ಮಂಜುಳಾ ಸುಬ್ರಮಣ್ಯ
ಮಂಜುಳಾ ಸುಬ್ರಮಣ್ಯ ಅವರು ಭರತನಾಟ್ಯ ಮತ್ತು ರಂಗ ಕಲಾವಿದೆಯಾಗಿ ಹೆಸರಾಗಿದ್ದಾರೆ.
ಡಿಸೆಂಬರ್ 2, ಮಂಜುಳಾ ಅವರ ಜನ್ಮದಿನ. ಮಂಗಳೂರಿನ ಬಳಿಯ ಪುತ್ತೂರಿನವರಾದ ಮಂಜುಳಾ ಅವರು ಭರತನಾಟ್ಯವನ್ನು ಶಾಸ್ತ್ರೀಯವಾಗಿ ಸಾಧನೆ ಮಾಡಿದ್ದು, ಪುತ್ತೂರಿನಲ್ಲಿ ನಾಟ್ಯರಂಗ ಎಂಬ ನೃತ್ಯಶಾಲೆಯನ್ನು ಕಟ್ಟಿ ಮುನ್ನಡೆಸುತ್ತಿದ್ದಾರೆ.
ರಂಗಭೂಮಿಗೆ ಆಕರ್ಷಿತರಾದ ಮಂಜುಳಾ ಅವರು ಮೊದಲು ಕೈಗೆತ್ತಿಕೊಂಡದ್ದು 'ಯಶೋಧರಾ' ಪಾತ್ರವನ್ನು. ಯಶೋಧರೆಯ ಮನೋಗತವನ್ನು ಹೊಸನಿಟ್ಟಿನಲ್ಲಿ ರಂಗರೂಪಕ್ಕೆ ತರುವುದರ ಮೂಲಕ ನಾಟಕ ಮಾಧ್ಯಮಕ್ಕೆ ಪಾದಾರ್ಪಣೆ ಮಾಡಿದ ಮಂಜುಳಾ ಅವರು ಮುಂದೆ ಹಲವು ಪ್ರಯೋಗಗಳಿಗೆ ಮುಂದಾದರು. ಹೀಗೆ ಮೂಡಿದ್ದು ಅವರ ಭರತಗಾಥಾ, ಕೃಷ್ಣಸಖಿ ಮುಂತಾದ ನೃತ್ಯ ಮತ್ತು ಅಭಿನಯ ಬೆರೆತ ಸಂಯೋಜನೆಗಳು. ಇವುಗಳಲ್ಲದೆ ಇವರ ಏಕಪಾತ್ರ ಸಂಯೋಜನೆಗಳಾದ ಊರ್ಮಿಳಾ, ರಾಧಾ, ಹಿಡಿಂಬ ಮುಂತಾದ ಪಾತ್ರಗಳಲ್ಲಿಯೂ ಮಹಿಳೆಯ ಭಾವುಕತೆಯ ಹಿಂದಿನ ಬೌದ್ಧಿಕ ತೊಳಲಾಟಗಳು ಪ್ರಮುಖ ಪಾತ್ರವಹಿಸಿವೆ. ಇವೆಲ್ಲವೂ ಅನೇಕ ಯಶಸ್ವಿ ಪ್ರದರ್ಶನಗಳನ್ನು ಕಂಡಿವೆ.
ರಂಗವನ್ನು ಅಕಾಡೆಮಿಕ್ ಆಗಿ ಅಧ್ಯಯನ ಮಾಡಿರುವ ಮಂಜುಳಾ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಲಭಿಸಿತ್ತು. ಆಕಾಶವಾಣಿ, ದೂರದರ್ಶನಗಳಲ್ಲಿ ಪ್ರದರ್ಶನ ಕೊಡುವುದರ ಜೊತೆಗೆ ಇವರು ರಾಜ್ಯಾದ್ಯಂತ ರಂಗ ತರಬೇತಿ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡಿದ್ದಾರೆ.
ಬರಹಗಾರ್ತಿಯೂ ಆಗಿರುವ ಮಂಜುಳಾ ಅವರು ತಮ್ಮ ಅನುಭವಗಳ ನೆರಳಿನಲ್ಲಿ ಅನೇಕ ಲೇಖನಗಳನ್ನು ಮೂಡಿಸುತ್ತ ಬಂದಿದ್ದಾರೆ.
ಕಲಾವಿದೆ ಮಂಜುಳಾ ಸುಬ್ರಮಣ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Manjula Subrahmanya 🌷🙏🌷
ಕಾಮೆಂಟ್ಗಳು