ರಾಜಶ್ರೀ ಕಿಶೋರ
ರಾಜಶ್ರೀ ಕಿಶೋರ
ಡಾ. ರಾಜಶ್ರೀ ಕಿಶೋರ ಅವರ ಬಹುಮುಖಿ ಬರೆಹಗಾರ್ತಿಯಾಗಿ ಮತ್ತು ವಾಗ್ಮಿಯಾಗಿ ಹೆಸರಾಗಿದ್ದಾರೆ.
ಮೇ 29, ರಾಜಶ್ರೀ ಅವರ ಜನ್ಮದಿನ. ಅವರು ಜನಿಸಿದ್ದು ರಾಯಚೂರು ಜಿಲ್ಲೆಯ ಕವಿತಾಳ ಎಂಬಲ್ಲಿ. ತಂದೆ ನೀಲಕಂಠಯ್ಯ ಶೆಟ್ಟಿ ಇಲ್ಲೂರು. ತಾಯಿ ಚಿತ್ರಲೇಖಾ ಇಲ್ಲೂರು. ಕನ್ನಡದಲ್ಲಿ ಸಾತಕೋತ್ತರ ಪದವಿಯನ್ನು 4ನೇ ರ್ಯಾಂಕ್ ಮತ್ತು ಚಿನ್ನದ ಪದಕದೊಡನೆ ಪಡೆದ ಹಿರಿಮೆ ಇವರದ್ದಾಗಿದೆ. ರಾಯಚೂರಿನಲ್ಲಿ ಎಂ.ಫಿಲ್ ಪದವಿ ಪಡೆದು ಇವರು ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ 'ದೇವಸೂಗೂರಿನ ಶ್ರೀ ಸೂಗೂರೇಶ್ವರರು, ಒಂದು ಸಂಸ್ಕತಿ, ಅಧ್ಯಯನ' ಮಹಾಪ್ರಬಂಧಕ್ಕೆ ಪಿಎಚ್.ಡಿ. ಗಳಿಸಿದ್ದಾರೆ. ಈ ಮಹಾಪ್ರಬಂಧವು ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೃತಿರೂಪವಾಗಿ ಪ್ರಕಟಗೊಂಡಿದೆ.
ಹಿರಿಯ ಅಧ್ಯಾಪಕಿಯಗಿರುವ ರಾಜಶ್ರೀ ಅವರು ವಿಮರ್ಶೆ, ಕತೆ, ನಾಟಕ, ರೂಪಕ, ಕಾವ್ಯ, ಜೀವನ ಚರಿತ್ರೆ ಹೀಗೆ ಬಹುಮುಖಿ ಬರೆಹಗಳನ್ನು ಮಾಡಿದ್ದಾರೆ. ಅನೇಕ ವೇದಿಕೆಗಳಲ್ಲಿ ಕಾವ್ಯ, ಪ್ರಬಂಧ, ವಿಚಾರ ಮಂಡನೆ, ಉಪನ್ಯಾಸಗಳನ್ನು ಮಂಡಿಸಿದ್ದಾರೆ.
ರಾಜಶ್ರೀ ಅವರ 'ಹೃದಯಾಮೃತಧಾರೆ' ಕವನ ಸಂಕಲನಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ (2001) ಪ್ರಶಸ್ತಿ, ದೇವಸೂಗೂರಿನ ನಾಗರ ಎಲ್ಲಮ್ಮ ಭಾಗ-2 ಕೃತಿ ಕೇಂದ್ರ ಗ್ರಂಥಾಲಯಕ್ಕೆ ಆಯ್ಕೆ, (2014), ಕನ್ನಡ ಭಾಷಾ ವ್ಯಾಸಂಗ ಕೃತಿಗೆ ವಿಜಯಾನಾಗೇಶ ದತ್ತಿನಿಧಿ ಪುಸ್ತಕ ಪ್ರಶಸ್ತಿ(2015), ಕನಕದಾಸರ ಸಾಹಿತ್ಯದಲ್ಲಿ ವಿಜಯನಗರ ಸಾಮಾಜ್ಯ ಕೃತಿಯು ಕಾಗಿನೆಲೆ ಪ್ರಾಧಿಕಾರದಿಂದ ಆಯ್ಕೆ, 'ದೀಪ್ತಿ ದರ್ಶಿನಿ' ಕೃತಿಗೆ ಅತ್ಯುತ್ತಮ ಕೃತಿ ಪ್ರಶಸ್ತಿ, ಡಾ. ದೊಡ್ಡರಂಗೇಗೌಡರ 'ಶ್ವೇತೆಗಳು' ಕವನ ಸಂಕಲನದ ಕುರಿತಾದ ವಿಮರ್ಶೆಗೆ ಪ್ರಶಸ್ತಿ, ಪ್ರತಿಭಾವಂತ ಮಹಿಳೆ, (2002) ವುಮೆನ್ ಆಫ್ ಎಕ್ಸಲೆನ್ಸಿ (2011), ಅತ್ಯುತ್ತಮ ಉಪನ್ಯಾಸಕಿ (2011), ಎಕ್ಸಲೆನ್ಸ್ ಅವಾರ್ಡ್ ಫಾರ್ ಸೋಶಿಯಲ್ ಆಕ್ಟಿವಿಟಿ (2018)
ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಪ್ರಶಸ್ತಿ ಗೌರವಗಳು ಸಂದಿವೆ.
ಗುಲ್ಬರ್ಗ ವಿಶ್ವವಿದ್ಯಾಲಯವು 'ಡಾ.ರಾಜಶ್ರೀ ಕಿಶೋರ್ ಅವರ ಸಮಗ್ರ ಸಾಹಿತ್ಯದಲ್ಲಿ ಕಾವ್ಯ' ಎಂಬ ಸಂಶೋಧನಾ ಕಿರುಪ್ರಬಂಧವನ್ನು ಹೊರತಂದಿದೆ. ರಾಜಶ್ರೀ ಅವರು 'ಸಿರಿಗನ್ನಡಂ ಗೆಲ್ಗೆ' ಎಂಬ ಪ್ರತಿಷ್ಠಾನವನ್ನು ಸ್ಥಾಪಿಸಿದ್ದು ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದ್ದಾರೆ.
ಆತ್ಮೀಯರಾದ ಸಾಧಕಿ ರಾಜಶ್ರೀ ಕಿಶೋರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ
Happy birthday Rajashree Kishore 🌷🌷🌷
ಕಾಮೆಂಟ್ಗಳು