ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸರ್ವಮಂಗಳ


 ಸರ್ವಮಂಗಳ 


ಸರ್ವಮಂಗಳ ನಾನು ಕನ್ನಡ ಸಾಹಿತ್ಯ ವಲಯದಲ್ಲಿ ಕಂಡಿರುವ ಶ್ರದ್ಧಾವಂತ ಸಾಹಿತ್ಯ ಪರಿಚಾರಕರು. ಶಿಕ್ಷಣ, ಜಾನಪದ, ಸಂಘಟನೆ ಕ್ಷೇತ್ರಗಳಲ್ಲಿ ಅವರ ನಿಷ್ಠೆಯ ಕೊಡುಗೆಗಳಿವೆ.

ಮೇ 8, ಸರ್ವಮಂಗಳ ಅವರ ಜನ್ಮದಿನ. ಮೂಲತಃ ಇವರು ಕೊಳ್ಳೆಗಾಲದ ಬಳಿಯ ಚಿಲಕವಾಡಿಯವರು. ತಂದೆ ಎಂ. ಲಿಂಗಯ್ಯ. ತಾಯಿ  ಆರ್. ಸರಸ್ವತಿ. ಚಿಲಕವಾಡಿ, ಮೈಸೂರು ನಂತರ ಬೆಂಗಳೂರುಗಳಲ್ಲಿ ಇವರ ವಿದ್ಯಾಭ್ಯಾಸ ನಡೆಯಿತು.  ಸರ್ವಮಂಗಳ ಎಂ.ಎ, ಬಿ.ಇಡಿ ಪದವಿಗಳನ್ನು ಗಳಿಸಿದ್ದಾರೆ.
 
ಸರ್ವಮಂಗಳ ಅವರು ಅಧ್ಯಾಪಕಿಯಾಗಿ ಬೆಂಗಳೂರಿನ ಶಾರದಾ ವಿದ್ಯಾಸಂಸ್ಥೆಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಮುಂದೆ ಬೆಂಗಳೂರಿನ ಮಹಾದೇವ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದರು.

ಸರ್ವಮಂಗಳ ಅವರ ಸೇವೆ ವಿವಿಧ ಕ್ಷೇತ್ರಗಳಲ್ಲಿ ಸಂದಿವೆ. ಕರ್ನಾಟಕ ಜಾನಪದ ಪರಿಷತ್ತಿನಲ್ಲಂತೂ ಇವರ ವಿಶಿಷ್ಟ ಸೇವೆ 25 ವರ್ಷಕ್ಕೂ ಮೀರಿದ್ದು.  ಅಲ್ಲಿನ ಎಲ್ಲ ಪ್ರಮುಖ ಯೋಜನೆಗಳಲ್ಲಿ ಇವರ ನಿಷ್ಠಾವಂತ ಸೇವೆಯಿತ್ತು.  ಕನ್ನಡ ಜಾನಪದ ಕೋಶ ಯೋಜನೆಯಲ್ಲಿ ಸಹ ಸಂಪಾದಕಿಯಾಗಿ; ಕರ್ನಾಟಕ ಜಾನಪದ ಪರಿಷತ್ತಿನಲ್ಲಿ ಸಂಶೋಧನಾ ಸಹಾಯಕಿಯಾಗಿ; ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಆಡಳಿತ ತರಬೇತಿ ಕೇಂದ್ರಗಳಲ್ಲಿ ಅತಿಥಿ ಉಪನ್ಯಾಸಕಿಯಾಗಿ; ಕರ್ನಾಟಕ ಜಾನಪದ ಪರಿಷತ್ತಿನ ನಾಡೋಜ ಎಚ್. ಎಲ್. ನಾಗೇಗೌಡ ದೃಶ್ಯ ಮತ್ತು ಶ್ರವ್ಯಭಂಡಾರದ ಮುಖ್ಯಸ್ಥೆಯಾಗಿ; ಹಾವೇರಿ ಜಿಲ್ಲೆಯ ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯದ ಕನ್ನಡ ಜನಪದ ನಿಘಂಟು ಯೋಜನೆ ಸಹಸಂಪಾದಕಿಯಾಗಿ ಅವರ ವಿಶಿಷ್ಟ ಸೇವೆ ಸಂದಿದೆ. ಕನ್ನಡದಲ್ಲಿ ಕಂಪ್ಯೂಟರ್ ಬೋಧನೆ, ಮಕ್ಕಳಿಗಾಗಿ ವ್ಯಕ್ತಿತ್ವವಿಕಸನ ತರಬೇತಿ ಸಹ ಅವರ ಆಸಕ್ತಿಯ ಕ್ಷೇತ್ರಗಳಾಗಿವೆ.  ಕರ್ನಾಟಕ ಲೇಖಕಿಯರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಇವರದ್ದು ಸುಮಾರು ಒಂದು ದಶಕದಷ್ಟು ಸೇವೆ ಇದೆ. 

ಸರ್ವಮಂಗಳ ಅವರ ಬರೆಹಗಳು ಜಾನಪದ ಜಗತ್ತು, ಬಸವಪಥ, ಮಹಾಮನೆ, ಸಂಯುಕ್ತ ಕರ್ನಾಟಕ, ಮಯೂರ ಸೇರಿದಂತೆ ಎಲ್ಲ ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಮೂಡಿಬಂದಿವೆ.

ಸರ್ವಮಂಗಳ ಅವರ ಬರೆಹಗಳಲ್ಲಿ 
ಕಾಗೆಕಾಗೆ ಕವ್ವಾ, ಬ್ರೂಸ್ಪತಿ ರಾಜನ ಬಂಗಾರದ ಕೋಳ್ಮರ, ರತಿಕಲ್ಯಾಣ (ಕೌಂಡ್ಲೀಕವಧಾ) (ಯಕ್ಷಗಾನ ಪ್ರಸಂಗ) ಗಂಗೆಗೌರಿ (ಗೀತನಾಟಕ) ಮುಂತಾದ ನಾಟಕಗಳಿವೆ. ಕೆಲವು ಕೃತಿಗಳಾಗಿಯೂ ಪ್ರಕಟಗೊಂಡು ಹೆಸರಾಗಿವೆ.  ಜನಪದ ಸಂಗೀತ ಮತ್ತು ಜನಪದ ಛಂದಸ್ಸು, ಸೋಲಿಗರು ಇವರ ಸಂಶೋಧನಾ ಕೃತಿ.  ಇವರ ಸಂಪಾದನಾ ಶ್ರಮಕೊಡುಗೆಗಳಲ್ಲಿ ಕನ್ನಡ ಜಾನಪದ ಕೋಶ (ಸಹಾಯಕ ಸಂಪಾದಕಿ), ಕನ್ನಡ ಜಾನಪದ ನಿಘಂಟು (ಸಹಾಯಕ ಸಂಪಾದಕಿ), ಪದಸಂಸ್ಕೃತಿ ಕೋಶ (ಸಹಸಂಪಾದಕಿ), ಸಾವಿರ ಸೊಲ್ಲು (ಒಂದು ಸಾವಿರ ಜನಪದ ಪಲ್ಲವಿಗಳ ಸಂಗ್ರಹ ಕೃತಿ) ಮುಂತಾದವು ಸೇರಿವೆ.  ಬ್ರೂಸ್ಪತಿ ರಾಜನ ಬಂಗಾರದ ಕೋಳ, ಕಾಗೆಕಾಗೆ ಕವ್ವಾ(ಮಕ್ಕಳ ನಾಟಕ) ಸ್ತ್ರೀಶಕ್ತಿ (ರತಿಕಲ್ಯಾಣ –  ಯಕ್ಷಗಾನ ಪ್ರಸಂಗ), ಗಂಗೆಗೌರಿ(ಗೀತನಾಟಕ) ಹಲವು ಬಾರಿ ಪ್ರದರ್ಶಿತಗೊಂಡಿವೆ.  ಸೋಬಾನೆ ಚಿಕ್ಕಮ್ಮ ಸ್ಟುಡಿಯೋದಲ್ಲಿರುವ ಒಂದು ಸಾವಿರ ಗಂಟೆಗೂ ಮೀರಿದ ಜನಪದ ಸಾಹಿತ್ಯ ಮತ್ತಿತರ ಪ್ರಕಾರಗಳ ಆಡಿಯೋ- ವಿಡಿಯೋ ನಿರ್ವಹಣೆ ಮಾಡಿದ್ದಾರೆ. ಲಿಪ್ಯಂತರ, ದಾಖಲೀಕರಣ, ವರ್ಗೀಕರಣ ಮತ್ತು ಡಿಜಿಟೈಜೇಷನ್ ಕಾರ್ಯದ ಸಂಪೂರ್ಣ ಜವಾಬ್ದಾರಿ ನಿರ್ವಹಿಸಿದ್ದಾರೆ.
ಎಚ್.ಎಲ್. ನಾಗೇಗೌಡರು ಸಂಗ್ರಹಿಸಿದ ಜನಪದಗೀತೆಗಳಲ್ಲಿ ಆಯ್ದ ೧೦೦ ಗಂಟೆಗಳ ಅಡಕಮುದ್ರಿಕೆಗಳ (ಸಿಡಿ) ನಿರ‍್ಮಾಣ, ಸಿರಿಗಂಧ ಮಾಲಿಕೆಯ ಪುನರ್‌ಪ್ರಸಾರ ಸಂದರ್ಭದಲ್ಲಿ ಮರುಸಂಕಲನದ ಹೊಣೆ ಕೂಡ ಇವರು ನಿರ್ವಹಿಸಿದ್ದಾರೆ. ಸರ್ವಮಂಗಳ ಅವರು ಸವಿಗನ್ನಡ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟೀ ಸಹ ಆಗಿದ್ದಾರೆ.

ಕನ್ನಡ ಪ್ರೀತಿಯ ಸರ್ವಮಂಗಳ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy Birthday Sarva Mangala 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ