ಅರಿಯಾಕುಡಿ
ಅರಿಯಾಕುಡಿ ರಾಮಾನುಜ ಅಯ್ಯಂಗಾರ್
ಅರಿಯಾಕುಡಿ ಎಂದೇ ಜನಪ್ರಿಯರಾದ ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ಕರ್ನಾಟಕ ಶಾಸ್ತ್ರೀಯ ಸಂಗೀತಲೋಕದ ಮಹಾನುಭಾವರಲ್ಲಿ ಒಬ್ಬರು. ಸಂಗೀತದಲ್ಲಿ ಅವರು ಸ್ಥಾಪಿಸಿದ ಸತ್ಸಂಪ್ರದಾಯಕ್ಕೆ 'ಅರಿಯಾಕುಡಿ ಸಂಪ್ರದಾಯ' ಎಂಬ ಗೌರವ ಸ್ಥಾನವಿದೆ. ಇವರು ಸಂಗೀತ ಕಚೇರಿಗಳ ಸ್ವರೂಪಕ್ಕೆ ಹೊಸತನ ತಂದು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಜನಪ್ರಿಯತೆ ತಂದವರೆಂದು ಭಾವಿಸಲಾಗಿದೆ.
ರಾಮಾನುಜ ಅಯ್ಯಂಗಾರ್ ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಅರಿಯಾಕುಡಿ ಎಂಬಲ್ಲಿ 1890ರ ಮೇ 19ರಂದು ಜನಿಸಿದರು. ಆರಂಭಿಕ ವರ್ಷಗಳಲ್ಲಿ ಪುದುಕೋಟೈ ಮಲಯಪ್ಪ ಅಯ್ಯರ್ ಮತ್ತು ನಾಮಕ್ಕಲ್ ನರಸಿಂಹ ಅಯ್ಯಂಗಾರ್ ಅವರ ಅಡಿಯಲ್ಲಿ ಸಂಗೀತಾಭ್ಯಾಸ ಮಾಡಿದರು. ನಂತರ ಪಟ್ನಂ ಪಟ್ನಮ್ ಸುಬ್ರಮಣ್ಯ ಅಯ್ಯರ್ ಅವರ ಹಿರಿಯ ಶಿಷ್ಯರಾಗಿದ್ದ ಪೂಚಿ ಶ್ರೀನಿವಾಸ ಅಯ್ಯಂಗಾರ್ ಅವರ ಅಡಿಯಲ್ಲಿ ಹಲವಾರು ವರ್ಷಗಳ ಕಾಲ ಅಧ್ಯಯನ ಮಾಡಿದರು. ಪಟ್ನಂ ಸುಬ್ರಹ್ಮಣ್ಯ ಅಯ್ಯರ್ ಅವರ ಮತ್ತೊಬ್ಬ ಶಿಷ್ಯರಾಗಿದ್ದ ಮೈಸೂರು ವಾಸುದೇವಾಚಾರ್ಯರು, ತಮ್ಮ ಹಿರಿಯ ಸಹಪಾಠಿಗಳಾಗಿದ್ದ ಪೂಚಿ ಅವರ ಬಳಿ ಕಲಿಯುತ್ತಿದ್ದ ಬಾಲಕ ರಾಮಾನುಜ ಅಯ್ಯಂಗಾರ್ ಅನ್ನು ನೋಡಿ "ಈ ಹುಡುಗ ಮುಂದೆ ಮಹಾನ್ ಸಂಗೀತಗಾರನಾಗುತ್ತಾನೆ" ಎಂದು ಭವಿಷ್ಯ ನುಡಿದಿದ್ದರು.
ಅರಿಯಾಕುಡಿ ರಾಮಾನುಜ ಅಯ್ಯಂಗಾರ್ 1918ರಲ್ಲಿ ತ್ಯಾಗರಾಜ ಆರಾಧನೆಯಲ್ಲಿ ಹಾಡುವ ಮೂಲಕ ಗಾಯಕರಾಗಿ ಪಾದಾರ್ಪಣೆ ಮಾಡಿದರು. ಕರ್ನಾಟಕ ಸಂಗೀತದ ದಿಗ್ಗಜರಾದ ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಹೀಗೆ ಹೇಳುತ್ತಿದ್ದರು: "ನಾನು ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ಅವರಿಂದ ಅಪಾರವಾಗಿ ಪ್ರಭಾವಿತನಾಗಿದ್ದೇನೆ. ನನಗೆ ಇನ್ನೊಂದು ಜನ್ಮ ಬೇಡ. ಹಾಗೇನಾದರೂ ಇನ್ನೊಂದು ಜನ್ಮವೇನಾದರೂ ಇದ್ದರೆ, ನಾನು ರಾಮಾನುಜ ಅಯ್ಯಂಗಾರ್ ಅವರಂತೆ ಹಾಡಲು ಇಚ್ಛಿಸುತ್ತೇನೆ ". ಜಿಎನ್ಬಿ ಅವರಿಗೂ ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ತಮಗೆ ಆರಾಧ್ಯ ದೈವದಂತೆ ಎನ್ನುತ್ತಿದ್ದರು.
ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ಮತ್ತು ಮೃದಂಗಂ ವಿದ್ವಾನ್ ಪಾಲ್ಘಾಟ್ ಮಣಿ ಅಯ್ಯರ್ ಸಂಗೀತ ಕಚೇರಿಗಳಲ್ಲಿ ಅದ್ಭುತದ ಜೋಡಿ. ಇಬ್ಬರೂ ಪರಸ್ಪರರ ಕುರಿತು ಆಪ್ತ ಗೌರವಭಾವ ಹೊಂದಿದ್ದರು. ಪಾಲ್ಘಾಟ್ ಮಣಿ ಅಯ್ಯರ್ ಅವರು "ಅಣ್ಣಾ ( ಚೆಂಬೈ ವೈದ್ಯನಾಥ ಭಾಗವತರ್ ) ಮತ್ತು ಅಯ್ಯಂಗಾರ್ವಾಳ್ (ಅರಿಯಕುಡಿ) ನನ್ನ ಎರಡು ಕಣ್ಣುಗಳಂತೆ" ಎಂದು ಭಾವುಕರಾಗುತ್ತಿದ್ದರು.
ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ಅವರು ಮೈಸೂರು ಸಂಸ್ಥಾನವೂ ಸೇರಿದಂತೆ ಎಲ್ಲೆಡೆ ಗೌರವಾನ್ವಿತರಾಗಿದ್ದರು.. ಮೈಸೂರು ವಾಸುದೇವಾಚಾರ್ಯರು ಮತ್ತು ಟೈಗರ್ ವರದಾಚಾರ್ಯರೊಂದಿಗೆ ಅವರಿಗೆ ಭಕ್ತಿಭಾವವುಳ್ಳ ಸ್ನೇಹವಿತ್ತು. ಅರಿಯಾಕುಡಿ ಮತ್ತು ಪಿಟೀಲು ಚೌಡಯ್ಯನವರಿಗೂ ಕೆಲವು ಕಾಲ ಭಿನ್ನಾಭಿಪ್ರಾಯಗಳಿದ್ದಾಗ್ಯೂ ಮುಂದೆ ಆತ್ಮೀಯರಾದರು.
ಮೈಸೂರು ದರ್ಬಾರ್ನಲ್ಲಿ ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ಅವರಿಗೆ ಗಾಯಕ ಶಿಖಾಮಣಿ ಗೌರವವನ್ನು ನೀಡಲಾಗಿತ್ತು. 1941ರಲ್ಲಿ ಅವರಿಗೆ ಆಸ್ಥಾನ ವಿದ್ವಾನ್ ಗೌರವ ಸಂದಿತು. ಅಯ್ಯಂಗಾರ್ಯರಿಗೆ 1954ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ 1958ರಲ್ಲಿ ಭಾರತ ಸರ್ಕಾರದ ಪದ್ಮಭೂಷಣ ಮುಂತಾದ ಅನೇಕ ಗೌರವಗಳು ಸಂದಿದ್ದವು.
ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ಅವರ ಪ್ರಸಿದ್ಧ ಶಿಷ್ಯರಲ್ಲಿ ಕೆ.ವಿ.ನಾರಾಯಣಸ್ವಾಮಿ, ಬಿ.ರಾಜಂ ಅಯ್ಯರ್, ಅಲೆಪೆ ವೆಂಕಟೇಶನ್, ಮಧುರೈ ಎನ್. ಕೃಷ್ಣನ್ ಮತ್ತು ಅಂಬಿ ಭಾಗವತರ್ ಮುಂತಾದ ಮಹಾನ್ ಸಂಗೀತಗಾರರಿದ್ದಾರೆ. ಎಂ.ಎಸ್.ಸುಬ್ಬುಲಕ್ಷ್ಮಿ ಅವರೂ ಅಯ್ಯಂಗಾರ್ ಅವರಲ್ಲಿ ಸಂವಹನ ನಡೆಸುತ್ತ ತಮ್ಮ ಸಂಗೀತಾಸಕ್ತಿಗಳಿಗೆ ವಿಶಾಲ ವ್ಯಾಪ್ತಿ ಕಂಡುಕೊಂಡಿದ್ದರು.
ಮಹಾನ್ ಸಂಗೀತಗಾರರಾದ ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ಅವರು 1967ರ ಜನವರಿ 23ರಂದು ನಿಧನರಾದರು.
On the birth anniversary of great Carnatic classic vocalist Ariyakudi Ramanuja Iyengar
ಕಾಮೆಂಟ್ಗಳು