ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮೀನಾ ಕೊಲ್ಲ


 ಮೀನಾ ಕೊಲ್ಲ


ಬದುಕೆಂಬುದು ಎಷ್ಟೊಂದು ವಿಸ್ಮಯಕಾರಿ.  ಅದು ತನ್ನನರಸಿದವರಿಗೆ ಏನನ್ನೇ ಆದರೂ ಕೊಡಬಲ್ಲದು.  ಅದನ್ನು ಅರಸಿ ಹೊರಟವರು ಕಡಿಮೆ ಎಂದೆನಿಸಿದರೂ; ಹಾಗೆ ಅರಸಿ ಹೋಗಿ ಗೆದ್ದವರು, ಕೆಲವು ದೊಡ್ಡ ಹೆಸರಿನವರು ಮಾತ್ರಾ ಎಂದು ನಮಗನಿಸುವುದು ನಿಜವಾದರೂ; ನಮ್ಮ ದೃಷ್ಟಿ ಮುಕ್ತವಾಗಿದ್ದಲ್ಲಿ, ಅಂತಹವರು ನಮ್ಮಗಳ ನಡುವೆಯೂ ಗೋಚರಿಸುತ್ತಾರೆ.  ಹೀಗೆ ಕಳೆದ ವರ್ಷದಲ್ಲಿ ನನ್ನ ದೃಷ್ಟಿಗೆ ಸಿಲುಕಿದವರು ಮೀನಾ ಕೊಲ್ಲ.

ಮೀನಾ ಅವರ ಹುಟ್ಟು ಹಬ್ಬ ಜನವರಿ 22ರಂದು.  ಇವರು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಬಂಟುಮಿಲ್ಲಿ ಎಂಬ ಪುಟ್ಟ ಹಳ್ಳಿಯಿಂದ ಬಂದವರು.  ಬಡತನದ ಬವಣೆಯ ನಡುವೆಯೂ ಏನಾದರೂ ಮಾಡಬೇಕು ಎಂಬ ತಹ ತಹ ಇದ್ದ ಇವರು ಬದುಕಿಗಾಗಿ ಕೆಲಸ ಮಾಡುತ್ತ, ಓದನ್ನು ಕೂಡಾ ಮಾಡಿದರು.  

ಮೀನಾ ಅವರು ಬದುಕಿನ ಅರಸುವಿಕೆಯಲ್ಲಿ ಊರಿಂದೂರಿಗೆ ಬಂದು, ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡರು.  ಮಾರಾಟ, ಗ್ರಾಹಕ ಸೇವೆ, ಲೆಕ್ಕಪತ್ರ, ವಾಣಿಜ್ಯ ಹೀಗೆ ಹಲವು ರೀತಿಯಲ್ಲಿ ಕೆಲಸ ಮಾಡಿದರು.  ಕನ್ನಡ ಪ್ರಭ ಕಚೇರಿಯಲ್ಲಿ ಏಳು ವರ್ಷ ಕಾಲ ಲೆಕ್ಕಪತ್ರ ಜವಾಬ್ದಾರಿ ನಿರ್ವಹಿಸಿದರು.

ಬದುಕೆಂದರೆ ಹೊಟ್ಟೆ ಹೊರೆಯುವುದಕ್ಕೆ ದುಡಿತ ಮತ್ತು ವಿಶ್ರಾಂತಿ ಇಷ್ಟೆಯೇ ಎಂಬ ಪ್ರಶ್ನೆ ಮೂಡುತ್ತಿತ್ತು. ಬೆಳೆದು ಬಂದ ತೆಲುಗಿನ ಹೊರತಾಗಿ ಅವರಿಗಿನ್ಯಾವ ಭಾಷೆಯ ಪರಿಚಯವೂ ಇಲ್ಲದ ಸಂಕೋಚ ಭಾವ ಹಿಂಡುತ್ತಿತ್ತು.  ಭವಿಷ್ಯವೆಂದರೆ ಏನೆಂಬ ಪ್ರಶ್ನೆಗಳಿಗೆ ಆಸ್ಪದವಿಲ್ಲವೇನೊ ಎಂಬ ವಾತಾವರಣ ಕಟ್ಟಿಹಾಕಿದಂತಿತ್ತು.  ಬಿಡುವಾದಾಗ ಚಿನ್ಮಯ ಮಿಷನ್ ದೇಗುಲಕ್ಕೆ ಹೋಗುವುದರ ಹೊರತು ಬಹುತೇಕ ಮೌನದಲ್ಲೇ ಅವರ ದೈನಂದಿನ ಬದುಕು ಸಾಗುತ್ತಿತ್ತು.

ಕ್ರಮೇಣದಲ್ಲಿ ಮೀನಾ ಕೊಲ್ಲ ಅವರಲ್ಲಿದ್ದ ಮೌನವೇ ಅವರಿಗೆ ಅವರೊಳಗೆ ಒಂದು ಹೊಳಹು ಕಾಣಿಸತೊಡಗಿತು. ಅವರ ಮಾತಲ್ಲೇ ಹೇಳುವುದಾದರೆ "ನಾನೊಂದು
ಪುಟ್ಟಗ್ರಾಮದಿಂದ ಬಂದ, ದೊಡ್ಡ ಕನಸು ಮನದಲ್ಲಿ ತುಂಬಿಕೊಂಡ, ಹೃದಯದಲ್ಲಿ ಒಲವು ತುಂಬಿದ, ನನ್ನ ಕ್ರಿಯೆ ನನ್ನ ಪರಿಸರದಲ್ಲಿ ಬದಲಾವಣೆ ತರುತ್ತದೆ ಎಂಬ ನಂಬಿಕೆ ಹೊತ್ತ ಹುಡುಗಿ; ತೋಟಗಾರನೊಬ್ಬ ತನ್ನ ತೋಟದಲ್ಲಿ ಬೀಜ ಬಿತ್ತುತ್ತ ಹೋದಂತೆ" ಎಂಬ ಭಾವ ಅವರೊಳಗೆ ಧ್ವನಿಸುತ್ತ ಸಾಗಿತು. ಮೀನಾ ಅವರಿಗೆ ತಾವು ಬೆಳೆದ ಹಳ್ಳಿಯ ಜನರ ಆಪ್ತತೆ, ಅವರ ಪರಿಶ್ರಮ, ಅಲ್ಲಿನ ಸಾಂಸ್ಕೃತಿಕ ಆವರಣ, ಬದುಕಿನ ಶುದ್ಧತೆಗಳ ಕುರಿತಾಗಿ ಮನ ಹರಿಯಿತು.  ಅಲ್ಲಿನ ಜನ ಬೆಳೆಯುವ ತರಕಾರಿ -  ದಿನಸಿಗಳ ಮೂಲಕ, ಅವರುಗಳು ಆಹಾರ ತಯಾರಿಸುವ ವಿಧಾನಗಳ ಮೂಲಕ ಜನರ ಬದುಕಿಗೆ ಶುದ್ಧ ಆಹಾರ ಪದಾರ್ಥಗಳನ್ನು ತಲುಪಿಸುವ ಆಶಯ ಮೂಡಿತು.  ಹೀಗೆ ಅವರು ಆರಂಭಿಸಿದ್ದು "ಧಾತ್ರಿ ಫುಡ್ಸ್ ಎಂಬ ಸಂಸ್ಥೆ".  ನೈಸರ್ಗಿಕ ರೀತಿಯಲ್ಲಿ ಆಹಾರ ವಸ್ತಗಳನ್ನು ತಯಾರಿಸುತ್ತಿರುವ ಈ ಸಂಸ್ಥೆ ತನ್ನ ಉತ್ಪನ್ನಗಳನ್ನು ಭಾರತದಲ್ಲಿ ಮಾತ್ರವಲ್ಲದೆ ವಿವಿಧ ದೇಶಗಳಿಗೆ ರಫ್ತು ಮಾಡುತ್ತಿದೆ.  ಹೀಗೆ ಮೂಡಿದ ಅವರ ಸಾಧನೆಯಿಂದ ಗ್ರಾಮೀಣ ವಸ್ತುಗಳಿಗೆ ಬೇಡಿಕೆ ಮೂಡುವುದರ ಜೊತೆಗೆ ಅನೇಕರಿಗೆ ಉದ್ಯೋಗವನ್ನೂ ಸೃಷ್ಟಿಸಿದೆ.

ಉತ್ತಮ ಧ್ವನಿ, ಸಾಹಿತ್ಯ ಮತ್ತು ಸಂಗೀತ ಜ್ಞಾನವುಳ್ಳ ಮೀನ ಕೊಲ್ಲ ಅವರು ತೆಲುಗು "ಎನ್ಆರ್ಐ ರೇಡಿಯೋ" ಆರ್ ಜೆ ಆಗಿ ಸಹಾ ಹೆಸರಾಗಿದ್ದು, ತಾವು ಮೂಡಿಸುವ ಕಥಾನಕಗಳ ಮೂಲಕ ಅನೇಕರನ್ನು ಪರಿಚಯಮಾಡಿಕೊಟ್ಟು ಜನಪ್ರಿಯರಾಗಿದ್ದಾರೆ.  ಸಂಪರ್ಕ ಭಾಷೆಯಾಗಿ ಅವರಿಗೆ ಇಂಗ್ಲಿಷ್ ಒಲಿದಿದೆ.  ಕನ್ನಡದ ಹಿರಿಯ ಪರಂಪರೆಗೆ ಮಾರುಹೋಗಿ ಕನ್ನಡವನ್ನು ಕಲಿತಿದ್ದೇನೆ ಎನ್ನುತ್ತಾರೆ.

ನಾನಿನ್ನೂ ಮಾಡಬೇಕಿರುವುದು ಬಹಳಷ್ಟಿದೆ, ನಾನಿನ್ನೂ ಚಿಕ್ಕವಳು ಎಂಬುದು ಮೀನಾ ಕೊಲ್ಲ ಅವರ ನಮ್ರ ಮಾತು.  ಅವರು ಇನ್ನೂ ಸಾಧಿಸುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ.

ನನ್ನ ಬರಹಗಳನ್ನು ನಿರಂತರ ಪ್ರೋತ್ಸಾಹಿಸುತ್ತ ಮೀನಾ ಕೊಲ್ಲ ಅವರಿಗೆ ವಂದಿಸುತ್ತ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಅರ್ಪಿಸುತ್ತಿದ್ದೇನೆ.

Happy birthday Meena Kolla

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ