ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮತ್ತೊಬ್ಬನ ಆತ್ಮಚರಿತ್ರೆ


ಮತ್ತೊಬ್ಬನ ಆತ್ಮಚರಿತ್ರೆ

ಎ. ಕೆ. ರಾಮಾನುಜನ್ ಅವರ 'ಮತ್ತೊಬ್ಬನ ಆತ್ಮಚರಿತ್ರೆ' ಸುಮಾರು 4 ದಶಕಗಳ ಹಿಂದೆ ಓದಿದ್ದೆ (ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಸುಮಾರು 128 ಕೃತಿಗಳಲ್ಲಿ ಅದೂ ಒಂದು).  ಆ ಕುರಿತು ಕೆಲವು ಅಸ್ಷಷ್ಟ ಕೆಲವು ನೆನಪುಗಳು ಆಗಾಗ ಹಾದುಹೋಗುತ್ತಿತ್ತು.  

ಎ. ಕೆ.  ರಾಮಾನುಜನ್ ಅವರ ಕುರಿತಾದ ನೆನಪಿನ ಸಂಪುಟ ಕೃತಿ ಓದಿದ್ದಾಗ ಅದರಲ್ಲಿ ಹಲವು ಮಹನೀಯರು ಅವರ ಬಗ್ಗೆ ಪ್ರಸ್ತಾಪಿಸಿದ್ದ ಹಲವು ಕೃತಿಗಳನ್ನು ಹುಡುಕಿ ಸಿಗದೆ ಅನೇಕ ಬಾರಿ ನಿರಾಶನಾಗಿದ್ದೆ.  ಕಳೆದ ಬಾರಿ ಬೆಂಗಳೂರಿಗೆ ಹೋಗಿದ್ದಾಗ ಸಪ್ನಾದಲ್ಲಿ 'ಎ. ಕೆ. ರಾಮಾನುಜನ್ ಸಮಗ್ರ' ಎಂಬ ಕೃತಿ ನೋಡಿ ಖುಷಿ ಆಗಿ ತಂದೆ (ಸಂಪಾದಕರು:‍ ಎಸ್. ದಿವಾಕರ್ ಮತ್ತು ರಮಾಕಾಂತ ಜೋಷಿ). ಇದರಲ್ಲಿ ಎ. ಕೆ. ರಾಮಾನುಜನ್ ಅವರ ಕವಿತೆಗಳು, ಮತ್ತೊಬ್ಬನ ಆತ್ಮಚರಿತ್ರೆ ಕಾದಂಬರಿ, ಅವರ ಸಣ್ಣಕತೆಗಳು, ಗಾದೆಗಳು, ನಗೆಬರಹಗಳು ಮತ್ತು ಹಲವು ಅಪ್ರಕಟಿತ ಬರಹಗಳಿವೆ. ಎ. ಕೆ. ರಾಮಾನುಜನ್ ಅವರ ವಚನ ಇತ್ಯಾದಿಗಳ ಇಂಗ್ಲಿಷ್ ತರ್ಜುಮೆ ಸೊಗಸನ್ನು ನೋಡಿ ಅವೆಲ್ಲ ಓದಬೇಕು ಅನಿಸುತ್ತೆ.  ಜೊತೆಗೆ ಅವರು ಭಾರತೀಯ ಪುರಾಣ ಕತೆಗಳನ್ನೂ ತುಂಬಾ ಚೆನ್ನಾಗಿ ಇಂಗ್ಲಿಷಿನಲ್ಲಿ ಮೂಡಿಸಿದ್ದರಂತೆ.  ಅದೆಂದಾದರೂ ಸಿಗುತ್ತದೆಯೇ ಗೊತ್ತಿಲ್ಲ.

ಈ ಸಮಗ್ರ ಕೃತಿಯಲ್ಲಿ ರಾಮಾನುಜನ್ ಅವರನ್ನು ಓದುವ ಬಗೆಗೆ, ಸಂಪಾದಕರಾದ ದಿವಾಕರ್ ತಮ್ಮ ಮುನ್ನುಡಿಯಲ್ಲಿ ವಿಸ್ತೃತ ಮಾರ್ಗದರ್ಶನ ನೀಡಿದ್ದಾರೆ. 

ಎ. ಕೆ. ರಾಮಾನುಜನ್ ಅವರ ಅನೇಕ ಕವಿತೆಗಳನ್ನು ಓದುವಾಗ ಕೆಲವೊಮ್ಮೆ ತೀವ್ರ ಆಲೋಚನೆ, ಆಪ್ತವಾದ ನಗೆಮೂಡಿಸುವ ಲಹರಿಗಳೆರಡೂ ಮೂಡುತ್ತದೆ.  ಹಲವು ಕವಿತೆಗಳನ್ನು  ಕಾದಂಬರಿಯ ವಿವಿಧ ಅಧ್ಯಾಯಗಳಂತೆ ಸತತವಾಗಿ ಅಭ್ಯಾಸ ಸಾಲದ ನನಗೆ 'ಮತ್ತೊಬ್ಬನ ಚರಿತ್ರೆ'ಯನ್ನು ಓದುವ ತೀವ್ರತೆ ಹೆಚ್ಚಿತ್ತು.  

'ಮತ್ತೊಬ್ಬನ ಆತ್ಮಚರಿತ್ರೆ' ಎಂಬುದು ಎ.ಕೆ. ರಾಮಾನುಜನ್ ಅವರ ಆತ್ಮಚರಿತ್ರೆಯೊ, ಅವರು ಕಂಡ ಹಲವು ಪಾತ್ರಗಳೊ, ಒಂದು ಕಾಲದ ಚಿತ್ರಣವೋ, ತಾನೇ ದ್ವಿಪಾತ್ರವಾಗಿ ಕನ್ನಡಿಯಲ್ಲಿ ನೋಡಿಕೊಳ್ಳುವ ವಿಧಾನವೋ, ಹೀಗೆ ಹಲವು ರೀತಿಯ ನೋಟಗಳಲ್ಲಿ ಬದುಕಿನ ಹಲವು ರೀತಿಯ ವಾಸ್ತವಿಕ ಮತ್ತು ಮನಗಳ ಸಂಕೀರ್ಣತೆಗಳನ್ನು ನವಿರಾದ ಆಪ್ತ ಭಾಷೆಯಲ್ಲಿ ತೆರೆಯುತ್ತಾ ಸಾಗುತ್ತದೆ.

'ಮತ್ತೊಬ್ಬನ ಆತ್ಮಚರಿತ್ರೆ'ಯಲ್ಲಿ ಇಬ್ಬರು ರಾಮಾನುಜನರು ಬರುತ್ತಾರೆ. ಕೆ. ರಾಮಾನುಜನ್ ಮತ್ತು ಕೆ.ಕೆ. ರಾಮಾನುಜನ್! ಅಲ್ಲಿ ಎ.ಕೆ. ರಾಮಾನುಜನ್ ಬರುವುದಿಲ್ಲ.  ಆದರೂ ಈ ಇಬ್ಬರೂ ರಾಮಾನುಜರು ಎ.ಕೆ. ರಾಮಾನುಜನರನ್ನು ಭಾಗದಂತೆ ಅಥವಾ ಬಿಂಬಗಳಂತೆ ಪ್ರತಿಫಲಿಸುತ್ತಾರೆ. 

ಕೆ. ರಾಮಾನುಜನ್ ಕವಿ. ಆತ ಕೆ.ಕೆ. ರಾಮಾನುಜನ್‌ಗೆ ಕತೆ ಬರೆಯಲು ಪ್ರೇರೇಪಿಸುತ್ತಾನೆ. ಅದರಂತೆ ಕೆ.ಕೆ. ರಾಮಾನುಜನ್ ಕತೆ ಬರೆಯಲು ತೊಡಗುತ್ತಾರೆ. ಈ ಕತೆಯೇ ಆತ್ಮಚರಿತ್ರೆ. ಆದರೆ ಅದೇ 'ಮತ್ತೊಬ್ಬನ ಆತ್ಮಚರಿತ್ರೆ'ಯೂ ಆಗುತ್ತದೆ!ಏಕೆಂದರೆ ಯಾವುದು ನನ್ನದು, ಯಾವುದು ನನ್ನದಲ್ಲ ಎಂದು ಹೇಳುವುದೇ ಕಷ್ಟವಾದ್ದರಿಂದ.  'ಐರಿಷ್ ಕವಿ ಯೇಟ್ಸ್‌ನಿಗೆ ನಿದ್ದೆಯಲ್ಲಿ ಕನಸು ಅರ್ಧಕ್ಕೆ ನಿಂತು ಪಕ್ಕದಲ್ಲಿದ್ದ ಹೆಂಡತಿಯ ನಿದ್ರೆಯಲ್ಲಿ ಅದು ಪೂರ್ಣವಾಗುತ್ತಿತ್ತು' ಎಂಬ ಮಾರ್ಮಿಕವಾದ ಮಾತು ಕತೆಯಲ್ಲಿ ಬರುತ್ತದೆ.  ಶಂಕರಪ್ರಸಾದ್ ಎಂಬ ರಾಜಸ್ತಾನೀ ಲೇಖಕ ಅಮೇರಿಕದಲ್ಲಿ ಒಂಟಿ ರಾತ್ರಿಗಳಲ್ಲಿ ತನ್ನದೇನೊ ಕಳೆದುಕೊಂಡಂತೆ ಕನವರಿಸಿ, ಕತೆಯೊಂದನ್ನು ಬರೆದು ಅದು ತನ್ನದೊ, ಬೇರೆಯವರದ್ದೋ, ಎಲ್ಲವೂ ಒಂದು ರೀತಿಯ ಕೃತಕ ಎಂದು ಚಿಂದಿ ಚಿಂದಿಯಾಗಿ ಹರಿದೆಸೆದು ತನ್ನದೇನಿಲ್ಲದೆಂದೆನಿಸಿ ಎಷ್ಟೋ ದಿನ ಕಳೆದುಕೊಂಡ ನಿದ್ರೆಯನ್ನು ಪುನಃ ಸುಖಿಸಿದನೇನೊ ಎನಿಸುತ್ತೆ.

ರಾಮಾನುಜನ್ ಅವರ ಕೆಲವೊಂದು ಚಿಂತನೆಗಳು ವಿಶಿಷ್ಟವೆಂಬಂತೆ ಮನಸೆಳೆಯುತ್ತವೆ.  ಅವುಗಳಲ್ಲಿ ಇದೊಂದು:
"... ಇದು ಕತೆಯಾಗಿದ್ದರೆ ಈ ಪ್ರಶ್ನೆಗೆ ಹೇಗಾದರೂ ಉತ್ತರ, ಈ ಸಂಶಯಕ್ಕೆ ತಕ್ಕ ಶಮನ ದೊರಕಿಸಲೇಬೇಕಾಗಿತ್ತು.  ಸತ್ಯವಾದದ್ದರಿಂದ ಈ ಪ್ರಶ್ನೆ ಬಗೆಹರಿಯದೆ ಹಾಗೇ ಉಳಿದು, ಮಸಕಾಗಿ, ಎಲ್ಲೆಲ್ಲೋ ಮಾತು ತೋರಿಸಿ ಅಡಗಿ ಹೋಯಿತು.  ಕತೆಗೆ ಕಾಲಿಲ್ಲ, ಸತ್ಯಕ್ಕೆ ಕಾಲುಂಟು - ನಡೆದು ಮುಂದೆಲ್ಲೋ ತನ್ನ ಪಾಡಿಗೆ ಹೋಯಿತು. ಅದಕ್ಕೇ ಸತ್ಯ ಅಂದರೆ ನಡೆದದ್ದು ಅನ್ನುತ್ತಾರೆ, ಅಲ್ಲವೆ? ಚರಿತ್ರೆ, ಚರ, ಚಂಚಲ, ಎಂದಿಗೂ ಸೀರಿಯಲ್ಲು, ಧಾರಾವಾಹಿ"

ಎ. ಕೆ. ರಾಮಾನುಜನ್ ಸಂಸ್ಕೃತಿ ಸಮನ್ವಯಗಳ ಬಗ್ಗೆ ಹಲವು ರೀತಿ ಹೇಳುತ್ತಾರೆ.  "ಈ ಭಾಗವನ್ನೆಲ್ಲ ನಾನು ನಿಜವಾಗಿ ತಮಿಳಿನಲ್ಲಿ ಬರೆಯಬೇಕು.  ನಡೆದ ಸಂಗತಿ, ಸಂಭಾಷಣೆ, ನಮ್ಮ ತಾಯಿ ಹೇಳಿದ ಅತ್ತೆಯ ಸಮಾಚಾರ, ಎಲ್ಲ ನಡೆದದ್ದು ತಮಿಳಿನಲ್ಲಿ.  ಚಿಕ್ಕಂದಿನಲ್ಲಿ ಮೈಸೂರುಮನೆಯ ಅಡಿಗೆಮನೆಯಲ್ಲಿ ಅಮ್ಮನೊಂದಿಗೆ ಮದರಾಸು ತಮಿಳು. ಅಡಿಗೆ ಕೆಲಸ ಮಾಡಿದ ಅಯ್ಯಂಗಾರ್ ಮಡಿ ಹೆಂಗಸರೊಂದಿಗೆ ಮೈಸೂರು ತಮಿಳು.  ಮನೆಯ ಹೊರಗಡೆ ಸ್ನೇಹಿತರೊಂದಿಗೆ ಕನ್ನಡ.  ಮಹಡಿ ಮೇಲೆ,  ಅಪ್ಪನೊಂದಿಗೆ ಅವರ ಸ್ನೇಹಿತರು ನಮ್ಮ ದೊಡ್ಡಣ್ಣ ಮುಕ್ಕಾಲುಪಾಲೆಲ್ಲ ಇಂಗ್ಲಿಷು -1956ರ ಹೊತ್ತಿಗೆ ನನ್ನ ಮಾತೂ ಮಹಡಿ ಮೇಲೆ ಇಂಗ್ಲಿಷಾಗಿತ್ತು.  ಹೀಗೆ ಮೂರು ಭಾಷೆಗೆ ಮೂರು ಸನ್ನಿವೇಶ, ಕಾರ್ಯವಿಭಜನೆ.  ಮಹಡಿಯಿಂದ ಕೆಳಗಿಳಿದರೆ ಭಾಷಾಂತರ.  ಈಗಂತೂ ನಾನು ಈ ದೇಶದಲ್ಲಿರುವುದರಿಂದ, ಎಲ್ಲ ಯೋಚನೆಗೂ ವೇದನೆಗೂ ಭಾಷಾಂತರ, ದೇಶಾಂತರ. ಮನಸ್ಸಿನೊಳಗೆ, ಪುಸ್ತಕದಲ್ಲಿ, ಪ್ರೀತಿಯಲ್ಲಿ, ಕೆಲವು ಕನಸಿನಲ್ಲಿ, ಕೆಲವು ಸಾರಿ ಕನ್ನಡ, ತಮಿಳು".

ಅಮೆರಿಕದಲ್ಲಿ ಕುಳಿತು ರಾಮಾನುಜನ್ ಅವರು ಮೈಸೂರನ್ನೋ,  ಮದ್ರಾಸನ್ನೋ, ಉಪಯೋಗಿಸಿದ ಕಕ್ಕಸ್ಸನ್ನೊ, ಹಲವು ಸಂಕೀರ್ಣ ಸಂಬಂಧಗಳಲ್ಲಿ ಕಾಣುವ ಹಿಂಸೆ, ಕನಿಕರ, ನೋವು, ಸಣ್ಣತನಗಳೇ ಬದುಕಾಗುವ ವಿಚಿತ್ರಗಳನ್ನೋ,  ಆ ಮೂಲಕ ಬದುಕಿನಲ್ಲಿ ಏನಿರಬಹುದು ಎಂದು ಅರಸುವ ಅವರ ಕುತೂಹಲವನ್ನೋ, ಇವುಗಳ ಕುರಿತು ಅಚ್ಚರಿ ಹುಟ್ಟುತ್ತೆ.  ಕಾದಂಬರಿಯ ಕೊನೆಯಲ್ಲಿನ ಸನ್ನಿವೇಶ ಹೀಗಿದೆ:

ಕಾಹಿಲೆಯಲ್ಲಿ ಮಲಗಿರುವ ತಂದೆಯ ಭಾವ ಕೊನೆ ಘಳಿಗೆಯಲ್ಲಿ ಬೀದಿಯಲ್ಲಿ ಖರ್ಜೂರ ಮಾರುವವನ ಕೂಗನ್ನು ಕೇಳಿ ಖರ್ಜೂರ ತಿನ್ನುವ ಆಸೆ ಸೂಚಿಸುತ್ತಾನೆ.  ಹೆಂಡತಿ "ಖರ್ಜೂರ ಒಳ್ಳೆಯದಲ್ಲ ನಿಮಗೆ.  ಹಾಗೆ ನೋಡಿದ್ದೆಲ್ಲ ಬೇಕು ಬೇಕು ಅಂತ ಕೇಳಬಾರದು" ಅಂತ ಗದರಿಸುತ್ತಾಳೆ.  ರಾತ್ರಿ, ರೈಲಿನಲ್ಲಿ ಕೂತಾಗ ಮತ್ತೆ ನೆನಪಿಸಿಕೊಂಡ ನಮ್ಮಪ್ಪ "ಘಾಸಿ ಶಿಕ್ಷೆ ವಹಿಸಿದವರಿಗೆ ಕಟ್ಟಕಡೆಯ ಆಸೆ, ನಾಲಗೆ ತೀಟೆ ಏನಿದ್ದರೂ ತೀರಿಸುತ್ತಾರೆ. ಕೇಳಿ ಕೇಳಿದ ತಿಂಡಿ ತರಿಸಿ ಕೊಡುತ್ತಾರೆ, ಭರ್ಜರಿ ಊಟ ಹಾಕುತ್ತಾರೆ.  ಈ ಅತ್ತಿಂಬೇರಿಗೆ ಕಡೆಗಾಲದಲ್ಲಿ ಒಂದು ಖರ್ಜೂರ ದಕ್ಕಲಿಲ್ಲ" ಎಂದರು.  

ಒಂದು ಸಂಗತಿ ಏನೆಂದರೆ ಮನುಷ್ಯ ತಾನು, ವಿಜ್ಞಾನದಲ್ಲೊ, ಯಾವುದೋ ಗಹನ ಶಾಸ್ತ್ರದಲ್ಲೋ , ಸೇನೆಯಲ್ಲೋ, ತಂತ್ರಜ್ಞಾನದಲ್ಲೋ, ರಾಯಭಾರಿಯಂತೆ,  ಪ್ರಬುದ್ಧನೆಂಬಂತೆ ಗಹನ ವಿಚಾರಗಳ ಕುರಿತು ಚಿಂತಿಸುತ್ತಿರುತ್ತಾನೆ.  ಆದರೆ ಅವನಾಳದಲ್ಲಿ ಅವನನ್ನು ತನ್ನಲ್ಲಿ ಮತ್ತೊಬ್ಬನನ್ನಾಗಿ ಕಂಡುಕೊಳ್ಳುವ ವಿಚಾರಗಳೆಲ್ಲ ಬದುಕಿನಲ್ಲಿ ಅವನನ್ನು ಸಂಕೀರ್ಣನನ್ನಾಗಿಸುವ ಸಣ್ಣ ಸಣ್ಣ ಸಂಗತಿಗಳು.  ಈ "ಮತ್ತೊಬ್ಬನ ಆತ್ಮಚರಿತ್ರೆ" ಎ. ಕೆ. ರಾಮಾನುಜನ್ ಅವರಿಗೆ ಬದುಕೆಂಬಂತೆ ಕಾಣುತ್ತದೆ ಎಂದರೆ ಬದುಕನ್ನು ಯಾವುದೇ ವಿಶಿಷ್ಟತೆಗಳಿಲ್ಲದೆ ಕಳೆಯುವ,  ಯಾವುದೋ ಮತ್ತೊಬ್ಬರಂತೆ ಕಳೆಯಲು ಹೆಣಗುವ 'ನಮ್ಮ ಚರಿತ್ರೆ' ಹೇಗಿರಬೇಡ!


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ