ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಂಜಾನ್ ದರ್ಗಾ


 ರಂಜಾನ್ ದರ್ಗಾ


ರಂಜಾನ್ ದರ್ಗಾ ಅವರು ಕನ್ನಡದ ವಿಶಿಷ್ಟ ಬರಹಗಾರರು. ಅವರೊಬ್ಬ ಕವಿ, ವಿಮರ್ಶಕ, ಸಾಹಿತಿ, ಸಂಘಟಕ ಹಾಗೂ ಪತ್ರಿಕೋದ್ಯಮಿ.

ರಂಜಾನ್ ದರ್ಗಾ ಅವರ ಜನ್ಮದಿನಾಂಕ ಶಾಲೆಯ ದಾಖಲಾತಿಯಲ್ಲಿ ನಮೂದಿಸಿರುವ ಪ್ರಕಾರ 1951ರ ಜೂನ್ 20.  ತಂದೆ ಅಬ್ದುಲ್ ಸಾ (ಅಬ್ದುಲ್ ಕರೀಂ)  ಅವರು ವಿಜಾಪುರ ಬಳಿಯ ದರ್ಗಾ ಗ್ರಾಮದವರು. ತಾಯಿ ಕಾಸಿಂ ಬಿ. ಅವರು ವಿಜಾಪುರ ಬಳಿಯ ಅಲ್ಲೀಬಾದಿ (ಅಲಿಯಾಬಾದ) ಗ್ರಾಮದವರು. ರಂಜಾನ್ ದರ್ಗಾ ಅವರು  ಹುಟ್ಟಿ ಬೆಳೆದದ್ದು ವಿಜಾಪುರ ನಗರದಲ್ಲಿ.

ರಂಜಾನ್ ದರ್ಗಾ  ಕನ್ನಡದಲ್ಲಿ ಭಾಷಾವಿಜ್ಞಾನ ಹಾಗೂ ವ್ಯವಸಾಯ ಮಾರುಕಟ್ಟೆ ಆಡಳಿತ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದು ಸುದ್ಧಿ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ರಂಜಾನ್ ದರ್ಗಾ ಅವರು ಬರಹಗಾರರಾಗಿ ಆರಂಭದಿಂದಲೂ ದಲಿತ ಬಂಡಾಯ ಸಾಹಿತ್ಯ ಪ್ರಕಾರದಲ್ಲಿ ಅಭಿವ್ಯಕ್ತಿಸುತ್ತ ಬಂದಿದ್ದಾರೆ.  ಕಾವ್ಯ ಬಂತು ಬೀದಿಗೆ, ಹೊಕ್ಕುಳಲ್ಲಿ ಹೂವಿದೆ ಅವರ  ಕವನಸಂಕಲನಗಳಲ್ಲಿ ಸೇರಿವೆ. ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ಬಸವಪ್ರಜ್ಞೆ, ಬಸವಣ್ಣನವರ ದೇವರು, ಬಸವಧರ್ಮದ ವಿಶ್ವಸಂದೇಶ, ನಡೆ ನುಡಿ ಸಿದ್ದಾಂತ, ವಚನ ವಿವೇಕ, ಬಸವಣ್ಣ ಮತ್ತು ಅಂಬೇಡ್ಕರ್, ಶರಣರ ಸಮಗ್ರ ಕ್ರಾಂತಿ; ನೆಲ್ಸನ್ ಮಂಡೇಲ, ಸಜ್ಜಾದ್ ಜಾಹೀರ್-ಜೀವನ ಚರಿತ್ರೆ; ಮುಸ್ಲಿಂ ಮಹಿಳೆಯರ ಸಮಸ್ಯೆಗಳು ಕುರಿತ ‘ತಲಾಖ್ ಕೊಟ್ಟರೆ ಬಾರೇಟು ಶಿಕ್ಷೆ’ ಮೊದಲಾದವು ಇವರ ಇನ್ನಿತರ ವೈವಿಧ್ಯ ಕೃತಿಗಳಲ್ಲಿ ಸೇರಿವೆ. ಸು. ರಂ.ಎಕ್ಕುಂಡಿ ಅವರ ಲೇಖನಗಳನ್ನು ‘ಪಂಜುಗಳು’ ಎಂಬ ಹೆಸರಿನಲ್ಲಿ ಸಂಗ್ರಹಿಸಿದ್ದಾರೆ.  ಇತರರ ಜೊತೆ ಸೇರಿ ‘ಬಂಡಾಯ ಕಥೆಗಳು’ ಹಾಗೂ ‘ಶತಮಾನದ ಬಾಯಾರಿಕೆ’ ಕವಿತೆಗಳ ಸಂಗ್ರಹ ಮಾಡಿದ್ದಾರೆ. ನಾಟಿವೈದ್ಯರನ್ನು ಕುರಿತು ‘ನಾಟಿ ವೈದ್ಯ’ ಪುಸ್ತಕ ರಚಿಸಿದ್ದಾರೆ.

ರಂಜಾನ್ ದರ್ಗಾ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ, ಚಲನಚಿತ್ರ ಆಯ್ಕೆ ಸಮಿತಿ, ಕೋಮು ಸೌಹಾರ್ದ ಸಲಹಾ ಸಮಿತಿ, ಹಂಪಿಯ ಕನ್ನಡ ಹಾಗೂ ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ಸಿಂಡಿಕೇಟ್ ಹಾಗೂ ಪ್ರಸಾರಾಂಗ ವಿಭಾಗ, ದೂರದರ್ಶನಕ್ಕೆ ಕಥೆಗಳ ಆಯ್ಕೆ ಸಮಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಅನೇಕ  ಕಡೆಗಳಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ರಷ್ಯಾ, ಬೈಲೋ ರಷ್ಯಾ, ಉಚ್ಚೆಕಿಸ್ಥಾನ್, ನೆದರ್ಲ್ಯಾಂಡ್ಸ್, ಫ್ರಾನ್ಸ್ ಲೆಬನಾನ್ ದೇಶಗಳಲ್ಲಿ ಶಾಂತಿ, ಸಂಸ್ಕೃತಿ, ಸಾಮಾಜಿಕ ಸಮಸ್ಯೆ ಕುರಿತಂತೆ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದಾರೆ.

ರಂಜಾನ್ ದರ್ಗಾ  ಅವರಿಗೆ ‘ಬಸವ ಶ್ರೀ’ ಪ್ರಶಸ್ತಿ, ವಚನ ಚಿಂತಕ ಪ್ರಶಸ್ತಿ, ಯುನೈಟೆಡ್ ಗೇಮ್ಸ್ ಆಫ್ ನೇಷನ್ಸ್ ಇಂಟರ್ನ್ಯಾಷನಲ್ ಹಾಗೂ ಜನೋತ್ಸವ ಸಂಘಟನೆಗಳಿಂದ ಜಂಟಿಯಾಗಿ ‘ಬಾರನ್ ಫ್ರೀ’ ಪ್ರಶಸ್ತಿ, ಚಿತ್ರದುರ್ಗದ ಬೃಹನ್ ಮಠದಿಂದ ‘ಜಯದೇವ ಶ್ರೀ’ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.

On the birthday of writer Ramjan Darga 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ