ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಪ್ಪಯ್ಯ ದೀಕ್ಷಿತರು

ಅಪ್ಪಯ್ಯ ದೀಕ್ಷಿತರು

ಅಪ್ಪಯ್ಯ ದೀಕ್ಷಿತರು ಸರ್ವತೋಮುಖವಾದ ಪ್ರತಿಭೆ ಪಾಂಡಿತ್ಯಗಳಿಗೂ ದೈವಭಕ್ತಿಗೂ ಹೆಸರುವಾಸಿಯಾದವರು. ಇವರ ಕಾಲ ಸುಮಾರು 1554-1626 ಎಂದು ವಿದ್ವಾಂಸರ ಅಭಿಪ್ರಾಯ.

ಅಪ್ಪಯ್ಯ ದೀಕ್ಷಿತರು ತಮಿಳುನಾಡಿನ ಕಂಚಿಯ ಸಮೀಪದ ಅಡಯಪ್ಪಲಮ್ ಎಂಬ ಗ್ರಾಮದಲ್ಲಿ ವಿದ್ವಾಂಸರ ವಂಶದಲ್ಲಿ ಜನಿಸಿದರು. ಇವರ ತಾತ ಆಚಾರ್ಯ ದೀಕ್ಷಿತರು ವಿಜಯನಗರದ ಕೃಷ್ಣದೇವರಾಯನಿಂದ ಪೋಷಿತರಾಗಿದ್ದು,  ಅಚ್ಚಾನ್ ದೀಕ್ಷಿತ ಎಂದು ಹೆಸರಾಗಿದ್ದರು. ಅಚ್ಚಾನ್ ಎಂಬುದು ಆಚಾರ್ಯ ಪದದ ತಮಿಳು ರೂಪ.

ಅಚ್ಚಾನ್ ದೀಕ್ಷಿತರಿಗೆ ಶೈವ ಹಾಗೂ ಶ್ರೀವೈಷ್ಣವ ಪಂಗಡದ ಇಬ್ಬರು ಪತ್ನಿಯರಿದ್ದರಂತೆ. ಹೀಗಾಗಿ ದೀಕ್ಷಿರಲ್ಲಿ ಶೈವ ವೈಷ್ಣವ ಭಾವಗಳು ಸಮನ್ವಯಗೊಂಡಿದ್ದುವು. ಶ್ರೀವೈಷ್ಣವ ಪತ್ನಿಯಲ್ಲಿ ಹುಟ್ಟಿದ ನಾಲ್ವರು ಪುತ್ರರಲ್ಲಿ ಮೊದಲನೆಯವರು ಶ್ರೀರಂಗರಾಜಾಧ್ವರಿ. ಈತ ಪ್ರಸಿದ್ಧ ವೇದಾಂತಿ. ಇವರಿಗೆ ಅಪ್ಪ ದೀಕ್ಷಿತ, ಅಚ್ಚಾನ್ ದೀಕ್ಷಿತರೆಂಬ ಇಬ್ಬರು ಮಕ್ಕಳು. ನೀಲಕಂಠವಿಜಯ ಎಂಬ ಚಂಪೂಕಾವ್ಯದ ಕರ್ತೃ ನೀಲಕಂಠ ದೀಕ್ಷಿತ ಅಚ್ಚಾನ್ ದೀಕ್ಷಿತರ ಮೊಮ್ಮಗ. ಶ್ರೀರಂಗರಾಜಾಧ್ವರಿಯ ಜ್ಯೇಷ್ಠಪುತ್ರರ ಹುಟ್ಟುಹೆಸರು ಅಪ್ಪ ದೀಕ್ಷಿತ ಎಂದಾದರೂ ಕಾಲಕ್ರಮದಲ್ಲಿ ಗೌರವ ಕೂಡಿಬಂದಂತೆಲ್ಲ ಅಪ್ಪಯ್ಯ ದೀಕ್ಷಿತ ಎಂಬ ಹೆಸರೇ ರೂಢಿಗೆ ಬಂತು. ಬಾಲ್ಯದಿಂದಲೂ ತಂದೆಯಿಂದ ಅದ್ವೈತ ಮುಂತಾದ ಶಾಸ್ತ್ರಗಳಲ್ಲಿ ಶಿಕ್ಷಣ ಲಭಿಸಿ ವಂಶಕ್ಕನುಗುಣವಾಗಿ ಇವರಲ್ಲಿ ಅದ್ವೈತ ವಿಷಯಿಕವಾದ ಆಸಕ್ತಿ ಬೆಳೆಯಿತು. ಅಲ್ಲದೆ ಅದ್ವೈತದ ಪ್ರಕಾರ ನಿರ್ಗುಣ ಬ್ರಹ್ಮತತ್ತ್ವವನ್ನು ತಂದೆ ಮನದಟ್ಟು ಮಾಡಿಸಿದ್ದರೂ ಅಪ್ಪಯ್ಯನವರಿಗೆ ಚಿದಚಿತ್ಪ್ರಪಂಚವಿಶಿಷ್ಟನಾದ ಶಿವನ ವಿಚಾರದಲ್ಲಿ ಭಕ್ತಿ ಅಪಾರವಾಗಿ ಬೆಳೆದು,  ಅದನ್ನು ತಮ್ಮ ಕೆಲವು ಗ್ರಂಥಗಳಲ್ಲಿ ಹೊರ ಹೊಮ್ಮಿಸಿದರು. ಕೆಲಕಾಲಾನಂತರ ಅದ್ವೈತಾಚಾರ್ಯರೊಬ್ಬರ ಪ್ರಭಾವದಿಂದ ಅವರ ಮನಸ್ಸು ಅದ್ವೈತದ ಮೂಲತತ್ತ್ಬಗಳ ಕಡೆಗೆ ಪುನಃ ಹರಿಯಿತು. ತತ್ಪರಿಣಾಮವಾಗಿ ಅವರು ಬರೆದ ಗ್ರಂಥಗಳೆಂದರೆ, ಅದ್ವೈತ ವೇದಾಂತವನ್ನು ಕುರಿತು ವ್ಯಾಖ್ಯಾನ ರೂಪವಾಗಿಸಿದ ಪರಿಮಳ, ನ್ಯಾಯ ರಕ್ಷಾಮಣಿ, ಸಿದ್ಧಾಂತಲೇಶಸಂಗ್ರಹ ಮುಂತಾದುವು.

ಅಪ್ಪಯ್ಯ ದೀಕ್ಷಿತರ ಕಾಲದ ವಿಚಾರದಲ್ಲಿ ಹಲವು ಭಿನ್ನ ಚಿಂತನೆಗಳಿವೆ. ಆತ ಕ್ರಿ.ಶ. 1554-1626 ರವರೆಗೆ ಜೀವಿಸಿದ್ದರೆಂಬುದು ಬಹು ವಿದ್ವಾಂಸರ ಒಪ್ಪಿಗೆ ಪಡೆದಿರುವ ಅಭಿಪ್ರಾಯ. ಇದಕ್ಕೆ ವಿಜಯನಗರದ ಎರಡನೆಯ ಶ್ರಿರಂಗರಾಯನ ಒಂದು ಶಾಸನದ ಆಧಾರವಿದೆ. ಆದರೆ ಅಪ್ಪಯ್ಯ ದೀಕ್ಷಿತರ ವಂಶಜರೇ ಆದ ವೈ. ಮಹಲಿಂಗಶಾಸ್ತ್ರಿಗಳು ಇವರ ಕಾಲದ ವಿಚಾರದಲ್ಲಿ ಮೇಲ್ಕಂಡ ತೀರ್ಮಾನ ಸರಿಯಲ್ಲವೆಂದು ವಾದಿಸಿದ್ದಾರೆ. ಅಪ್ಪಯ್ಯ ದೀಕ್ಷಿತರು ತಮ್ಮ ಕೆಲವು ಗ್ರಂಥಗಳಲ್ಲಿ ಕಾಣಿಸಿರುವ ಚಿನ್ನತಿಮ್ಮ, ಚಿನ್ನಬೊಮ್ಮ, ವೆಂಕಟ ಎಂಬ ರಾಜರ ಹೆಸರುಗಳನ್ನೂ ದಿಕ್ಷಿತನ ಜನ್ಮಸ್ಥಳವಾದ ಅಡಯಪ್ಪಲಂನ ಕಾಲಕಂಠೇಶ್ವರ ದೇವಾಲಯದಲ್ಲಿನ ಶಿಲಾಶಾಸನವನ್ನೂ ಗಮನದಲ್ಲಿಟ್ಟುಕೊಂಡು ಶಾಸ್ತ್ರಿಗಳು ದೀಕ್ಷಿತರ ಕಾಲವನ್ನು ನಿರ್ಣಯಿಸಿದ್ದಾರೆ. ರಂಗರಾಜ ಪುತ್ರರಾದ ಅಪ್ಪಯ್ಯನಿಂದ ಒಂದು ನೂರು ಗ್ರಂಥಗಳು ರಚಿತವಾದ ಅಂಶವೂ ಚಿನ್ನಬೊಮ್ಮ ಅಪ್ಪಯ್ಯನವರಿಗೆ ಪೋಷಕ ದೊರೆಯಾಗಿದ್ದ ವಿಚಾರವೂ ಮೇಲ್ಕಂಡ ಶಿಲಾಶಾಸನದಿಂದ (1582) ತಿಳಿದುಬಂದಿವೆ. ಆದರೆ, ಅಪ್ಪಯ್ಯ ದೀಕ್ಷಿತರ ಕಾಲದಿಂದ ಬಹು ಈಚೆಗೆ ಅವರ ಪ್ರಸಿದ್ಧಿಯನ್ನನುಸರಿಸಿ ಶಾಸನ ಹುಟ್ಟಿರಬಹುದೆಂದು ಹೇಳಿ ಕೆಲವು ವಿದ್ವಾಂಸರು ಅದರ ಆಧಾರದ ಮೇಲೆ ಶಾಸ್ತ್ರಿಗಳವರು ಮಾಡಿರುವ ಕಾಲನಿರ್ಣಯವನ್ನು ವಿರೋಧಿಸಿದ್ದಾರೆ. ಅಲ್ಲದೆ, ಅದೇ ವಂಶದಲ್ಲಿ ಅಪ್ಪಯ್ಯ ಎಂಬ ಹೆಸರುಳ್ಳವರು ಮೂರು ಮಂದಿ ಇರುವರೆಂಬ ವಿಷಯವನ್ನೂ ವಿದ್ವಾಂಸರು ಬೆಳಕಿಗೆ ತಂದಿರುವುದರಿಂದ ದೀಕ್ಷಿತರ ಕಾಲವನ್ನು ನಿರ್ಧರಿಸುವುದು ಕಷ್ಟಕರವಾಗಿದೆ.

ಅಪ್ಪಯ್ಯ ದೀಕ್ಷಿತರು ಸುಮಾರು ನೂರನಾಲ್ಕು ಗ್ರಂಥಗಳ ಕರ್ತೃವೆಂದು ಪ್ರಸಿದ್ಧಿ ಪಡೆದಿದ್ದಾರೆ. ಶ್ರೀಕಂಠಶಿವಾಚಾರ್ಯನ ಬ್ರಹ್ಮಸೂತ್ರ ಭಾಷ್ಯಕ್ಕೆ ವಿವರಣೆಯನ್ನು ಕೊಟ್ಟು ವಿಶಿಷ್ಟಶಿವಾದ್ವೈತವನ್ನು ಸುಂದರವಾಗಿ ವಿವರಿಸಿರುವ ಕೀರ್ತಿ ಇವರದು. ಮೇಲ್ಕಂಡ ಸೂತ್ರ ಭಾಷ್ಯಕ್ಕೆ ವ್ಯಾಖ್ಯಾನರೂಪದಲ್ಲಿರುವ ಶಿವಾರ್ಕವಣಿದೀಪಿಕಾ,  ಶಿವಾದ್ವೈತನಿರ್ಣಯ ಮುಂತಾದ ಗ್ರಂಥಗಳು ಶಿವತತ್ತ್ವ ಪ್ರತಿಪಾದನೆಗೆ ಮೀಸಲಾಗಿವೆ. ದೀಕ್ಷಿತರು ಶುದ್ಧಾದ್ವೈತದಲ್ಲಿ ದೃಢವಾದ ಚಿತ್ತವೃತ್ತಿಯುಳ್ಳವರು. ಆದರೆ ಅವರ ಹೃದಯ ಶಿವಭಕ್ತಿಯಿಂದ ತುಂಬಿತ್ತು. ಸಗುಣಬ್ರಹ್ಮನಿರೂಪಣೆಯಲ್ಲಿ ಅಭಿರುಚಿಯನ್ನು ಹೊಂದಿದ್ದ ಇವರಿಗೆ ಶಿವಭಕ್ತಿ ವಿಷ್ಣುಭಕ್ತಿಗಳೆರಡರಲ್ಲೂ ಏಕರೂಪವಾದ ಸಹಾನುಭೂತಿ ಶ್ರದ್ಧೆಗಳಿದ್ದುವು. ವೈಷ್ಣವಾಚಾರ್ಯ ಶ್ರೀಮದ್ವೇದಾಂತದೇಶಿಕ ವಿರಚಿತ ಯಾದವಾಭ್ಯುದಯ ಕಾವ್ಯಕ್ಕೆ ಉತ್ತಮವ್ಯಾಖ್ಯಾನವನ್ನು ಬರೆದು ದೀಕ್ಷಿತರು ತಮ್ಮ ವಿಶಾಲಮನೋಭಾವವನ್ನು ವ್ಯಕ್ತಪಡಿಸಿದ್ದಾರೆ. ಆದರೂ ಅವರ ಹೃದಯದ ಒಲವು ಶಿವನ ಕಡೆಗೇ. ಅವರೇ ಹೇಳುವಂತೆ ಅವರಿಗೆ ತರುಣೇಂದುಶೇಖರನಲ್ಲಿ ಅತಿಭಕ್ತಿ (ತಥಾಪಿ ಭಕ್ತಿಸ್ತರುಣೇಂದುಶೇಖರ).
ಅದ್ವೈತವೇದಾಂತಕ್ಕೂ ಶೈವಮತಕ್ಕೂ ಸಂಬಂಧಪಟ್ಟ ಗ್ರಂಥಗಳನ್ನೇ ಅಲ್ಲದೆ ದೀಕ್ಷಿತರು ಕುವಲಯಾನಂದ, ಚಿತ್ರಮೀಮಾಂಸಾ, ವೃತ್ತಿವಾರ್ತಿಕಾ, ಲಕ್ಷಣರತ್ನಾವಳೀ ಎಂಬ ಅಲಂಕಾರ ಗ್ರಂಥಗಳನ್ನೂ ಯಾದವಾಭ್ಯುದಯಕ್ಕೆ ವ್ಯಾಖ್ಯಾನವನ್ನೂ ರಚಿಸಿದ್ದಾರೆ. ಶಿವಮಹಿಮಕಲಯಿಕಾಸ್ತುತಿ, ವರದರಾಜಸ್ತವ, ಹರಿಹರಸ್ತುತಿ ಮುಂತಾದ ಸ್ತೋತ್ರಗ್ರಂಥಗಳೂ ಅವರಿಂದ ರಚಿತವಾಗಿವೆ. ಈ ಗ್ರಂಥಗಳಲ್ಲಿ ಕಾಣಬರುವ ವಸ್ತು ಪ್ರತಿಪಾದನೆಯನ್ನು ಗಮನಿಸಿದರೆ ಮೀಮಾಂಸೆ, ವ್ಯಾಕರಣ, ನ್ಯಾಯ-ಮುಂತಾದಶಾಸ್ತ್ರಗಳಲ್ಲಿ ದೀಕ್ಷಿತರಿಗಿದ್ದ ಪ್ರಬುದ್ಧ ಪಾಂಡಿತ್ಯ ಎದ್ದುಕಾಣುತ್ತದೆ. ಹೀಗೆ ದೀಕ್ಷಿತರ ಗ್ರಂಥರಚನೆ ಬಹುಮುಖವಾದದ್ದು.
ದೀಕ್ಷಿತರ ಒಂದೆರಡು ಕೃತಿಗಳು ಕಟುವಾದ ಟೀಕೆಗೆ ಗುರಿಯಾಗಿರುವುದೂ ಉಂಟು. ಸುಪ್ರಸಿದ್ಧ ಆಲಂಕಾರಿಕನಾದ ಜಗನ್ನಾಥ (ಸು. 1620-1665) ಅವನನ್ನು ದ್ರಾವಿಡಪುಂಗವ ಮುಂತಾದ ಲಘುವಾದ ಮಾತುಗಳಿಂದ ನಿರ್ದೇಶಿಸಿ, ಅವನ ಅಲಂಕಾರ ಗ್ರಂಥಗಳಲ್ಲೊಂದನ್ನು ಟೀಕಿಸಲು "ಚಿತ್ರಮೀಮಾಂಸಾಖಂಡನ" ಎಂಬ ಗ್ರಂಥವನ್ನೇ ಬರೆದಿದ್ದಾನೆ. ಆದರೆ ಜಗನ್ನಾಥನ ತಂದೆಗೆ ಮೀಮಾಂಸಾ ಶಾಸ್ತ್ರದಲ್ಲಿ ಗುರುವಾಗಿದ್ದ ಖಂಡದೇವ ದೀಕ್ಷಿತನನ್ನು ಮೀಮಾಂಸಕಮೂರ್ಧನ್ಯ ಎಂದು ಪ್ರಶಂಸಿಸಿ ಅವನ ಪಾಂಡಿತ್ಯದ ಹಿರಿಮೆಯನ್ನು ಎತ್ತಿಹಿಡಿದಿರುವುದರಿಂದ ಕರ್ತೃವಿನ ಮೇಲಣ ಟೀಕೆಗಳು ಮಹತ್ವಕ್ಕೆ ಪೂರಕಗಳೇ ಹೊರತು ಬಾಧಕಗಳಲ್ಲವೆಂದು ಹೇಳಬಹುದು.
ದೀಕ್ಷಿತರ ವ್ಯಕ್ತಿತ್ವದಲ್ಲಿ ಕಾಣಬರುವ ಹೃದಯವೈಶಾಲ್ಯ, ಔದಾರ್ಯ, ಪಾಂಡಿತ್ಯ, ಪ್ರತಿಭೆ, ಜ್ಞಾನಭಕ್ತಿಗಳ ಸಮನ್ವಯ ಅನನುಕರಣೀಯವಾದುವು. ಅವರಲ್ಲಿ ತತ್ತ್ವ ಜ್ಞಾನಿಯ ಬುದ್ಧಿ ಸೂಕ್ಷ್ಮತೆಯೂ ಭಕ್ತಾಗ್ರಣಿಯ ಭಾವ ಸಂಪತ್ತೂ ಸಮ್ಮಿಳಿತವಾಗಿವೆ. ಅವರ ತತ್ತ್ವದೃಷ್ಟಿ ನಿಷ್ಕೃಷ್ಟವಾದುದು.  ಉಪನಿಷತ್ತುಗಳ, ಬ್ರಹ್ಮಸೂತ್ರಗಳ ಮತ್ತು ಶಂಕರಾದಿ ಆಚಾರ್ಯರತ್ನರ ಅದ್ವೈತನಿಷ್ಠೆಯನ್ನು ಪ್ರಸ್ತಾಪಿಸುತ್ತ, ತಾವೇ ಅದ್ವೈತಾಚಾರ್ಯರೆಂಬ ಕೀರ್ತಿಗೆ ಭಾಗಿಯಾಗಿರುವ ಅಪ್ಪಯ್ಯ ದೀಕ್ಷಿತರು 'ತರುಣೇಂದುಶೇಖರನ ಅನುಗ್ರಹದಿಂದಲೇ ಮನುಷ್ಯರಿಗೆ ಅದ್ವೈತಸಂಸ್ಕಾರವುಂಟಾಗಬಲ್ಲದು, ಬೇರೆ ಮಾರ್ಗದಿಂದಲ್ಲ ಎಂದು ಮನೋಜ್ಞವಾಗಿ ಹೇಳಿದ್ದಾರೆ (ತಥಾಪ್ಯನುಗ್ರಹಾದೇವ ತರುಣೇಂದುಶಿಖಾಮಣೀಃ | ಅದ್ವೈತವಾಸನಾ ಪುಂಸಾಮಾವಿರ್ಭವತಿನಾನ್ಯಥಾ). 

On Appaiah Dislkshitar Day 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ