ಜ್ಯೋತ್ಸ್ನಾ ಕಾಮತ್
ಜ್ಯೋತ್ಸ್ನಾ ಕಾಮತ್
ಡಾ.ಜ್ಯೋತ್ಸ್ನಾ ಕಾಮತ್ ಒಬ್ಬ ಹೆಸರಾಂತ ಸಂಶೋಧಕಿ, ದಕ್ಷ ಆಡಳಿತಗಾರ್ತಿ ಮತ್ತು ಕನ್ನಡ ಸಾಹಿತ್ಯಲೋಕದಲ್ಲಿ ಅಪೂರ್ವ ಬರಹಗಾರ್ತಿ. ಅವರು ಆಕಾಶವಾಣಿಯಲ್ಲಿ ವಿವಿಧ ಹುದ್ದೆಗಳಿಂದ ನಿರ್ದೇಶಕರ ಹುದ್ದೆಯತನಕ ಕೆಲಸ ಮಾಡಿದವರು. ಪತಿ ದಿವಂಗತ ಡಾ.ಕೃಷ್ಣಾನಂದ ಕಾಮತ್ ಅವರು ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿತವಾದ ಹೆಸರು. ಮಗ ವಿಕಾಸ್ ಕಾಮತ್. ಈ ಪರಿವಾರದವರ ಅಂತರ್ಜಾಲ ‘www.kamat.com’ ಎಂಬುದು ಒಂದು ಅಮೂಲ್ಯ ಸಾಂಸ್ಕೃತಿಕ ತಾಣವೇ ಎಂಬಷ್ಟು ಅಂತರ್ಜಾಲದ ಲೋಕದಲ್ಲಿ ಕಂಗೊಳಿಸುತ್ತಿದೆ.
ಜ್ಯೋತ್ಸ್ನಾ 1937ರ ಜನವರಿ 24ರಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಜನಿಸಿದರು. ತಂದೆ ಗಣೇಶರಾವ್ ವೃತ್ತಿಯಲ್ಲಿ ಪೋಸ್ಟ್ ಮಾಸ್ಟರ್. ತಾಯಿ ಶಾರದಾಬಾಯಿ. ಜ್ಯೋತ್ಸ್ನಾ ಅವರ ವಿದ್ಯಾಭ್ಯಾಸವೆಲ್ಲ ಉತ್ತರ ಕನ್ನಡದಲ್ಲಿ ಮತ್ತು ಧಾರವಾಡ ಜಿಲ್ಲೆಯಲ್ಲಿ ನಡೆಯಿತು. ಕುಮಟಾದ ಕೆನರಾ ಕಾಲೇಜಿನಲ್ಲಿ 1957ರಲ್ಲಿ ಬಿ.ಎ. ಪದವಿ ಪಡೆದರು. ಸಂಸ್ಕೃತ ಹಾಗು ಇತಿಹಾಸದಲ್ಲಿ ಅವರಿಗೆ ವಿಶೇಷ ಒಲವಿತ್ತು. ಬಿ.ಎ.ಪದವಿಯ ನಂತರ 'ಡಿಪ್ಲೊಮ ಇನ್ ಎಜುಕೇಷನ್' ನಲ್ಲಿ ಒಂದು ವರ್ಷ ಅಧ್ಯಯನ ಮಾಡಿ ಧಾರವಾಡದ ವನಿತಾ ಹೈಸ್ಕೂಲಿನಲ್ಲಿ ಅಧ್ಯಾಪಕಿಯಾಗಿ ಸೇರಿದರು. ಮುಂದೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸದಲ್ಲಿ ಎಂ.ಎ. ಪದವಿ ಗಳಿಸಿದರು.
ಡಾ.ಬಿ.ಎ.ಸಾಲೆತೊರೆ, ಡಾ.ಪಿ.ಬಿ.ದೇಸಾಯಿ ಮತ್ತು ಡಾ. ಜಿ ಎಸ್ ದೀಕ್ಷಿತ್ ರಂತಹ ಇತಿಹಾಸ ವಿದ್ವಾಂಸರ ಪ್ರಭಾವಕ್ಕೆ ಒಳಗಾಗಿದ್ದ ಜ್ಯೋತ್ಸ್ನಾ ಎರಡು ವರ್ಷ ಸಹಾಯಕ ಸಂಶೋಧಕಿಯಾಗಿ ಕೆಲಸ ನಿರ್ವಹಿಸಿದರು. ಇತಿಹಾಸದಲ್ಲಿ ಡಾಕ್ಟರೇಟ್ ಗಳಿಸಿದರು. ಯುಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಜ್ಯೋತ್ಸ್ನಾರವರು, 1964ರಲ್ಲಿ ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕಿಯಾಗಿ ಸೇರಿದರು. ಮುಂದೆ ಕೋಲ್ಕತ, ಜೈಪುರ್, ಮುಂಬಯಿ, ಮೈಸೂರು ಮತ್ತು ಬೆಂಗಳೂರು ನಗರಗಳ ಆಕಾಶವಾಣಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿ ಕೊನೆಗೆ ಬೆಂಗಳೂರು ಆಕಾಶವಾಣಿಯಲ್ಲಿ ನಿರ್ದೇಶಕಿಯಾಗಿ 1994ರಲ್ಲಿ ನಿವೃತ್ತಿ ಹೊಂದಿದರು. ಕೊಂಕಣಿ, ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ಬೆಂಗಾಳಿ, ಸಂಸ್ಕೃತಗಳಲ್ಲಿ ಅವರು ಪರಿಣತರು.
ಅವರು ಆಕಾಶವಾಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಭಿತ್ತರಗೊಂಡ ಎರಡು ಕಾರ್ಯಕ್ರಮಗಳನ್ನು- 'ಗಾಂಧಿ-ಒಂದು ಪುನರ್ದರ್ಶನ' ಮತ್ತು 'ಹಿರಿಯರ ಯುಗಾದಿ ಮೇಳ' ಇವುಗಳನ್ನು ಪುಸ್ತಕರೂಪದಲ್ಲೂ ಪ್ರಕಟಿಸಿದರು.
‘ಸಂಸಾರದಲ್ಲಿ ಸ್ವಾರಸ್ಯ (ಪ್ರಬಂಧಗಳ ಸಂಕಲನ)’, ‘ಕರ್ನಾಟಕದ ಶಿಕ್ಷಣ ಪರಂಪರೆ (ಶಿಕ್ಷಣ)’, ‘ಹೀಗಿದ್ದೇವೆ ನಾವು (ಹಾಸ್ಯ)’, ‘ಮಹಿಳೆ – ಒಂದು ಅಧ್ಯಯನ’, ‘ನೆನಪಿನಲ್ಲಿ ನಿಂತವರು’, ‘ನಗೆ ಕೇದಿಗೆ’, ‘ಪತ್ರ ಪರಾಚಿ’, ‘ಹೀಗಿದ್ದರು ನಮ್ಮ ಕಂತಿ (ಪತಿ ಕೃಷ್ಣಾನಂದ ಕಾಮತ್ ಅವರ ಕುರಿತು ನೆನಪು)’, ‘Social Life in Medieval Karnataka’, ‘Education in Karnataka through the Ages’, ಕೊಂಕಣಿಯಲ್ಲಿ ‘ಸುರಾಗ್ಯ ಸಾರ್’, ಮುಂತಾದವು ಜ್ಯೋತ್ಸ್ನಾ ಅವರ ಪ್ರಸಿದ್ಧ ಪ್ರಕಟಿತ ಕೃತಿಗಳಾಗಿವೆ.
1991ರಲ್ಲಿ ಕರ್ನಾಟಕ ಸರ್ಕಾರವು ಜ್ಯೋತ್ಸ್ನಾ ಅವರಿಗೆ "ರಾಜ್ಯೋತ್ಸವ ಪ್ರಶಸ್ತಿ" ನೀಡಿ ಗೌರವಿಸಿದೆ. ಅವರ 'ಕರ್ನಾಟಕ ಶಿಕ್ಷಣ ಪರಂಪರೆ' ಕೃತಿಗೆ ಉತ್ತಮ ಸಂಶೋಧನಾ ಗ್ರಂಥವೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ವಿಶೇಷ ಪುರಸ್ಕಾರ ದೊರೆತಿದೆ. ಕನ್ನಡ ಸಾಹಿತ್ಯ ಸಂಶೋಧನೆಗಾಗಿ ಅವರಿಗೆ 'ಕಿಟ್ಟಲ್ ಪುರಸ್ಕಾರ' ದೊರೆತಿದೆ. ಕರ್ಣಾಟಕ ಇತಿಹಾಸ ಕಾಂಗ್ರೆಸ್ಸಿನ ಅಧ್ಯಕ್ಷತೆ, ಉತ್ತರ ಅಮೆರಿಕದ ಕೊಂಕಣಿ ಕೂಟದ ಅಧ್ಯಕ್ಷತೆ ಮುಂತಾದ ಗೌರವಗಳು ಸಹಾ ಅವರಿಗೆ ಸಂದಿದೆ.
ಕೆ. ಎಲ್ ಕಾಮತ್ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷರಾಗಿ ಕೃಷ್ಣಾನಂದ ಕಾಮತ್ತರ ಕಾರ್ಯಗಳು ಮತ್ತು ಆಶೋತ್ತರಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಜ್ಯೋತ್ಸ್ನಾ ಕಾಮತ್ ಅವರು ಭಾರತೀಯ ಪುರಾತತ್ವ ಸಮಾಜ, ಮಿಥಿಕ್ ಸೊಸೈಟಿ, ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನಗಳ ಸದಸ್ಯರಾಗಿ ಕೂಡಾ ಕ್ರಿಯಾಶೀಲರು.
‘Amma’s Column’ ಎಂಬ ಬ್ಲಾಗಿನಲ್ಲಿ ಮನೋಜ್ಞ ಲೇಖನಗಳನ್ನು ನಿರಂತರವಾಗಿ ಪ್ರಕಟಿಸಿರುವ ಜ್ಯೋತ್ಸ್ನಾ ಅವರು ‘The History of Kannada Literature’, ‘A series on saints of India’ ಮುಂತಾದ ಪ್ರಮುಖ ಕಾರ್ಯಗಳನ್ನು ತಮ್ಮ ಕುಟುಂಬವು ಸಾಂಸ್ಕೃತಿಕ ಲೋಕಕ್ಕೆ ಮಹತ್ಕೊಡುಗೆಯಾಗಿ ನೀಡಿರುವ ‘Kamat’s Potpurri (kamat.com)’ ಅಂತರ್ಜಾಲದಲ್ಲಿ ಮೂಡಿಸುವ ಬೃಹತ್ ಕಾಯಕದಲ್ಲಿ ತೊಡಗಿದ್ದಾರೆ. ಮಗನೊಂದಿಗೆ ನಡೆಸಿದ ಪತ್ರಗಳ ಸರಣಿಯಾಗಿ “Remote Control – Letters to a Son” ಎಂಬ ಕೃತಿಯ ಸಂಪಾದನೆಯನ್ನೂ ನಿರ್ವಹಿಸುತ್ತಿದ್ದಾರೆ.
ಡಾ. ಜ್ಯೋತ್ಸ್ನಾ ಕಾಮತ್ ಅವರ ಈ ಮಹತ್ಕಾರ್ಯಗಳಿಗಾಗಿ ಅವರನ್ನು ಅಭಿನಂದಿಸುತ್ತ ಅವರ ಕಾರ್ಯಗಳು ಕರ್ನಾಟಕದ ಜನತೆಗೆ ನಿರಂತರವಾಗಿ ಪ್ರೇರಣೆ ನೀಡುತ್ತಿರುವಂತಾಗಲಿ ಎಂದು ಹಾರೈಸೋಣ.
On the birthday of well known research scholar, writer and administrator Dr. Jyotsna Kamat
ಕಾಮೆಂಟ್ಗಳು