ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಹಾದೇವ ದೇಸಾಯಿ


ಮಹಾದೇವ ಹರೀಭಾಯಿ ದೇಸಾಯಿ


ಮಹಾತ್ಮ ಗಾಂಧೀಜಿಯವರ ಆತ್ಮ ಚರಿತ್ರೆಯನ್ನು ವಿಶ್ವದೆಲ್ಲೆಡೆಯ ಓದುಗರಿಗೆ ಲಭ್ಯವಾಗುವಂತೆ ಮಾಡಿದ ಮಹಾನ್ ವ್ಯಕ್ತಿ   ಮಹಾದೇವ ಹರೀಭಾಯಿ ದೇಸಾಯಿ.  ಅವರು ಮಹಾತ್ಮರ ನೆರಳಿನಂತೆ,  ಅವರ ಆಪ್ತ ಕಾರ್ಯದರ್ಶಿಯಾಗಿ, ಗಾಂಧಿವಿಚಾರದ ವ್ಯಾಖ್ಯಾನಕಾರರಾಗಿ, ಸಾತ್ತ್ವಿಕ ಶಕ್ತಿಯ ಪ್ರತೀಕರಾಗಿ, ಸೆರೆಮನೆಯಲ್ಲೇ ಪ್ರಾಣಬಿಟ್ಟ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿ ವಿಶ್ವಮಾನ್ಯರು.

ಮಹಾದೇವ ದೇಸಾಯಿ ಗುಜರಾತಿನ ಸೂರತ್ ಜಿಲ್ಲೆಯ ಓಲ್ಪಾಡ್ ತಾಲ್ಲೂಕಿನ ಸರಾಸ್ ಗ್ರಾಮದಲ್ಲಿ 1892ರ ಜನವರಿ 1 ರಂದು ಜನಿಸಿದರು. ತಂದೆ ಹರಿಭಾಯಿ ಉಪಾಧ್ಯಾಯರಾಗಿದ್ದರು.  ತಾಯಿ ಜಮುನಾ ಬಹೆನ್.  ಮಹಾದೇವರಿಗೆ ಇನ್ನೂ  7 ವರ್ಷ ಆಗಿದ್ದಾಗ ತಾಯಿ ತೀರಿಕೊಂಡರು. ಮಹಾದೇವ ದೇಸಾಯಿಯವರಿಗೆ 13 ನೆಯ ವಯಸ್ಸಿನಲ್ಲಿ ದುರ್ಗಾ ಬಹೆನ್‍ರೊಂದಿಗೆ ಮದುವೆಯಾಯಿತು. ಇವರ ಏಕಮಾತ್ರ ಪುತ್ರ ನಾರಾಯಣ ದೇಸಾಯಿ ಸರ್ವೋದಯ ಕಾರ್ಯಕರ್ತರಾದರು.  

1906ರಲ್ಲಿ ಉತ್ತಮ ಶ್ರೇಣಿಯಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆ ಮುಗಿಸಿದ ಮಹಾದೇವ ದೇಸಾಯಿಯವರು ವಿದ್ಯಾರ್ಥಿವೇತನ ಪಡೆದು 1907ರಲ್ಲಿ ಮುಂಬಯಿಯ ಎಲ್ಫಿನ್‍ಸ್ಟನ್ ಕಾಲೇಜು ಸೇರಿದರು. 1910ರಲ್ಲಿ ಪದವೀಧರರಾದರು. ಅನಂತರ ಅಲ್ಲಿಯ ನ್ಯಾಯಶಾಸ್ತ್ರ ಕಾಲೇಜನ್ನು ಸೇರಿ 1913ರಲ್ಲಿ ಎಲ್‍ಎಲ್.ಬಿ. ಪದವಿ ಪಡೆದರು.  ವಿದ್ಯಾಭ್ಯಾಸ ಮುಗಿಸಿದ ಅನಂತರ ಸ್ವಲ್ಪ ದಿನಗಳಲ್ಲೇ ಇವರು ಲಾರ್ಡ್ ಮಾರ್ಲೆಯ 'ಅನ್ ಕಾಂಪ್ರೊಮೈಸ್' ಎಂಬ ಗ್ರಂಥವನ್ನು ಭಾಷಾಂತರ ಮಾಡಿ ಒಂದು ಸಾವಿರ ರೂಪಾಯಿಗಳ ಬಹುಮಾನ ಪಡೆದರು. ಇದು ಅನಂತರ 1925ರಲ್ಲಿ ಪ್ರಕಟಗೊಂಡಿತು. 

ಮಹಾದೇವ ದೇಸಾಯಿ ಅವರು ಜೀವನೋಪಾಯಕ್ಕಾಗಿ  ವಕೀಲಿ ಆರಂಭಿಸಿದರು. ಆದರೆ ಅದರಲ್ಲಿ ಇವರಿಗೆ ಯಶಸ್ಸು ದೊರಕಲಿಲ್ಲ. ಹೀಗಾಗಿ ಗೆಳೆಯರೊಬ್ಬರ ಸಹಾಯದಿಂದ ಸಹಕಾರ ಬ್ಯಾಂಕೊಂದರಲ್ಲಿ ನೌಕರರಾಗಿ ಸೇರಿದರು. ಬ್ಯಾಂಕಿನಲ್ಲಿ ನಡೆಯುತ್ತಿದ್ದ ಅವ್ಯವಹಾರಗಳಿಂದ ಬೇಸರಗೊಂಡು ಆ ಕೆಲಸವನ್ನೂ  1917ರ ಆಗಸ್ಟ್ ಸಮಯದಲ್ಲಿ  ಬಿಟ್ಟುಬಿಟ್ಟರು. ಗುಜರಾತಿ, ಇಂಗ್ಲಿಷ್, ಸಂಸ್ಕೃತ, ಬಂಗಾಳಿ, ಹಿಂದಿ ಮತ್ತು ಮರಾಠಿ ಭಾಷೆಗಳ ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡುತ್ತಿದ್ದ ಮಹಾದೇವ ದೇಸಾಯಿಯವರು ಅದೇ ಸಮಯಕ್ಕೆ ಗಾಂಧಿಯವರನ್ನು ಕಂಡರು. ಒಡನೆಯೇ ಇವರು ಮಹಾತ್ಮರ ಪ್ರಭಾವಕ್ಕೆ ಒಳಗಾಗಿ ಅವರ ಆಪ್ತಕಾರ್ಯದರ್ಶಿಯಾಗಿ ಸೇರಿ,  ಇಪ್ಪತ್ತೈದು ವರ್ಷಗಳ ಕಾಲ ಗಾಂಧೀಜಿಯವರನ್ನು ನೆರಳಿನಂತೆ ಅನುಸರಿಸಿ ಆದರ್ಶ ರೀತಿಯಲ್ಲಿ ಕಾರ್ಯ ನಿರ್ವಹಿಸಿದರು.

ಚಂಪಾರಣ್ ಸತ್ಯಾಗ್ರಹದಲ್ಲಿ ಭಾಗವಹಿಸಿದ ಅನಂತರ ಗಾಂಧೀಜಿಯವರೊಂದಿಗೆ ಸಾಬರಮತಿ ಆಶ್ರಮದಲ್ಲೇ ನೆಲೆಸಿದ ಮಹಾದೇವ ದೇಸಾಯಿಯವರು ಯಂಗ್ ಇಂಡಿಯ ಮತ್ತು ನವಜೀವನ ಪತ್ರಿಕೆಗಳ ಸಂಪಾದನೆಯ ಕಾರ್ಯದಲ್ಲಿ ಗಾಂಧೀಜಿಯವರಿಗೆ ನಿರಂತರ ನೆರವು ನೀಡಿದರು. ಗಾಂಧಿಯವರು ಸೆರೆಮನೆಯಲ್ಲಿದ್ದಾಗ ಮಹಾದೇವರೇ ಈ ಪತ್ರಿಕೆಗಳ ಮೂಲಕ ಪ್ರಕಾಶಪಡಿಸಿದ ಲೇಖನಗಳು ಸ್ವಾತಂತ್ರ್ಯ ಚಳುವಳಿಯನ್ನು ಇನ್ನಷ್ಟು ತೀವ್ರಗೊಳಿಸಿದವು. ಗಾಂಧೀಜಿಯವರ ಇಚ್ಛೆಯ ಮೇರೆಗೆ ಇವರು ಅಲಹಾಬಾದಿಗೆ ಹೋಗಿ ಮೋತಿಲಾಲ್ ನೆಹರೂ ಅವರ ಇಂಡಿಪೆಂಡೆಂಟ್ ಪತ್ರಿಕೆಯ ಸಂಪಾದಕರಾಗಿದ್ದರು. ಆದರೆ ಸ್ವಲ್ಪ ಕಾಲದಲ್ಲಿಯೇ ಸರ್ಕಾರ ದೇಸಾಯಿಯವರನ್ನೂ ಬಂಧಿಸಿದ್ದರಿಂದ ಆ ಕೆಲಸವನ್ನು ಮುಂದುವರಿಸಲಾಗಲಿಲ್ಲ. 
ಬಿಡುಗಡೆಯಾದ ಅನಂತರ ಸಾಬರಮತಿ ಆಶ್ರಮಕ್ಕೆ ಹಿಂತಿರುಗಿ ಗಾಂಧಿಯವರ ಆಪ್ತ ಕಾರ್ಯದರ್ಶಿಯಾಗಿ ತಮ್ಮ ಕಾರ್ಯವನ್ನು ಮುಂದುವರಿಸಿದರು. ಬರ್ಡೋಲಿ ಮತ್ತು ಉಪ್ಪಿನ ಸತ್ಯಾಗ್ರಹಗಳಲ್ಲಿ ಭಾಗವಹಿಸಿ ಮತ್ತೆ ಸೆರೆಮನೆವಾಸ ಅನುಭವಿಸಿದರು.

ಮಹಾದೇವ ದೇಸಾಯಿ ಅವರು ಮಹಾತ್ಮ ಗಾಂಧಿಯವರ ಜೊತೆಯಲ್ಲಿ ಭಾರತದ ಎಲ್ಲ ಪ್ರಾಂತ್ಯಗಳಲ್ಲೂ ಹಲವಾರು ಬಾರಿ ಪ್ರವಾಸ ಮಾಡಿದರು. 1931ರಲ್ಲಿ ಲಂಡನ್ನಿನಲ್ಲಿ ನಡೆದ ದುಂಡುಮೇಜಿನ ಪರಿಷತ್ತಿಗೆ ಗಾಂಧಿಯವರು ಹೋಗಿದ್ದಾಗ ಮಹಾದೇವ ದೇಸಾಯಿಯವರೂ ಅವರೊಂದಿಗೆ ಹೋಗಿದ್ದರು.

ಸರ್ಕಾರ 1942 ರ ಆಗಸ್ಟ್ 9 ರಂದು ಮುಂಜಾನೆ ಗಾಂಧಿಯವರೊಡನೆ ಮಹಾದೇವ ದೇಸಾಯಿಯವರನ್ನೂ ಬಂಧಿಸಿ ಪುಣೆಯ ಆಗಾಖಾನ್ ಅರಮನೆಗೆ ರವಾನಿಸಿತು. ಒಂದು ವಾರದಲ್ಲಿಯೇ, 1942ರ ಆಗಸ್ಟ್ 15 ರಂದು ಮಹಾದೇವ ದೇಸಾಯಿಯವರು ಹೃದಯಾಘಾತದಿಂದ ಮರಣ ಹೊಂದಿದರು. ಸ್ವಯಂ ಮಹಾತ್ಮ ಗಾಂಧಿಯವರೇ ಮಹಾದೇವರ ಚಿತೆಗೆ ಅಗ್ನಿಸ್ಪರ್ಶ ಮಾಡಿ ಅಂತ್ಯಕ್ರಿಯೆಗಳನ್ನು ನಡೆಸಿದರು. ಗಾಂಧಿಯವರು ಆಗಾಖಾನ್ ಸೆರೆಮನೆಯಲ್ಲಿದ್ದ  ಎರಡು ವರ್ಷಗಳಲ್ಲಿ ಪ್ರತಿದಿನವೂ ಮಹಾದೇವ ದೇಸಾಯಿಯವರ ಸಮಾಧಿಯ ಬಳಿಗೆ ಹೋಗಿ ಅದಕ್ಕೆ ಪುಷ್ಪಗಳನ್ನು ಅರ್ಪಿಸಿ ಬರುತ್ತಿದ್ದರು. ಮಹಾದೇವರು ಯೋಗಿಯಂತೆ ಸತ್ತಿದ್ದಾರೆ. ಅವರದು ದೇಶಭಕ್ತನ ಸಾವು, ಎಂಬುದಾಗಿ ಗಾಂಧಿಯವರು ಮಹಾದೇವ ದೇಸಾಯಿಯವರ ಬಗ್ಗೆ ಬರೆದರು. ಇವರ ಅಸಾಮಾನ್ಯ ಬದುಕಿನ ರೀತಿಗೆ ಗಾಂಧಿಯವರು ಮಾರುಹೋಗಿದ್ದರು. ಆವಶ್ಯಕತೆ ಒದಗಿದಾಗ ತಮ್ಮನ್ನು ತಾವೇ ಮರೆತು ಕರಗಿ ಹೋಗುವ ಶಕ್ತಿಯೇ ಮಹಾದೇವರ ಶ್ರೇಷ್ಠ ಗುಣವೆಂದೂ ಮಹಾದೇವ್ ಸಂಪೂರ್ಣವಾಗಿ ತಮ್ಮಲ್ಲಿ ಲೀನವಾಗಿದ್ದರೆಂದೂ ತಮ್ಮನ್ನು ಬಿಟ್ಟು ಅವರಿಗೆ ಬೇರೆ ಅಸ್ತಿತ್ವವೇ ಇರಲಿಲ್ಲವೆಂದೂ ಗಾಂಧಿಯವರು ಹೃದಯಾಂತರಾಳದಿಂದ ನುಡಿಯುತ್ತಿದ್ದರು.

ಮಹಾದೇವ ದೇಸಾಯಿ ಅವರು ಯಂಗ್ ಇಂಡಿಯ, ನವಜೀವನ ಮತ್ತು ಹರಿಜನ ಪತ್ರಿಕೆಗಳಲ್ಲಿ ಬರೆದಿರುವ ಲೇಖನಗಳು ಹಾಗೂ  ಇತರ ಗ್ರಂಥಗಳು ಗಾಂಧೀವಿಚಾರದ ಅಧಿಕೃತ ವ್ಯಾಖ್ಯಾನಗಳಂತಿವೆ. ಗಾಂಧಿಯವರೊಂದಿಗೆ  ಇದ್ದಾಗ ಬರೆದಿಟ್ಟಿದ್ದ ದಿನಚರಿ ಹಲವು ಸಂಪುಟಗಳಲ್ಲಿ ಪ್ರಕಟಗೊಂಡಿವೆ. ವಿತ್ ಗಾಂಧಿ ಇನ್ ಸಿಲೋನ್ (1928), ದಿ ಸ್ಟೋರಿ ಆಫ್ ಬರ್ಡೋಲಿ, ಸ್ವದೇಶಿ - ಟ್ರೂ ಅಂಡ್ ಫಾಲ್ಸ್, ಆನ್‍ವರ್ದಿ ಆಫ್ ವರ್ಧಾ (1929), ಎಕ್ಲಿಪ್ಸ್ ಆಫ್ ಫೇತ್, ದಿ ನೇಷನ್ಸ್ ವಾಯ್ಸ್ (1932), ದಿ ಎಪಿಕ್ ಆಫ್ ಟ್ರಾವಂಕೂರ್ (1937), ಗೀತಾ ಅಕಾರ್ಡಿಂಗ್ ಟು ಗಾಂಧಿ- ಇವು ಮಹಾದೇವ ದೇಸಾಯಿಯವರ ಇತರ ಕೆಲವು ಗ್ರಂಥಗಳು. 

ಗುಜರಾತಿಯಲ್ಲಿರುವ ಮುಖ್ಯ ಗ್ರಂಥಗಳು ವೀರ ವಲ್ಲಭ ಭಾಯ್, ಖಾನ್ ಅಬ್ದುಲ್ ಗಫಾರ್‍ ಖಾನ್ ಅವರ ಜೀವನ ಚರಿತ್ರೆ ಖುದಾಯ್ ಖಿದ್ಮತ್‍ಗಾರ್, ಏಕ್ ಧರ್ಮಯುದ್ಧ್ ಮತ್ತು ಸಂತ ಫ್ರಾನ್ಸಿಸ್ ಗ್ಸೇವಿಯರ್. ಇಷ್ಟೇ ಅಲ್ಲದೆ ಇವರು ಬಂಗಾಳಿಯಿಂದ ರವೀಂದ್ರನಾಥ ಠಾಕೂರರ ಪ್ರಾಚೀನ ಸಾಹಿತ್ಯ ಮತ್ತು ಚಿತ್ರಾಂಗದ ಕೃತಿಗಳನ್ನು ಗುಜರಾತಿಗೆ ಭಾಷಾಂತರ ಮಾಡಿದ್ದಾರೆ.  ಇದಲ್ಲದೆ ನೆಹರೂ ಅವರ ಆತ್ಮಚರಿತ್ರೆಯನ್ನು ಇಂಗ್ಲಿಷಿನಿಂದ ಗುಜರಾಥಿ ಭಾಷೆಗೆ ತಂದರು.  ಮಹಾತ್ಮರ ಜೀವನ ಚರಿತ್ರೆಯನ್ನು ಇಂಗ್ಲಿಷಿಗೆ ತಂದ 'The story of my experiments with Truth’ ಕೃತಿಯಂತೂ ಸಮಸ್ತ ವಿಶ್ವಕ್ಕೆ ಮಹಾತ್ಮರನ್ನು ತೆರೆದುಡುವಲ್ಲಿ ಮೂಡಿದ ಅದ್ಭುತ ಕಾರ್ಯ. 

ಅಹಮದಾಬಾದಿನ ಗುಜರಾತ್ ವಿದ್ಯಾಪೀಠದಲ್ಲಿ ಮಹಾದೇವ ದೇಸಾಯಿ ಸಮಾಜ ಮಹಾವಿದ್ಯಾಲಯ ಎಂಬ ಸಂಸ್ಥೆಯಿದೆ. ಮಹಾತ್ಮರ ಸ್ಮರಣೆಯೊಂದಿಗೆ ಮಹಾದೇವ ದೇಸಾಯಿ ಸ್ಮರಣೆ ಆ ಮಹಾದೇವನಿಗೂ ಪ್ರಿಯವಾಗಿದ್ದಿರಲೇಬೇಕು.

On the birth anniversary Mahadeva Desai, a great secretary known in this world to none other than Mahatma Gandhi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ