ಮಧುರಾಣಿ ಎಚ್ ಎಸ್
ಮಧುರಾಣಿ ಎಚ್ ಎಸ್
ಎಚ್. ಎಸ್. ಮಧುರಾಣಿ "ಕವಯಿತ್ರಿಯಾಗಿ ಮತ್ತು ಸುಲಲಿತ ಪ್ರಬಂಧ ಬರಹಗಾರ್ತಿಯಾಗಿ ಎದ್ದು ಕಾಣುವ ಪ್ರತಿಭೆ" ಅಂತ ಒಮ್ಮೆ ಬರೆದಿದ್ದೆ. ಅವರು ಕಥೆಗಾರ್ತಿಯಾಗಿಯೂ, ಬೌಂಡರಿ, ಸಿಕ್ಸರ್ ಎಲ್ಲ ಬಾರಿಸಿ prize ಮತ್ತು praise ಗೆದ್ದವರು.
ಡಿಸೆಂಬರ್ 9 ಮಧುರಾಣಿ ಅವರ ಜನ್ಮದಿನ. ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯವರು. ಚಿತ್ರದುರ್ಗ, ಬೆಂಗಳೂರು ಮತ್ತು ಮೈಸೂರುಗಳಲ್ಲಿ ವಿದ್ಯಾಭ್ಯಾಸ ನಡೆಸಿದ ಮಧುರಾಣಿ ಅವರು ಮೈಸೂರು ವಿಶ್ವವಿದ್ಯಾಲಯದ ಎಂ.ಎ (ಇಂಗ್ಲಿಷ್) ಪದವಿಯನ್ನು 3ನೇ ರ್ಯಾಂಕ್ ಸಾಧನೆಯಲ್ಲಿ ಗಳಿಸಿದ ಪ್ರತಿಭೆ. ಮಧುರಾಣಿ ಮೈಸೂರಿನಲ್ಲಿ ಅಧ್ಯಾಪಕಿಯಾಗಿದ್ದಾರೆ.
ಮಧುರಾಣಿ ಚಿತ್ರದುರ್ಗದಲ್ಲಿ ಶಾಲೆಯಲ್ಲಿ ಓದುತ್ತಿದ್ದ ದಿನಗಳಲ್ಲೇ ಸ್ಥಳೀಯ ಸಾಪ್ತಾಹಿಕವೊಂದರಲ್ಲಿ ಅಂಕಣ ಬರೆಯುತ್ತಿದ್ದರು.
2015ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಕೊಡಮಾಡುವ ಯುವ ಸಾಹಿತಿಗಳ ಚೊಚ್ಚಲ ಕೃತಿ ಪುರಸ್ಕಾರಕ್ಕೆ ಆಯ್ಕೆಯಾಗಿ ಮಧುರಾಣಿ ಅವರ ಪ್ರಥಮ ಕವಿತಾ ಸಂಕಲನ 'ನವಿಲುಗರಿಯ ಬೇಲಿ' ಪ್ರಕಟಗೊಂಡಿತು. ಮಧುರಾಣಿ ಅವರ 'ನೀಲಿ ಚುಕ್ಕಿಯ ನೆರಳು' ಕೃತಿ ಅಪ್ರಕಟಿತ ಕವನ ಸಂಕಲನವಾಗಿ 'ಈ ಹೊತ್ತಿಗೆ' ಕಾವ್ಯ ಪ್ರಶಸ್ತಿ ಗಳಿಸಿ ಹೆಸರು ಮಾಡಿತು. ಈ ಕವಿತಾ ಸಂಕಲನವು ಬಹುರೂಪಿ ಪ್ರಕಾಶನದಿಂದ ಪ್ರಕಟಗೊಂಡು ಪ್ರಸಿದ್ಧಿಗೊಂಡಿದೆ. ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ‘ಮಠದ ಕೇರಿಯ ಕಥೆಗಳು’ ಅಂಕಣ ಪ್ರಕಟಗೊಂಡಿದೆ. ಮೈಸೂರಿನ ‘ಆಂದೋಲನ’ ದಿನಪತ್ರಿಕೆಯ ‘ಹಾಡುಪಾಡು’ ವಿಭಾಗದಲ್ಲಿ , ಅನೇಕ ಪತ್ರಿಕೆಗಳಲ್ಲಿ ಮತ್ತು ಅಂತರಜಾಲ ಮಾಧ್ಯಮಗಳಲ್ಲಿ ಇವರ ಹಲವಾರು ಬರಹಗಳು ಪ್ರಕಟಗೊಳ್ಳುತ್ತಿವೆ. ಇವರ ಕಥೆಗಳೂ ಪ್ರಕಟಗೊಂಡು ಬಹುಮಾನ ಗೆಲ್ಲಲಾರಂಭಿಸಿವೆ. ಪ್ರತಿಷ್ಟಿತ 'ವೀರಲೋಕ' ಪ್ರಕಟಣೆಯಾದ ಕಂಥಸಂಕ್ರಾಂತಿ2024 ಸಂಕಲನದಲ್ಲೂ ಮಿಂಚಿದೆ.
ಮಧುರಾಣಿ ಅವರ ಬರಹದ ಹಿಂದೆ ಕಲಿಕೆಯ ಮನವಿದೆ. ಹಿತದ ಅಭಿವ್ಯಕ್ತಿ ಇದೆ. ಅಧ್ಯಾಪಕಿಯಾಗಿ ತಮ್ಮ ಅನುಭವವನ್ನು ತೆರೆದಿಟ್ಟಿರುವ ಅವರು "ನಾನು ಮಕ್ಕಳೊಂದಿಗೆ ಮಗುವಾಗಿ ಬೆರೆತುಬಿಡುತ್ತಿದ್ದೆ ಮತ್ತೆ ಮಕ್ಕಳೋ ನನ್ನ ತರಗತಿಗಳಲ್ಲಿ ಹೂವಂತೆ ಅರಳಿ ನಗುತ್ತಿದ್ದರು. ಹಾಗಾಗಿ ಸಹಜವಾಗಿಯೇ ದನಿ ತರಗತಿಯಿಂದ ಹೊರ ಹೋಗುತ್ತಿತ್ತು. ಇನ್ನು ಕಾಲೇಜಿನಲ್ಲಿ ನೂರು ಮೀರುತ್ತಿದ್ದ ತರಗತಿಗಳು ನನ್ನವಾದರೂ ಸೂಜಿ ಸದ್ದಾಗುವಷ್ಟು ಮೌನ..! ಹಾಗಂತ ನಾನು ಎಂದೂ ಗದರಿದವಳಲ್ಲ, ಮಕ್ಕಳನ್ನು ಅವಮಾನಿಸಿದವಳಲ್ಲ. ಎಂದೂ ಯಾರ ಕ್ಲಾಸಿಗೂ ಬರದ ಪುಣ್ಯಾತ್ಮರೂ ನನ್ನ ತರಗತಿಗೆ ಹಾಜರ್! ಗೌರವವನ್ನು ನಾವಾಗೇ ಬಯಸಿ ಪಡೆಯಬಾರದು. ಅದಾಗಿ ಸಿಗಬೇಕು" ಹೀಗೆ ಅವರ ಬದುಕಿನ ವೃತ್ತಿ ಮನೋಧರ್ಮ ಸಾಗುತ್ತದೆ.
ಮಧುರಾಣಿ ಬರೆಯಲೇಬೇಕು ಎಂದು ಬರೆಯುವವರಲ್ಲ. ತಾವು ಅನುಭಾವಿಸಿದ್ದಕ್ಕೆ ಯಾವುದೂ ಮುಚ್ಚು ಮರೆಯಿಲ್ಲದೆ ಹೃದಯದ ಮಾತು ಕೊಡುವವರು. ಕವನಗಳು ಮತ್ತು ಪ್ರಬಂಧರೂಪದ ಬರಹಗಳೆರಡರಲ್ಲೂ ಅವರಿಗೊಂದು ಪ್ರಬುದ್ಧ ಹಿಡಿತವಿದೆ. ಕಥೆಗಳೂ ಅದೇ ಸೂಚನೆಯನ್ನು ನೀಡಿವೆ. ತಮ್ಮ ಕಣ್ಮುಂದೆ ಅಥವಾ ಮನದ ಕಣ್ಮುಂದೆ ಹಾದುಹೋಗುವ ವಿಚಾರಗಳಿಗೆ ಅವರು ಉಪಯೋಗಿಸುವ ಭಾಷೆ ಆಪ್ತವೆನಿಸುತ್ತೆ. ಅದು ಸುಲಭವಾಗಿ ಸಿದ್ದಿಸುವಂತದಲ್ಲ. ಅಂತಃಮಥನ ತಂದ ನವನೀತವದು. ಮಧುರಾಣಿ ಅವರ ಎರಡೆರಡೇ ಸಾಲಿನ ಎಫ್ಬಿ ಪೋಸ್ಟುಗಳಲ್ಲಿಯೂ ನನಗೆ ಅದರ ಸ್ವಾದ ಕಂಡಿದೆ. ರೀಚ್ ಆಗಬೇಕು ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಮ್ಮ ಚಿಂತನ ಪರದೆಯ ಮೇಲೆ ಮೂಡಿದ್ದಕ್ಕೆ ಯಥಾವತ್ತಾಗಿ ಮಾತು ಕೊಡುವ ಅವರಿಗೆ ಸಂವೇದನಗಳ ಆಳಕ್ಕೆ ಹೋಗಿ ವಿಸ್ತಾರದತ್ತ ವ್ಯಾಪಿಸುವ ಶಕ್ತಿಯಿದೆ.
ಕವಿ ಮತ್ತು ನಾಟಕಕಾರ ಡಾ. ಎಚ್. ಎಸ್. ಶಿವಪ್ರಕಾಶ್ "ಕ್ಷೇತ್ರದಲ್ಲಿ ವೈಯುಕ್ತಿಕ ಸುಖವನರಸಿ ಅನುಭವಿಸಿ ಅಭಿವ್ಯಕ್ತಿಸುವ ಕಲೆಯಾದ ಕಾವ್ಯಕ್ಕೆ ಯಶಸ್ವಿಯಾಗಲು ಕಾವ್ಯಪ್ರಯೋಗದ ಜಾಣ್ಮೆ ಮಾತ್ರ ಸಾಲದು. ಸಾರ್ವತ್ರಿಕ ಅನುಭವದ ಗ್ಯಾರಂಟಿಯಾಗಿ ಸಾಧಾರಣೀಕರಣ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಒಂದು ವಿಶಿಷ್ಠವಾದ ತನ್ನತನದ ಛಾಪು. ರಾಚನಿಕ ಸೂಕ್ಷ್ಮ ಹಾಗೂ ಅನನ್ಯ ದನಿಗಳ ಅನುರಣನ ಇವೆರಡೂ ಪ್ರವೃತ್ತಿಗಳು ಸಮತೂಕವಾಗಿ ಸಮಪಾಕವಾಗಿವೆ. ಯಾವುದೇ ಥರದ ಗಾಳಿಗಂಟಲಿಲ್ಲದೆ ಹಿತಮಿತ ಮೃದುವಚನದಲ್ಲಿ ಈ ವರೆಗಿನ ಮಹಿಳಾಕಾವ್ಯಕ್ಕಿಂತಾ ಬೇರೆಯೇ ಆದ ರೀತಿಯಲ್ಲಿ ಸಹೃದಯರ ಮನದುಂಬುವ ಬಗೆಯಲ್ಲಿ ಮಧುರಾಣಿಯವರ ಕವಿತೆಗಳು." ಎಂದು ಅಭಿಪ್ರಾಯಿಸುತ್ತಾರೆ.
ಮಧುರಾಣಿ ಅವರಿಗೆ 'ಅಮ್ಮ' ಪ್ರಶಸ್ತಿ ಸಹಾ ಸಂದಿದೆ. ಕಥೆಗಾಗಿನ 'ಕಥಾಮೌಲ್ಯ' ಪ್ರಶಸ್ತಿಯೂ ಸಂದಿದೆ
"ಈಗ ಒಲಿದಂತೆ ಹಾಡಿಕೊಂಡು ತಿಳಿದಂತೆ ಬದುಕುತ್ತಿದ್ದೇನೆ. ಬದುಕುವಷ್ಟು ಕಾಲ, ಇನ್ನು ಇತರರಿಗೆ ನೆರಳಾಗಿರಬೇಕು... ಇಷ್ಟೇ ಆಸೆ” ಎನ್ನುವ ಮಧುರಾಣಿ ಅವರ ಹಸನ್ಮುಖತೆಯ
ಕಣ್ಣ ನೋಟ ಮತ್ತು ಅವರ ಅಭಿವ್ಯಕ್ತಿಗಳ ಆಳ ಕಾಣುವಾಗ, ಅವರಿಗೆ ಇರುವ ಸಾಧ್ಯತೆಗಳಿಗಂತೂ 'ಇಷ್ಟೇ' ಎಂಬ ಯಾವುದೇ ಮಿತಿಯೂ ಅನ್ವಯಿಸುವುದಿಲ್ಲ.
ಮಧುರಾಣಿ ಅವರ ಅನೇಕ ಕವಿತೆಗಳು ಜನಪ್ರಿಯವಾಗಿವೆ. "ವಿರಹ ಪ್ರೀತಿ ಪ್ರೇಮ ಎಲ್ಲವೂ ಅಧ್ಯಾತ್ಮ ಅಂಗಿ ತೊಡಿಸಿದ ಬದನೇಕಾಯಿ" ಎಂಬಂತಹ ಮಾತು ಎಲ್ಲೋ ನಮ್ಮ ಸ್ವಾತಂತ್ರ್ಯಕ್ಕೆ ಹಿತ ನೀಡುತ್ತೆ. "ನನ್ನ ಮೇಜನ್ನು ಹಾಗೇ ಬಿಡಿ" ಎಂಬುದಂತೂ ಬಹು ಮನಗಳನ್ನು ತಲುಪಿದ ಕವಿತೆ. "ನಿನ್ನೆಡಗೆ ಬರುವಾಗ ಸಿಂಗದ ಹೊರೆ ಏಕೆ" ಎಂದು ಕುವೆಂಪು ದೇಗುಲದಲ್ಲಿನ ಮೂರ್ತಿಗೆ ಹೇಳಿದರೆ, ಮಧುರಾಣಿ ಒಪ್ಪ ಓರಣವೆಂಬ ಸೋಗು ದೈನಂದಿನದ ಬದುಕಿಗೆ ಏನಕ್ಕಾಗಿ ಎಂದು ಪ್ರಶ್ನಿಸಿದಂತೆನಿಸುತ್ತೆ. ಅಂತೆಯೇ ದಸರಾ ಕವಿಗೋಷ್ಠಿಯಲ್ಲಿ ಇವರು ವಾಚಿಸಿದ ಕವಿತೆಯಲ್ಲಿನ ".... ನಂದು ಮಾತ್ರಾ ಒಂದೇ ಪ್ರಶ್ನೆ ಆರ್ ಸಿ ಬಿ ಯಾವಾಗ ಗೆಲ್ಲುತ್ತೆ" ಎಂಬ ನುಡಿ ಶಿಳ್ಳುಗಳನ್ನೂ ಗಿಟ್ಟಿಸಿದೆ.
ಸ್ನೇಹಲೋಕದಲ್ಲಿ ನಸು ನಗುತ್ತ ಬೆರೆಯುವ ಮನದಲ್ಲಾಗಲಿ, ಅನಾಥ ಮಕ್ಕಳ ಜೊತೆ ಹೃದಯವನ್ನು ಬೆಸೆಯುವುದರಲ್ಲಾಗಲಿ, ಎಲ್ಲೋ ಶೋಷಣೆಯಾದಾಗ ತೋರುವ ಅಸಮ್ಮತಿಯಲ್ಲಾಗಲಿ, ಜೀವನದಲ್ಲಿ ಕಳೆದುಕೊಂಡ ಕೆಲವು ಅಮೂಲ್ಯತೆಗಳ ಕುರಿತಾದ ಸೂಕ್ಷ್ಮ ವಾಕ್ಯಗಳಲ್ಲಾಗಲಿ, ಬದುಕಿನ ಹಿಂದಿನ ಬಗೆ ಬಗೆಯ ನೆನಪುಗಳಲ್ಲಾಗಲಿ, ಅವರಲ್ಲಡಗಿರುವ ಹೃದಯವಂತಿಕೆ, ಸೂಕ್ಷ್ಮ ಸಂವೇದಿಯಾಗಿ ನಿರಂತರ ಪುಟಿದೇಳುತ್ತಲೇ ಇರುತ್ತದೆ.
ಮಧುರಾಣಿಯವರ ಒಂದು ಕವಿತೆಯ ಕಾಪಿ ಪೇಸ್ಟ್ ಇಲ್ಲಿದೆ
ಸೋಗಲಾಡಿಗೆ ಬರೆದದ್ದು
ಬೆಟ್ಟ ತೊರೆದು ಹರಿದ ತೊರೆಯಂಥಾ ನಾನು
ಬೆತ್ತಲೆ ಮೈಚೆಲ್ಲಿದ ಅಗಾಧ ಭೂಮಿ ನೀನು
ಎಷ್ಟು ತಿಂದರೂ ಮುಗಿಯದ
ಅಕ್ಷಯದ ಹಾಡಿನಂಥಾ ದೀರ್ಘ
ಪ್ರಣಯ ತೇರು
ಇನ್ನೂ ಸ್ವಲ್ಪ ಇರಬೇಕಿತ್ತು
ಕಹಿಗೆ ಹತ್ತಿದ ಬೆಲ್ಲದಂತೆ
ನಿನ್ನ ಸೋಗಿನ ಒಳ್ಳೆಯತನದ ಸುಳ್ಳೇ ನಗು
ಮತ್ತೂ ಮುಂದುವರೆಯಬೇಕಿತ್ತು
ನಾನು ಪೆದ್ದಾಗಿಯೇ ನಟಿಸಿ
ಬಯಲನ್ನೇ ಆಲಯವೆಂದು ಸಂಭ್ರಮಿಸಬೇಕಿತ್ತು
ಮಾತಿಗೆ ರೆಕ್ಕೆ ಬರುವ ಮೊದಲಿನ
ಮೌನದ ಮೊಟ್ಟೆಯೇ ಚೆನ್ನಿತ್ತು
ನದಿಯಲ್ಲಿ ಮಿಂದ ಬೆಳಕಿನಂತೆ
ಹಿತವಾಗಿತ್ತು..
ಈ ಕತ್ತಲ ಹಾಗೆ ಆಗ
ಸುಮ್ಮನೇ ನಕ್ಕರೂ ಅರ್ಥವಿತ್ತು
ಕೇಳಿ ಪಡೆವ ಗಮ್ಮತ್ತಿತ್ತು
ಕತ್ತಿ ಮೊನೆಯಂಥಾ ಮಾತುಗಳಿಗೂ
ದೀರ್ಘ ಚುಂಬನದ ಬೆತ್ತಲೆ ಬೆನ್ನಿತ್ತು
ಕಾಡಿ ಬೇಡಿ ಸೇರಿದ ಸಮಯಕ್ಕೂ
ನೀನು ಕದ್ದು ಹೆಕ್ಕಿ ಪೋಣಿಸಿದ ಮುತ್ತಿದ್ದವು
ಇದಾವುದೂ ಒಪ್ಪತಕ್ಕದ್ದಲ್ಲವೆಂಬ
ಸುಳ್ಳೇ ಸರಳುಗಳ ಒಳಗೆ
ನಾನೂ ನೀನೂ ಖೈದಿಗಳಾಗಿಯೂ
ಮೀಟಿದ ನೀರವತೆಗೆ ಮುಗಿಲೆತ್ತರ ನಲುಮೆಯುತ್ತು
ಈಗ ನೋಡು
ಎಲ್ಲ ಮುಗಿಯುವ ಹೊತ್ತು ಬಂದೇ ಬಿಟ್ಟಿತು
ಮುಗಿಯುವ ಮುನ್ನ
ಇನ್ನಷ್ಟಾದರೂ ನೋವು ತುಂಬಿಕೊಳ್ಳಬೇಕಿತ್ತು
ಪದ್ಯ ಗದ್ಯ ಏನೇ ಬರೆದರೂ ಅಕ್ಕರೆ ಮೂಡಿಸುವ ಬರಹ ನಮ್ಮ ಮಧುರಾಣಿ ಅವರದ್ದು. ಅವರು ಏನೂ ಬರೆಯದೆ ಅಪರೂಪಕ್ಕೊಮ್ಮೆ ಎಫ್ಬಿಯಲ್ಲಿ ಇಣುಕಿದಾಗಲೂ ತಾವೇ ಕವಿತೆಯಾದಂತೆ ಮಿನಗು ನೋಟ ಬೀರಿರುತ್ತಾರೆ. ಅವರು ಹೆಚ್ಚು ಬರೆಯುವುದಿಲ್ಲ. ಸಾಹಿತ್ಯ ತಾನಾಗೇ ಈ 'ರಾಣಿ'ಯ ಮೂಲಕ ಆಗಾಗ 'ಮಧು'ವಾಗಿ ಹೊರಹೊಮ್ಮುತ್ತೆ. ಆತ್ಮೀಯರಾದ ಪ್ರತಿಭಾನ್ವಿತೆ ಮಧುರಾಣಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
On the birthday of our lovely writer H. S. Madhurani 🌷🌷🌷
ಕಾಮೆಂಟ್ಗಳು