ಶ್ರೀಪತಿಯು ನಮಗೆ
ಶ್ರೀಪತಿಯು ನಮಗೆ ಸಂಪದವೀಯಲಿ ವಾಣೀಪತಿಯು ನಮಗೆ ದೀರ್ಫಾಯು ಕೊಡಲಿ
ಸುರರ ಗಣವನು ಪೊರೆಯೆ ವಿಷವ ಕಂಠದಲಿಟ್ಟ
ಹರ ನಮಗೆ ಸತತ ಸಹಾಯಕನಾಗಲಿ ನರರೊಳುನ್ನತವಾದ ಭೋಗ ಭಾಗ್ಯಂಗಳನು
ಪುರುಹೂತ ಪೂರ್ಣ ಮಾಡಿಸಲಿ ನಮಗೆ (1)
ವಿನುತ ಸಿದ್ಧಿಪ್ರದನು ವಿಘ್ನೇಶ ದಯದಿಂದ
ನೆನೆದ ಕಾರ್ಯಗಳೆಲ್ಲ ನೆರೆವೇರಿಸಲಿ
ದಿನದಿನದಿ ಅಶ್ವಿನಿಗಳಾಪತ್ತುಗಳ ಕಳೆದು
ಮನಕೆ ಹರುಷವನಿತ್ತು ಮನ್ನಿಸಲಿ ಬಿಡದೆ (2)
ನಿರುತ ಸುಜ್ಞಾನವನು ಈವ ಮಧ್ವರಾಯ
ಗುರುಗಳಾಶೀರ್ವಾದ ನಮಗಾಗಲಿ
ಪುರಂದರವಿಠಲನ ಕರುಣದಿಂದಲಿ ಸಕಲ ಸುರರೊಲುಮೆ ನಮಗೆ ಸುಸ್ಥಿರವಾಗಲಿ (3)
ಭಾವಾರ್ಥ :
ಶ್ರೀಪತಿಯಾದ ನಾರಾಯಣನು ಲಕ್ಷ್ಮಿ ಯೊಡಗೂಡಿ, ವಾಣೀಪತಿಯಾದ ಬ್ರಹ್ಮನು ಸರಸ್ವತಿಯೊಡಗೂಡಿ ,ಸುರರ ಗಣವನು ಪೊರೆದರು. ಸಮುದ್ರಮಥನ ಕಾಲದಲ್ಲಿ ಹಾಲಾಹಲ ವಿಷವು ಹೊರಬಂದು ದೇವತೆಗಳನ್ನು ತೊಂದರೆಗೀಡುಮಾಡಿದಾಗ, ರುದ್ರನು ಈ ಹಾಲಾಹಲ ವಿಷವನ್ನುಂಡು ದೇವತೆಗಳ ನೆಮ್ಮದಿಗೆ ಕಾರಣನಾದನೆಂಬ ಕತೆ ಹಿನ್ನೆಲೆಯಿದು. ಶಿವನು ಹಾಗೆ ಹಾಲಾಹಲವನ್ನು ಕುಡಿದಾಗ ಆತನು ಪೂರ್ಣವಾಗಿ ಕುಡಿದರೆ ಲೋಕಕ್ಕೆ ಒಳಿತಲ್ಲವೆಂದು ಆತನ ಕಂಠದಲ್ಲೇ ಕೈಹಿಡಿದು ಆ ವಿಷವನ್ನು ನಿಲ್ಲಿಸಿದಳು ವಿಷವು ಕಂಠದಲ್ಲೇ ನಿಂತುದರಿಂದ ಆಗಲೇ ಶಿವನು ವಿಷಕಂಠನೆಂಬ ಬಿರುದು ಗಳಿಸಿದ್ದು.
ಹರ (ಶಿವ, ರುದ್ರದೇವರು), ಪುರುಹೂತ (ಇಂದ್ರ), ವಿಘ್ನೇಶ (ಗಣಪತಿ.), ಅಶ್ವಿನಿ ಕುಮಾರರೆಂಬ ಅವಳಿ ದೇವತೆಗಳು (ಸೂರ್ಯನ ಅವಳಿಮಕ್ಕಳು, ಇವರು ದೇವಲೋಕದ ವೈದ್ಯರು) ಮುಂತಾದ ಸಕಲಸುರರ ಆಶೀರ್ವಾದವೂ ಆರೋಗ್ಯ ಮುಂತಾದವುಗಳೂ ನಮಗೆ ದೊರಕಲಿ. ಗುರ್ವಾಶೀರ್ವಾದವು ನಮಗಿರಲಿ ಎಂದು ಪುರಂದರದಾಸರು ಭಗವಂತನನ್ನು ಪ್ರಾರ್ಥಿಸುತ್ತಿದ್ದಾರೆ
ಗೀತೆ ಮತ್ತು ಭಾವಾರ್ಥ ಕೃಪೆ: Rohini Kanchana Subbarathnam🌷🙏🌷
ಕಾಮೆಂಟ್ಗಳು