ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ51


ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ಅರಣ್ಯ ಪರ್ವ - ಹದಿನೈದನೆಯ ಸಂಧಿ

ಸೂ. ಮುನಿಗಳುಪ ಕಥೆಯಲಿ ಯುಧಿಷ್ಟಿರ
ಜನಪತಿಯ ಸಂತೈಸಿ ಕಾಮ್ಯಕ
ವನದಿನಸುರಾರಿ ಬಂದನು ದ್ವಾರಕಾ ಪುರಿಗೆ

ಕೇಳುಜನಮೇಜಯ ಧರಿತ್ರೀ
ಪಾಲ ಮಾರ್ಕಾಂಡೇಯ ಮುನಿಪತಿ
ಹೇಳಿದನು ವೇದೋಕ್ತ ಧರ್ಮದ ಸಾರ ಸಂಗತಿಯ
ಶೀಲಗುಣ ಸಚ್ಚರಿತನಲಿ ಸಂ
ಮೇಳವಿಸಿ ಮುದ್ಗಲವಂಶವಿ
ಶಾಲನೊಬ್ಬನು ವಿಪ್ರನಿದ್ದನು ಬೊಮ್ಮಚರಿಯದಲಿ ೧

ಧರಣಿಪತಿ ಕೇಳಾ ಮಹೀಸುರ
ವರನು ವೇದಾದ್ಯಯನ ಪರನನ
ವರತ ವಿದ್ಯಾಭ್ಯಾಸ ಶೀಲನು ವನದಲೊಂದುದಿನ
ಮರದ ಮೊದಲಲಿ ವೇದ ಪಾಠದ
ಲಿರೆ ಮಹೀರುಹದಗ್ರದಲಿ ಸಂ
ಚರಿಸುತಿಹ ಖಗ ವಿಷ್ಟೆ ಬಿದ್ದುದು ಮೇಲೆ ಭೂಸುರನ ೨

ಮೇಲೆ ನೋಡಿದ ಡಾಧಿಕ ರೋಷ
ಜ್ವಾಲೆಯಲಿ ಗರಿ ಸೀದು ಧರಣಿಯ
ಮೇಲೆ ಬಿದ್ದುದು ವಿಹಗವೀತನ ಮುಒದೆ ತನುಬೆಂದು
ಲೀಲೆಯಲಿ ಭೂದೇವನಲ್ಲಿಂ
ಮೇಲೆ ಬಿಕ್ಷಾಟನಕೆ ಭೂಸುರ
ರಾಲಯದ ಹಂತಿಯಲಿ ಹೊಕ್ಕನು ರಾಯ ಕೇಳೆಂದ ೩

ಒಂದು ಮನೆಯಲಿ ಬಿಕ್ಷೆ ಗೋಸುಗ
ನಿಂದನಾ ಮನೆಯಾಕೆ ಬಿಕ್ಷವ
ತಂದಿಪೆನು ನಿಲ್ಲೆನುತ ಪತಿ ಪರಿಚರ್ಯೆಯನು ಮಾಡಿ
ತಂದು ಬಿಕ್ಷವ ಹಿಡಿಯೆನಲ್ ದ್ವಿಜ
ನಂದುದ ಮುನಿದೀಕ್ಷಿಸಿದೊಡಾ ಸತಿ
ಯೆಂದಳೆಲೆ ಮರುಳೆ ಕುಜಾಗ್ರದ ವಿಹಗ ನಲ್ಲೆಂದು ೪

ಬೆರಗಿನಲಿ ದ್ವಿಜನಿರ್ದನಿದನೆಂ
ತರಿತಳೆನುತಲೆ ವಿಪ್ರ ನಿಗಮವ
ನರಿಯೆ ದರ್ಮರಹಸ್ಯ ತತ್ವದ ಸಾರಸಂಗತಿಯ
ಅರಿದು ಪತಿ ಪರಿಚರ್ಯದಲಿ ಕೈ
ಮೆರೆಯುದಾರಾಗಲಿ ಸುಧರ್ಮದೊ
ಳೆರಕವುಳ್ಳೊಡೆ ದನ್ಯರೆಂದಳು ಕಾಂತೆ ಭೂಸುರಗೆ ೫

ಇಲ್ಲಿಗಿದೆ ನಾಲ್ಕೈದು ಯೋಜನ
ದಲ್ಲಿ ಪಟ್ಟಣವದರೊಳೊಬ್ಬನು
ಬಲ್ಲನಗ್ಗದ ಧರ್ಮ ಮುದ್ರಾಘಟನ ವಿಘಟನವ
ಅಲ್ಲಿಗೈದುವು ದಾತನಲಿ ನೀ
ನೆಲ್ಲವನು ತಿಳಿನಿನ್ನಚಿತ್ತದೊ
ಳಿಲ್ಲಲೇ ಪರಿಪಾಕವೆಂದುಪದೇಶಿಸಿದಳಬಲೆ ೬

ಹೆಸರು ಧರ್ಮವ್ಯಾಧ ನಾತನ
ದೆಸೆಯೊಳರಿ ಹೋಗೆನಲು ಬಂದನು
ವಸುಧೆಯಮರನು ನಗರಿಗಾಸತಿ ಕೊಟ್ಟ ಕುರುಹಿನಲಿ
ಹಸಿದು ಬೀದಿಗಳೊಳಗೆ ತೊಳಲಿದು
ಗಸಣಿಗೊಳುತ ಪುರಾಂತದಲಿ ಕ
ರ್ಕಶ ಪುಳಿಂದರ ಕೇರಿಯಿರೆ ಕಂಡಲ್ಲಿಗೈತಂದ ೭

ಬಸೆ ನೆಣನ ಸುಂಟಿಗೆಯ ಹರಹಿದ
ಹಸಿಯ ತೊಗಲಿನ ತಳಿತ ಖಂಡದ
ಹಸರದುರುಗಲ ಕಾಳಿಜದ ಜಂಗಡೆಯ ಗಳಗೆಗಳ
ಬಸೆಯ ಹರವಿಯ ಸಾಲ ತೊರಳೆಗೆ
ಬೆಸಳಿಗೆಯ ಕುರಿದಲೆಯ ಹಂತಿಯ
ಕುಸುರಿದೆಲುವಿನ ಕೋದ ಮೀನ೦ಗಡಿಯಲೈತಂದ ೮

ಬರಬರಲು ದೂರದಲಿ ವಿಪ್ರನ
ಬರವ ಕ೦ಡಿದಿರಾಗಿ ಬಂದುಪ
ಚರಿಸಿದನು ಬಂದೈ ಪತಿವ್ರತೆಯೆನ್ನ ದೂರಿದಳೆ
ಧರಣಿಯಮರೋತ್ತಮರಿಗಿದು ಸಂ
ಚರಣೆ ಯೋಗ್ಯ ಸ್ಥಾನವಲ್ಲಾ
ದರಿಸಿದೊಡೆ ಬಾಯೆನುತ ತನ್ನಾಲಯಕೆ ಕೊಂಡೊಯ್ದ ೯

ಒಳಗೆ ಮಂಚದ ನಡುಗುವ
ತಲೆಯ ತೆರಳಿದ ಮೈಯ ಬೆಳುಪಿನ
ತಲೆ ನವಿರ ತಗ್ಗಿದ ಶರೀರದ ನೆಗ್ಗಿದವಯವದ
ತಳಿತ ಸೆರೆಗಳ ತಾರಿದಾನನ
ದಿಳಿದ ಹುಬ್ಬಿನ ಹುದಿದ ಕಣ್ಗಳ
ಚಲಿತ ವಚನದ ವೃದ್ದರನು ತೋರಿದನು ಮುನಿ ಸುತಗೆ ೧೦

ಇವರು ಮಾತಾ ಪಿತೃಗಳೆನ್ನಯ
ಯುವತಿ ಯಿವಳಿವನೆನ್ನ ಮಗನಿಂ
ತಿವರ ರಕ್ಷೆಗೆ ಬೇಂಟೆಯಾಡುವೆನಡವಿಯಡವಿಯಲಿ
ಕವಲುಗೋಲಲಿ ಮೃಗ ಗಣವ ಕೊಂ
ದವನು ತಹೆನಂಗಡಿಯಲವ ಮಾ
ರುವೆನು ಲೋಭವನಿಲ್ಲಿ ಮಾಡೆನು ವಿಪ್ರ ಕೇಳೆಂದ ೧೧

ದೊರಕಿದನಿತಾ ದ್ರವ್ಯದಲಿ ವಿ
ಸ್ತರಿಸುವೆನು ಸಕುಟುಂಬವಿದನೇ
ಹೊರೆವೆನಾರ್ಜಿಸುವೆನು ಕುಟುಂಬಕೆ ತಕ್ಕನಿತು ಧನವ
ನಿರುತವಿದು ಮಾತಾಪಿತರ ಪರಿ
ಚರಿಯದಲಿ ರಾಗಾದಿ ದೋಷಾ
ಚರಣವದು ಮನವಚನ ಕಾಯದಲಿಲ್ಲ ತನಗೆಂದ ೧೨

ಭೂತ ಹಿಂಸೆಯಿದಲ್ಲ ನಮಗಿದು
ಮಾತಾ ಪಿತೃ ರಕ್ಷಾರ್ಥವೆಮ್ಮಯ
ಜಾತಿ ಧರ್ಮವು ಮಾಂಸ ವಿಕ್ರಯ ಮೃಗವಧಾದಿಗಳು
ಜಾತಿಧರ್ಮತ್ಯಾಗ ಕರ್ಮ ವಿ
ಜಾತಿಧರ್ಮ ಗ್ರಹಣವೇ ವಿ
ಖ್ಯಾತ ಕುಂಭೀಪಾಕಸಾಧನ ವಿಪ್ರ ಕೇಳೆಂದ ೧೩

ವಿತಥ ಭಾಷಿತವನ್ಯವಿತ್ತಾ
ಹೃತಿ ಪರ ವ್ಯಾಪದವಾತ್ಮ
ಸ್ತುತಿ ಪರಸ್ತ್ರೀವ್ಯಸನವತ್ಯಾಚಾರ ಬಕವೃತ್ತಿ
ಕೃತವಿನಾಶನಡಂಭ ಹಿಂಸಾ
ರತಿ ನಿಜಾನ್ವಯ ಧರ್ಮ ಕರ್ಮ
ಚ್ಯುತಿಗಳಿವು ದೋಷಾಂಕುರಂಗಳು ವಿಪ್ರ ಕೇಳೆಂದ ೧೪

ಸಾ೦ಗ ವೇದಾದ್ಯಯನ ಸಜ್ಜನ
ಸ೦ಗ ಶಾಸ್ತ್ರ ಶ್ರವಣ ತೃಷ್ಣಾ
ಭ೦ಗ ಯಜನದ್ಯಾನ ಮೌನವ್ರತ ಸದಾಚಾರ
ಮಾ೦ಗಲಿಕ ಕರ್ಮಾಭಿಯೋಗ ಕು
ಲಾ೦ಗನಾ ರತಿಯಾತ್ಮಚಿಂತೆ ಪ
ರಾ೦ಗನಾ ವೈಮುಖ್ಯ ವಿವು ಸದ್ದರ್ಮಗತಿಯೆಂದ ೧೫

ಧನಮದವ ಸತ್ಕುಲ ಮದವ ಯೌ
ವನ ಮದವ ವಿದ್ಯಾ ಮದವ ಪರಿ
ಜನ ಮದವ ವೈಭವ ಮದವನಪಚಾರ ಪದ ಮದವ
ಮನನದಿ೦ಶ್ರವಣದಿ ನಿಧಿ ದ್ಯಾ
ಸನದಿನಿವಗಳನೊತ್ತಿ ವಿದ್ಯಾ
ವಿನಯ ಸೌಶೀಲ್ಯದಲಿ ನಡೆವುದು ವಿಪ್ರ ಕೇಳೆಂದ ೧೬

ನೀವು ಜಾತಿಯೊಳಧಿಕ ತರದಿಂ
ದಾವು ಜಾತಿ ವೀಹೀನರಾಗಿಯೆ
ಭಾವ ಶುದ್ದಿಯಲೇ ಸ್ವಧರ್ಮಾಚಾರ ಮಾರ್ಗದಲಿ
ಆವುದೂಣಯವಿಲ್ಲವೀ ದ್ವಿಜ
ದೇವ ಗುರು ಪರಿಚರ್ಯದಲಿ ಸಂ
ಭಾವಿತರು ನಾವಾದವೆಮ್ಮನು ನೋಡಿ ನಡೆಯೆ೦ದ ೧೭

ಈ ಪರಿಯಲುರು ಧರ್ಮ ಕಥನಾ
ಳಾಪದಲಿ ಮುನಿಸುತಗೆ ಸಂದೇ
ಹಾಪನೋದವ ಗೈದು ತಿಳುಹಿದನಾ ಮಹೀಸುರನ
ಭೂಪ ಕೇಳೈ ಕ್ಷತ ಧರ್ಮ ಕ
ಳಾಪದಲಿ ನಿನಗಿಲ್ಲ ಕೊರತೆ ಕೃ
ತಾಪ ರಾಧರು ಕೌರವರು ನಿರ್ನಾಮರಹರೆಂದ ೧೮

ಬಾಹುಬಲ ಬಲವಲ್ಲ ದೈವ
ದ್ರೋಹಿಗಳಿಗೆ ಸುಧರ್ಮನಿಷ್ಠರ
ಸಾಹಸವು ಕಿರಿದಾದೊಡೆಯು ಕೊಯ್ವರು ವಿರೋಧಿಗಳ
ಆ ಹರಾತ್ಮಜ ಹಸುಳೆತನದ
ವ್ಯೂಹದಲಿ ತಾರಕನ ನಿಕ್ಕನೆ
ಯಾಹವದ ಜಯಸಿರಿಯು ಧರ್ಮದ ಬೆನ್ನಲಿಹುದೆಂದ ೧೯

ಎ೦ದು ಮಾರ್ಕಡೇಯಮುನಿ ಯಮ
ನ೦ದನನನಿತಿಹಾಸ ಕಥೆಗಳ
ಲ೦ದವಿಟ್ಟನು ಚಿತ್ತವನು ಖಯ ಖೋಡಿಗಳ ಕಳೆದು
ಕ೦ದು ಕಸುರಿಕೆಯೇಕೆ ನಿಮಗೆ ಮು
ಕು೦ದನೊಲವಿದೆ ಬಯಕೆ ಬೇರೇ
ಕೆ೦ದು ಮಾರ್ಕಾಂಡೇಯ ನಾರದರಡರಿದರು ನಭವಂ ೨೦

ಅರಸ ಕೇಳೈ ದ್ರೌಪದಿಗೆ ಹರಿ
ಯರಸಿ ನುಡಿದಳು ಸತ್ಯಭಾಮಾ
ಸರಸಿಜಾನನೆ ನಗೆನುಡಿಯ ಸಮ್ಮೇಳ ಖೇಳದಲಿ
ಅರಸಿ ಕೌತುಕವೆನಗೆ ನೀನೈ
ವರಿಗೆ ಸತಿ ವಲ್ಲಭರ ಚಿತ್ತಾ
ಕರ್ಷಣವು ನಿನಗೆಂತುಉ ಸೇರಿಹುದೇಕ ಭಾವದಲಿ ೨೧

ಮ೦ತ್ರಸಿದ್ದಿಯೋ ಮೇಣುಶಾಬರ
ಯ೦ತ್ರ ರಕ್ಷೆಯೊ ಮೇಣ್ ವರೌಷಧ
ತ೦ತ್ರ ತಿಲಕವೊ ರಮಣರೈವರ ವಶೀಕರಣ
ಯ೦ತ್ರಮಯ ಹೂಹೆಗಳು ನೃಪರೀ
ಯ೦ತ್ರ ಸೂತ್ರದ ಕುಣಿಕೆ ನಿನ್ನ ನಿ
ಯ೦ತ್ರಣವ ಹೇಳೌ ನಿಧಾನವನೆಂದಳಿಂದು ಮುಖಿ ೨೨

ದೇವಿಯೆಂದಳು ಸತ್ಯಭಾಮಾ
ದೇವಿಯರು ಮುಗುದೆಯರಲಾ ನಾ
ನಾವಮಂತ್ರದ ತಂತ್ರ ತೊಡಕಿನ ತೋಟಿಯುಳ್ಳವಳು
ಭಾವ ಶುದ್ದಿಯಲೈವರನು ಸಂ
ಭಾವಿಸುವೆನವರಚಿತ್ತದ
ಭಾವವರಿದುಪಚರಿಸುವೆನು ಚತುರತೆಯ ಚಾಳಿಯಲಿ ೨೩

ಒಲವರಿದು ಹತ್ತುವುದು ಚಿತ್ತದ
ನೆಲೆಯರಿದು ನೆಮ್ಮುವುದು ಮುರಿವಿನ
ಹೊಳವರಿದು ಹಿಂಗುವುದು ಹೊಗುವುದು ಮನದೊಳೊಳವರಿದು
ಸುಳಿವರಿದು ಸೋಂಕುವುದು ತವಕಕೆ
ಬಲಿದು ಮುನಿವುದು ಸವಿಯ ಬೇಟವ
ಬೆಳಸಿ ಬೆಸೆವುದು ಬಗೆಯಲೆಂದಳು ನಳಿನಮುಖಿನಗುತ ೨೪

ರಸಿಕ ಹರಿ ಹದಿನಾರು ಸಾವಿರ
ಶಶಿ ಮುಖಿಯರಲಿ ಬೇಟ ಚೌಗಿನ
ದೆಸೆಕ ದಿಮ್ಮಿತು ಬಗೆಯಭ೦ಗವ್ಯಾಪ್ತಿಕೃಷ್ಣನಲಿ
ನುಸುಳು ನೆಲೆ ಡಿಳ್ಳಾಯ್ತು ಪೈಸರ
ಬೆಸುಗೆಬಿಗುಹುಳುಕೊತ್ತು ಕಲೆಗಳ
ರಸದ ಪಸರವನರಿಯಬಾರದು ವಿಗಡ ವಿಟರುಗಳ ೨೫

ನೀವು ಮುಗುದೆಯರತಿ ವಿದಗ್ದನು
ದೇವಕೀ ಸುತ ನೆನ್ನವರು ಧ
ರ್ಮಾವಲ೦ಬರು ದಿಟ್ಟರಲ್ಲ ಮನೋಜ ಲೀಲೆಯಲಿ
ನೀವು ಸೊಬಗಿನ ನಿಧಿಯಲೇ ಶತ
ಸಾವಿರದ ಸತಿಯರಲಿ ಕೃಷ್ಣನ
ಜೀವವಶ್ರಮ ರತಿಯರೆಂದಳು ನಗುತ ತರಳಾಕ್ಷಿ ೨೬

ಅರಸ ಕೇಳೈ ಸತ್ಯಭಾಮಾ
ಸರಸಿಜಾನನೆ ದ್ರುಪದ ಸುತೆಯರು
ಸರಸ ಮೇಳದಲೊಪ್ಪಿದರು ಚದುರೋಕ್ತಿ ಲೀಲೆಯಲಿ
ಹರಿ ಯುಧಿಷ್ಟಿರ ಭೀಮ ಪಾರ್ಥರು
ವರ ಮುನಿಗಳಿತಿ ಹಾಸಮಯ ಭಂ
ಧುರ ಕಥಾ ಕೇಳಿಯಲಿ ಕಳೆದರು ಹಲವು ದಿವಸಗಳ ೨೭

ಹಗೆಗಳಮರಾರಿಗಳು ನಮ್ಮಯ
ನಗರಿ ಶೂನ್ಯಸನದಲಿದ್ದುದು
ವಿಗಡ ರಾಮಾದಿಗಳು ವಿಷಯಂಗಳ ವಿನೋದಿಗಳು
ಅಗಲಲಾರೆನು ನಿಮ್ಮ ವನದೋ
ಲಗಕೆ ಬಿಡೆಯವ ಕಾಣೆನೆಂದನು
ನಗುತ ಕರುಣಾಸಿ೦ಧು ಯಮನಂದನನ ಮೊಗನೋಡಿ ೨೮

ನುಡಿದ ಕಾಲಾವಧಿಗೆ ಜರೆ ತೆರೆ
ಯಡಗಿದವು ಜಾಣಿನಲಿ ಸತ್ಯವ
ನಡೆಸಿದಿರಿ ಕಡೆಸಾರಿಗೆಯಲುನ್ನತಿಯ ಕೆಡಿಸದಿರಿ
ಕಡುಮನದ ಕರ್ಣಾದಿಗಳುಕೈ
ದುಡುಕಿದೊಡೆ ಕೈಗಾಯ್ದು ಧರ್ಮದ
ತಡಿಗೆ ಜಾರಿ ಜಯಾದ್ವದಲಿ ಜ೦ಘಾಲರಹಿರೆ೦ದ ೨೯

ಮರಯಲಿಹ ಕಾಲದಲಿ ಬಲಿದೆ
ಚ್ಚರದಿಹುದು ಬೇಕಾದೊಡೆಮಗೆ
ಚ್ಚರಿಸಿ ಕಾರ್ಯಸ್ಥಿತಿಯನೇ ಚರಿಸುವುದು ನಿಮ್ಮೊಳಗೆ
ಅರಿದಿಹುದು ನೀನೆ೦ದು ರಾಯಂ
ಗರುಹಿ ಭೀಮಾದಿಗಳಿಗುಚಿತವ
ನೆರೆ ನುಡಿದು ದುರುಪದಿಯ ಮನ್ನಿಸಿ ಮರಳಿದನು ಪುರಕೆಂ ೩೦

ಅರಸಿ ಹರಿಯಾಮ್ನಯತತಿ ಕು
ಕ್ಕರಿಸಿದವು ಮುನಿಗಳ ಸಮಾಧಿಗೆ
ಕರುಬುವರಾವಲ್ಲ ಕಾಣರು ನಖದ ಕೊನೆಗಳನು
ಅರಸ ತಾನೇ ಹರಿ ಹರಿದು ತ
ನ್ನೆರಕದವರನು ಬಿಡದೆ ಸಲಹುವ
ಕರುಣವೆ೦ತುಟೊ ರಾಯ ಗದುಗಿನ ವೀರ ನರಯಣನ ೩೧ 

ಸಂಕ್ಷಿಪ್ತ ಭಾವ

ಧರ್ಮವ್ಯಾಧನ ಕಥೆ

ಮಾರ್ಕಂಡೇಯ ಮುನಿಗಳು ಧರ್ಮಜಾದಿಗಳಿಗೆ ಧರ್ಮವ್ಯಾಧನ ಕಥೆಯನ್ನು ಹೇಳತೊಡಗಿದರು. ಹಿಂದೆ ಒಬ್ಬ ವಿಪ್ರನಿದ್ದ. ಅವನು ವೇದಾಧ್ಯಯನ ಪಾರಂಗಿತನಾಗಿದ್ದನು. ಒಂದು ದಿನ ಮರದಡಿ ಕುಳಿತಿರುವಾಗ ಹಕ್ಕಿಯ ತ್ಯಾಜ್ಯ ಇವನ ತಲೆಯ ಮೇಲೆ ಬಿದ್ದಿತು. ಕೋಪದಿಂದ ಅದನ್ನು ನೋಡಿದ ಕೂಡಲೇ ಆ ಹಕ್ಕಿ ಸುಟ್ಟು ಬಿದ್ದಿತು.

ಭಿಕ್ಷಾಟನೆಗೆಂದು ಮನೆಯೊಂದರ ಮುಂದೆ ನಿಂತಾಗ ಆ ಮನೆಯ ಸ್ತ್ರೀ ತನ್ನ ಪತಿಯನ್ನು ಉಪಚರಿಸುತ್ತಿದ್ದುದರಿಂದ ಸ್ವಲ್ಪ ತಡವಾಗಿ ಬಂದಳು. ಇವನು ಕೋಪದಿಂದ ನೋಡಿದಾಗ ನಾನೇನೂ ಆ ಹಕ್ಕಿಯಂತಲ್ಲ ಸುಟ್ಟು ಹೋಗಲು ಎಂದಳು. ಇವನಿಗೆ ಆಶ್ಚರ್ಯ. ನೀನು ಧರ್ಮರಹಸ್ಯವನ್ನು ಅರಿಯಬೇಕಾದರೆ ಇಲ್ಲಿಂದ ಸ್ವಲ್ಪ ದೂರದಲ್ಲಿ ಇರುವ ಧರ್ಮವ್ಯಾಧ ಎಂಬವನಲ್ಲಿಗೆ ಹೋಗು ಎಂದಳು.

ವಿಸ್ಮಿತನಾದ ಈ ವಿಪ್ರನು ಅವಳು ಹೇಳಿದ ಸ್ಥಳಕ್ಕೆ ಬಂದನು. ಮಾಂಸ ಮಾರುವ ಬೀದಿಯಲ್ಲಿ ಅವನನ್ನು ಕಂಡನು. ಅವನು ಇವನನ್ನು ತನ್ನ ಮನೆಗೆ ಕರೆದುಕೊಂಡು ಹೋದನು. ಅಲ್ಲಿ ವೃದ್ಧ ತಾಯಿತಂದೆಯರನ್ನೂ, ಪತ್ನೀ ಪುತ್ರರನ್ನೂ ಪರಿಚಯಿಸಿದನು. ಇವರ ಕ್ಷೇಮದ ಹೊಣೆ ನನ್ನದು. ಅದಕ್ಕೆ ಬೇಕಾದ ಕುಲಕಸುಬನ್ನು ಮಾಡುತ್ತೇನೆ.  ಇದರಲ್ಲಿ ದೋಷವಿಲ್ಲವೆಂದನು.

ಅನ್ಯಸ್ತ್ರೀ ವ್ಯಾಮೋಹ, ಆತ್ಮಸ್ತುತಿ, ಹಿಂಸಾಚಾರ, ಡಂಭ ಮುಂತಾದುವು ದೋಷಗಳೆಂದೂ, ವೇದಾಧ್ಯಯನ, ಸಜ್ಜನರ ಸಂಗ, ಧ್ಯಾನ, ಮೌನ, ಸದಾಚಾರಗಳು ಸದ್ಧರ್ಮಗಳೆಂದೂ ತಿಳಿಸಿ ಹೇಳಿದನು. ಮದಗಳನ್ನು ಬಿಟ್ಟು ವಿನಯದಿಂದ ನಡೆಯುವಂತೆ ಹೇಳಿದನು. ಆಗ ಈ ವಿಪ್ರನ ಮನಸ್ಸು ಬದಲಾಯಿತು.

ಹೀಗೆ ಅನೇಕ ನೀತಿಕಥೆಗಳನ್ನು ಹೇಳಿ ಧರ್ಮಜನನ್ನು ಸಂತೈಸಿ ಕೃಷ್ಣನಿಗೆ ನಮಿಸಿ ನಾರದ ಮತ್ತು ಮಾರ್ಕಂಡೇಯ ಮುನಿಗಳು ಹೊರಟರು.

ಇತ್ತ ಸತ್ಯಭಾಮೆಯು ದ್ರೌಪದಿಯನ್ನು ಐವರು ಗಂಡಂದಿರನ್ನು ನಿಭಾಯಿಸುವ ಬುದ್ಧಿವಂತಿಕೆಯ ರಹಸ್ಯವೇನೆಂದು ಕೇಳಿದಳು. ಅವರವರ ಭಾವಕ್ಕೆ ತಕ್ಕಂತೆ ವರ್ತಿಸುತ್ತ ಏಕಭಾವದಿಂದ ಮತ್ತು ಚತುರತೆಯಿಂದ ವರ್ತಿಸುವೆನೆಂದು ಉತ್ತರವಿತ್ತಳು ದ್ರೌಪದಿ.

ಹೀಗೇ ಹಲವಾರು ದಿನಗಳು ಕಳೆದು ಕೃಷ್ಣನು ವಾಪಸ್ಸು ಹೊರಟುನಿಂತನು. ಕಷ್ಟದ ಸಮಯದಲ್ಲಿ ಕಾಪಾಡಬೇಕೆಂದು ಪ್ರಾರ್ಥಿಸಿದ ಪಾಂಡವರನ್ನು ಸಂತೈಸಿ ಕರುಣಿ ಮರಳಿದನು.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ