ಬಿ. ವಿ. ರಾಜಾರಾಂ
ಬಿ. ವಿ. ರಾಜಾರಾಂ
ಡಾ. ಬಿ. ವಿ. ರಾಜಾರಾಂ ಕರ್ನಾಟಕ ರಂಗಭೂಮಿ ಕಂಡ ಮಹಾನ್ ಪ್ರತಿಭೆ. ಅವರು 1971ರಲ್ಲಿ ಸ್ಥಾಪಕರಾಗಿ ಆರಂಭಿಸಿದ 'ಕಲಾಗಂಗೋತ್ರಿ' ಕಳೆದ 52 ವರ್ಷಗಳನ್ನು ದಾಟಿ ಇಂದೂ ಸಕ್ರಿಯವಾಗಿದೆ.
ಬಿ. ವಿ. ರಾಜಾರಾಂ 1953ರ ಜನವರಿ 8ರಂದು ಜನಿಸಿದರು. ತಂದೆ ಬುಕ್ಕಾಂಬುಧಿ ವೆಂಕಟೇಶಯ್ಯ, ತಾಯಿ ತಾವರೆಕೆರೆ ಭಾಗೀರಥಮ್ಮ.
ರಾಜಾರಾಂ ಚಿಕ್ಕವಯಸ್ಸಿನಿಂದಲೇ ನಾಟಕಗಳಲ್ಲಿ ಆಸಕ್ತಿ ಮೂಡಿಸಿಕೊಂಡವರು. ಒಮ್ಮೆ ಅವರು ನುಡಿದದ್ದು ಇಂತು "ಶಾಲೆಯಲ್ಲಿ ತುಂಟಾಟ ಮಾಡಿಕೊಂಡು ಓಡಿಯಾಡುತ್ತಿದ್ದ ಹುಡುಗರನ್ನು ನಾಟಕಕ್ಕೆ ಅಂತ ಹಾಕೋರು. ನಾವು ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಲೇ ಎಲ್ಲೋ ಅದರಲ್ಲಿ ಆಸಕ್ತಿಯನ್ನೂ ಮೂಡಿಸಿಕೊಂಡವರು. ಕಾಲೇಜಿನಲ್ಲಿ ಓದುವಾಗ ಮತ್ತು ಕೆಲಸ ಮಾಡುವಾಗ ಅಂದು ರಂಗಭೂಮಿಯಲ್ಲಿ ನಡೆಯುತ್ತಿದ್ದ ಅದ್ಭುತ ನಾಟಕ ಪ್ರಯೋಗಗಳನ್ನು ಕಂಡು ನಮಗೂ ಹಾಗೆ ನಾಟಕ ಮಾಡುವ ಪ್ರೇರಣೆಯಾಯ್ತು. ರಂಗಭೂಮಿಯಲ್ಲಿ ತರಬೇತಿ ಪಡೆದೆವು. 1971ರಲ್ಲಿ 'ಕಲಾಗಂಗೋತ್ರಿ' ತಂಡ ಹುಟ್ಟುಹಾಕಿ ನಾಟಕರಂಗದಲ್ಲಿ ಸಾಗುತ್ತ ಬಂದೆವು".
ಬಿ. ವಿ. ರಾಜಾರಾಂ ವಿದ್ಯಾಸಾಧನೆಗಳಲ್ಲಿ ಬಿ.ಕಾಂ, ನಾಟಕ ಡಿಪ್ಲೊಮ, ಎಂ.ಎ. ಕನ್ನಡ, ಎಂ.ಎ. ಸಂಸ್ಕೃತ, ಪಿಎಚ್.ಡಿ, ಎಂ.ಪಿಲ್ ಮುಂತಾದ ಉತ್ತುಂಗದ ಸಾಧನೆಗಳಿವೆ. ಪಿಎಚ್.ಡಿಗಾಗಿ ಅವರು ಆಯ್ದ ವಿಚಾರ 'ನಾಟ್ಯ ಶಾಸ್ತ್ರ ಮತ್ತು ಆಧುನಿಕ ರಂಗಭೂಮಿಯ ಮೇಲೆ ಅದರ ಪ್ರಭಾವ'. ಅಪಾರ ಓದುಗರಾದ ಅವರು ಬೌದ್ಧ ಧರ್ಮ ಗ್ರಂಥಗಳ ಅಪಾರ ಅಧ್ಯಯನವನ್ನೂ ಮಾಡಿದ್ದು ಪಾಲಿ ಭಾಷೆ ಡಿಪ್ಲೊಮಾ ಪಡೆದಿದ್ದಾರೆ. ಹಿಂದಿ ಉತ್ತಮವರೆಗೆ ಸಾಧನೆ ಮಾಡಿದ್ದಾರೆ.
ಬಿ. ವಿ. ರಾಜಾರಾಂ ನಾಟಕವನ್ನೇ ಬದುಕಾಗಿಸಿಕೊಂಡ ಅಪರೂಪದ ಸಾಧಕರು. ಬೆಂಗಳೂರಿನ ಮಹಾಬೋಧಿ ಸೊಸೈಟಿ; ಬೆಂಗಳೂರು ವಿಶ್ವವಿದ್ಯಾಲಯದ ನೃತ್ಯ ನಾಟಕ ಸಂಗೀತ ವಿಭಾಗ; ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕೋರಿಯಾಗ್ರಫಿ ಕಾಲೇಜು ಮುಂತಾದೆಡೆ ಇವರ ಸೇವೆ ಸಂದಿತು. ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರೊಫೆಸರ್ ಆಗಿಯೂ ಇವರ ಸೇವೆ ಸಲ್ಲುತ್ತಿದೆ.
ಬಿ.ವಿ. ರಾಜಾರಾಂ ಅದ್ಭುತ ರಂಗನಟ, ಉಪನ್ಯಾಸಕ, ರಂಗನಿರ್ದೇಶಕ, ರಂಗತಂತ್ರಜ್ಞ, ರಂಗಸಂಘಟಕರಾಗಿ ಬೆಳೆದಿದ್ದಾರೆ. ಅವರು ದೂರದರ್ಶನ ಮತ್ತು ಆಕಾಶವಾಣಿ ಕಲಾವಿದ. ಕಿರುತೆರೆ ಹಿರಿತೆರೆಗಳಲ್ಲಿಯೂ ನಟಿಸಿದ್ದ ಇವರು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ಮತ್ತು ಅಧ್ಯಕ್ಷರಾಗಿ ಅಪಾರ ಸೇವೆ ಸಲ್ಲಿಸಿದವರು. ಮೈಸೂರಿನ 'ರಂಗಾಯಣ'ದ ನಿರ್ದೇಶಕರಾಗಿಯೂ ಇವರ ಸೇವೆ ಅಪಾರ. ಮೈಸೂರು ವಿಶ್ವವಿದ್ಯಾನಿಲಯದ ಡಾ.ಗುಬ್ಬಿವೀರಣ್ಣ ರಂಗಪೀಠದಲ್ಲಿಯೂ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಕೇಂದ್ರ ಸರ್ಕಾರದ ಫಿಲಂ ಸೆನ್ಸಾರ್ ಬೋರ್ಡ್ ಸದಸ್ಯರಾಗಿದ್ದರು. ಅವರು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಸದಸ್ಯರಾಗಿದ್ದಾರೆ.
ಡಾ.ಬಿ.ವಿ.ರಾಜಾರಾಂ 100ಕ್ಕೂ ಹೆಚ್ಚಿನ ನಾಟಕಗಳಲ್ಲಿ ನಟ, ನಿರ್ದೇಶಕ, ಸಂಘಟಕ ಮತ್ತು ರಂಗತಂತ್ರಜ್ಞರಾಗಿ ಕೆಲಸ ಮಾಡಿದ್ದಾರೆ. ಸಾವಿರದೈನೂರಕ್ಕೂ ಹೆಚ್ಚು ಮೂಕಿ ಟಾಕಿ ಪ್ರದರ್ಶನ ನೀಡಿದ್ದಾರೆ. ದೂರದರ್ಶನ ಮತ್ತು ಆಕಾಶವಾಣಿ ಕಲಾವಿದರಾಗಿ ಕೆಲಸ ಮಾಡಿರುವ ಇವರು ಚಲನಚಿತ್ರ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಮುಖ್ಯಮಂತ್ರಿ ನಾಟಕವನ್ನು ನಿರ್ದೇಶಿಸುವ ಮೂಲಕ ಮುಖ್ಯಮಂತ್ರಿ ಚಂದ್ರು ಅವರನ್ನು ರಂಗಕ್ಕೆ ತಂದ ಕೀರ್ತಿ ಇವರದು. 'ಅಜಿತನ ಸಾಹಸಗಳು' ಧಾರಾವಾಹಿಯಲ್ಲಿ ಇವರ ಅಜಿತನ ಪಾತ್ರನಿರ್ವಹಣೆಯ ಮೋಡಿಯನ್ನು ಸವಿಯದ ಕನ್ನಡಿಗರೇ ಇಲ್ಲ. ನಿಜ ಜೀವನದಲ್ಲಿ ಸಕಲ ಸಂಯಮ ಸದ್ಗುಣಗಳಿಗೆ ಹೆಸರಾದ ಸೈಕಲ್ಪ್ರಿಯ ರಾಜಾರಾಂ 'ಸುಲ್ತಾನ್ ಟಿಪ್ಪು' ನಾಟಕದಲ್ಲಿ "ಮೀರ್ ಸಾಧಕ್" ಪಾತ್ರದಲ್ಲಿಯೂ ವಿಜೃಂಭಿಸಿದ ಮಹಾನ್ ಪ್ರತಿಭೆ. ರಾಜಾರಾಂ ಅವರ ಪ್ರಮುಖ ನಾಟಕಗಳಲ್ಲಿ ಅಚಲಾಯತನ, ಮುಖ್ಯಮಂತ್ರಿ, ಮೂಕಿ-ಟಾಕಿ, ಮೂಕಜ್ಜಿಯ ಕನಸುಗಳು, ಮೈಸೂರು ಮಲ್ಲಿಗೆ, ಮಂದ್ರ, ಕುವೆಂಪು ನಾಟಕಗಳು, ಕೈಲಾಸಂ ನಾಟಕಗಳು, ಶ್ರೀರಂಗರ ನಾಟಕಗಳು, ಸಂಸರ ನಾಟಕಗಳು, ಶಿವರಾಮಕಾರಂತರ ನಾಟಕಗಳು, ಸಂಸ್ಕೃತ ನಾಟಕಗಳು, ಬೇಟೆ, ಶೋಕಚಕ್ರ, ಸ್ಮಶಾನ ಕುರುಕ್ಷೇತ್ರ, ಮೋಡಗಳು, ಕಾಲಿಗುಲ ಮುಂತಾದ ಅಪಾರ ವೈವಿಧ್ಯಗಳಿವೆ.
ರಾಜಾರಾಂ ಕಿರುತೆರೆಯ ಆಜಿತನ ಸಾಹಸಗಳು, ಸಂಬಂಧಗಳು, ನಮ್ಮ ನಮ್ಮಲ್ಲಿ, ಕ್ರೇಜಿ ಕರ್ನಲ್, ಸಂಕಲನ, ಕಥಾಲೋಕ, ದೃಶ್ಯ, ಕೈಲಾಸಂ ಕೃತಿಗಳು, ಮಾಸ್ತಿ ಕಥೆಗಳು, ಶೃತಿ, ಗೊರೂರು ಕಥಾಲೋಕ, ರಮಣ ಹೊಳೆ, ಮಾಯಾಮೃಗ, ದಶಾವತಾರ, ಕಥೆಗಾರ, ಸ್ವಾತಂತ್ರ್ಯದ ನೆನಪು, ಬಾಳು ಬೆಳಗಿತು, ವಾಗ್ಗೇಯಕಾರರು, ಪ್ರತಿಬಿಂಬ, ಜೇನುಗೂಡು, ಶರಪಂಜರ, ಕಲ್ಯಾಣಿ, ಮಂಥನ, ಪುಣ್ಯಕೋಟಿ, ದಿಬ್ಬಣ, ಚಿತ್ರಭಾನು, ಋತುಮಾನ, ಹಂಬಲ, ಯುಗಾಂತರ ಮುಂತಾದ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಅಕ್ಷಿಡೆಂಟ್, ಸಿಕ್ಕು, ಮುಖ್ಯಮಂತ್ರಿ, ಗೋಪಿಕೃಷ್ಣ, ಗಳಿಗೆ, ಹೂಮಳೆ, ಅಂಜದಿರು, ರಸಯಷಿ ಕುವೆಂಪು ಮುಂತಾದ ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ. ಹಲವಾರು ರೇಡಿಯೋ ನಾಟಕಗಳಲ್ಲಿ, ರೂಪಕಗಳಲ್ಲಿ ಭಾಗವಹಿಸಿದ್ದಾರೆ.
ರಾಜಾರಾಂ ಅವರ ಸಾಹಿತ್ಯಕ ಕೊಡುಗೆಯೂ ಬೃಹತ್ತಾದುದು. ಹಲವಾರು ಮಕ್ಕಳ ನಾಟಕಗಳು, ಶಿಕ್ಷಣ ಸಮಿತಿ ಕಥಾ ಪುಸ್ತಕಗಳು, ನಾಟ್ಯಶಾಸ್ತ್ರ ಕೃತಿ ಪರಿಚಯ, ಮೃಕಂಡು ನಾಟಕ, ರೇಡಿಯೋ ರೂಪಾಂತರಗಳು, ಪಾಲಿ ಭಾಷೆಯಿಂದ ಕನ್ನಡಕ್ಕೆ - ದಮ್ಮಪದ, ಮಜ್ಜಿಮ ನಿಕಾಯ, ಬುದ್ಧ ನೀಡಿದ ಕಲಿಕೆ ಇತ್ಯಾದಿ, ಮೌನಾಭಿನಯ, ಕನ್ನಡ ರಂಗಭೂಮಿ, ಬೆಂಗಳೂರು ಹವ್ಯಾಸಿ ರಂಗ ಮುಂತಾದ ಹತ್ತಾರು ಲೇಖನಗಳು, ಪ್ರೊ. ಬಿ.ಸಿ. ಬದುಕು ಬರಹ-1350 ಪುಟಗಳ 21 ನಾಟಕಗಳ ಸಂಗ್ರಹ, ರಂಗನಾಥ ಸಾರಸ್ವತ-ಡಾ. ಹೆಚ್.ಕೆ. ರಂಗನಾಥರವರ ನಾಟಕ ಕೃತಿಗಳ ವಿಮರ್ಶಾ ಸಂಗ್ರಹ, ಶಿಕ್ಷಣ ಇಲಾಖೆ-ಡಿಎಸ್ಇಆರ್ಟಿಗಾಗಿ ರಂಗಪಠ್ಯ ಪುಸ್ತಕ ರಚನೆ, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ರಂಗ ಶಿಕ್ಷಣ ಪಠ್ಯ ರಚನೆ, ಆನೇಕ ಗೌರವ ಗ್ರಂಥಗಳ ಸಂಪಾದನೆ, ಸುಮಾರು 26 ಸಂಪುಟಗಳಲ್ಲಿ 200ಕ್ಕೂ ಹೆಚ್ಚು ಮಕ್ಕಳ ನಾಟಕಗಳ ಸಂಪಾದನೆ ಮುಂತಾದವು ಸೇರಿವೆ.
ರಾಜಾರಾಂ ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಸುವರ್ಣ ಕರ್ನಾಟಕದ ನೆನಪಿಗಾಗಿ ( ಮೊದಲ ವರ್ಷ 2008) 50 ನಾಟಕಗಳನ್ನು ಸಂಪಾದಿಸಿದ್ದು, ಅವುಗಳಿಗೆ ಶಾಲಾ ಅಂಗಳದಲ್ಲಿ ಮಕ್ಕಳ ನಾಟಕಗಳು’ ಶೀರ್ಷಿಕೆ ನೀಡಿ 8 ಸಂಪುಟಗಳಲ್ಲಿ ಪ್ರಕಟಿಸಿದ್ದರು. ನಂತರ ಅವರ ಅವಧಿಯ ಕೊನೆಯ ವರ್ಷದ ಹೊತ್ತಿಗೆ ಈ ರೀತಿಯ ನಾಟಕಗಳು ಕೃತಿ ರೂಪದಲ್ಲಿ ಒಟ್ಟು 15 ಸಂಪುಟಗಳಾಗಿ ಪ್ರಕಟಗೊಂಡವು. ವಿವಿಧ ಲೇಖಕರು ಮಕ್ಕಳ ಮನೋವಿಕಾಸದ ದೃಷ್ಟಿಯಿಂದ ಬರೆದ ಇಲ್ಲಿಯ ನಾಟಕಗಳು ಪುರಾಣವನ್ನು ನೆನಪಿಸುತ್ತವೆ. ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುತ್ತವೆ. ಸೌಹಾರ್ದ ಬದುಕಿನ ಅನಿವಾರ್ಯತೆ ಹಾಗೂ ಅಗತ್ಯವನ್ನು ಪ್ರತಿಪಾದಿಸುತ್ತವೆ. ಮಕ್ಕಳ ಮನಸ್ಸಿಗೆ ಮುದ ನೀಡುವುದು ಮಾತ್ರವಲ್ಲ; ಅವರ ಕಾಲ್ಪನಿಕ ಲೋಕವನ್ನು ವಿಸ್ತರಿಸುವಂತಾಗಿವೆ. ಅವರು ಅಧ್ಯಕ್ಷರಾಗಿದ್ದಾಗ ಪ್ರಥಮ ಬಾರಿಗೆ ಕರ್ನಾಟಕ ಮಹಿಳಾ ರಂಗಭೂಮಿಯ ಸಮ್ಮೇಳನ ನಡೆಯಿತು.
ರಾಜಾರಾಂ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಸಂಸ ಪ್ರಶಸ್ತಿ , ರಂಗ ಬಹದ್ದೂರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
ಕನ್ನಡ ನಾಡಿನ ಮಹಾನ್ ರಂಗಕರ್ಮಿ ಡಾ. ಬಿ. ವಿ. ರಾಜಾರಾಂ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
ಕೃತಜ್ಞತೆ: Vidya Malavalli M S 🌷🙏🌷
On the birthday of great name in our theatre Dr. B. V. Rajaram Sir
ಕಾಮೆಂಟ್ಗಳು