ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಾಂತಲಾ ರಾಜಗೋಪಾಲ್


 

ಶಾಂತಲಾ ರಾಜಗೋಪಾಲ್


ಶಾಂತಲಾ ರಾಜಗೋಪಾಲ್
Happy birthday Shanthala Rajagopal 🌷🌷🌷

ಶಾಂತಲಾ ರಾಜಗೋಪಾಲ್ ಆಪ್ತರೀತಿಯ ಬರಹಗಳಿಂದ  ಗಮನ ಸೆಳೆಯುತ್ತಾರೆ.

ಆಗಸ್ಟ್ 21, ಶಾಂತಲಾ ಅವರ ಜನ್ಮದಿನ. 
ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದವರು. ತಂದೆ ಸದಾನಂದ ಹೆಗಡೆಕಟ್ಟೆ ಅವರು ಅಧ್ಯಾಪಕರಾಗಿ ಮತ್ತು
ಗ್ರಂಥಪಾಲಕರಾಗಿದ್ದವರು.  ಹೆಸರಾಂತ ಬರಹಗಾರರಾಗಿ ಅನೇಕ ಕೃತಿ ಕೂಡಾ ರಚಿಸಿದವರು.  ತಾಯಿ ಪ್ರೇಮಾ ಹೆಗಡೆಕಟ್ಟೆ. 

ಶಾಂತಲಾ ಅವರು ಬೆಳೆದಿದ್ದು ಹಾಗೂ ವಿದ್ಯಾಭ್ಯಾಸ ಪಡೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ.  ಶಾಂತಲಾ ಅವರು ಮೂಡಬಿದ್ರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ಬಿ.ಎ ಹಾಗೂ  ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ  ಕಾನೂನು ಪದವಿ ಗಳಿಸಿದರು. ಪ್ರಸ್ತುತ ಅವರು ಬೆಂಗಳೂರು ನಿವಾಸಿಯಾಗಿದ್ದಾರೆ. 

ಅಪಾರ ಸಾಹಿತ್ಯಾಸಕ್ತರಾದ ಶಾಂತಲಾ ರಾಜಗೋಪಾಲ್ ಅವರ ಕವಿತೆಗಳು ಮತ್ತು ಬರಹಗಳು ನಾಡಿನ ಎಲ್ಲ ಪತ್ರಿಕೆಗಳಲ್ಲೂ ರಾರಾಜಿಸುತ್ತ ಬಂದಿವೆ.

ಬದುಕನ್ನು ಸಕಾರಾತ್ಮಕವಾಗಿ ಕಾಣುವ ಅವರ ಒಂದು ಕವಿತೆ ಇಂತಿದೆ

Out of suffering have emerged the strongest souls ;   the most massive characters are seared  with scars    ~      Khalil Gibran

ಗಾಯಗಳ 
ಕಲೆಗಳಿರಬೇಕು 
ಮನಸಿಗೆ , ಬದುಕಿಗೆ
ತಪ್ಪನ್ನು ತಿದ್ದಲು
ಎಡವಿ ಬೀಳದಿರಲು
ಎಚ್ಚರಿಸಲು, ನೆನಪಿಸಲು
ಪೀಡಿಸಲು, ಕಾಡಿಸಲು;
ಗಾಯದ ಕಲೆ 
ತಿಳಿಯಾಗಿ
ಬಣ್ಣ ಮಾಸಿದರೂ 
ಮೂಗೇಟು 
ತಗುಲಿ ಜಜ್ಜಿದ
ಕ್ಷಣಗಳ ನೆನಪಿನ 
ನೋವಿರಬೇಕು;
ಕೆಂಗುಲಾಬಿ 
ಪಕಳೆಗಳ ಪಕ್ಕೆಗಳ
ಪಕ್ಕದಲಿ ನುಗ್ಗುವ 
ಮಗ್ಗುಲ ಮುಳ್ಳಂತೆ 
ಚುಚ್ಚುತಿರಬೇಕು
ಆವಾಗಾವಾಗ 
ಹಾಯ್ ಎಂದುಸುರಲು!

—-

ಶಾಂತಲಾ ಅವರು  ಕಸ್ತೂರಿ ಮಾಸಪತ್ರಿಕೆಯಲ್ಲಿ ಮೂಡಿಸಿರುವ ಈ ಬರಹ ಕೂಡಾ ಮನಸೆಳೆಯಿತು

ಚಿಕ್ಕ ಗುರುತಿಸುವಿಕೆ

ಜೀವನದಲ್ಲಿ ಕೆಲವೊಮ್ಮೆ ಅತಿ ಚಿಕ್ಕ ಗುರುತಿಸುವಿಕೆ ಕೂಡ ಆಪ್ತವೆನಿಸಿ ಖುಷಿ ಕೊಡುತ್ತದೆ. ಬೀದಿಯ ಪೌರ ಕಾರ್ಮಿಕರ ಪರಿಚಯದ ನಗು ಕೂಡ ಒಂದು
ಮುಂಜಾನೆಯನ್ನು ಬೆಳಗುತ್ತದೆ. ಎಷ್ಟೋ ವರ್ಷಗಳ ನಂತರ ಮತ್ತೆ ವರ್ಗಾವಣೆಯಾಗಿ  ಬಂದ ಅಂಚೆ ಅಕ್ಕ (post woman) "ಏನಮ್ಮಾ ಹೇಗಿದ್ದೀರಿ? ಕೆಲವು ವರ್ಷಗಳ ಹಿಂದೆ ಬೇಸಿಗೆಯಲ್ಲಿ ನೀವು ಕುಡಿಯಲು ಕೊಟ್ಟ ನೀರು ಮತ್ತು ಮಜ್ಜಿಗೆಯನ್ನು ಮರೆತಿಲ್ಲ" ಎಂದಾಗ ಇನ್ನೂ ಇವೆಲ್ಲ ನೆನಪಿಡುವವರು ಇದ್ದಾರಲ್ಲ ಎನಿಸುತ್ತದೆ. ಮಾಮೂಲಿನ ಮಂಗಳೂರು ಸ್ಟೋರ್‌ ಪೈ ಮಾಮನವರು "ಏನು ಮೇಡಂ ಈಗೀಗ ಬರುವುದೇ ಅಪರೂಪ" ಎಂದಾಗ ಅಥವಾ ನನ್ನ ಮನೆಯವರ ಬಳಿ “ಏನು ಮೇಡಂ ಇತ್ತೀಚೆಗೆ ಅಂಗಡಿಗೆ ಬರೋದೆ ಕಾಣೋದಿಲ್ಲ. ಹುಷಾರಿದ್ದಾರಾ" ಎಂದು ಕಾಳಜಿ ತೋರಿದಾಗ ಈ ಯಾಂತ್ರಿಕ ಜಗತ್ತಲ್ಲಿ ವಿಚಾರಿಸುವವರು ಇದ್ದಾರಲ್ಲ ಎಂದು ಮನಸ್ಸಿಗೆ ಸಂತಸವಾಗುತ್ತದೆ. ಒಂದು ದಿನ ದಿನಸಿ ಅಂಗಡಿಗೆ ಹೋಗಿದ್ದಾಗ “ಏನು ಮೇಡಂ ಚೆನ್ನಾಗಿದ್ದೀರಾ” ಎಂದು ಪರಿಚಿತ ಧ್ವನಿ ಕೇಳಿ ಬಂತು. ಪರ್ಸಿನಿಂದ ಹಣ ನೀಡುತ್ತಿದ್ದವಳು ಕತ್ತೆತ್ತಿ ನೋಡಿದಾಗ ಮೊದಲು ಎಷ್ಟೋ ವರ್ಷಗಳ ಹಿಂದೆ ಕೆಲಸಕ್ಕಿದ್ದ ಹುಡುಗ ಈಗ ದೊಡ್ಡವನಾಗಿ
ವಾಪಾಸು ಬಂದು ಮಾತನಾಡಿಸಿದ್ದನು. ಹುಡುಗನಾಗಿದ್ದಾಗ ನೋಡಿದ್ದೆ 'ಕೆಲಸ ಬಿಟ್ಟು ತಮಿಳುನಾಡಿಗೆ ಹೋಗಿದ್ದೆ ಈಗ ನನಗೆ ಮಗನಿದ್ದಾನೆ. ಹನ್ನೆರಡು ವರ್ಷಗಳ ನಂತರ ಮರಳಿ ಬಂದೆ' ಎಂದನು. ನನ್ನನ್ನು ಗುರುತಿಸಿದ್ದು ಖುಷಿಯಾಯಿತು ಎಂದೆನು. ಹಣ್ಣಿನ ಅಂಗಡಿ ಮಹಿಳೆ, ಮೆಡಿಕಲ್‌ ಶಾಪಿನವರು, ಹೇಗಿದ್ದೀರಮ್ಮಾ ಎಂದು ಕೇಳುವ ಒಂದೇ ಮಾತು ಅದೆಷ್ಟು ಸಂತಸ ಹಾಗೂ ಆನಂದಾಶ್ರುವನ್ನು ತುಂಬುತ್ತದೆಂದು ಅನುಭವಿಸಿದವರಿಗೇ ಗೊತ್ತು. ಅಕ್ಕಪಕ್ಕದ ಮನೆಯವರೇ ಪ್ರಾಯಶಃ ಅಪರಿಚಿತರಂತಾಗುವ,  ಸಹಜ ನಗು ಸಂಭಾಷಣೆಗಳೇ ದುಬಾರಿಯಾಗಿ, ಅಂತಸ್ತು ಮತ್ತು ಬಿಗುಮಾನಗಳು ಅಡ್ಡಿ ಬರುವ ನಗರದ ಸಂಕೀರ್ಣ ಬದುಕಿನಲ್ಲಿ ಜನಸಾಮಾನ್ಯರ ಸರಳ ಸ್ವಭಾವ ಮನ ತಟ್ಟುತ್ತದೆ. ಇವರ ಹೆಸರು ಜೀವನದುದ್ದಕ್ಕೂ ತಿಳಿದಿರುವುದೇ ಇಲ್ಲ. ಇವರೆಲ್ಲ ಅನಾಮಧೇಯ ಪರಿಚಿತರು. ಇವರೆಲ್ಲರ ಅತಿ ಚಿಕ್ಕ ಪರಿಚಿತ ನಗು ಮತ್ತು ಗುರುತಿಸುವಿಕೆ ಬಹಳ ಆಪ್ಯಾಯಮಾನವಾಗಿರುತ್ತದೆ. ಭಾವನೆಗಳೇ ಇತ್ತೀಚೆಗೆ ಬರಿದಾಗುತ್ತಿರುವಾಗ ಬಾಳಿನಲ್ಲಿ ಇಂತಹ ಚಿಕ್ಕ ಗುರುತಿಸುವಿಕೆ ಮತ್ತು ಮಾನವೀಯ ಸ್ಪಂದನೆಗಳು ಬಹಳ ಸಂತಸವಿತ್ತು ಬದುಕನ್ನು ಆಗಾಗ ಮೃದುವಾಗಿ ನೇವರಿಸುತ್ತಿರುತ್ತದೆ.

---

ನಿಜ ಇಂದಿನ ದಿನದಲ್ಲಿ ಎಲ್ಲರೂ ಏನೋ ದೊಡ್ಡದನ್ನು ಬರೆಯಹೋಗುತ್ತಾರೆ.  ಹೀಗೆ ಆಪ್ತವಾಗಿ ಅಂತರಂಗದಿಂದ ಬರೆಯುವವರು ಕೂಡಾ ಅಪರೂಪ.

ಶಾಂತಲಾ ರಾಜಗೋಪಾಲ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 


Happy birthday Shanthala Rajagopal 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ