ವಸುಂಧರಾ ಫಿಲಿಯೋಜಾ
ವಸುಂಧರಾ ಫಿಲಿಯೋಜಾ
ಹಿರಿಯರಾದ ಡಾ. ವಸುಂಧರಾ ಫಿಲಿಯೋಜಾ ಹಿರಿಯ ಇತಿಹಾಸಜ್ಞೆ ಮತ್ತು ಸಂಶೋಧಕಿ. ಇವರು ಅಕೆಡೆಮಿಕ್ ವಲಯದಿಂದ ಹೊರಗಿದ್ದು, ಸ್ವತಂತ್ರವಾಗಿ ಸಂಶೋಧನೆಗಳನ್ನು ನಡೆಸಿ, ತಮ್ಮದೇ ಛಾಪನ್ನು ಮೂಡಿಸಿದವರು. ಫ್ರಾನ್ಸ್ ದೇಶದಲ್ಲಿ ವ್ಯಾಪಕವಾದ ಸಂಸ್ಕೃತ ಬೆಳವಣಿಗೆಗೆ ಅಪಾರ ಕೆಲಸ ಮಾಡುತ್ತ ಬಂದಿದ್ದಾರೆ.
ವಸುಂಧರಾ 1940ರ ಜನವರಿ 1ರಂದು ಜನಿಸಿದರು. ತಂದೆ ಪಂಡಿತ ಚನ್ನಬಸಪ್ಪ ಯಲ್ಲಪ್ಪ ಕವಲಿ ಅವರಿಗೆ ಏಳು ಜನ ಮಕ್ಕಳು. ಆ ಮಕ್ಕಳ ಮಾಲೆಯಲ್ಲಿ ಇವರು ಐದನೆಯವರು. ಅದನ್ನೇ ಎನ್ಕೆಯವರು ಸಂಗೀತದಲ್ಲಿಯ ಪಂಚಮ ಸ್ವರ-ಸ್ಥಿರ ಸ್ವರ ಎಂದು ಒಮ್ಮೆ ಇವರಿಗೆ ಪತ್ರದಲ್ಲಿ ಬರೆದಿದ್ದರು. ಇವರ ತಂದೆ ಗಂಡುಮಕ್ಕಳನ್ನು ಶಾಲೆಗೆ ಕಳಿಸಿದ ಹಾಗೆ ಹೆಣ್ಣುಮಕ್ಕಳನ್ನೂ ಓದಿಸಿದರು. ಕನ್ನಡ ಶಾಲೆಯಲ್ಲಿ ಎಲ್ಲವನ್ನೂ ಕನ್ನಡದಲ್ಲಿಯೇ ಕಲಿಯುವ ಸೌಭಾಗ್ಯ ಇವರಿಗೆ ದೊರೆಯಿತು.
ವಸುಂಧರ ಅವರಿಗೆ ಸಾಕಷ್ಟು ನಂಬರು ಬರುತ್ತಿರಲಿಲ್ಲವಾದ್ದರಿಂದ ಮನೆಯಲ್ಲಿ ಧಡ್ಡಿ ಎಂಬ ಬಿರುದು ಇತ್ತಂತೆ. ಮುಂದೆ ಇವರು ಮಾಡಿದ ಕೆಲಸ ಲೋಕವೇ ಸಂಭ್ರಮಿಸುವಷ್ಟು. ಇವರು ಎಸ್.ಎಸ್.ಎಲ್.ಸಿ. ಪಾಸಾದಾಗ ತಂದೆ ಎಲ್ಲರಂತೆ ಕಾಲೇಜಿಗೆ ಹೋಗು ಆರ್ಟ್ಸ್ ಓದು ಎಂದರು. ಕಾಲೇಜಿನಲ್ಲಿ ಮೊದಲ ವರ್ಷ ಆದ ಮೇಲೆ ಅಂದಿನ ಪದ್ಧತಿಯಲ್ಲಿ ಇನ್ನೇನು ಇಂಟರ್ ಆರ್ಟ್ಸ್ಗೆ ಕಾಲೇಜು ಪ್ರಾರಂಭವಾಗಬೇಕಾದ ಸಮಯ ಇವರ ಅಣ್ಣ ವಸಂತ ಕವಲಿ ಮುಂಬೈಯಲ್ಲಿದ್ದರು. ಅವರಿಗಿದ್ದ ಅಪೆಂಡಿಸೈಟಿಸ್ ಶಸ್ತ್ರಚಿಕಿತ್ಸೆಯ ಕಾರಣಕ್ಕೆಂದು ಇವರು ಮುಂಬೈಗೆ ಹೋಗಿ ಅಲ್ಲಿಯೇ ಉಳಿಯಬೇಕಾಯಿತು. ವಡಾಲಾ ಮಾತುಂಗಾದಲ್ಲಿರುವ ಖಾಲ್ಸಾ ಕಾಲೇಜು ಸೇರಿದರು. ಇವರ ಅಭ್ಯಾಸ ಸರಿಯಾಗಿಯೇ ನಡೆದಿತ್ತು. ಅಣ್ಣನ ಮನೆಯಲ್ಲಿ ಅತ್ತಿಗೆಯ ಉಪಸ್ಥಿತಿಯಲ್ಲಿ ಇರುವುದೇ ಕಠಿಣವಾದಾಗ, ಎಲ್ಲ ಸಾಮಾನು ಹೊತ್ತುಕೊಂಡು ಧಾರವಾಡಕ್ಕೆ ಅಪ್ಪ-ಅವ್ವನ ಹತ್ತಿರ ಬಂದರು. 1960ರ ಮೇ ತಿಂಗಳಿನಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕರ್ನಾಟಕ ಕಾಲೇಜಿನಲ್ಲಿ ಮತ್ತೆ ಸೀನಿಯರ್ ಬಿ.ಎ. ಪ್ರಾರಂಭಿಸಿದರು. ಇತಿಹಾಸದಲ್ಲಿ ಬ್ರಿಟಿಷ್ ಕಾನ್ಸ್ಟಿಟ್ಯೂಷನ್, ವರ್ಲ್ಡ್ ಹಿಸ್ಟರಿ, ಇಂಡಿಯನ್ ಹಿಸ್ಟರಿ, ಕರ್ನಾಟಕ ಹಿಸ್ಟರಿ, ಇತ್ಯಾದಿ ಇತಿಹಾಸದಲ್ಲಿ ಆರು ಪೇಪರುಗಳು ಇರುತ್ತಿದ್ದವು. ಈ ಸಮಯದಲ್ಲೇ ಪ್ರೊ. ಜಿ.ಎಸ್. ದೀಕ್ಷಿತ್ ಗುರುಗಳ ಪರಿಚಯವಾಯಿತು. ದೀಕ್ಷಿತರ ಪ್ರೋತ್ಸಾಹದಿಂದ 1961ರಲ್ಲಿ ಬಿ.ಎ. ಮುಗಿಸಿ ಇತಿಹಾಸದಲ್ಲೇ ಎಂ.ಎ. ಇತಿಹಾಸಕ್ಕೆ ಸೇರಿದರು. ಆಗ ಇವರಿಗೆ ಬಿ.ಎ. ಸಾಲೆತೊರೆ, ಜಿ.ಎಸ್. ದೀಕ್ಷಿತ್, ಪಿ.ಬಿ. ದೇಸಾಯಿಯವರಂಥ ಘಟಾನುಘಟಿಗಳಾದ ಅಧ್ಯಾಪಕರಿದ್ದರು.
1962ರ ಕೊನೆಯ ವಾರದಲ್ಲಿ ಇವರಿದ್ದ ವಿದ್ಯಾರ್ಥಿಗಳ ತಂಡ ಪ್ರೊ. ದೀಕ್ಷಿತ ಹಾಗೂ ಪಿ.ಬಿ. ದೇಸಾಯಿಯವರ ಜೊತೆ ಹಂಪಿಗೆ ಅಧ್ಯಯನ ಪ್ರವಾಸಕ್ಕೆಂದು ಆಗಮಿಸಿತು. ಅದು ಹಂಪಿಗೆ ಇವರ ಮೊದಲ ಭೇಟಿ ಕೂಡ. ಅಂದೇ ಇವರಿಗೆ ಹಂಪಿಯೊಡನೆ ಲವ್ ಎಟ್ ಫಸ್ಟ್ ಸೈಟ್ ಆಯಿತು. ಆಗ ಇವರೊಡನೆ ಡಾ. ಜ್ಯೋತ್ಸ್ನಾ ಕಾಮತರು ಕೂಡಾ ಇದ್ದರು. ಹಂಪಿಯ ಇಂಚು, ಸೆಂಟಿಮೀಟರು ಚಿತ್ರ ತೆಗೆದು ಅಧ್ಯಯನ ಮಾಡುವೆ ಎಂದು ಅವರೊಡನೆ ವಸುಂಧರಾ ಹೇಳಿದರು. ಆಗ ಹಂಪೆ, ವಿಜಯನಗರ, ಕರ್ನಾಟಕ ಸಾಮ್ರಾಜ್ಯದ ಬಗ್ಗೆ ಹುಟ್ಟಿದ ಆಸಕ್ತಿಯು ನಿರಂತರ ಎನ್ನುವಂತೆ ಆಯಿತು.
1964-65ರಲ್ಲಿ ಪಿ.ಬಿ. ದೇಸಾಯರು ಡಿಪ್ಲೊಮಾ ಇನ್ ಎಪಿಗ್ರಫಿ ಆರಂಭಿಸಿದರು. ಡಾ. ಎಸ್.ಎಚ್. ರಿತ್ತಿಯವರು ಉಪನ್ಯಾಸಕರು. ಇವರಿಬ್ಬರಿಂದ ಶಾಸನಶಾಸ್ತ್ರದ ವಿವಿಧ ಮುಖಗಳು ಪರಿಚಯವಾಯಿತು. ಎಪಿಗ್ರಫಿಯ ಮೊದಲ ತಂಡ ಅದೇ ಆಗಿದ್ದರಿಂದ, ಇವರೊಬ್ಬರೇ ವಿದ್ಯಾರ್ಥಿನಿಯಾಗಿದ್ದುದರಿಂದ, ಪ್ರಥಮ ಮಹಿಳಾ ಎಪಿಗ್ರಾಫಿಕ್ ಡಿಪ್ಲೊಮಾ ಹೋಲ್ಡರ್ ಎಂಬ ಹೆಚ್ಚುಗಾರಿಕೆಯೂ ಸೇರಿಕೊಂಡಂತಾಯಿತು.
ಎಂ.ಎ. ಮುಗಿದ ನಂತರ ವಸುಂಧರಾ ಅವರು "ಟೆಂಪಲ್ಸ್ ಅಂಡರ್ ಸಂಗಮ ಡೈನಾಸ್ಟಿ" ಎಂಬ ವಿಷಯದ ಮೇಲೆ ಪಿ.ಬಿ.ದೇಸಾಯರ ನೇತೃತ್ವದಲ್ಲಿ ಪಿಎಚ್.ಡಿ. ಮಾಡಲು ತೊಡಗಿದರು. 1964-65ರ ಅವಧಿಯಲ್ಲೇ ಫ್ರೆಂಚ್ ಡಿಪ್ಲೊಮಾ ಇನ್ ಎಪಿಗ್ರಫಿಯ ಸರ್ಟಿಫಿಕೇಟ್ ಕೋರ್ಸನ್ನೂ ಮುಗಿಸಿದರು. ಇದನ್ನು ಮಾಡುವಾಗಲೇ ಫ್ರಾನ್ಸ್ ಗೆ ಹೋಗಲು ವಿದ್ಯಾರ್ಥಿವೇತನ ಸಿಕ್ಕಿತು. 1967ರಲ್ಲಿ ಸರಕಾರೀ ವೇತನದಲ್ಲಿ ಜೀನ್ ಫಿಲಿಯೋಜಾ ಅವರ ನೇತೃತ್ವದಲ್ಲಿ ಪಿಎಚ್.ಡಿ.ಯನ್ನು ಆರಂಭಿಸಿದರು. ಸಂಶೋಧನಾ ಅವಧಿಯಲ್ಲಿ ಮುಂದೆ ಇವರ ಪತಿಯಾದ ಅವರ ಮಗನ ಭೇಟಿಯೂ ಆಗಿ, ಅದು ಇವರ ಜೀವನದ ದಿಕ್ಕನ್ನೇ ಬದಲಾಯಿಸಿತು.
ವಸುಂಧರಾ ಅವರು ಹಂಪಿಯ ಮೇಲಿನ ಪ್ರೀತಿಯಿಂದಾಗಿ ಆರಂಭಿಸಿದ್ದ ಅಧ್ಯಯನಕ್ಕೆಂದು ಮಹಾಪ್ರಬಂಧದ ವಿಷಯ ಸಂಗ್ರಹದಲ್ಲಿ ತೊಡಗಿ ಮೊದಲ ಅಧ್ಯಾಯವನ್ನು ಬರೆಯಲು ಆರಂಭಿಸಿದರು. ಅದರಲ್ಲಿ ವಿಜಯನಗರದ ಆರಂಭದ ಕಾರಣಗಳು, ಐತಿಹಾಸಿಕ ಘಟನೆಗಳು, ಸಾಮ್ರಾಜ್ಯದ ಸ್ಥಾಪನೆಯ ಕಾಲ ಹುಕ್ಕ-ಬುಕ್ಕರು ಕನ್ನಡಿಗರೇ, ತೆಲುಗರೇ ಮುಂತಾದ ಚರ್ವಿತ-ಚರ್ವಣಗಳ ಸಂಗತಿಗಳೇ ತುಂಬಿದ್ದವು. ಇವರ ಮೊದಲ ಅಧ್ಯಾಯವನ್ನು ನೋಡಿದ ಜೀನ್ ಫಿಲಿಯೋಜಾರ ಪ್ರತಿಕ್ರಿಯೆ ಹೀಗಿತ್ತು. "ಬೇರೆ ವಿದ್ವಾಂಸರು ಹೇಳಿರುವ ಸಂಗತಿಗಳ ಲಘು ವಿಮರ್ಶೆಯನ್ನು ಬಿಟ್ಟರೆ ಇದರಲ್ಲಿ ನಿನ್ನ ಸ್ವಂತದ್ದು ಎಂದು ಕಾಣುವ ಸಂಗತಿಗಳು ಏನಿವೆ? ಶಾಸನ ಶಾಸ್ತ್ರ ಓದಿರುವ ನೀನು, ನಿನ್ನ ಮಾತೃಭಾಷೆಯಾದ ಕನ್ನಡದಲ್ಲೇ ಇರುವ ಶಾಸನಗಳನ್ನು ಓದಿ, ಅದರಲ್ಲಿನ ವಿವರಗಳನ್ನು ತಿಳಿಸುವೆಯಾದರೆ, ಅದು ಇತಿಹಾಸಕ್ಕೆ ನೀನು ನೀಡುವ ಸ್ವಂತ ಕೊಡುಗೆಯಾದೀತು" ಎಂದು ಸಲಹೆ ನೀಡಿದರು. ಇಷ್ಟು ದಿನ ಮಾಡಿದ ಕೆಲಸ ಹೊಳೆಯಲ್ಲಿ ಹುಣಿಸೆಹಣ್ಣು ತೊಳೆದಂತಾಯಿತಲ್ಲ ಎಂಬ ಭಾವನೆ ಮೂಡಿತು. ಅದು ಸಾಕಷ್ಟು ಸಂಕಟವನ್ನೂ ಉಂಟುಮಾಡಿತು. ಈ ವೇಳೆಗಾಗಲೇ ಇವರ ಮದುವೆಯಾಗಿತ್ತು. ಪತಿ "ಈ ಕೆಲಸವನ್ನು ಹೀಗೆ ಆರಂಭಿಸುವುದೇ ಸರಿಯಾದ ಕ್ರಮ. ಹೀಗೆ ಮಾಡುವುದರಿಂದ ನಿನ್ನ ಕಾರ್ಯಕ್ಕೆ ಹೊಸತನ ದೊರಕಿ, ಅದೇ ಮೂಲ ಕಾರ್ಯವೆಂದು ಪರಿಗಣಿಸಲ್ಪಡುತ್ತದೆ ಎಂದು ಹುರಿದುಂಬಿಸಿದರು". ಹಾಗೆ ದೊರಕಿದ ಹೊಸ ದೃಷ್ಟಿಕೋನದಿಂದ ಶಾಸನಗಳ ಪಾಠಗಳನ್ನು ಓದಲು ಆರಂಭಿಸಿದರು.
ವಸುಂಧರಾ ಅವರು 1971ರ ವೇಳೆಗೆ ಹುಕ್ಕ-ಬುಕ್ಕರ ಸುಮಾರು ನೂರೈವತ್ತು ಶಾಸನಗಳನ್ನು ಕನ್ನಡದಿಂದ ಫ್ರೆಂಚ್ಗೆ ಭಾಷಾಂತರಿಸಿ, ಅದಕ್ಕೆ ತಕ್ಕ ಅಡಿ ಟಿಪ್ಪಣಿಗಳನ್ನು ನೀಡಿದ್ದಲ್ಲದೆ, ಇನ್ನೂ ಸುಮಾರು ಐವತ್ತು ಅಪ್ರಕಟಿತ ಶಾಸನಗಳನ್ನು ಸಾರಾಂಶವನ್ನು ಕೊಟ್ಟು, ಈ ಶಾಸನಗಳ ಓದಿನಿಂದ ಹೊಸ ಸಾಮ್ರಾಜ್ಯದ ಮೇಲೆ ಏನು ಬೆಳಕು ಬೀರುತ್ತದೆ ಎಂಬ ವಿಷಯಗಳನ್ನು ಸಾರ್ಬಾನ್ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದರು. 1971ರಲ್ಲಿ ವಸುಂಧರಾ ಕವಲಿ ಫಿಲಿಯೋಜಾ ಆಗಿದ್ದ ಇವರು ಡಾ. ವಸುಂಧರಾ ಫಿಲಿಯೋಜಾ ಆದರು. 1973ರಲ್ಲಿ ಇವರ ಪ್ರಬಂಧ ಪ್ರಕಟವಾಯಿತು.
ಪಿಎಚ್.ಡಿ. ನಂತರ 1973ರಲ್ಲಿ ವಸುಂಧರಾ ಅವರ ಮಾವನವರು ವಸುಂಧರಾ ಹಾಗೂ ಅವರ ಪತಿಗೆ ಹಂಪಿಯ ಕುರಿತಾಗಿ ಸಂಶೋಧನೆ ಮಾಡಲು ಸೂಚಿಸಿದರು. ಅದರಂತೆ ದಂಪತಿಗಳು ಕಾರ್ಯಪ್ರವೃತ್ತರಾದರು. ಈ ಸಮಯದಲ್ಲಿ ದಂಪತಿಗಳು ಪಾಂಡಿಚೆರಿಯಲ್ಲಿದ್ದರು. 1955ರಲ್ಲಿ ನೆಹರೂ ಹಾಗೂ ಹೋಮಿ ಭಾಭಾ ಅವರ ಸಲಹೆ ಹಾಗೂ ಅನುಮತಿಗಳ ಅನ್ವಯ ಇವರ ಮಾವನವರಾದ ಜೀನ್ ಫಿಲಿಯೋಜಾ ಪಾಂಡಿಚೆರಿಯಲ್ಲಿ ಫ್ರೆಂಚ್ ಇನ್ಸ್ಟಿಟ್ಯೂಟ್ ಆಫ್ ಇಂಡಾಲಜಿಯನ್ನು ಸ್ಥಾಪಿಸಿ, ಅದರ ಮೊದಲ ನಿರ್ದೇಶಕರೂ ಆಗಿದ್ದರು.
ದಂಪತಿಗಳ ಅಧ್ಯಯನಕ್ಕೆ ಬೇಕಿದ್ದ ವಾಹನ, ಸಹಾಯಕರು ಮುಂತಾಗಿ ಕೆಲವು ಮೂಲಭೂತ ಸೌಕರ್ಯಗಳನ್ನು ಸಂಸ್ಥೆಯಿಂದ ಒದಗಿಸಿದರು. ಭಾರತೀಯ ಸರ್ವೇಕ್ಷಣ ಇಲಾಖೆ, ಮೈಸೂರಿನಲ್ಲಿದ್ದ ಶಾಸನ ವಿಭಾಗಗಳು ದೇವಾಲಯಗಳ ಅಳತೆಗಳನ್ನು ತೆಗೆಯಲು, ಶಾಸನಗಳ ಪಡಿಯಚ್ಚು ತೆಗೆಯಲು ಸರಳವಾಗಿ ಒಪ್ಪಿಗೆ ನೀಡುತ್ತಿದ್ದರು. ಈ ಕಾಲದಲ್ಲೇ ವಸುಂಧರಾ ವಿಜಯವಿಠ್ಠಲ ದೇವಾಲಯದ ಅನೇಕ ಶಾಸನಗಳನ್ನು ಓದಿದರು. "ಅದರ ಆನಂದವೇ ಬೇರೆ ತರಹದ್ದು, ಪ್ರೊ|| ದೇಸಾಯರ ನೆನಪು ಬರುತ್ತಿತ್ತು" ಎನ್ನುತ್ತಾರೆ ವಸುಂಧರ.
1973ರಲ್ಲಿ ಹಂಪಿಯಲ್ಲಿ ಯಾವುದೇ ಭಯವಿಲ್ಲದೇ ಓಡಾಡಬಹುದಿತ್ತು. ದೇವಾಲಯಗಳು ಸದಾ ತೆರೆದೇ ಇರುತ್ತಿದ್ದವು. ಬೆಳಗಿನ 7-30, 8-00 ಘಂಟೆಗೇ ಇವರ ಪತಿ ಸಂಶೋಧನಾ ತಾಣದಲ್ಲಿರುತ್ತಿದ್ದರು. ಮಕ್ಕಳನ್ನು ಸಿದ್ಧಪಡಿಸಿ ಇವರು ತೆರಳುವ ವೇಳೆಗೆ 9-00 ಘಂಟೆಯಾಗುತ್ತಿತ್ತು. ದೇವಾಲಯದ ಸ್ಮಾರಕ ಸಂರಕ್ಷಣಾ ಸಿಬ್ಬಂದಿಯು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮಾತ್ರ ಇರುತ್ತಿದ್ದರು. ಈ ದಂಪತಿ ಸಂಶೋಧಕರು ಅವರ ಇಬ್ಬರ ಮಕ್ಕಳು, ಮೂವರು ವಾಸ್ತು ಚಿತ್ರಕಾರರು, ಓರ್ವ ಛಾಯಾಗ್ರಾಹಕ, ಕಾರು ಚಾಲಕ ಹೀಗೆ ಒಂಭತ್ತು ಮಂದಿ ತಾಣವನ್ನು ಬಿಡುವಾಗ ಕತ್ತಲಾಗಿರುತ್ತಿತ್ತು.
ಹಂಪಿಯನ್ನಂತು ಬಿಟ್ಟಿದ್ದಾಯಿತು. ಮುಂದೇನು ಎಂದು ಯೋಚಿಸುತ್ತಿರುವಾಗ ಎಸ್.ಎಸ್. ಒಡೆಯರರು ಚೌಡದಾನಪುರ ದೇಗುಲದ ಬಗ್ಗೆ ಕೆಲಸ ಮಾಡಿರೆಂದು ಸೂಚಿಸಿದರು. ಇದೊಂದು ಸುಸಮಯ ಎಂದೇ ಭಾವಿಸಿ ಕಾರ್ಯಪ್ರವೃತ್ತರಾದರು.
ಎಂಟೇ ಶಾಸನಗಳಿದ್ದರೂ, ಒಂದಕ್ಕಿಂತ ಒಂದು ಉದ್ದ, ಕಾವ್ಯಮಯ. ಹಂಪಿಯಲ್ಲಿದ್ದ ಶಾಸನಗಳು ಹೆಚ್ಚಿನಂಶ ಗದ್ಯದಲ್ಲೇ ಇರುತ್ತಿದ್ದವು. ಚೌಡದಾನಪುರದ ಶಾಸನಗಳು ಲಾಕುಳಶೈವ ಸಂಪ್ರದಾಯಕ್ಕೆ ಸಂಬಂಧಿಸಿದವೆಂದು ಇವರಿಗೆ ತಿಳಿಯಿತು. ಶಾಸನ ಪದ್ಯಗಳನ್ನು ಓದಿ ಅರ್ಥಮಾಡಿಕೊಳ್ಳುವಷ್ಟು ಕನ್ನಡದ ಜ್ಞಾನವು ಆಗ ತಮಗಿರಲಿಲ್ಲ ಎನ್ನುವುದನ್ನು ವಸುಂಧರಾ ಪ್ರಾಂಜಲವಾಗಿ ಒಪ್ಪಿಕೊಳ್ಳುತ್ತಾರೆ. ದೈವಕೃಪೆಯೆಂಬಂತೆ ಈ ಸಮಯದಲ್ಲೇ ಪ್ರೊ.ಕೆ.ಕೃಷ್ಣಮೂರ್ತಿಯವರ ಭೇಟಿಯಾಯಿತು. “ಸರ್, ನಾನು ಚೌಡದಾನಪುರದ ಮುಕ್ತೇಶ್ವರ ದೇವಾಲಯದ ಶಾಸನಗಳನ್ನು ಓದಿ ಇಂಗ್ಲಿಷಿಗೆ ಭಾಷಾಂತರಿಸಬೇಕೆಂದಿದ್ದೇನೆ, ನನಗೆ ದಯವಿಟ್ಟು ಸಹಾಯ ಮಾಡುವಿರಾ” ಎಂದು ಕೇಳಿಕೊಂಡಾಗ, ಅವರ ಉತ್ತರ ಇವರನ್ನು ಚಕಿತಗೊಳಿಸುವಂತಿತ್ತು. ಅವರು ಹೇಳಿದರು. “ಇತಿಹಾಸ, ಶಾಸನದ ಅಭ್ಯಾಸಿಯಾಗಿ, ಶಾಸನಗಳನ್ನು ಹಿಂದಿನ ಕಾಲದ ಇತಿಹಾಸಕಾರರಂತೆ ಸಂಪೂರ್ಣ ಭಾಷಾಂತರಿಸ ಬೇಕೆಂದಿರುವಿ. ಅದಕ್ಕೆ ಕಾರಣ ನೀನು ಪಂಡಿತರ ಮಗಳಾದ್ದರಿಂದ ಸಾಹಿತ್ಯ ಸಂಗೀತದಲ್ಲೂ ಅಭಿರುಚಿ ಇರಿಸಿಕೊಂಡಿದ್ದಿ. ಬಾ, ನಿನಗೆ ಸಹಾಯ ಮಾಡುವೆ” ಎಂದರು.
ಕರ್ನಾಟಕ ಇತಿಹಾಸ ಅಕಾದೆಮಿ ಸಂಸ್ಥಾಪಕರಾದ ಪ್ರೊ. ಜಿ.ಎಸ್. ದೀಕ್ಷಿತರು. ವಸುಂಧರಾ ಅವರು ಪ್ಯಾರಿಸಿನಿಂದ ಬೆಂಗಳೂರಿಗೆ ಬಂದ ವರ್ಷದಲ್ಲೇ ಅಕಾಡೆಮಿಯ ಆಜೀವ ಸದಸ್ಯರಾಗಲು ಒತ್ತಾಸೆ ನೀಡಿದರು. ವಸುಂಧರ ಅವರು ರಾಯಚೂರಿನಲ್ಲಿ ನಡೆದ ಸಮ್ಮೇಳನದಲ್ಲಿ ಮೊದಲ ಸಲ ಭಾಗವಹಿಸಿದರು. ಉಡುಪಿಯಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷತೆಯನ್ನು ಡಾ. ಜ್ಯೋತ್ಸ್ನಾ ಕಾಮತರು ವಹಿಸಿದ್ದರು. 2008ರಲ್ಲಿ ನನಗೆ ಧರ್ಮಸ್ಥಳದಲ್ಲಿ ವಸುಂಧರಾ ಅವರಿಗೆ ಸಮ್ಮೇಳನಾಧ್ಯಕ್ಷಿಣಿಯ ಪದವಿ ಒದಗಿಬಂದಿತು. "ಡಾ|| ಪದ್ಮವಿಭೂಷಣ ವೀರೇಂದ್ರ ಹೆಗ್ಗಡೆಯವರ ಆತಿಥೇಯತ್ವದಲ್ಲಿ ನಡೆದ ಆ ಸಮ್ಮೇಳನ ಸ್ಮರಣೀಯ. ಇಂಥ ಅನೇಕ ರತ್ನಗಳು ನಮ್ಮ ನಾಡಿನಲ್ಲಿ ಇರುವಂತಾದರೆ ರಾಜ್ಯಕ್ಕೆ ಅದೆಷ್ಟು ಒಳ್ಳೆಯದಾಗುತ್ತಿತ್ತು ಎನಿಸುತ್ತದೆ" ಎಂಬುದು ವಸುಂಧರಾ ಅವರ ಗೌರವಯುತ ಮಾತು.
ವಸುಂಧರಾ ಅವರು ಇದುವರೆವಿಗೆ ಮೂವತ್ತು ಪುಸ್ತಕಗಳನ್ನಾದರೂ ಪ್ರಕಟಿಸಿದ್ದಾರೆ. ಕನ್ನಡ, ಇಂಗ್ಲಿಷ್ ಹಾಗೂ ಫ್ರೆಂಚ್ ಭಾಷೆಗಳಲ್ಲಿ ಇವರ ಬರಹಗಳಿವೆ. ಸಂಸ್ಕೃತದ ಬಗ್ಗೆಯೂ ಇವರ ಒಲವು ಎಂದಿನಿಂದಲೂ ಇದೆ. ಇದೊಂದು ಕಠಿಣ ಭಾಷೆ, ಮೃತ ಭಾಷೆ ಎಂಬೆಲ್ಲ ಬ್ರಿಟಿಷರ ಪೂರ್ವಗ್ರಹಗಳನ್ನು ಮೆಟ್ಟಿನಿಂತು, ಫ್ರಾನ್ಸ್ ನಲ್ಲಿ ಸಂಸ್ಕೃತದ ಬಗ್ಗೆ ಪ್ರೀತಿ ಬೆಳೆಯುವಂತೆ ವಸುಂಧರಾ ಅಪಾರ ಕೆಲಸ ಮಾಡಿದ್ದಾರೆ. ಇವರು ಸಂಸ್ಕೃತ ಭಾಷೆಯನ್ನು ಸರಳವಾಗಿ ಕಲಿಸಲೆಂದು ತಮ್ಮ ವಿದ್ಯಾರ್ಥಿಗಳಿಂದ ಪ್ರೇರಿತರಾಗಿ ಒಂದು ವ್ಯಾಕರಣ ಪುಸ್ತಕವನ್ನು ಸಿದ್ಧಪಡಿಸಿದರು. ಇದು ತುಂಬ ಕಿರುಗಾತ್ರದ, ಕಡಿಮೆ ಮಾಹಿತಿಯ ಪುಸ್ತಕವಾಗಿದ್ದರಿಂದ, ಸಂಸ್ಕೃತದ ಜೊತೆಗೇ, ಸಂಸ್ಕೃತಿಯ ಅನೇಕ ಸಂಗತಿಗಳನ್ನೂ ಸೇರಿಸಿ ವಿಸ್ತಾರ ಮಾಡಿದರು.
ಪರಿಣಾಮವಾಗಿ 1998ರಲ್ಲಿ “Elements de grammaire Sankrite”ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಈ ಕೃತಿ ಪ್ರಕಟವಾದ ಮೊದಲ ವರ್ಷದಲ್ಲೇ 500 ಪ್ರತಿಗಳು ಮಾರಾಟವಾದವು. ಫ್ರೆಂಚ್ ಇಂಡಾಲಜಿಸ್ಟ್ ಎಂದು ಹೇಳಿಕೊಳ್ಳುವವರಿಂದ ಇದಕ್ಕೆ ತಕ್ಕಮಟ್ಟಿನ ವಿರೋಧ ಬಂದಿತಾದರೂ, ಅದನ್ನೆಲ್ಲ ಪರಿಗಣಿಸದೇ ಮುಂದುವರೆದುದರ ಫಲವಾಗಿ, ವಿದ್ಯಾರ್ಥಿಗಳು, ಜನಸಾಮಾನ್ಯರಿಗೆ ಮೆಚ್ಚುಗೆಯಾದುದನ್ನು ಕಣ್ಣಾರೆ ನೋಡಿದ ಸಂತೋಷಭಾವ ಇವರದ್ದು. ಪ್ರತಿ ವರ್ಷ ಈ ಪುಸ್ತಕಗಳ ಅನೇಕ ಪ್ರತಿಗಳು ಮಾರಾಟವಾಗುತ್ತಿವೆ.
ವಸುಂಧರ ಅವರ ಇನ್ನೊಂದು ಕೃತಿ ಲಾಕುಳ ಶೈವ ಜಕ್ಕಣಾಚಾರ್ಯರು. ಇದಕ್ಕೆ ಇವರ ಗುರುಗಳಾದ ಜಿ.ಎಸ್. ದೀಕ್ಷಿತರು ಮುನ್ನುಡಿಯನ್ನು ಬರೆದರು. 1977ರಲ್ಲಿ ದೆಹಲಿಯ ನ್ಯಾಷನಲ್ ಬುಕ್ ಟ್ರಸ್ಟ್ ನವರು ಇವರ ವಿಜಯನಗರ ಎಂಬ ಪುಸ್ತಕ ಪ್ರಕಟಿಸಿದರು. 1996, 1999ರಲ್ಲಿ ಇದರ ಪರಿಷ್ಕೃತ ಆವೃತ್ತಿ ಪ್ರಕಟವಾಯಿತು. ಉತ್ತರಭಾರತದ ಅನೇಕ ಭಾಷೆಗಳಿಗೆ ಅನುವಾದಗೊಂಡಿದೆ. ಈ ಪುಸ್ತಕವು ಮಧ್ಯಯುಗೀನ ಭಾರತೀಯ ಇತಿಹಾಸವನ್ನು ಅರಿಯಲು ಉತ್ತಮ ಆಕರ ಗ್ರಂಥ ಎಂದು ಶಿಫಾರಸು ಮಾಡಲಾಗಿದೆ. ಆದರೆ ದಕ್ಷಿಣ ಭಾರತದ ಯಾವ ಭಾಷೆಗೂ ತರ್ಜುಮೆಗೊಂಡಿಲ್ಲ. ಇವಲ್ಲದೇ 200ಕ್ಕೂ ಹೆಚ್ಚು ಬಿಡಿ ಲೇಖನಗಳನ್ನು ಕನ್ನಡ, ಇಂಗ್ಲಿಷ್ ಹಾಗೂ ಫ್ರೆಂಚ್ ಭಾಷೆಗಳಲ್ಲಿ ಪ್ರಕಟಿಸಲಾಗಿದೆ.
ವಸುಂಧರಾ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಸಂದಿದೆ.
ಮಹಾನ್ ಸಾಧಕಿ, ಇತಿಹಾಸ ತಜ್ಞೆ, ಸಂಸ್ಕೃತ ಭಾಷಾ ಪೋಷಕಿ ನಮ್ಮೆಲ್ಲರ ಪ್ರೋತ್ಸಾಹಕಿ ಆತ್ಮೀಯ ಹಿರಿಯರಾದ ಡಾ. ವಸುಂಧರಾ ಫಿಲಿಯೋಜಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
All credits to great information produced by Sri. Shankar Ajjampura Sir through lovely interview in the year 2020
Happy birthday to our great Historian and affectionate Dr. Vasundhara Filliozat Filliozat Amma
ಕಾಮೆಂಟ್ಗಳು