ಅರ್ಚನಾ ಉಡುಪಾ
ಅರ್ಚನಾ ಉಡುಪ
ಅರ್ಚನಾ ಉಡುಪ ರಾಷ್ಟ್ರಮಟ್ಟದಲ್ಲಿ ದೊಡ್ಡ ಸಾಧನೆಯೊಂದಿಗೆ ಗಾಯನ ಕ್ಷೇತ್ರಕ್ಕೆ ಬಂದು ಅಪಾರ ಸಾಧನೆ ಮಾಡುತ್ತಿರುವ ಕನ್ನಡತಿ.
ಜನವರಿ 21 ಅರ್ಚನಾ ಉಡುಪ ಅವರ ಜನ್ಮದಿನ. ಈಕೆ ಚಿಕ್ಕಂದಿನಿಂದಲೆ ಕೌಟುಂಬಿಕ ಆವರಣದಲ್ಲಿ ಹಾಡುಹಕ್ಕಿಯೆಂದು ಚಿರಪರಿಚಿತರಾಗಿದ್ದ ಬಾಲ ಪ್ರತಿಭೆ. ಯಾವುದೇ ಮದುವೆ, ಮುಂಜಿ ಸಮಾರಂಭಗಳಲ್ಲಿ ಈಕೆಯ ಗಾನದ್ದೇ ಕಲರವ.
ಅರ್ಚನಾ ಉಡುಪ ಅವರಿಗೆ ಸಂಗೀತದಲ್ಲಿ ತಂದೆ ಗಾಯಕ ನಗರ ಶ್ರೀನಿವಾಸ ಉಡುಪ ಅವರೇ ಮೊದಲ ಗುರುವಾದರು. ತಮ್ಮ ಕನಸನ್ನು ಮಗಳ ಸಂಸ್ಕಾರದಲ್ಲಿ ಬಿತ್ತಿ, ಈಕೆ ದೊಡ್ಡ ಮಟ್ಟದ ಗಾಯಕಿಯಾಗಿ ಬೆಳೆಯುವಲ್ಲಿ ಬೆಂಗಾವಲಾಗಿ ನಿಂತರು. ಅರ್ಚನಾ ಮದುವೆಯಾದದ್ದು ಮಹಾನ್ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ಪುತ್ರ ಶ್ರೀರಂಗ ಅವರನ್ನು.
ಅರ್ಚನಾ ಉಡುಪ 1998ರಲ್ಲಿ ಸೋನು ನಿಗಮ್ ನಡೆಸಿಕೊಡುತ್ತಿದ್ದ ಪ್ರಖ್ಯಾತ 'ಝೀ ಟಿವಿ ಸರೆಗಮ' ಹಿಂದಿ ಚಲನಚಿತ್ರಗಾಯನಪ್ರಶಸ್ತಿ ಗೆದ್ದ ಪ್ರಥಮ ದಕ್ಷಿಣ ಭಾರತದ ಗಾಯಕಿ ಎಂಬ ಕೀರ್ತಿಗೆ ಪಾತ್ರರಾದರು. ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಗ್ರೇಡೆಡ್ ಕಲಾವಿದೆಯಾದ ಇವರು ಶಾಸ್ತ್ರಿಯ ಸಂಗೀತ, ಚಿತ್ರಗೀತೆ ಮತ್ತು ಸುಗಮ ಸಂಗೀತದ ಮೂರೂ ಲೋಕಗಳಲ್ಲೂ ಗಮನಾರ್ಹ ಸಾಧನೆ ಮಾಡುತ್ತ ಬಂದರು. ಹಲವು ಸಹಸ್ರ ಧ್ವನಿ ಸುರುಳಿಗಳಿಗೆ ಧ್ವನಿಯಾದರು. ಮೈಸೂರು ಅನಂತಸ್ವಾಮಿ ಮತ್ತು ಸಿ. ಅಶ್ವಥ್ರಂಥ ಅತಿರಥ ಮಹಾರಥರ ಮಾರ್ಗದರ್ಶನದಲ್ಲಿ ಅನೇಕ ಕವಿಗಳ ಗೀತೆಗಳಿಗೆ ಭಾವ ತುಂಬಿದರು. ಖ್ಯಾತ ನಾಮರಾದ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಯೇಸುದಾಸ್, ಸೋನು ನಿಗಮ್, ಹರಿಹರನ್, ಶಾನ್, ಜಗಜೀತ್ ಸಿಂಗ್, ಮನ್ನಾಡೆ, ಸೇರಿದಂತೆ ದೇಶದ ಬಹುತೇಕ ಶ್ರೇಷ್ಠ ಪರಂಪರೆಯ ಗಾಯಕರೊಂದಿಗೆ ದನಿಗೂಡಿಸಿ ಅನೇಕ ಸಮಾರಂಭಗಳಿಗೆ ವೈಭವ ತಂದರು. ಗಜಲ್ ಎಂದರೆ ಇವರಿಗೆ ವಿಶೇಷ ಆಸಕ್ತಿ.
ಅರ್ಚನಾ ಉಡುಪ ಪ್ರಾದೇಶಿಕ ಟಿವಿ ಚಾನೆಲ್ಗಳ ಸಂಗೀತಾಧಾರಿತ ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗಿ ಸಹಾ ಕನ್ನಡಿಗರ ಮನೆ, ಮನಗಳನ್ನು ತಲುಪಿದ್ದಾರೆ. ತಮ್ಮ ಕನಸಿನ 'ಗಾಂಧಾರ' ಸಂಸ್ಥೆಯ ಮೂಲಕ ಹಲವು ಗುಣಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. 'ಬಾಳೆ ಗಾಯನ', 'ಸೂಫಿಯಾನ ಶರೀಫ್' ಪ್ರಯೋಗದ ಮೂಲಕ ಸಂಗೀತ ಸಂಯೋಜಕಿಯಾಗಿಯೂ ಪ್ರಬುದ್ಧತೆ ಮೆರೆದಿದ್ದಾರೆ.
ಅರ್ಚನ ಉಡುಪ ಅವರಿಗೆ ರಾಷ್ಟ್ರಮಟ್ಟದಲ್ಲಿ ಝೀ ಟಿವಿ ಸಾಧನೆಯ ಕಿರೀಟ ಮಾತ್ರವಲ್ಲದೆ, ಬರಗೂರು ರಾಮಚಂದ್ರಪ್ಪನವರ 'ಭಾಗೀರಥಿ' ಚಲನಚಿತ್ರದ ಹಿನ್ನೆಲೆ ಗಾಯನಕ್ಕಾಗಿ ರಾಜ್ಯ ಸರ್ಕಾರದ 2012ನೇ ಸಾಲಿನ ಶ್ರೇಷ್ಠ ಹಿನ್ನೆಲೆ ಗಾಯಕಿ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿ ಗೌರವಗಳು ಸಂದಿವೆ.
ಕಾಮೆಂಟ್ಗಳು