ಎಲ್ಲಿರುವೆ ಕಾಣಿಸದೆ
ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ
ಎಲ್ಲಿರುವೆ ಹೇಳು ನೀ ನಿಜವೆ ನೆರಳೇ?
ಮಂಜು ನೇಯುವ ಸಂಜೆಗನಸಿನಂತೆ
ಸಂಜೆ ಬಿಸಿಲಿನ ಮಳೆಯ ಮನಸಿನಂತೆ
ನಿಂತ ಎದೆಗೊಳದಲ್ಲಿ ಚಿಂತೆ ಬರೆಯಲು ಯಾರೊ
ಎಸೆದ ಕೋಗಿಲೆಯ ದನಿಹರಳಿನಂತೆ-
ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ?
ಬೆಳಗ ತೆರೆಯುವ ಇರುಳ ಅಂಗಳದೊಳೋ
ತಂಪು ಹಾಸುವ ಬಿಳಿಯ ತಿಂಗಳಿನೊಳೋ
ಲೋಕಾಂತರದ ಮೂಲ ಸ್ಮರಣೆ ಮರೆಸಲು ಮಾಯೆ
ಹಾಡಿ ಕುಣಿಸುವ ಮೋಹರಿಂಗಣದೊಳೋ-
ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ?
ನಿನಗೆಂದೆ ನೆಲ ಬಾನು ಕೂಗಿ ಕರೆದೆ
ಹೊಲ ಕಾನು ಬನವೆಲ್ಲ ತಿರುಗಿ ನವೆದೆ
ಓಡಿಬಂದೆನು ಇಗೋ ಪರಿವೆಯಿರದೆ
ಓಡಿ ಬರುವಂತೆ ನದಿ ಕಡಲ ಕರೆಗೆ-
ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ?
ಸಾಹಿತ್ಯ: ಎನ್. ಎಸ್. ಲಕ್ಷ್ಮೀನಾರಾಯಣ ಭಟ್
ಸಂಗೀತ: ಎಚ್. ಕೆ. ನಾರಾಯಣ
ಗಾಯನ: ರತ್ನಮಾಲಾ ಪ್ರಕಾಶ್ Ratnamala Prakash
ಇಲ್ಲಿ ಕೇಳಿ:https://youtu.be/o3nDt66dJpI
ಕಾಮೆಂಟ್ಗಳು