ಶ್ರೀದೇವಿ ಕೆರೆಮನೆ
ಶಿಕ್ಷಕಿಯಾಗಿರುವ ಶ್ರೀದೇವಿ ಕೆರೆಮನೆ ಅವರು ಬರಹಗಾರ್ತಿಯಾಗಿ ಹೆಸರಾಗಿದ್ದಾರೆ.
ಶ್ರೀದೇವಿ ಕೆರೆಮನೆ ಅವರ ಮೂಲ ಊರು ಅಂಕೋಲ. ಪ್ರಸಕ್ತದಲ್ಲಿ ಅವರು ಕಾರವಾರದ ನಿವಾಸಿ. ಏಪ್ರಿಲ್ 6 ಅವರ ಜನ್ಮದಿನ. ಕನ್ನಡ ಎಂ.ಎ, ಇಂಗ್ಲಿಷ್ ಎಂ. ಎ ಮತ್ತು ಬಿ.ಎಡ್ ಅವರ ವಿದ್ಯಾ ಸಾಧನೆಗಳು.
21 ವರ್ಷಗಳಿಂದ ಸಿ ಬರ್ಡ್ ನಿರಾಶ್ರಿತರ ಕಾಲೋನಿಗಳಲ್ಲಿ ಇಂಗ್ಲೀಷ್ ಭಾಷಾ ಶಿಕ್ಷಕಿಯಾಗಿರುವ ಶ್ರೀದೇವಿ, ಪ್ರಸ್ತುತದಲ್ಲಿ ಕಾರವಾರದ ಸರಕಾರಿ ಪ್ರೌಢಶಾಲೆ ಚಿತ್ತಾಕುಲ (ಪುನರ್ವಸತಿ)ದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀದೇವಿ ಅವರ ಕಥೆ, ಕವನ, ಗಜಲ್. ಅಂಕಣ, ಪ್ರಬಂಧ, ವಿಮರ್ಶೆ, ವ್ಯಕ್ತಿ ಚಿತ್ರಣ, ಹಾಗೂ ವೈವಿಧ್ಯಪೂರ್ಣ ಚಿಂತನ ಬರಹಗಳು ನಾಡಿನ ಎಲ್ಲ ನಿಯತಕಾಲಿಕಗಳಲ್ಲಿ ನಿರಂತರ ರಾರಾಜಿಸುತ್ತ ಬಂದಿವೆ.
ಶ್ರೀದೇವಿ ಅವರ ಪ್ರಕಟಿತ ಕವನ ಸಂಕಲನಗಳಲ್ಲಿ ನಾನು ಗೆಲ್ಲುತ್ತೇನೆ, ಮೌನದ ಮಹಾ ಕೋಟೆಯೊಳಗೆ, ಗೆಜ್ಜೆ ಕಟ್ಟದ ಕಾಲಲ್ಲಿ , ಬೈಟೂ ಚಹಾ ಕವನಗಳು, ಮೈ ಮುಚ್ಚಲೊಂದು ತುಂಡು ಬಟ್ಟೆ, ನಗುವಿಗೊಂದು ಧನ್ಯವಾದ, ಆಸೆಯೆಂಬ ಶೂಲದ ಮೇಲೆ ಸೇರಿವೆ. ಗಜಲ್ ಪರಿಧಿಯಲ್ಲಿ 'ಅಲೆಯೊಳಗಿನ ಮೌನ' ಗಜಲ್ ಸಂಕಲನ. ‘ಕಡಲಂಚಿನ ಮೌನ ಧ್ಯಾನ’ ಗಜಲ್ ಸಂಕಲನ, 'ನನ್ನ ದನಿಗೆ ನಿನ್ನ ದನಿಯು' ಗಜಲ್ ಜುಗಲ್ ಸಂಕಲನ, 'ತೀರದ ಧ್ಯಾನ' ಗಜಲ್ ವಿಮರ್ಶಾ ಸಂಕಲನ ಸೇರಿವೆ. ಇವರ ಅಂಕಣ ಬರಹ ಸಂಕಲನಗಳಲ್ಲಿ 'ಪ್ರೀತಿ ಎಂದರೆ ಇದೇನಾ?', 'ಹೆಣ್ತನದ ಆಚೆ-ಈಚೆ', 'ಉರಿವ ಉಡಿ', 'ಮನದಾಳದ ಮಾತು', 'ವರ್ತಮಾನದ ಉಯ್ಯಾಲೆ' ಸೇರಿವೆ. 'ಬಿಕ್ಕೆ ಹಣ್ಣು' ಮತ್ತು 'ಚಿತ್ತ ಚಿತ್ತಾರ' ಇವರ ಕಥಾ ಸಂಕಲನಗಳು. 'ಅಂಗೈಯೊಳಗಿನ ಬೆಳಕು', 'ಮೂರನೆ ಆಯಾಮ' ವಿಮರ್ಶಾ ಸಂಕಲನಗಳು. 'ಗೂಡು ಕಟ್ಟುವ ಸಂಭ್ರಮದಲ್ಲಿ' ಮತ್ತು 'ಕಾಡುವ ಗರ್ಭ' ಪ್ರಬಂಧ ಸಂಕಲನಗಳು. ‘ಕಡಲು ಕಾನನದ ನಡುವೆ’ ಉತ್ತರ ಕನ್ನಡದ ಸಮಗ್ರ ನೋಟ ನೀಡುತ್ತದೆ. 'ಎಲ್ಲೆಗಳ ಮೀರಿ' ಪಾಶ್ಚಾತ್ಯ ಲೇಖಕಿಯರ ಪರಿಚಯ ಮಾಲೆಯಾಗಿದೆ.
ಶ್ರೀದೇವಿ ಕೆರೆಮನೆ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ 'ಶ್ರೀ ವಿಜಯ' ಪ್ರಶಸ್ತಿ, ಪ್ರಜಾವಾಣಿ ಕಾವ್ಯ ಪ್ರಥಮ ಸ್ಥಾನ, ‘ವರ್ತಮಾನದ ಉಯ್ಯಾಲೆ’ಗೆ ಸಾರಾ ಅಬೂಬ್ಕರ ಪ್ರಶಸ್ತಿ, 'ನನ್ನ ದನಿಗೆ ನಿನ್ನ ದನಿಯು' ಸಂಕಲನಕ್ಕೆ ಸುಮನಾ ಸೋಮಶೇಖರ ಸೋಮವಾರಪೇಟೆ ದತ್ತಿ ಪ್ರಶಸ್ತಿ, 'ಬಿಕ್ಕೆಹಣ್ಣು' ಕಥಾ ಸಂಕಲನಕ್ಕೆ ದೇವಾಂಗನಾ ಶಾಸ್ತ್ರಿ ಕಥಾ ಪ್ರಶಸ್ತಿ, 'ಮೈ ಮುಚ್ಚಲೊಂದು ತುಂಡು ಬಟ್ಟೆ' ಕೃತಿಗೆ ಅಮ್ಮ ಪ್ರಶಸ್ತಿ, 'ಅಂಗೈಯೊಳಗಿನ ಬೆಳಕು' ಕೃತಿಗೆ ಶಿವಮೊಗ್ಗದ ಎಂ ಕೆ ಇಂದಿರಾ ಪ್ರಶಸ್ತಿ, 'ಮೈ ಮುಚ್ಚಲೊಂದು ತುಂಡು ಬಟ್ಟೆ' ಕೃತಿಗೆ ಅಂತರಾಷ್ಟ್ರೀಯ ಮಹಿಳಾ ವರ್ಷದ ದತ್ತಿ ಪ್ರಶಸ್ತಿ, 'ಬಿಕ್ಕೆ ಹಣ್ಣು' ಕಥಾ ಸಂಕಲನಕ್ಕೆ ಹೇಮರಾಜ ದತ್ತಿ ಪ್ರಶಸ್ತಿ, 'ಬೈ ಟೂ ಚಹಾ ಕವನಗಳು' ಕೃತಿಗೆ ಅಡ್ವೈಸರ್ ಪತ್ರಿಕಾ ಪ್ರಶಸ್ತಿ , ರಾಜೀವ್ ಗಾಂಧಿ ಸದ್ಭಾವನಾ ಪ್ರಶಸ್ತಿ, 'ಹೆಣ್ತನದ ಆಚೆ ಈಚೆ'ಗೆ ಬಸವರಾಜ ಕಟ್ಟಿಮನಿ ಪ್ರಶಸ್ತಿ, 'ಹೆಣ್ತನದ ಆಚೆ ಈಚೆ'ಗೆ ಬೇಂದ್ರೆ ಯುವ ಗ್ರಂಥ ಪುರಸ್ಕಾರ, 'ನಾನು ಗೆಲ್ಲುತ್ತೇನೆ' ಕವನ ಸಂಕಲನದ ಹಸ್ತಪ್ರತಿಗೆ 'ಶ್ರೀ ಗಂಧ ಹಾರ' ಪ್ರಶಸ್ತಿ, ಹಾಸನದ ಜನ್ನ ಕಾವ್ಯ ಪ್ರಶಸ್ತಿ, 'ಮೌನದ ಮಹಾ ಕೋಟೆಯೊಳಗೆ' ಕೃತಿಗೆ ಮಂಡ್ಯದ ಬಿಎಂಶ್ರಿ ಕಾವ್ಯ ಪ್ರಶಸ್ತಿ, 'ಮೈ ಮುಚ್ಚಲೊಂದು ತುಂಡು ಬಟ್ಟೆ' ಕವನ ಸಂಕಲನಕ್ಕೆ ತುಮಕೂರಿನ ಅವ್ವ ಪ್ರಶಸ್ತಿ, 'ಅಂಗೈಯೊಗಿನ ಬೆಳಕು' ಕೃತಿಗೆ ಮಾತ್ರೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಸಿಂಗಾಪುರ ಕಥಾ ಪ್ರಶಸ್ತಿ , ತೆಲಂಗಾಣ ಸರಕಾರ ಹಾಗೂ ದಕ್ಷಿಣ ಭಾರತ ಗಜಲ್ ಪರಿಷತ್ತು ನೀಡುವ ಗಜಲ್ ರಾಷ್ಟ್ರೀಯ ಪ್ರಶಸ್ತಿ, 'ಆಸೆಯೆಂಬ ಶೂಲದ ಮೇಲೆ' ಕವನ ಸಂಕಲನಕ್ಕೆ ಡಿ. ಎಸ್. ಕರ್ಕಿ ಕಾವ್ಯ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ತ್ರಿವೇಣಿ ದತ್ತಿ ಪ್ರಶಸ್ತಿ, ದಲಿತ ಸಾಹಿತ್ಯ ಪರಿಷತ್ತು ಕೊಡಮಾಡುವ ಗಜಲ್ ಪ್ರಶಸ್ತಿ, 'ಕಡಲು ಕಾನನದ ನಡುವೆ' ಕೃತಿಗೆ
ಉಮಾಶಂಕರ ಪುಸ್ತಕ ಪ್ರಶಸ್ತಿ, ಯು ಆರ್ ಅನಂತಮೂರ್ತಿ ರಾಷ್ಟ್ರೀಯ ಪ್ರಶಸ್ತಿ
ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ಶ್ರೀದೇವಿ ಅವರು ಹಲವಾರು ರಾಜ್ಯ, ಅಂತರಾಜ್ಯ ಕವಿಗೋಷ್ಠಿಯಲ್ಲಿ ಭಾಗಿಯಾಗಿದ್ದು ನೂರಕ್ಕೂ ಹೆಚ್ಚು ಗೋಷ್ಠಿಗಳಲ್ಲಿ ಪ್ರಬಂಧ ಮಂಡನೆ ಮಾಡಿದ್ದಾರೆ. ಮಹಾರಾಷ್ಟ್ರದ ಅಕ್ಕಲಕೋಟೆಯಲ್ಲಿ ನಡೆದ ಹೊರನಾಡು ಕನ್ನಡಿಗರ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, ಹಂಪಿ ಉತ್ಸವದ ಕವಿಗೋಷ್ಠಿಯ ಅಧ್ಯಕ್ಷತೆ, ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, ಕಾರವಾರ ಹಾಗೂ ಅಂಕೋಲಾ ತಾಲೂಕಿನ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ಮುಂತಾದ ಗೌರವಗಳಿಗೆ ಪಾತ್ರರಾಗಿದ್ದಾರೆ.
ಶ್ರೀದೇವಿ ಅವರು ಇಂಗ್ಲೀಷ್ ಭಾಷಾ ಶಿಕ್ಷಕಿಯಾಗಿ 21 ವರ್ಷಗಳಿಂದ ಗ್ರಾಮೀಣ ಭಾಗದ ಸರಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಂಪನ್ಮೂಲ ವ್ಯಕ್ತಿಯಾಗಿ 50 ಕ್ಕೂ ಹೆಚ್ಚು ತರಬೇತಿಯನ್ನು ಜಿಲ್ಲಾ ಹಾಗೂ ತಾಲೂಕಾ ಹಂತದಲ್ಲಿ ನೀಡಿದ್ದಾರೆ. ಶೈಕ್ಷಣಿಕ ಮನೋವಿಜ್ಞಾನದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲೆಯ ಹಲವಾರು ಪ್ರೌಢಶಾಲೆಗಳಲ್ಲಿ ಶೈಕ್ಷಣಿಕ ಮನೋವಿಜ್ಞಾನದ ಘಟಕ ಪ್ರಾರಂಭಿಸಲು ತರಬೇತಿ ನೀಡಿದ್ದಾರೆ. ಶೈಕ್ಷಣಿಕ ಮನೋವಿಜ್ಞಾನದ ಪ್ರಯೋಗಗಳನ್ನು ನಡೆಸುವುದನ್ನು ಪ್ರಾತ್ಯಕ್ಷಿಕೆಗಳ ಮೂಲಕ ಶಿಕ್ಷಕರಿಗೆ ತರಬೇತಿ ನೀಡಿ ಅಣಿಗೊಳಿಸಿದ್ದಾರೆ. ಇವರಿಗೆ 2006ರಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, 2007ರಲ್ಲಿ ಸಾವಿತ್ರಿಬಾಯಿ ಫುಲೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಸಂದಿದೆ. ಕರ್ನಾಟಕ ವಿಶ್ವವಿದ್ಯಾಲಯದ ಬಿ ಎ ಎರಡನೆ ಸೆಮಿಸ್ಟರ್ಗೆ ಇವರ 'ಶಾಲೆ ತಪ್ಪಿಸುವ ಮಕ್ಕಳು' ಅಂಕಣ ಬರಹ ಪಠ್ಯವಾಗಿದೆ. ಮೈಸೂರು ವಿಶ್ವವಿದ್ಯಾಲಯದ ಬಿ ಎ ತೃತಿಯ ಸೆಮಿಸ್ಟರ್ಗೆ 'ನಾನು ಗಂಡಾಗಬೇಕಿತ್ತು' ಕವನ ಪಠ್ಯವಾಗಿದೆ. ಹೊರರಾಜ್ಯಗಳ ವಿಶ್ವವಿದ್ಯಾಲಯಗಳಲ್ಲೂ ಇವರ ಗಜಲ್ ಗಳು ಪಠ್ಯವಾಗಿದೆ. ಶಿವಾಜಿ ವಿಶ್ವವಿದ್ಯಾಲಯ, ಕೊಲ್ಲಾಪುರದ ಬಿ ಎ ಎರಡನೆ ಸೆಮಿಸ್ಟರ್ಗೆ ಹಾಗೂ ಪುಣ್ಯಶ್ಲೋಕ ಅಹಿಲ್ಯಾದೇವಿ ಹೋಳ್ಕರ್ ಸೊಲ್ಲಾಪುರ ವಿವಿ, ಸೊಲ್ಲಾಪುರದ ಹೀಗೆ ಎರಡು ವಿಶ್ವವಿದ್ಯಾಲಯಗಳ ಮೂರು ಕಡೆ ಇವರ ಗಜಲ್ಗಳು ಪಠ್ಯವಾಗಿದೆ. ಅಜಿಂ ಪ್ರೇಂಜಿ ಪೌಂಡೇಶನ್ ನಡೆಸುವ ಪ್ರಬಂಧ ಮಂಡನೆಯಲ್ಲಿ ಸತತ ಮೂರು ವರ್ಷ ಪ್ರಬಂಧ ಮಂಡಿಸಿರುವ ಇವರ ಪ್ರಬಂಧ ಅತ್ಯುತ್ತಮ ಪ್ರಬಂಧವೆಂದು ಮೆಚ್ಚುಗೆ ಗಳಿಸಿದೆ. ಇವರ ಕವಿತೆ ಹಾಗೂ ಗಜಲ್ ಗಳು ತಮಿಳು, ತೆಲುಗು, ಮಲಯಾಳಂ, ಮರಾಠಿ, ಹಿಂದಿ ಭೋಜಪುರಿ ಹಾಗೂ ಇಂಗ್ಲೀಷ್ ಭಾಷೆಗೆ ಅನುವಾದಗೊಂಡಿವೆ. ಇವರು ಸರಕಾರಿ ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷೆಯಾಗಿ ಹಾಗೂ ಸರಕಾರಿ ನೌಕರರ ಜಿಲ್ಲಾ ಸಂಘದ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ಶ್ರೀದೇವಿ ಕೆರೆಮನೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Shreedevi Keremane

ಕಾಮೆಂಟ್ಗಳು