ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಜಯಶ್ರೀ ನಟರಾಜ್


 ವಿಜಯಶ್ರೀ ನಟರಾಜ್ 


ವಿಜಯಶ್ರೀ ನಟರಾಜ್ ನಮ್ಮ ನಡುವಿರುವ ಉತ್ತಮ ಚಿತ್ರಕಲಾವಿದೆ ಮತ್ತು ಸುಲಲಿತ ಕನ್ನಡ ಬರಹಗಾರ್ತಿ. 

ಜೂನ್ 21  ವಿಜಯಶ್ರೀ ಅವರ ಹುಟ್ಟುಹಬ್ಬ. 
ಅವರು ಹುಟ್ಟಿ ಬೆಳೆದಿದ್ದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಾನುತೋಟ ಎಂಬ ಹಳ್ಳಿಯಲ್ಲಿ.  ತಂದೆ ಶೇಷಗಿರಿಯಪ್ಪನವರು. ತಾಯಿ ನಾಗವೇಣಿ.   ಪ್ರಾಥಮಿಕ ವಿದ್ಯಾಭ್ಯಾಸ ಮರಹಾನುಕುಳಿ   ಮತ್ತು ಹಂಸಗಾರಿನಲ್ಲಿ ನಡೆಯಿತು. ಸಾಗರದಲ್ಲಿ ಶಿವಲಿಂಗಪ್ಪ ಹೈಸ್ಕೂಲಿನಲ್ಲಿ ಓದಿ, ಮುಂದೆ ಅಲ್ಲಿನ ಲಾಲ್ ಬಹಾದ್ದೂರ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದರು. ಮುಂದೆ  ಉದ್ಯಮಿ ಕೆ. ಎಸ್. ನಟರಾಜ್ ಅವರೊಂದಿಗೆ  ವಿವಾಹವಾಯಿತು. ಮಗಳು  ಐಶ್ವರ್ಯ.  ಮಗ  ಶಿಶಿರ.   ಮಕ್ಕಳು ಹುಟ್ಟಿದ ನಂತರದಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಮನಃಶಾಸ್ತ್ರದಲ್ಲಿ  ಸ್ನಾತಕೋತ್ತರ ಪದವಿ ಪಡೆದರು. 

ವಿಜಯಶ್ರೀ ಅವರಿಗೆ ಬಾಲ್ಯದಿಂದಲೂ ಚಿತ್ರ ಬಿಡಿಸುವುದರಲ್ಲಿ ಅಪಾರ ಆಸಕ್ತಿ. ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಸೂರ್ಯನಾರಾಯಣ ನವಿಲೆಕರ್ ಅವರು ಸ್ವಯಂ ಚಿತ್ರಕಾರರಾಗಿದ್ದು ಬಾಲಕಿ ವಿಜಯಶ್ರೀಯಲ್ಲಿದ್ದ ಚಿತ್ರ ಕಲೆಯ ಆಸಕ್ತಿಯನ್ನು ಅಂದಿನ ದಿನದಲ್ಲೇ ಗುರುತಿಸಿ ಮೆಚ್ಚಿ ಪ್ರೇರಿಸಿದ್ದರು. ತಂದೆ ಕಾಷ್ಠ   ಶಿಲ್ಪಗಳನ್ನು ಮಾಡುತ್ತಿದ್ದರು. ತಾಯಿ ಕೂಡಾ ಕರಕುಶಲಗಾರ್ತಿ. ಆದರೆ ಹಳ್ಳಿಯ ಪರಿಸರದಲ್ಲಿ ಸೂಕ್ತ ಮಾರ್ಗದರ್ಶನದ ಕೊರತೆಯಿಂದ   ವಿಜಯಶ್ರೀ ಅವರಿಗೆ ಹೆಚ್ಚಿನ ಚಿತ್ರಕಲಾಭ್ಯಾಸ ಸಾಧ್ಯವಾಗಲಿಲ್ಲ. ಆದರೆ ಮಲೆನಾಡಿನ ಪರಿಸರವೇ ಅವರಿಗೆ ಗುರುವಾಗಿತ್ತು. ತಂದೆ ತಂದು ಕೊಡುತ್ತಿದ್ದ ಡ್ರಾಯಿಂಗ್ ಪುಸ್ತಕದ ಒಂದಿಂಚೂ ಜಾಗ ಬಿಡದೆ ತರ ತರದ ಚಿತ್ರಗಳಿಂದ ತುಂಬಿಸುತ್ತಿದ್ದರು. ಗೆಳತಿಯರ ನೋಟ್ಸಿನ ಮೊದಲ ಪುಟ, ಕೊನೆಯ ಪುಟ ಎಲ್ಲದರ ಮೇಲೆ ಇವರ ಕಲಾವೈಭವ ಶೋಭಿಸುತ್ತಿತ್ತು. 

ವಿವಾಹದ ನಂತರ ಬೆಂಗಳೂರಿಗೆ ಬಂದ ವಿಜಯಶ್ರೀ ಅವರಿಗೆ ಚಿತ್ರಗಾರಿಕೆಯಲ್ಲಿನ ಆಸಕ್ತಿ ಅಂತರಂಗದಲ್ಲಿ ಹುದುಗಿತ್ತಾದರೂ ಅದಕ್ಕೆ ಬೆಳಕು ಕಾಣಿಸುವುದರ ಸಾಧ್ಯತೆಗಳು ಕಂಡುಬಂದಿರಲಿಲ್ಲ.  ಮನಸ್ಸಿನಲ್ಲಿ ಆಶಯವಿದ್ದರೆ ಮಾರ್ಗ ತಾನೇ ತೆರೆದುಕೊಳ್ಳುತ್ತದೆ ಎಂಬುದು ವಿಜಯಶ್ರೀ ಅವರ ವಿಚಾರದಲ್ಲೂ ಸುಳ್ಳಲ್ಲ.

ಸುಮಾರು 2008ರ ವರ್ಷದ ವೇಳೆಗೆ ವಿಜಯಶ್ರೀ ಬ್ಲಾಗ್ ಲೋಕವನ್ನು ಪ್ರವೇಶಿಸಿದರು.   ಉತ್ತಮ ನಿರೂಪಣಾ ಕುಶಲತೆಯುಳ್ಳ ವಿಜಯಶ್ರೀ ಅವರ ಬರಹಗಳು ಗಣನೀಯವಾಗಿ ಓದುಗರ ಪ್ರತಿಕ್ರಿಯೆ ಗಳಿಸುತ್ತಾ ಬಂದವು. 

ಮುಂದೆ ವಿಜಯಶ್ರೀ ಅವರು ಫೇಸ್ ಬುಕ್ ಪ್ರವೇಶಿಸಿದರು.  ಇಲ್ಲಿ ತಾವು ಹಿಂದೆ ರಚಿಸಿದ ಚಿತ್ರಗಳನ್ನು ಹಂಚಿಕೊಳ್ಳುತ್ತಾ ಬಂದಾಗ ಅನೇಕರು ಮೆಚ್ಚಿ ಪ್ರತಿಕ್ರಿಯೆ ನೀಡಲಾರಂಭಿಸಿದರು. ಹೀಗೆ ವಿಜಯಶ್ರೀ ಅವರಲ್ಲಿ ಗುಪ್ತಗಾಮಿನಿಯಾಗಿದ್ದ ಕಲೆ ಮತ್ತೆ ಹೊರ ಹರಿಯಲು ಅನುವುಗೊಂಡಿತು. ತಮ್ಮ ಆಪ್ತ ಗೆಳತಿಯರ ಫೋಟೋ ಸ್ಕೆಚ್ ಮಾಡಿದಾಗ ಅವರಿಂದ ಸಂತಸ ತುಂಬಿದ ಮೆಚ್ಚುಗೆಗಳು ಮೂಡಲಾರಂಭಿಸಿದವು.   ಆಗ ನಿಧಾನಕ್ಕೆ ವಿಜಯಶ್ರೀ ಅವರಲ್ಲಿ ಪುನಃ ಚಿತ್ರಕಲೆ ಕಲಿಕೆ ಮುಂದುವರೆಸಬೇಕೆಂಬ ಅಭಿಲಾಷೆ  ತೀವ್ರಗೊಂಡಿತು.  

ಚಿತ್ರಕಲಾ ಪರಿಷತ್ತಿನಲ್ಲಿ ತಮ್ಮಂತೆ ಕಲಿಯಲು ಆಸಕ್ತಿ ಇರುವವರಿಗಾಗಿಯೇ ಚಿತ್ರಕಲಾ ಶಿಬಿರಗಳನ್ನು ನಡೆಸುತ್ತಾರೆಂದು ವಿಜಯಶ್ರೀ ಅವರಿಗೆ ತಿಳಿದುಬಂತು.     ಹೀಗೆ 2013ರ ಜುಲೈ ತಿಂಗಳಿನಲ್ಲಿ ಆರು ತಿಂಗಳ ಕೋರ್ಸ್ಗೆ ಸೇರಿಕೊಂಡರು. ಅಲ್ಲಿ ಇವರ ಕಲೆ ವೃತ್ತಿಪರವಾಗಿ ಪೋಷಣೆಗೊಂಡಿತು. ಇದೇ ಪ್ರೇರಣೆಯ ಗುಂಗಿನಲ್ಲಿ ಭಾರತೀಯ ವಿದ್ಯಾ ಭವನದಲ್ಲಿ  ಅಡ್ವಾನ್ಸ್ಡ್ ಕೋರ್ಸ್ ಸಹಾ  ಮಾಡಿಕೊಂಡರು.  ನಂತರದಲ್ಲಿ ಕೇರಳದ ಕಲಾ ಗುರು ಶ್ರೀ ಎಬಿ. ಎನ್. ಜೋಸೆಫ್ ಅವರ ಅನೇಕ ಕಾರ್ಯಾಗಾರಗಳಲ್ಲೂ ಭಾಗವಹಿಸಿ  ಕಲೆಯ ಬಗ್ಗೆ ಮತ್ತಷ್ಟು  ಅರಿವು ಮೂಡಿಸಿಕೊಂಡರು. 

ಮುಂದೆ ವಿಜಯಶ್ರೀ ಅವರು ಕಲಾವಿದರ ಸಮೂಹ ಕಲಾಪ್ರದರ್ಶನಗಳಲ್ಲಿ  ಪಾಲ್ಗೊಳುತ್ತಾ ಬಂದರು. 2014ರಿಂದ ಮೊದಲ್ಗೊಂಡಂತೆ ಕಲಾವಿದೆಯರಿಗಾಗಿ ನಡೆಯುವ  'ಆಕಾಂಕ್ಷಾ’ದ ಅನೇಕ ಅವತರಣಿಕೆಗಳಲ್ಲಿ ಇವರ ಕೃತಿಗಳು ಮೆಚ್ಚುಗೆ ಗಳಿಸಿದವು.  ಹತ್ತು ದಿನಗಳ ಕಾಲ ನಡೆದ 50 ಕಲಾವಿದರ 'ಶೇಡ್ಸ್ ಆಫ್ ಬ್ಲ್ಯಾಕ್ ಅಂಡ್' ಕಲಾಪ್ರದರ್ಶನ,   ರೇವ್ಸ್ ಗ್ಯಾಲರಿಯಲ್ಲಿ ಮತ್ತು ಫೇರ್ ಫೀಲ್ಡ್ ಮ್ಯಾರಿಯೆಟ್ ಹೋಟೆಲಿನಲ್ಲಿ ನಡೆದ ಸಮೂಹ ಕಲಾ ಪ್ರದರ್ಶನಗಳಲ್ಲೂ ವಿಜಯಶ್ರೀ ಅವರು ಭಾಗವಹಿಸಿದರು.  2016ರ ಅಕ್ಟೋಬರ್ 12ರಿಂದ ರಿಂದ 16ರ ವರೆಗೆ ವಿಜಯಶ್ರೀ ಅವರ ''ಚಿತ್ತಾರ'' ಕನಸುಗಳೊಂದಿಗೆ ಪ್ರಯೋಗ,  ಏಕವ್ಯಕ್ತಿ ಚಿತ್ರ ಕಲಾ ಪ್ರದರ್ಶನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಜರುಗಿ ಉತ್ತಮ ಪ್ರತಿಕ್ರಿಯೆ ಗಳಿಸಿತು. ನಾಡಿನ  ಎಲ್ಲ ಪ್ರಸಿದ್ಧ ಸುದ್ಧಿ ಮಾಧ್ಯಮಗಳು ಈ ಕುರಿತು ವಿಶೇಷ ವರದಿ ಮಾಡಿದವು.  ಹಿರಿಯ ಕಲಾವಿದರನೇಕರು ಭೇಟಿ ಕೊಟ್ಟು  ಪ್ರೋತ್ಸಾಹಯುತ ಮೆಚ್ಚುಗೆಗಳನ್ನು ವರ್ಷಿಸಿದರು.. 

ವಿಜಯಶ್ರೀ ಅವರು ಪ್ರಜಾವಾಣಿ, ಉತ್ಥಾನ, ವಿಶ್ವವಾಣಿ, ಹೊಸ ದಿಗಂತ ಮುಂತಾದ  ನಿಯತಕಾಲಿಕಗಳಲ್ಲಿ 
ಕಥೆಗಳಿಗೆ ಚಿತ್ರ ರಚಿಸುತ್ತ ಬಂದಿದ್ದಾರೆ.

ವಿಜಯಶ್ರೀ ಅವರಿಗೆ ಚಿತ್ರರಚನೆ ಧ್ಯಾನದಂತೆ. ಅವರಿಗೆ ಅದೊಂದು ತಪಸ್ಸು.  ಗೆರೆಗಳೊಂದಿಗೆ,  ಬಣ್ಣದೊಂದಿಗೆ ಕಳೆದು ಹೋದರೆ  ಪ್ರಪಂಚ ಮರೆಯುತ್ತಾರೆ. ಅವರ ಕಲಿಕೆಯಲ್ಲಿ  ಎಷ್ಟು  ಅಸಕ್ತರೆಂದರೆ ಅನಾಟಮಿಯನ್ನು ಅಭ್ಯಸಿಸುವ ದಿನಗಳಲ್ಲಿ, ಕಾರಿನಲ್ಲಿ ಪಯಣಿಸುವಾಗ ಈ ಬೆಂಗಳೂರಿನಲ್ಲಿ ಮಾರು ಮಾರಿಗೆ ಸಿಗುವ ಸಿಗ್ನಲ್ಲುಗಳೂ, ಟ್ರಾಫಿಕ್ ಜಾಮ್ಗಳೂ ಸಹಾ ಇವರಿಗೆ ವರವಾಗಿ ಪರಿಣಮಿಸುತ್ತಿದ್ದವಂತೆ! ವಾಹನ ನಿಂತಾಗ ಜೊತೆಯಲ್ಲಿಯೇ ಇರಿಸಿಕೊಳ್ಳುತ್ತಿದ್ದ ಸ್ಕೆಚ್ ಬುಕ್ ನಲ್ಲಿ ಕ್ಷಿಪ್ರಗತಿಯಲ್ಲಿ ಅಲ್ಲಲ್ಲಿ ಕಾಣಿಸುವ ಮಾನವಾಕೃತಿಗಳ ಸ್ಕೆಚ್ ಬರೆದುಕೊಂಡು, ಮನೆಗೆ ಬಂದು ಅವಕ್ಕೆ ಸ್ಪಷ್ಟತೆ ಕೊಡುವುದನ್ನು ರೂಢಿಸಿಕೊಂಡಿದ್ದರು.  ಕಾಲಾಂತರಲ್ಲಿ 'ಸ್ಪೀಡ್ ಸ್ಕೇಚ್ಚಿಂಗ್' ಕಲೆಯಲ್ಲಿ ಈ ಅಭ್ಯಾಸ ಅವರಿಗೆ ಬಹು ಉಪಯೋಗಕ್ಕೆ ಬಂದಿದೆ. ಇಂದು ಕಾವ್ಯರಚನಾ ವೇದಿಕೆಗಳಲ್ಲಿ ವಿಜಯಶ್ರೀ ದಾರದಲ್ಲಿ ಚಿತ್ರ ರಚಿಸಿ ಗಣನೀಯವಾದ ಹೆಸರುಗಳಿಸಲು ಈ ಅಭ್ಯಾಸ ದೊಡ್ಡ ಪಾತ್ರವಹಿಸಿದೆ.‍ ಲೀಡರ್ಸ್ ಅಕಾಡೆಮಿಯವರು ತಮ್ಮ ಅನೇಕ ಕಾರ್ಯಕ್ರಮಗಳಲ್ಲಿ ವಿಜಯಶ್ರೀ 
ಅವರು ಕಾವ್ಯಚಿತ್ರ ಕಾರ್ಯಕ್ರಮಕ್ಕೆ ಅವಕಾಶ ಪಡೆದಿದ್ದಾರೆ. ಇಲ್ಲಿ ಐದು ಆರು ನಿಮಿಷಗಳಲ್ಲಿ ಹಾಡು ಮುಗಿಯುವ ಹೊತ್ತಿಗೆ ದೊಡ್ಡ ಬೋರ್ಡಿನ ಮೇಲೆ ಚಿತ್ರವೊಂದು ರಚನೆಯಾಗಬೇಕು.   ಹೀಗೆ ಒಮ್ಮೆ ನಡೆದ 'ಕುರುಕ್ಷೇತ್ರ' ಎಂಬ  ಕಾರ್ಯಕ್ರಮದಲ್ಲಿ ಸುಮಾರು 1500 ಜನ ತುಂಬಿದ ಸಭಾಂಗಣದಲ್ಲಿ ಕೇವಲ ಆರೂವರೆ ನಿಮಿಷದಲ್ಲಿ  ವಿಜಯಶ್ರೀ ಅವರು ದಾರದಲ್ಲಿ   ಮೂಡಿಸಿದ   ಚಿತ್ರಕ್ಕೆ  ಇಡೀ ಸಭೆಯೇ ಎದ್ದು ನಿಂತು ಕರತಾಡನ ನೀಡಿದ್ದು ರೋಮಾಂಚಕಾರಿ ಎಂಬಂಥ ಘಟನೆಯಾಗಿದ್ದು ಯಾವುದೇ ಕಲಾವಿದರೊಬ್ಬರ ಬದುಕಿನ ಅಮೂಲ್ಯ ಎಂಬಂತಹ ಕ್ಷಣಗಳು. ಇಂತದ್ದೇ ಸ್ವರೂಪದ 'ಗೀತ ಸಂಗಮ' ಕನ್ನಡ ಚಲನಚಿತ್ರ ಗೀತೆಗಳ ಕಾರ್ಯಕ್ರಮ ನಡೆದ ಸಂದರ್ಭದಲ್ಲಿ ಪ್ರಣಯರಾಜ ಶ್ರೀನಾಥ್,  ನಿರ್ದೇಶಕ ಭಗವಾನ್, ಕವಿ ಬಿ.ಆರ್ ಲಕ್ಷ್ಮಣರಾವ್ ಮುಂತಾದ ಗಣ್ಯವರೇಣ್ಯರ ಉಪಸ್ಥಿತಿಯಲ್ಲಿ ಎಂ.ಡಿ. ಪಲ್ಲವಿ , ಅಜಯ್ ವಾರಿಯರ್ ಮುಂತಾದ ಪ್ರಸಿದ್ಧ  ಕಲಾವಿದರ ಧ್ವನಿಗೆ ಸ್ಥಳದಲ್ಲೇ ದಾರದಲ್ಲಿ ಚಿತ್ರರಚನೆ ಮಾಡಿದ್ದು  ವಿಜಯಶ್ರೀ ಅವರ ಮತ್ತೊಂದು  ಅನುಪಮ ಅನುಭವ. 

ವಿಜಯಶ್ರೀ ಅವರು ಭಾಗವಹಿಸಿರುವ ವೈವಿಧ್ಯಮಯ ಕಲಾಕಾರ್ಯಕ್ರಮಗಳಲ್ಲಿ 'ಚಿನ್ಮಯ ಮಿಷನ್'ನಲ್ಲಿ ಹುತಾತ್ಮ ಯೋಧ ಕುಟುಂಬ ಸಹಾಯಾರ್ಥ ನಡೆದ 108 ಕಲಾವಿದರೊಟ್ಟಿಗೆ ಚಿತ್ರ ರಚನೆಯಲ್ಲಿ ಪಾಲ್ಗೊಂಡ 'ಸಾಮಾ 2017' ಪ್ರದರ್ಶನ, 'ಮಂತ್ರಿ ಮಾಲ್'ನಲ್ಲಿ. ಜರುಗಿದ ಅಂಗಾಂಗ ದಾನ (awareness program) ಅರಿವು ಕಾರ್ಯಕ್ರಮ,  2023 ರ  ಆಕಾಂಕ್ಷಾ ಕಲಾ ಮಹೋತ್ಸವ ಮುಂತಾದವುಗಳು ಸಹಾ ಸೇರಿವೆ.
 
ವಿಜಯಶ್ರೀ ನಟರಾಜ್ ಅವರು ಕುಟುಂಬದ ಜವಾಬ್ಧಾರಿ ನಿರ್ವಹಣೆ ಮತ್ತು ಕಲಾ ಅಸಕ್ತಿಗಳ ಪೋಷಣೆಯ ಜೊತೆ ಜೊತೆಯಲ್ಲೇ ವಿಧ ವಿಧ ಆಸಕ್ತಿಗಳ ಸಂಗಮರೂ ಆಗಿದ್ದಾರೆ. ಅವರು ಸ್ವಸಂತೋಷಕ್ಕಾಗಿ ಹಾಡಲು ಸಂಗೀತ ಕಲಿತಿದ್ದಾರೆ.  ಹೊಲಿಗೆಯಲ್ಲಿ ಆಸಕ್ತಿಯಿದೆ. ಸಾಹಿತ್ಯದಲ್ಲಂತೂ  ಅಪಾರ ಆಸಕ್ತಿ.  ಬರವಣಿಗೆಯ ಹವ್ಯಾಸವಿದೆ. ಇವರ ಅನೇಕ  ಲೇಖನಗಳು,  ಲಲಿತ ಪ್ರಬಂಧಗಳೂ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಅವರ chukkichittaara.blogspot.com ತೆರೆದರೆ ಜಿಲೇಬಿಯ ರುಚಿ ಬಾಯಲ್ಲಿ ನೀರೂರಿಸುವ ಜೊತೆ ಜೊತೆಗೇ, ಅವರ ವೈವಿಧ್ಯಮಯ ಅಭಿರುಚಿಗಳನ್ನೂ ಸಾಕಷ್ಟು ಪರಿಚಯಿಸುತ್ತದೆ.  

ವಿಜಯಶ್ರೀ ಅವರಿಗೆ ಎಲ್ಲ ರೀತಿಯ ಕುಶಲಕಲೆಗಳಲ್ಲೂ ಆಸಕ್ತಿಯಿದೆ.  ಕಲೆಯ ಎಲ್ಲಾ ಪ್ರಾಕಾರಗಳೂ ಅವರಿಗೆ ಸ್ವೀಕೃತ. ಪೆನ್ಸಿಲ್ ಶೇಡಿಂಗ್, ಜಲವರ್ಣ, ಅಕ್ರಿಲಿಕ್, ತೈಲ ಮಾಧ್ಯಮ, ಚುಕ್ಕಿ ಚಿತ್ರ ರಚನೆ ಹೀಗೆ ಎಲ್ಲ ಮಾಧ್ಯಮಗಳಲ್ಲೂ ಕೈಯ್ಯಾಡಿಸಿದ್ದಾರೆ. ಮೈಸೂರು ಸಾಂಪ್ರದಾಯಿಕ ಕಲೆಯಲ್ಲೂ ಇವರಿಗೆ ಪರಿಣತಿ ಇದೆ.

ಮುಖ್ಯವಾಗಿ ವಿಜಯಶ್ರೀ ಅವರಲ್ಲಿ ಕಾಣುವ ಗುಣವೆಂದರೆ ಕಲಿಕೆ ಮತ್ತು ಸಮಯದ ಸದುಪಯೋಗ.  ಸಾಮಾಜಿಕ ಜಾಲತಾಣಗಳನ್ನು ಕಾಲಹರಣವೆಂದು ಮೂಗುಮುರಿಯುವ ಅನೇಕ ಮಂದಿ ಇದ್ದಾರೆ.  ಅದನ್ನು ಸದುಪಯೋಗಪಡಿಸಿಕೊಂಡು ತಮ್ಮ ಕಲಾಸಕ್ತಿಯ ಪ್ರೇರಣೆಯಾಗಿ ಬಳಸಿಕೊಳ್ಳಬಹುದು ಎಂಬುದಕ್ಕೆ ಅವರು ನಮಗೆ ಉತ್ತಮ ಉದಾಹರಣೆಯಾಗಿದ್ದಾರೆ.  "ನನ್ನ ಇನ್ಬಾಕ್ಸಲ್ಲಿ ಬಂದು ಗುಡ್ಮಾರ್ನಿಂಗು ಕಾಫಿ ಆಯ್ತಾ ಇತ್ಯಾದಿ ಹೇಳುವುದು ಬೇಡ" ಎಂಬುದನ್ನು ತಮ್ಮ ಫೇಸ್ಬುಕ್ ಅಕೌಂಟಿನ ಶೀರ್ಷಿಕೆಯಾಗಿ ಅವರು ಬರೆದಿರುವುದು ಕೇವಲ ಒಣ ಮಾತಲ್ಲ.  ಯಾವುದೇ ಮಾಧ್ಯಮವನ್ನು  ಹೇಗೆ ಉಪಯುಕ್ತ ಅಭಿರುಚಿಗಳಾಗಿ ಕಾಣಬೇಕೆಂಬ ಮಾರ್ಗಸೂಚಿಯೇ ಇಲ್ಲಿದೆ.

ಆತ್ಮೀಯರಾದ ವಿಜಯಶ್ರೀ ನಟರಾಜ್ ಹುಟ್ಟುಹಬ್ಬದ ಶುಭಹಾರೈಸುತ್ತಾ ತಮ್ಮ ಬದುಕು ಸರ್ವರೀತಿಯಲ್ಲೂ ಕಲಾತ್ಮಕವಾಗಿ ಸುಂದರ ಮತ್ತು ಸುಖಕರವಾಗಿರಲಿ ಎಂದು ಹಾರೈಸೋಣ.

On the birthday of our Artiste Vijayashree Nataraj

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ