ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವೃಂದಾ ಆಚಾರ್ಯ


 

ವಿದುಷಿ ವೃಂದಾ ಆಚಾರ್ಯ ನಿಧನ

ಹೆಸರಂತ ಸಂಗೀತ ಕಲಾವಿದೆ, ಸಂಗೀತ ಶಾಸ್ತ್ರಜ್ಞೆ, ಸಂಗೀತ ಗುರು, ಉಪನ್ಯಾಸಕಿ, ಬಹುಮುಖಿ ಪ್ರತಿಭೆ ವಿದುಷಿ ವೃಂದಾ ಆಚಾರ್ಯ ನಿಧನರಾಗಿದ್ದಾರೆ.  ಅಷ್ಟೊಂದು ಪ್ರತಿಭಾನ್ವಿತರಾಗಿದ್ದ ವೃಂದಾ ಅವರು ಇನ್ನೂ 44ನೇ ವಯಸ್ಸಿನಲ್ಲಿ ಕ್ಯಾನ್ಸರ್‍ ಕಾರಣದಿಂದ ನಿಧನರಾಗಿರುವುದು ಸಂಗೀತ ಮತ್ತು ಸಾಂಸ್ಕೃತಿಕ ಲೋಕಕ್ಕೆ ಅಪಾರ ನಷ್ಟವಾಗಿದೆ.   ವೃಂದಾ ಅವರ ಪತಿ ವಿದ್ವಾನ್ ಅರ್ಜುನ್ ಕುಮಾರ್ ಮಹಾನ್ ಮೃದಂಗ ವಿದ್ವಾಂಸರಾಗಿ ಖ್ಯಾತರಾಗಿದ್ದಾರೆ.

ಬೆಂಗಳೂರಿನವರಾದ ವೃಂದಾ ಆಚಾರ್ಯ ಅವರು ಬಾಲಪ್ರತಿಭೆಯಾಗಿ ಶಾಲಾ ದಿನಗಳಲ್ಲೇ ಗಾನಕೋಗಿಲೆ ಎಂದು ಎಲ್ಲರಿಂದ‍ ಮೆಚ್ಚುಗೆ ಗಳಿಸಿದ್ದವರು.  ವಿದುಷಿ ಶೈಲಾ ಸುಬ್ರಮಣ್ಯಂ ಅವರಿಂದ ಮೊದಲು ಸಂಗೀತಾಭ್ಯಾಸ ಪಡೆದ ಇವರು ಮುಂದೆ ವಿದುಷಿ ನೀಲಾ ರಾಮಗೋಪಾಲ್ ಅವರಲ್ಲಿ ಪ್ರಬುದ್ಧ ಕಲಾವಿದೆಯಾಗಿ ಬೆಳೆದರು.  ಪತಿ ವಿದ್ವಾನ್ ಅರ್ಜುನ್ ಕುಮಾರ್ ಅವರ ಮಾರ್ಗದರ್ಶನವೂ ಅವರ ಬೆಳವಣಿಗೆಯಲ್ಲಿ ಮಹತ್ವದ ಕೊಡುಗೆಯಾಗಿತ್ತು.

ಶೈಕ್ಷಣಿಕವಾಗಿಯೂ ದೊಡ್ಡ ಸಾಧನೆ ಮಾಡಿದ ವೃಂದಾ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಕಾಂ. ನಲ್ಲಿ ಪ್ರಥಮ ರ್‍ಯಾಂಕ್ ಸಾಧನೆಯನ್ನು ಚಿನ್ನದ ಪದಕದೊಂದಿಗೆ ಗಳಿಸಿದ್ದರು.  ಆರ್ಥಿಕ, ವಾಣಿಜ್ಯ ವಿಚಾರಗಳಲ್ಲಿ ಅಪಾರ ಸೇವೆ ನೀಡಿದ್ದ ಇವರು ಜೈನ್ ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದ್ದರು. ಸಂಸ್ಕೃತದಲ್ಲಿ ಎಂ. ಎ. ಪದವಿ ಗಳಿಸಿದ್ದ ವೃಂದಾ ಅವರು ಮುಂದೆ ಸಂಗೀತಲೋಕಕ್ಕೆ ತಮ್ಮನ್ನು ಪೂರ್ಣವಾಗಿ ಬೆಸೆದುಕೊಂಡಿದ್ದರು.

ವೃಂದಾ ಅವರು ಸುಶ್ರಾವ್ಯ, ಶಾಸ್ತ್ರೀಯಬದ್ಧ ಸಂಗೀತ ಕಚೇರಿಗಳಿಗೆ ಹೆಸರಾದಂತೆಯೇ, ಸಂಗೀತ ಪ್ರಾತ್ಯಕ್ಷಿಕೆಗಳಿಗೆ, ಉಪನ್ಯಾಸಗಳಿಗೆ, ಕಾರ್ಯಾಗಾರಗಳಿಗೆ ಪ್ರಸಿದ್ಧರಾಗಿದ್ದರು. ದೇಶ ವಿದೇಶಗಳಲ್ಲಿ ಅವರಿಂದ ಸಂಗೀತ ಕಲಿಯುತ್ತಿದ್ದ ಅಪಾರ ವಿದ್ಯಾರ್ಥಿವೃಂದವಿತ್ತು.  ತಮ್ಮ ಪತಿ ವಿದ್ವಾನ್ ಅರ್ಜುನ್ ಕುಮಾರ್ ಅವರೊಂದಿಗೆ 'ಅನುಭೂತಿ' ಎಂಬ ಸಂಗೀತ ಪ್ರಧಾನ ಸಂಸ್ಥೆ ನಡೆಸುತ್ತಿದ್ದರು.

ಇನ್ನೂ ಇಷ್ಟು ಸಣ್ಣ ವಯಸ್ಸಿನಲ್ಲಿ ವೃಂದಾ ಅವರು ತಮ್ಮ ಸಮಸ್ತ ಅಭಿಮಾನಿ ಬಳಗವನ್ನು ಅಗಲಿರುವುದು ದುಃಖ ತಂದಿದೆ.  ಈ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಪತಿ ವಿದ್ವಾನ್ ಅರ್ಜುನ್ ಕುಮಾರ್ ಮತ್ತು ಕುಟುಂಬಕ್ಕೆ ಬರಲಿ. ಅಗಲಿದ ವೃಂದಾ ಆಚಾರ್ಯ ದಿವ್ಯ ಚೇತನಕ್ಕೆ ನಮನ 🌷🙏🌷

(ನಮ್ಮ ಕನ್ನಡ ಸಂಪದ  Kannada Sampada ದ ಬರಹಗಳು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಲಭ್ಯವಿದೆ)

Respects to departed soul Vidushi Vrinda Acharya 🌷🙏🌷



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ