ಎಸ್. ಕೃಷ್ಣಮೂರ್ತಿ
ಸಂಗೀತಕಲಾ ರತ್ನ ಎಸ್.ಕೃಷ್ಣಮೂರ್ತಿ ಅವರು ಕರ್ನಾಟಕ ಸಂಗೀತಕ್ಕೆ ನೀಡಿದ ಕೊಡುಗೆ ಅಪಾರ. ಅವರು ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯರ ಹಿರಿಯ ಮೊಮ್ಮಗ. ಅವರ ತಂದೆ ಸುಬ್ರಹ್ಮಣ್ಯಂ ಮತ್ತು ತಾಯಿ ಪದ್ಮಾವತಮ್ಮ. ಇಂದು ಅವರ ಸಂಸ್ಮರಣೆ ದಿನ.
ಕೃಷ್ಣಮೂರ್ತಿ ಅವರು 1922ರ ಜೂನ್ 21ರಂದು ಜನಿಸಿದರು. ಕೃಷ್ಣಮೂರ್ತಿಯವರದು ಬಾಲ ಪ್ರತಿಭೆ. ತಾತನ ಪರಂಪರೆಯ ಸಮರ್ಥ ವಾರಸುದಾರರಾದ ಅವರು ತಾತನ ಪ್ರಮುಖ ಶಿಷ್ಯರಾದ ಎನ್.ಚನ್ನಕೇಶವಯ್ಯನವರಲ್ಲಿ ಪ್ರಾಥಮಿಕ ಪಾಠವನ್ನು ಪಡೆದರು. ಮುಂದೆ ತಾತನವರಲ್ಲಿಯೇ ಉನ್ನತ ಶಿಕ್ಷಣ. ಒಂಬತ್ತು ವರ್ಷದ ಬಾಲಕನಾಗಿದ್ದಾಗಲೇ ಮೈಸೂರಿನ ಸಂತೇಪೇಟೆ ಶ್ರೀರಾಮಮಂದಿರದಲ್ಲಿ ಪ್ರಪ್ರಥಮ ಗಾಯನ ಕಛೇರಿ. ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ ಜಲತರಂಗ ವಾದನದ ಅಭ್ಯಾಸ ಆರಂಭ. ಕಿರಿಯ ಸೋದರ ರಾಜಾರಾಂ ಅವರೊಂದಿಗೆ ಜೋಡಿ ಜಲತರಂಗ ಕಛೇರಿಗಳು. ನಾಲ್ವಡಿ ಕೃಷ್ಣರಾಜ ಒಡೆಯರ ಸಮ್ಮುಖದಲ್ಲಿ ಕಛೇರಿ ಮತ್ತು ಮಹಾರಾಜರ ಅಪಾರ ಮೆಚ್ಚುಗೆ. ಮೈಸೂರಿನ ವಿದ್ವದ್ಘೋಷ್ಟಿಗೆ ಸೇರ್ಪಡೆ ಆಯಿತು. ಅರಮನೆಯಲ್ಲಿ ಪಾಶ್ಚಾತ್ಯ ಸಂಗೀತದ ಶಿಕ್ಷಣವೂ ನಡೆಯಿತು.
ಸಂಗೀತದ ಜೊತೆಗೆ ಓದಿನಲ್ಲಿ ಕೂಡ ಸದಾ ಮುಂದಿದ್ದ ಕೃಷ್ಣಮೂರ್ತಿಯವರು 1943ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥ ಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದರು. ಮಹಾರಾಜರ ನಿರ್ಧಾರದಂತೆ ಇವರಿಗಾಗಿಯೇ ಮೈಸೂರು ಆಕಾಶವಾಣಿಯಲ್ಲಿ ಹುದ್ದೆಯೊಂದು ನಿರ್ಮಾಣಗೊಂಡಿತ್ತು. ಮುಂದೆ 33 ವರ್ಷಗಳ ಕಾಲ ಆಕಾಶ ವಾಣಿಯಲ್ಲಿ ಸೇವೆ ಸಲ್ಲಿಸಿದ ಅವರು 1980ರಲ್ಲಿ ಧಾರವಾಡ ಆಕಾಶವಾಣಿ ಕೇಂದ್ರದ ನಿಲಯ ನಿರ್ದೇಶಕರಾಗಿ ನಿವೃತ್ತರಾದರು.
ಆಕಾಶವಾಣಿ ಸೇವೆಯಲ್ಲಿ ಮಹತ್ವದ ಕಾರ್ಯಕ್ರಮಗಳನ್ನು ಕೃಷ್ಣಮೂರ್ತಿಯವರು ರೂಪಿಸಿದರು. ಅವರ ಒಂಬತ್ತು ಗೀತ ನಾಟಕಗಳು ರಾಷ್ಟ್ರೀಯ ಪುರಸ್ಕಾರವನ್ನು ಪಡೆದವು. ಅವುಗಳಲ್ಲಿ 1980 ಒಂದೇ ವರ್ಷದಲ್ಲಿ ಮೂರು ಗೀತನಾಟಕಗಳಿಗೆ ಪ್ರಶಸ್ತಿ ಬಂದಿತು. ಇದುವರೆಗೂ ಇದು ದಾಖಲೆಯಾಗಿಯೇ ಉಳಿದಿದೆ. ಗಣರಾಜ್ಯೋತ್ಸವದ ದಿನ ರಾಷ್ಟ್ರೀಯ ವಾದ್ಯಗೋಷ್ಟಿಯನ್ನು ನಿರ್ವಹಿಸುವ ಅವಕಾಶ ಇವರಿಗೆ ಸಿಕ್ಕಿತ್ತು. ಇದುವರೆಗೂ ಕರ್ನಾಟಕದಿಂದ ಈ ಗೌರವ ಪಡೆದವರು ಅವರೊಬ್ಬರೇ. 1985ರಲ್ಲಿ ಅವರು ಲಂಡನ್ ನಲ್ಲಿ ಸಂಗೀತ ಕಾರ್ಯಗಾರ ನಡೆಸಿ ಕೊಡುವ ವಿಶೇಷ ಆಹ್ವಾನವನ್ನು ಪಡೆದಿದ್ದರು. ಸ್ವರ ಪ್ರಸ್ತಾರಗಳೊಂದಿಗೆ ಜಯಚಾಮರಾಜೇಂದ್ರ ಒಡೆಯರ 94 ರಚನೆಗಳನ್ನು ಸಿದ್ದ ಪಡಿಸಿದ ಹೆಗ್ಗಳಿಕೆ ಅವರದು.
ಕೃಷ್ಣಮೂರ್ತಿ ಅವರು ಆಕಾಶವಾಣಿ ಸೇವೆಯಿಂದ ನಿವೃತ್ತರಾದ ನಂತರ ಭಾರತೀಯ ವಿದ್ಯಾ ಭವನದ ಬೆಂಗಳೂರು ಕೇಂದ್ರದ ಯೋಜನಾ ನಿರ್ದೇಶಕರಾಗಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಈ ವೇಳೆಯಲ್ಲಿ ಅವರು ನೀಡಿದ ಕೊಡುಗೆ ಅಪಾರ. ಅವುಗಳಲ್ಲಿ ಬಹಳ ಮುಖ್ಯವಾದದ್ದು ಭಾರತೀಯ ಸಂಸ್ಕೃತಿಯ ವಿವಿಧ ಮುಖಗಳ ಮೇಲೆ ಬೆಳಕು ಚೆಲ್ಲುವ 52 ಧ್ವನಿಮುದ್ರಿಕೆಗಳನ್ನು ರೂಪಿಸಿದ್ದು. ಇದು ಮಹತ್ತರವಾದ ಸಾಂಸ್ಕೃತಿಕ ದಾಖಲೆಯಾಗಿದೆ. ಶಾರದಾ ಕಲಾಕೇಂದ್ರದ ಜೊತೆ ಸೇರಿ ವಾಸುದೇವಾಚಾರ್ಯರ ಎಲ್ಲಾ ರಚನೆಗಳನ್ನು 21 ಧ್ವನಿಮುದ್ರಿಕೆಗಳು ಮತ್ತು 21 ಪುಸ್ತಕಗಳ ರೂಪದಲ್ಲಿ ಹೊರ ತಂದಿದ್ದಾರೆ. ಇವರ ‘ವಾಗ್ಗೇಯಕಾರ ವಾಸುದೇವಾಚಾರ್ಯ’ ಕೃತಿಗೆ ಕರ್ನಾಟಕದ ನೃತ್ಯ ಅಕಾಡಮಿ ಗೌರವ ದೊರಕಿದೆ. ಬೆಂಗಳೂರು ಗಾಯನ ಸಮಾಜವು ತನ್ನ 31ನೆಯ ಸಂಗೀತ ಸಮ್ಮೇಳನದ ಅಧ್ಯಕ್ಷತೆಗೆ ಇವರನ್ನು ಆಯ್ಕೆ ಮಾಡಿತ್ತು. (1999) ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯು ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿತು (1996) . ವಾಸುದೇವಾಚಾರ್ಯರ ‘ನಾ ಕಂಡ ಕಲಾವಿದರು’ ಕೃತಿಯನ್ನು ಇವರು ಇಂಗ್ಲೀಷ್ ಗೆ ಅನುವಾದ ಮಾಡಿದ್ದಾರೆ (With Masters of Melody) ಸಂಗೀತ ಸರಿತಾ ಅಲ್ಲದೆ ಇವರ ಪ್ರಮುಖ ಕೃತಿಗಳೆಂದರೆ ರಸಋಷಿ ತ್ಯಾಗರಾಜ, ಸಂಗೀತ ಕಲಾನಿಧಿ, ಸಂಗೀತ ಸಮಯ, ಟಿ.ಚೌಡಯ್ಯ, ವೀಣೆ ವೆಂಕಟಗಿರಿಯಪ್ಪ ಮೊದಲಾದವು.
ವೀಣೆ ದೊರೆಸ್ವಾಮಿ ಅಯ್ಯಂಗಾರರ ಜೊತೆಗೆ ‘ಸುಬ್ಬಾಶಾಸ್ತ್ರಿ’ ಚಿತ್ರಕ್ಕೆ ಸಂಗೀತ ನೀಡಿದ ಕೃಷ್ಣಮೂರ್ತಿ ಅವರು ಎಂ.ವಿ.ಕೃಷ್ಣಸ್ವಾಮಿಯವರು ರೂಪಿಸಿದ ಹಲವು ಸಾಕ್ಷ್ಯಚಿತ್ರಗಳಿಗೂ ಸಂಗೀತ ನೀಡಿದ್ದಾರೆ. ಕೃಷ್ಣಮೂರ್ತಿಗಳ ಮಡದಿ ದೇವಕಿ ಮೂರ್ತಿ ಕೂಡ ಸಂಗೀತಾಸಕ್ತರು ಮತ್ತು ಕಾದಂಬರಿಕಾರರು. ಅವರ ‘ಉಪಾಸನೆ’ ಕಾದಂಬರಿ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದಲ್ಲಿ ಚಲನಚಿತ್ರವಾಗಿ ಅಪಾರ ಜನಪ್ರಿಯತೆಯನ್ನು ಪಡೆದು ಕೊಂಡಿತು. ಅವರ ಮಗಳು ಕುಸುಮ ಕೂಡ ಸಂಗೀತ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ.
ಎಸ್.ಕೃಷ್ಣಮೂರ್ತಿಯವರು ನಮ್ಮನ್ನು ಅಗಲಿದ್ದು 2015ರ ಡಿಸಂಬರ್ 5ರಂದು. ಸಂಗೀತ ಕ್ಷೇತ್ರಕ್ಕೆ ಅದರಲ್ಲಿಯೂ ಕರ್ನಾಟಕಿ ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ.
ಮಾಹಿತಿ ಕೃಪೆ: ಎನ್.ಎಸ್.ಶ್ರೀಧರ ಮೂರ್ತಿ Sreedhara Murthy
Sangeetha Kalaratna S. Krishhnamurthy
ಕಾಮೆಂಟ್ಗಳು