷಾಂಕಗಳಲ್ಲಿ ನಿರಂತರವಾಗಿ ಮೂಡಿ ಬರುತ್ತಿವೆ. ನರಹಳ್ಳಿ ಬಾಲಸುಬ್ರಹ್ಮಣ್ಯ, ವೀಣಾ ಶಾಂತೇಶ್ವರ ಅವರ ಸಂಪಾದನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೊರತಂದ 'ಹೊಸಹೆಜ್ಜೆ' ಕೃತಿಯಲ್ಲಿ ಇವರ ಕವಿತೆ ಸೇರ್ಪಡೆಗೊಂಡಿದೆ. ಜೋಗಿ ಮತ್ತು ಗೋಪಾಲಕೃಷ್ಣ ಕುಂಟಿನಿಯವರು ಸಂಪಾದಿಸಿದ 'ಮಳೆಯಲ್ಲಿ ನೆನೆದ ಕಥೆಗಳು' ಸಂಕಲನದಲ್ಲಿ, ಕಮಲಾ ಹೆಮ್ಮಿಗೆಯವರು ಸಂಪಾದಿಸಿದ 'ಪ್ರಳಯ ಕಾಲದ ಕತೆಗಳು' ಸಂಕಲನದಲ್ಲಿ, ಅಜಿತ್ ಹರೀಶಿ,ವಿಠ್ಠಲ ಶೆಣೈ ಸಂಪಾದನೆಯ 'ಕಥಾಭರಣ' ಸಂಕಲನದಲ್ಲಿ ಇವರ ಕತೆಗಳು ಮೂಡಿಬಂದಿವೆ. 

ವಿದ್ಯಾ ಭರತನಹಳ್ಳಿ ಅವರ "ಬೆಳಕು ಕನಸಿನ ಸುತ್ತ" ಕವನ ಸಂಕಲನಕ್ಕೆ ಪ್ರಕಟಣಾ ಪೂರ್ವ  ಬಕುಳ ಪ್ರಶಸ್ತಿ ಮತ್ತು ಅತ್ತಿಮಬ್ಬೆ ಪ್ರತಿಷ್ಠಾನ ಗೌರವ ಪ್ರಶಸ್ತಿಗಳು ಸಂದಿವೆ. "ನಾ.ಸು ಬದುಕು ಬೊಗಸೆಯಲ್ಲಿ ಹಿಡಿದಷ್ಟು" ಇವರ ಸಂಪಾದಿತ ಕೃತಿ. 'ಬೇಸೂರ್' ಇವರ ಇತ್ತೀಚೆಗೆ ಬಿಡುಗಡೆಯಾಗಿರುವ ಇವರ ಕಥಾಸಂಕಲನ. 

ವಿದ್ಯಾ ಭರತನಹಳ್ಳಿ ಅವರಿಗೆ ತ.ರಾ.ಸು ಸ್ಮಾರಕ ಕಾವ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಅಭಿಮಾನಿ ಕಾವ್ಯ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ, "ಕ್ರೈಸ್ಟ್ ಕಾಲೇಜು' ದ.ರಾ ಬೇಂದ್ರೆ ಸ್ಮ್ರತಿ ಕಾವ್ಯ ಸ್ಪರ್ಧೆ'ಯಲ್ಲಿ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ  ತರುವ ವರ್ಷದ ಕವಿತೆಗಳಲ್ಲಿ  ಮೂರು ವರ್ಷ ಆಯ್ಕೆ ಮುಂತಾದ ಗರಿಮೆಗಳಿವೆ. ತ್ರಿವೇಣಿ ಕಥಾಸರ್ಧೆ ಬಹುಮಾನ ಮತ್ತು ಅಮೆರಿಕದ ಹವ್ಯಕ ಸಂಘ ಕೊಡಮಾಡುವ ಬಹುಮಾನಗಳೂ ಇವರಿಗೆ ಸಂದಿವೆ.
 
ವಿದ್ಯಾ ಭರತನಹಳ್ಳಿ ಅವರ ಕವಿತೆಗಳು ಧಾರವಾಡ ಆಕಾಶವಾಣಿಯಲ್ಲಿ ಪ್ರಸಾರವಾಗಿವೆ. ಬೆಂಗಳೂರು ಆಕಾಶವಾಣಿಯಲ್ಲಿ ಇವರ ಕಥೆ ಪ್ರಸಾರವಾಗಿವೆ. ಕಾರವಾರ ಆಕಾಶವಾಣಿಯಲ್ಲಿ ಇವರ ಸಂದರ್ಶನ ಮೂಡಿಬಂದಿದೆ. ದೂರದರ್ಶನ ಚಂದನದಲ್ಲಿ ಎರಡು ಕವಿಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದಾರೆ. ಪರಿಸರ ಕವಿಗೋಷ್ಠಿ ಮತ್ತು ಯುಗಾದಿ ಕವಿಗೋಷ್ಠಿಗಳಲ್ಲಿ ಭಾಗಿಯಾಗಿದ್ದಾರೆ. ಯುಗಾದಿ ಕವಿ ಗೋಷ್ಠಿಯ ಇವರ ಕವಿತೆಗೆ  ಜಿ.ವಿ. ಅತ್ರಿಯವರು ಧ್ವನಿ ಸಂಯೋಜನೆ ಮಾಡಿ ಹಾಡಿದ್ದು ಹಲವು ಸಲ ದೂರದರ್ಶನದಲ್ಲಿ ಪ್ರಸಾರಗೊಂಡಿದೆ.‍ ಮೈಸೂರು ದಸರಾ ಕವಿಗೋಷ್ಠಿ,  ಕದಂಬೋತ್ಸವ, ಬಂಡಾಯ ದಶಮಾನೋತ್ಸವ, ಸಾಹಿತ್ಯ ಅಕಾಡೆಮಿ ನಡೆಸಿದ ಕವಿಗೋಷ್ಠಿ ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ಪ್ರಮುಖ ಕವಿಗೋಷ್ಠಿಗಳಲ್ಲಿ ನಾಡಿನ ಪ್ರಖ್ಯಾತ ಕವಿಗಳಾದ ಚೆನ್ನವೀರ ಕಣವಿ, ಕೆ.ಎಸ್.ನಿಸಾರ್ ಅಹಮದ್, ಬಿ.ಎ.ಸನದಿ, ಮಾಲತಿ ಪಟ್ಟಣಶೆಟ್ಟಿ, ಚಿಂತಾಮಣಿ ಕೊಡ್ಲೆಕೆರೆ, ಎಮ್.ಆರ್. ಕಮಲಾ, ಲತಾ ರಾಜಶೇಖರ, ಹೇಮಾ ಪಟ್ಟಣಶೆಟ್ಟಿ, ಎಚ್.ಎಲ್.ಪುಷ್ಪ, ಎಚ್.ಎನ್.ಆರತಿ ಮುಂತಾದವರೊಂದಿಗೆ ಕವಿತೆ ಪ್ರಸ್ತುತಿಪಡಿಸಿದ್ದಾರೆ. 
 
ವಿದ್ಯಾ ಅವರು  'ಈ ಟಿವಿ'ಯಲ್ಲಿ ಬಂದ 'ರಾಧಾ' ಧಾರಾವಾಹಿಗೆ ಕಥಾ ವಿಸ್ತರಣೆಯಲ್ಲಿ ಜೊತೆಗೊಡಿ ಚಿತ್ರಕತೆ ಬರಹವನ್ನು ಮಾಡಿದ್ದಾರೆ.  'ಬಾಲ್ ಪೆನ್' ಮಕ್ಕಳ ಚಿತ್ರಕ್ಕೆ ಕಥಾವಿಸ್ತರಣೆಯಲ್ಲಿ ಪಾಲ್ಗೊಂಡಿದ್ದಲ್ಲದೆ ಪಾತ್ರ ನಿರ್ವಹಣೆಯನ್ನೂ ಮಾಡಿದ್ದಾರೆ.
 
ಬರಹದ ಜೊತೆ ಹೂಗಿಡ ಬೆಳೆಸುವುದು ವಿದ್ಯಾ ಅವರ ಅತ್ಯಂತ ಆಸಕ್ತಿಯ ವಿಷಯ. ಬೆಂಗಳೂರಿನ ಸ್ವಂತ ಮನೆಯ ತಾರಸಿಯಲ್ಲಿ ಪತಿಯ ಸಹಾಯದಿಂದ ಹೂಗಿಡಗಳ ಬೆಳೆಸುವಿಕೆ ಮಾಡುತ್ತಿದ್ದಾರೆ.
      
ಬಹುಮುಖಿ ಸಾಧನೆಯ ಆತ್ಮೀಯ ಸಹೃದಯಿ ವಿದ್ಯಾ ಭರತನಹಳ್ಳಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

Happy birthday Vidya Bharatanahalli 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ