ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭಾರತಕಥಾಮಂಜರಿ45


 ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ 
ಅರಣ್ಯಪರ್ವ - ಒಂಭತ್ತನೆಯ ಸಂಧಿ


ಸೂ. ಸಕಲ ಮುನಿಜನ ಸಹಿತ ಗಿರಿವನ
ನಿಕರದಲಿ ತೊಳಲಿದನು ರಾಜ
ನೈಕ ಶಿರೋಮಣಿ ಧರ್ಮ ನಂದನ ತೀರ್ಥ ಯಾತ್ರೆಯಲಿ

ಅರಸ ಕೇಳೈ ಪಾರ್ಥನಿದ್ದನು
ವರುಷವೈದರೊಳಿಂದ್ರ ಭವನದ
ಸಿರಿಯ ಸಮ್ಮೇಳದ ಸಗಾಢದ ಸೌಮನಸ್ಯದಲಿ
ನರನ ಹದನೇನೊ ಧನಂಜಯ
ನಿರವದೆಲ್ಲಿ ಕಿರೀಟಿ ನಮ್ಮವ
ಮರೆದು ಕಳೆದನಲಾ ಯೆನುತ ಯಮಸೂನು ಚಿ೦ತಿಸಿದ ೧


ಕಳುಹಿದನು ಲೋಮಶನನವನೀ
ತಳಕೆ ಸುರಪತಿ ಸಿತಹಯನ ಕೌ
ಶಲವನೊಡ ಹುಟ್ಟಿದರಿಗರುಹಲಿಕಭ್ರ ಮಾರ್ಗದಲಿ
ಇಳಿದನಾ ಮುನಿಪತಿ ದರಿತ್ರೀ
ತಳಕೆ ಕಾಮ್ಯಕನಾಮ ವನದಲಿ
ತಳಿರ ಗೂಡಾರದಲಿ ಕಂಡನು ಧರ್ಮ ನಂದನನ ೨

ಈತನಿದಿರೆದ್ದರ್ಘ್ಯ ಪಾದ್ಯವ
ನಾತಪೋನಿದಿಗಿತ್ತು ಬಹಳ
ಪ್ರೀತಿಯಲಿ ಬೆಸಗೊ೦ಡುನವರಾಗಮನ ಸ೦ಗತಿಯ
ಆತನಮಲ ಸ್ವರ್ಗಸದನ ಸಂ
ಖಾತಿಶಯವನು ತಿಳುಹಿದನು ಪುರು
ಹೂತ ಭವನದಲರ್ಜುನನ ವಾರತೆಯ ವಿವರಿಸಿದ ೩

ನುಡಿನುಡಿಗೆ ಸುಕ್ಷೇಮಕುಶಲವ
ನಡಿಗಡಿಗೆ ಬೆಸಗೊ೦ಡು ಪುಳಕದ
ಗುಡಿಯಬೀಡಿನ ರೋಮಪುಳಕದ ಪೂರ್ಣ ಹರುಷದಲಿ
ಪೊಡಾವಿಯಧಿಪತಿ ಬಳಿಕ ತೊಳಲಿದ
ನಡವಿಯಡವಿಯ ತೀರ್ಥಯಾತ್ರೆಗೆ
ಮಡದಿ ನಿಜ ಪರಿವಾರವವನೀದೇವ ಕುಲಸಹಿತ ೪

ವರಪುಲಸ್ತ್ಯ ಮುನೀ೦ದ್ರ ಭೀಷ್ಮ್ಂ
ಗರುಹಿದುತ್ತಮ ತೀರ್ಥವನು ವಿ
ಸ್ತರಿಸಿದನು ಲೋಮಶ ಮುನೀಶ್ವರನವನಿಪಾಲ೦ಗೆ
ಧರಣಿಪತಿ ಬೃಹದಶ್ವನನು ಪತಿ
ಕರಿಸಿ ನಿಜ ರಾಜ್ಯಾಪಹಾರದ
ಪರಮದುಃಖ ಪರಂಪರೆಯನರುಹಿದನು ಖೇಧದಲಿ ೫

ಆತನೀತನ ಸ೦ತವಿಟ್ಟು
ದ್ಯೂತದಲಿ ನಳ ಚಕ್ರವರ್ತಿ ಮ
ಹೀತಳವ ಸೋತನು ಕಣಾ ಕಲಿಯಿಂದ ಪುಷ್ಕರಗೆ
ಭೂತಳವ ಬಿಸುಟಡವಿಗೈದಿದ
ನಾತ ನಿಜವಧು ಸಹಿತ ವನದಲಿ
ಕಾತರಿಸಿ ನಿಜಸತಿಯ ಬಿಸುಟನು ಹಾಯ್ದನಡವಿಯಲಿ ೬


ಬಳಿಕ ಕಾರ್ಕೋಟಕನ ದೆಸೆಯಿ೦
ದಳಿಯೆ ನಿಜಋತು ಪರ್ಣ ಭೂಪನ
ನಿಳಯಕೋಲೈಸಿದನು ಭಾವುಕನೆಂ ನಾಮದಲಿ
ಲಲನೆ ತೊಳಲಿದು ಬರುತ ತಂದೆಯ
ನಿಳಯವನು ಸಾರಿದಳು ಬಳಿಕಾ
ನಳಿನಮುಖಿಯಿ೦ದಾಯ್ತು ನಳ ಭೂಪತಿಗೆ ನಿಜರಾಜ್ಯ ೭


ಆತನಾಪತ್ತದು ಮಹೀಪತಿ
ನೀ ತಳೋದರಿ ಸಹಿತ ನಿನ್ನೀ
ಭ್ರಾತೃಜನ ಸಹಿತೀ ಮಹಾಮುನಿ ಮುಖ್ಯ ಜನಸಹಿತ
ಕಾತರಿಸುತಿಹೆ ನಿನ್ನವೊಲು ವಿ
ಖ್ಯಾತರಾರೈ ಪುಣ್ಯತರರೆಂ
ದಾ ತಪೋನಿಧಿ ಸ೦ತವಿಟ್ಟನು ದರ್ಮನಂದನನ ೮

ನಳ ಮಹೀಪತಿ ಯಶ್ವ ಹೃದಯವ
ತಿಳಿದು ರುತುಪರ್ಣನಲಿ ಕಾಲವ
ಕಳೆದು ಗೆಲಿದನು ಪುಷ್ಕಳನ ವಿದ್ಯಾಮಹಿಮೆಯಲಿ
ಗೆಲಿದು ಕೌರವ ಶಕುನಿಗಳು ನಿ
ನ್ನಿಳೆಯ ಕೊಂಡರು ಮರಳಿ ಜೂಜಿಂ
ಗಳುಕಬೇಡೆಂದಕ್ಷಹೃದಯವ ಮುನಿಪ ಕರುಣಿಸಿದ ೯

ಬಳಿಕ ಲೋಮಶ ಸಹಿತ ನೄಪಕುಲ
ತಿಲಕ ಬ೦ದನಗಸ್ತ್ಯಾನಾಶ್ರಮ
ದೊಳಗೆ ಬಿಟ್ಟನು ಪಾಳಯವನಾ ಮುನಿಯ ಚರಿತವನು
ತಿಳುಹಿದನು ಲೋಮಶನು ವೃತ್ತನಾ
ಕಲಹಕೆಂದು ದಧೀಚಿ ಮುನಿಪತಿ
ಯೆಲುವನಮರರು ಬೇಡಿದುದ ನರುಹಿದನು ಜನ ಪತಿಗೆ ೧೦


ಆಮುನಿಯ ಕ೦ಕಾಳದಲಿ ಸು
ತ್ರಾಮ ಕೊ೦ದನು ವೃತ್ತನನು ಬಳಿ
ಕಾ ಮಹಾದಾನವರ ರಕ್ಕಸ ಕೋಟಿ ಜಲಧಿಯಲಿ
ಭೀಮ ಬಲರಡಗಿದರು ಬಂದೀ
ಭೂಮಿಯಲಿ ವಸಿಷ್ಥನಾಶ್ರಮ
ದಾ ಮುನೀಂದ್ರರ ತಿಂದರವರು ಸಹಸ್ರ ಸ೦ಖ್ಯೆಯಲಿ ೧೧


ಚ್ಯವನನಾಶ್ರಮದೊಳಗೆ ಮೂರನು
ತಿವಿದು ಭಾರದ್ವಾಜನಾಶ್ರಮ
ಕವರ ಮುನಿದೆಪ್ಪತ್ತ ನು೦ಗಿದರೇನನುಸುರುವೆನು
ದಿವಿಜ ರಿತ್ತಲಗಸ್ತ್ಯನನು ಪರು
ಠವಿಸಿದರು ಸಾಗರವನಾ ಮುನಿ
ಹವಣಿಸಿದ ಜಠರದಲಿ ಕೊಂದನು ದೈತ್ಯದಾನವರ ೧೨


ಸಗರಸುತ ಚರಿತವನು ಕಪಿಲನ
ದೃಗುಶಿಖೆಯಲುರಿದುದನು ಬಳಿಕವ
ರಿಗೆ ಭಗೀರಥನಿಳುಹಿದಮರನದೀ ಕಥಾ೦ತರವ
ವಿಗಡಮುನಿ ಇಲ್ವಲನ ವಾತ
ಪಿಗಳ ಮರ್ದಿಸಿ ವಿ೦ದ್ಯಗಿರಿ ಹ
ಬ್ಬುಗೆಯ ನಿಲಿಸಿದಗಸ್ತ್ಯ ಚರಿತಯ ಮುನಿಪ ವರ್ಣಿಸಿದ ೧೩


ಕೇಳಿದನು ನೃಪ ಋಷ್ಯಶೃಂಗ ವಿ
ಶಾಲ ಕಥೆಯ ಕಳಿಂಗದೇಶದ
ಕೂಲವತಿಗಳ ಮಿ೦ದು ಗಂಗಾಜಲದಿ ಸಂಗಮದ
ಮೇಲೆ ವೈತರಣಿಯ ವರೋತ್ತರ
ಕೂಲವನು ದಾ೦ಟಿದನು ನೃಪಕುಲ
ಕಾಲಯಮನಾಶ್ರಯಕೆ ಬಂದರು ರೇಣುಕಾಸುತನ ೧೪


ಪರಶುರಾಮನ ಕಾರ್ತವೀರ್ಯನ
ಧುರದೊಳಿಪ್ಪತ್ತೊಂದು ಸೂಳಿನೊ
ಳರಿದರಾಯರ ಕಂಠನಾಳದ ನೆತ್ತರಿನ ನದಿಯ
ಪರಮಪಿತೃತರ್ಪಣವನಾತನ
ಪರಶುವಿನ ನೆಣವಸೆಯ ತೊಳಹದ
ವರನದಿಯ ವಿಸ್ತರಣವನು ಕೇಳಿದನು ಯಮಸೂನು ೧೫


ಬ೦ದನವನಿಪನಾ ಪ್ರಭಾಸದ
ವ೦ದನೆಗೆ ಬಳಿಕಲ್ಲಿ ಯಾದವ
ವೃ೦ದ ದರ್ಶನವಾಯ್ತು ಬಹುವಿಧ ತೀರ್ಥತೀರದಲಿ
ಮಿಂದನಾತಗೆ ಗಯನ ಚರಿತವ
ನ೦ದು ರೋಮಶ ಹೇಳಿದನು ನಲ
ವಿಂದ ಸಂಯಾತಿ ಚ್ಯವನ ಸಂವಾದ ಸಂಗತಿಯ ೧೬


ಚ್ಯವನ ಮುನಿಯ ವಿವಾಹವನು ರೂ
ಪವನು ಮುನಿಗಶ್ವಿನಿಗಳಿತ್ತುದ
ನವರಿಗಾ ಮುನಿ ಮಖ ಹವಿರ್ಭಾಗ ಪ್ರಸಂಗತಿಯ
ಅವರಿಗಿಂದ್ರನ ಮತ್ಸರದ ದಾ
ನವನ ನಿರ್ಮಾಣವನು ಬಳಿಕಿನೊ
ಳವನಿಪಗೆ ಮಾ೦ಧಾತ ಚರಿತವನೊರೆದನಾ ಮುನಿಪ ೧೭

ಸೋಮಕನ ಚರಿತವ ಮರುತ್ತ ಮ
ಹಾ ಮಹಿಮನಾಚಾರ ಧರ್ಮ
ಸ್ತೋಮವನು ವಿರಚಿಸಿ ಯಯಾತಿಯ ಸತ್ಕಾಥಾಂತರವ
ಭೂಮಿಪತಿ ಕೇಳಿದನು ಶಿಬಿಯು
ದ್ದಾಮತನವನು ತನ್ನ ಮಾಂಸವ
ನಾಮಹೇಂದ್ರಾಗ್ನಿಗಳಿಗಿತ್ತ ವಿಚಿತ್ರ ವಿಸ್ತರವ ೧೮

ಕೇಳಲಷ್ಟಾವಕ್ರ ಚರಿತವ
ಹೇಳಿದನು ರೋಮಶ ಮುನೀ೦ದ್ರ ನೃ
ಪಾಲ೦ಗರುಹಿದನು ಯಾವತ್ ಋಷಿಯ ಸತ್ಕಥೆಯ
ಬಾಳಡವಿ ಬಯಲಾಯ್ತು ಫಲಮೃಗ
ಜಾಲ ಸವೆದುದು ಗಂದಮಾದನ
ಶೈಲವನದಲಿ ವಾಸವೆಂದನೀಶ ಹೊರವಂಟ ೧೯

ಅರಸ ಬ೦ದನು ಗ೦ದಮಾದನ
ಗಿರಿಯತಪ್ಪಲಿಗಗ್ನಿಹೋತ್ರದ
ಪರಮಋಷಿಗಳು ಮಡದಿ ಸಕಲ ನಿಯೋಗಿ ಜನ ಸಹಿತ
ಸರಸಿ ನೆರೆಯವು ಸ್ನಾನ ಪಾನಕೆ
ತರು ಲತಾವಳಿಗಳು ಯುಧಿಷ್ಟಿರ
ನರಮನೆಯ ಸೀವಟಕೆ ಸಾಲವು ನೃಪತಿ ಕೇಳೆಂದಂ ೨೦

ಮರು ದಿವಸ ವಲ್ಲಿಂದ ಬೆಟ್ಟದ
ಹೊರೆಗೆ ನಡೆತರಲಭ್ರದಲಿ ಗುಡಿ
ಯಿರಿದು ಮೆರೆದುದು ಮೇಘ ಮಿ೦ಚಿದುದಖಿಳ ದೆಸೆದೆಸೆಗೆ
ಬರಸಿಡಿಲ ಬೊಬ್ಬೆಯಲಿ ಪರ್ವತ
ಬಿರಿಯೆ ಬಲುಗತ್ತಲೆಯ ಬಿಂಕಕೆ
ನರರ ಕಣುಮನ ಹೋಳೆತೂಳಿತು ಮಳೆ ಮಹೀತಳವ ೨೧

ಮರನ ಮರ ತೆಕ್ಕೈಸಿದವು ಕುಲ
ಗಿರಿಯ ಗಿರಿ ಮುಂಡಾಡಿದವು ತೆರೆ
ತೆರೆಗಳಲಿ ಗಂಟಿಕ್ಕಿದವು ಸಾಗರ ಸಾಗರದ
ಧರಣಿಗಿಕ್ಕಿದಿಳಿಂಪನಿಡಕಿಲು
ಜರಿಯದಿಹುದೇ ಜಗದ ಬೋನಕೆ
ಹರಿಗೆ ಹೇಳೆನೆ ಬೀಸಿದುದು ಬಿರುಗಾಳಿ ಬಿರುಸಿನಲಿ ೨೨

ಕೆದರಿತಲ್ಲಿಯದಲ್ಲಿ ಮಳೆಯಲಿ
ಹುದುಗಿತಲ್ಲಿಯದಲ್ಲಿ ಕಣಿಗಲು
ಕದಳಿಗಳ ಮರೆಗೊ೦ಡುದಲ್ಲಿಯದಲ್ಲಿ ಹರಿಹರಿದು
ಬೆದರಿತಲ್ಲಿಯದಲ್ಲಿ ಕರಕರ
ದೊದರಿತಲ್ಲಿಯದಲ್ಲಿ ಬಲುವಳೆ
ಸದೆದುದಿವರನು ಸೇಡುಗೊಂಡುದು ಜನದ ಸುಮ್ಮಾನ ೨೩

ಬಗಿದು ಹೊಕ್ಕರು ಮೆಳೆಗಳನು ಮಿ೦
ಚುಗಳ ಕ೦ಬೆಳಗಿನಲಿ ದಾರಿಯ
ತೆಗೆತೆಗೆದು ಸಾರಿದರು ಸ೦ದಣಿ ಮರನ ಹೆಮ್ಮರನ
ಬಿಗಿದ ರೋಮದ ಹುದಿದ ಕೈಗೊ
ಪ್ಪೆಗಳ ನಡುಕದ ಮೈಯ ಕಡು ಸೇ
ಡುಗಳ ಶೀತದ ಸಕಲಜನ ಹುದುಗಿದರಣ್ಯದಲಿ ೨೪


ಹೊಳೆವ ಕ೦ಗಳ ಕಾಂತಿ ಬಲುಗ
ತ್ತಲೆಯ ಝಳಪಿಸೆ ಘೋರ ವಿಪಿನದೊ
ಳಳಿಕುಲಾಳಕಿ ಬ೦ದಳೊಬ್ಬಳೆ ಮಳೆಗೆ ಕೈಯೊಡ್ದಿ
ಬಲಿದು ಮೈ ನಡು ನಡುಗಿ ಹಲುಹಲು
ಹಳಚಿನೆನೆದಳು ವಾರಿಯಲಿ ತನು
ಹಳಹಳಿಸೆ ಬಳಲಿದಳು ಚರಣದ ಹೊನಲ ಹೋರಟೆಗೆ ೨೫


ಎಡಹು ಬೆರಳಿನ ಕಾಲ ಮುಳುಗಳ
ಕಡುವಳೆಯ ಘಾಟಳಿಪ ಗಾಳಿಯ
ಸಿಡಿಲು ಮಿ೦ಚಿನ ಗಲ್ಲಣೆಯ ಘೋರಾ೦ಧಕಾರದಲಿ
ಒಡನೆ ಮಾನಿಸರಿಲ್ಲ ಕರೆದೊಡೆ
ನುಡಿವರಿಲ್ಲ ಕರದ್ವಯದಿ ತಡ
ವಿಡುತ ಪೈಸರದೊಳಗೆ ಸೂಸಿತು ಮೈ ಮಹಾಸತಿಯ ೨೬

ಗಾಳಿಗೊರಗಿದ ಕದಳಿಯಂತಿರೆ
ಲೋಲ ಲೋಚನೆ ಥಟ್ಟು ಗೆಡೆದಳು
ಮೇಲುಸುರ ಬಲು ಮೂರ್ಛೆಯಲಿ ಮುದ್ರಿಸಿದ ಚೇತನದ
ಬಾಲೆಯಿರೆಬೆಳಗಾಯ್ತು ತೆಗೆದುದು
ಗಾಳಿ ಬಿರುವಳೆ ಭೀಮ ನಕುಲ ನೃ
ಪಾಲ ರರಸಿದರೀಕೆಯನು ಕಂಡವರ ಬೆಸಗೊಳುತ ೨೭


ಬರುತ ಕ೦ಡರು ಬಟ್ಟೆಯಲಿ ನಿ
ರ್ಭರದ ಮೂರ್ಛಾ ಮೋಹಿತಾಂತಃ
ಕರಣೆಯನು ಹಾಯೆನುತ ಬಿದ್ದರು ಪವನಜಾದಿಗಳು
ಧರಣಿಪತಿ ತೆಗೆದೀಕೆಯನು ಕು
ಳ್ಳಿರಿಸಿ ತನ್ನಯ ತೊಡೆಯ ಮೇಲಾ
ದರಿಸಿ ಮ೦ತ್ರಿಸಿ ನೀರ ತಳಿದನು ರಕ್ಷೆಗಳ ರಚಿಸಿ ೨೮

ಉಪಚರಿಸಿ ರಕ್ಷೋಘ್ನ ಸೂಕ್ತದ
ಜಪವ ಮಾಡಿಸಿ ವಚನ ಮಾತ್ರದ
ರಪಣದಲಿರಚಿಸಿದನು ಗೋಧನ ಭೂಮಿ ದಾನವನು
ನೃಪತಿ ಕೇಳೊಂದೆರಡು ಗಳಿಗೆಯೊ
ಳುಪಹರಿಸಿದುದು ಮೂರ್ಛೆ ಸತ್ಯ
ವ್ಯಪಗತೈಶ್ವರ್ಯವನು ಕಂಡಳುಕಾಂತೆ ಕಣ್ದೆರದು ೨೯

ನೆಲೆವನೆಯ ಮಾಡದಲಿ ರತ್ನಾ
ವಳಿಯ ನುಣ್ಬೆಳಗಿನಲಿ ಹ೦ಸೆಯ
ತುಳಿಯ ಮೇಲ್ವಾಸಿನಲಿ ಪವಡಿಸುವೀಕೆಗಿಂದೀಗ
ಹಳುವದಲಿ ಘೋರಾಂಧಕಾರದ
ಮಳೆಯೊಬ್ಬಳೆ ನಡೆದು ನೆನದೀ
ಕಲುನೆಲದೊಳೊರಗಿದಳೆನುತ ಮರುಗಿದನು ಧರಣೀಶಂ ೩೦

ಹರೆದುದುಬ್ಬಿದ ಮೂರ್ಛೆ ಕರಣೋ
ತ್ಕರದ ಕಳವಳವಡಗಿತರಸನ
ನರಸಿ ಸಂತೈಸಿದಳು ತಪ್ಪೇನಿದು ಪುರಾಕೃತದ
ಪರುಠವಣೆಗೇಕಳಲು ಮುಂದಣ
ಗಿರಿಯ ಗಮನೋಪಾಯವನು ಗೋ
ಚರಿಸಿದರೆ ಸಾಕೆ೦ದಬುಜಮುಖಿ ಮಹೀಪತಿಗೆ ೩೧

ಇದೆ ಮುನಿವ್ರಜವಗ್ನಿ ಹೋತ್ರಿಗ
ಳಿದೆ ಕುಟು೦ಬಿಗಳಾಪ್ತ ಪರಿಜನ
ವಿದೆ ವರಸ್ತ್ರೀಂ ಬಾಲವೃದ್ದ ನಿಯೋಗಿಜನ ಸಹಿತ
ಇದೆ ಮಹಾಕಾಂತಾರವಿನಿಬ
ಪದಕೆ ವನ ಮಾರ್ಗದಲಿ ಸೇರುವ
ಹದನ ಕಾಣೆನು ಶಿವ ಶಿವೆಂದಳು ಕಾಂತೆ ಭೂಪತಿಗೆ ೩೨


ಆಯತಾಕ್ಷಿಯ ನುಡಿಗೆ ಪಾಂಡವ
ರಾಯ ಮೆಚ್ಚಿದನಿನ್ನು ಗಮನೋ
ಪಾಯವೆಂತೆದೆನುತ ಚಿಂತಿಸಿದನು 
ಘಟೋತ್ಕಚ
ರಾಯ ಕೇಳೈ ಕಮಲ ನಾಭನ
ಮಾಯೆಯೋ ನಾವರಿಯೆ ವಾಕ್ಷಣ
ವಾಯುವೇಗದಲಭ್ರದಿಂದಿಳಿತಂದನಮರಾರಿ ೩೩

ವೀರದೈತ್ಯನ ಬಹಳ ದುಷ್ಪರಿ
ವಾರವದನಾರೆಣಿಸುವರು ಮುಂ
ಗಾರಿರುಳ ತನಿಯರಕ ನೀಲಾಚಲದ ಖಂಡರಣೆ
ಘೋರ ರಾಹುವ್ಯೂಹವೆನೆ ಸುರ
ವೈರಿಗಳ ಮೈ ಗಾಂತಿ ಲಹರಿಯ
ಪೂರದಲಿ ಜಗ ಮುಳುಗೆ ಬಂದುದು ಲಕ್ಷ ಸಂಖ್ಯೆಯಲಿ ೩೪

ದೇವ ಬೆಸಸಾ ನಮ್ಮ ಬರಸಿದು
ದಾವ ಹದನು ನವೀನ ಭಟರಿದೆ
ದೇವರಿಪುಗಳು ಹೇಳು ನೆನಹಿನ ರಾಜಕಾರಿಯವ
ಆವುದೆನಗುದ್ಯೋಗವೆನೆ ಸಂ
ಭಾವಿಸಿದನಸುರನನು ಜಾರುವ
ಜೀವಮರುತನ ಮರಳಿನಿಲಿಸಿತು ನಿನ್ನನುಡಿಯೆಂದ ೩೫


ದುರ್ಗವಿದೆ ನಮ್ಮಂಘ್ರಿ ಶಕ್ತಿಯ
ನುಗ್ಗಿ ಬೀತುದು ಸಾಹಸಿಗ ನೀ
ನಗ್ಗಳರಿಯದೆ ನಿನ್ನವರು ಪಡಿಗಿರಿಗಳಾಗಿರಿಗೆ
ಹುಗ್ಗಿಗರ ಹೆಗಲೇರಿಸೊಂದೇ
ಲಗ್ಗೆಯಲಿ ನೆಡೆಸೆನೆ ಹಸಾದದ
ಮೊಗ್ಗೆಗೈಗಳ ದನುಜ ತಗ್ಗಿದನರಸನಿದಿರಿನಲಿ ೩೬

ಹೊತ್ತನರಸನನರಸನನುಜರ
ನೆತ್ತಿದನು ನೃಪನರಸಿಯನು ಬಳಿ
ಕೆತ್ತಿಕೈವೀಸಿದನು ಭಟರಿಗೆ ತೋರಿ ಪರಿಜನವ
ಹೊತ್ತರನಿಬರನಸುರ ಬಟರೋ
ತ್ತೊತ್ತೆಯಾದುದು ಬೆನ್ನಿನಲಿ ಬಿಗಿ
ದೆತ್ತಿ ಹಾಯ್ದರು ಮುಗಿಲ ಥಟ್ಟಿನ ಪರಿಯ ಜೋಡಿನಲಿ ೩೭

ಅಸುರ ದೇಹ ಸ್ಪರ್ಶವಸಮಂ
ಜಸವಲಾ ತನಗೆನುತ ಮುನಿ ರೋ
ಮಶನು ಗಗನೇಚರರ ಗತಿಯಲಿ ಬ೦ದನಿವರೊಡನೆ
ವಿಷಮ ಗಿರಿ ಕಾನನಕದದ್ವ
ಪ್ರಸರವನು ಹಿಂದಿಕ್ಕಿ ಹೊದ್ದಿದ
ರೆಸೆವ ನರನಾರಯಣಾಶ್ರಮ ವರತಪೋವನವ ೩೮

ಅಲ್ಲಿಯಖಿಳ ಋಷಿವ್ರಜವು ಭೂ
ವಲ್ಲಭನನಾತಿಥ್ಯ ಪೂಜಾ
ಸಲ್ಲಲಿತ ಸಂಭಾವನಾ ಮಧುರೋಕ್ತಿ ರಚನೆಯಲಿ
ಅಲ್ಲಿಗಲ್ಲಿಗೆ ಸಕಲ ಮುನಿ ಜನ
ವೆಲ್ಲವನು ಮನ್ನಿಸಿದನಾ ವನ
ದಲ್ಲಿ ನೂಕಿದನೆ೦ಟು ದಿನವನು 
ನೃಪತಿ ಕೇಳೆಂದ ೩೯ 

ಸಂಕ್ಷಿಪ್ತ ಭಾವ
Lrphks Kolar

ಧರ್ಮಜನ  ಪರಿವಾರದ ತೀರ್ಥಯಾತ್ರೆ

ಇಂದ್ರನ ನಗರಿಯಲ್ಲಿ ಅರ್ಜುನ ವಿವಿಧ ಕಲೆಗಳನ್ನು ಕಲಿಯುತ್ತ ಐದು ವರುಷ ಉಳಿದನು. ಅವನ ಬಗ್ಗೆ ಚಿಂತಿಸುತ್ತಿದ್ದ ಧರ್ಮಜನಿಗೆ ರೋಮಶನೆಂಬ ಮುನಿ ಬಂದು ಕುಶಲವಾರ್ತೆಯನ್ನು ಹೇಳಿದನು. ಆತನನ್ನು ಸತ್ಕರಿಸಿ ತಮ್ಮ ಕಷ್ಟವನ್ನು ಹೇಳಿಕೊಂಡ ಧರ್ಮಜನಿಗೆ ಆ ಮುನಿಯು ಬೇರೆ ಬೇರೆ ರೀತಿಯಲ್ಲಿ ಕಷ್ಟಗಳನ್ನು ಅನುಭವಿಸಿದವರ ಚರಿತ್ರೆಗಳನ್ನು ಹೇಳಿ ಸಂತೈಸಿದನು.

ನಳ ಮಹಾರಾಜನು ದ್ಯೂತದಲ್ಲಿ ಎಲ್ಲವನ್ನೂ ಕಳೆದುಕೊಂಡು ಹೆಂಡತಿಯ ಜೊತೆಗೆ ಕಾಡಿಗೆ ಹೋದದ್ದು, ಅವಳನ್ನು ಬಿಟ್ಟು ತೆರಳಿದ್ದು, ಋತುಪರ್ಣನಲ್ಲಿ ಅಕ್ಷವಿದ್ಯೆಯನ್ನು ಕಲಿತದ್ದು ಕೊನೆಗೆ ಮತ್ತೆ ರಾಜ್ಯವನ್ನು ಪಡೆದದ್ದು ಹೇಳಿದನು. ಅಗಸ್ತ್ಯಾಶ್ರಮಕ್ಕೆ ಬಂದರು. ಆಗ ದಧೀಚಿ, ಚ್ಯವನ, ಭಾರದ್ವಾಜ, ವಸಿಷ್ಠ ಮುಂತಾದವರ ಸಂಗತಿಗಳನ್ನು ಕಾಲಕಾಲಕ್ಕೆ ತಿಳಿಸುತ್ತಾ ಬಂದನು.

ಸಗರನ ಕಥೆ, ನಹುಷ, ಋಷ್ಯಶೃಂಗ, ಪರಶುರಾಮ.. ಹೀಗೆ ಎಲ್ಲರ ಬಗ್ಗೆ ಹೇಳುತ್ತಾ ಧರ್ಮಜನಿಗೆ ಸಮಾಧಾನ ಹೇಳುತ್ತಾ ಪವಿತ್ರ ಸ್ಥಳಗಳನ್ನು ಸಂದರ್ಶಿಸುತ್ತ ಪ್ರಭಾಸ ತೀರ್ಥಕ್ಕೆ ಬಂದರು. ಅಲ್ಲಿ ಯಾದವಕುಲದವರ ಸಂದರ್ಶನವಾಯಿತು. ಯಯಾತಿ, ಶಿಬಿ ಮುಂತಾದವರ ಬಗ್ಗೆಯೂ ಹೇಳಿದನು.

ಅಲ್ಲಿನ ಅಡವಿಯು ಬೋಳಾಯಿತು. ಮುಂದೆ ಗಂಧಮಾದನ ಪರ್ವತದಲ್ಲಿ ವಾಸವೆಂದು ಎಲ್ಲರೂ ಹೊರಟರು. ಬೃಹತ್ತಾದ ಪರ್ವತದ ತಪ್ಪಲಿನಲ್ಲಿ ಇರುಳು ಕಳೆದರು. ಭಯಂಕರ ಮಳೆ ಸುರಿಯಿತು. ಆ ಮಳೆ, ಮಿಂಚು, ಗುಡುಗು ಸಿಡಿಲುಗಳಲ್ಲಿ ದ್ರೌಪದಿಯು ದಾರಿ ತಪ್ಪಿ ತೊಳಲಿ ಅಲೆದಾಡಿ ಅಂತೂ ತನ್ನವರನ್ನು ಸೇರಿದಳು. ಅವರೆಲ್ಲರೂ ನೊಂದರು. ಅರಮನೆಯಲ್ಲಿ ಸುಖವಾಗಿದ್ದವಳಿಗೆ ಎಂತಹ ಕಷ್ಟವೆಂದು ಧರ್ಮಜ ಮರುಗಿದನು. ಅವಳೇ ಎಲ್ಲರನ್ನೂ ಸಂತೈಸಿದಳು.

ಆ ಗಂಧಮಾದನ ಪರ್ವತವನ್ನು ಏರುವ ಬಗೆ ಹೇಗೆಂದು ಚಿಂತಿಸಿರಲು ಘಟೋತ್ಕಚನು ತನ್ನ ಪರಿವಾರದೊಂದಿಗೆ ಬಂದು ಎಲ್ಲರನ್ನೂ ಹೊತ್ತು ಗಿರಿಯ ಮೇಲೆ ಇಳಿಸಿದನು. ರೋಮಶನು ಆಕಾಶಗಮನದಲ್ಲಿ ಬಂದು ಸೇರಿದನು. ಅಲ್ಲಿ ನರ ನಾರಾಯಣಾಶ್ರಮದಲ್ಲಿ ಸಕಲ ಮುನಿಗಳನ್ನು ಸಂದರ್ಶಿಸಿ ಆ ದಿನವನ್ನು  ಧರ್ಮಜಾದಿಗಳು ಕಳೆದರು.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ