ಕೆ. ಜಿ. ಕೃಪಾಲ್
ಕೆ. ಜಿ. ಕೃಪಾಲ್
ಕೆ ಜಿ ಕೃಪಾಲ್ ಅವರು ಆರ್ಥಿಕ ಚಿಂತಕರು, ಷೇರು ಪೇಟೆ ತಜ್ಞರು ಮತ್ತು ಕನ್ನಡದಲ್ಲಿ ಆ ಕುರಿತಾದ ಪ್ರಸಿದ್ಧ ಬರಹಗಾರರು. ಆಧುನಿಕ ಕಾಲಘಟ್ಟದಲ್ಲಿನ ನಿರಂತರ ಬದಲಾವಣೆಯ ವಿಶ್ವದ ಆರ್ಥಿಕ ಸನ್ನಿವೇಶಗಳನ್ನು ಕನ್ನಡದ ಜನಸಾಮಾನ್ಯರಿಗೆ ಅರ್ಥಮಾಡಿಸುವಂತಹ ಆರ್ಥಿಕ ಸಾಹಿತ್ಯದ ಅಗತ್ಯದ ಹಿನ್ನೆಲೆಯಲ್ಲಿ
ಕೃಪಾಲ್ ಅವರು ನೀಡಿರುವ ಕೊಡುಗೆ ಬಲುಹಿರಿದು.
ಕೆ.ಜಿ. ಕೃಪಾಲ್ ಸುಮಾರು ನಾಲ್ಕು ದಶಕಕ್ಕಿಂತ ಹೆಚ್ಚು ಕಾಲದಿಂದ ಜಾಗತಿಕ ಹಣಕಾಸು ವಹಿವಾಟು ಹಾಗೂ ಪ್ರಾದೇಶಿಕ ಹಣಕಾಸು ವಹಿವಾಟುಗಳ ಕುರಿತು, ವಿಶೇಷವಾಗಿ, ಗಳಿಕೆ, ಉಳಿತಾಯ, ಹೂಡಿಕೆ, ಸಾಲ, ಹಣಕಾಸು ನಿರ್ವಹಣೆ, ಆಸ್ತಿ ಹೀಗೆ ದೈನಂದಿನ ಅವಶ್ಯಕ ವಿಚಾರಗಳನ್ನು, ಅತ್ಯಂತ ಸರಳ ಕನ್ಬಡ ಭಾಷೆಯಲ್ಲಿ ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಪಸರಿಸಿದವರು.
ಏಪ್ರಿಲ್ 13, ಕೃಪಾಲ್ ಅವರ ಜನ್ಮದಿನ. ಉತ್ತರ ಕನ್ನಡದ ಕುಮಟಾದ ಡಾ. ಎ.ವಿ. ಬಾಳಿಗಾ ಕಾಲೇಜಿನಲ್ಲಿ ವಿಜ್ಞಾನ (ಬಿ.ಎಸ್ಸಿ ) ಪದವಿಯನ್ನು ಮುಗಿಸಿ, ದಾವಣಗೆರೆಯಲ್ಲಿ ಕಾನೂನು ಪದವಿಯನ್ನು ಗಳಿಸಿದರು.
ಕೃಪಾಲ್ ಅವರು 1974ರಲ್ಲಿ ವೆಹಿಕಲ್ ಫೈನಾನ್ಸ್ ಉದ್ಯಮದಲ್ಲಿ ವೃತ್ತಿಯನ್ನು ಪ್ರಾರಂಭಿಸಿದರು. 1977ರಲ್ಲಿ ಸೇವಿಂಗ್ಸ್ ಅಂಡ್ ಇನ್ವೆಸ್ಟ್ಮೆಂಟ್ಸ್ ಕಾರ್ಪೋರೇಷನ್ ಅನ್ನು ಪ್ರಾರಂಭಿಸಿದರು. ಈ ಸಂಸ್ಥೆ ಜನಸಾಮಾನ್ಯರಿಗೆ ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳು ಮತ್ತು ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಮುಂತಾದ ಹೂಡಿಕೆ ಯೋಜನೆಗಳ ಸಮಗ್ರ ಮಾಹಿತಿಯನ್ನು ಒದಗಿಸುವಲ್ಲಿ ಪ್ರಸಿದ್ಧಿಗೊಂಡು, ಆ ಕಾಲದಲ್ಲಿಯೇ ಕರ್ನಾಟಕ ರಾಜ್ಯ ಸರ್ಕಾರದ ಪ್ರಶಸ್ತಿಯನ್ನು ಗಳಿಸಿತ್ತು.
ಕೃಪಾಲ್ ಅವರು 1982ರಿಂದ, ಬೆಂಗಳೂರು ಷೇರುಪೇಟೆಯೊಂದಿಗೆ ಸಂಬಂಧ ಪ್ರಾರಂಭಿಸಿ ಸಕ್ರೀಯವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಷೇರು ಮಾರುಕಟ್ಟೆ ಮತ್ತು ಹಣಕಾಸು ನಿರ್ವಹಣೆಯ ಕುರಿತಾದ ತಮ್ಮ ಅನುಭವಗಳ ಆಧಾರದ ಮೇಲೆ ಕನ್ನಡದ ಹೆಸರಾಂತ ಪತ್ರಿಕೆಗಳಾದ ಕನ್ನಡ ಪ್ರಭ, ಪ್ರಜಾವಾಣಿ, ಉಷಾಕಿರಣ, ಮುಂತಾದ ಪ್ರಮುಖ ಪತ್ರಿಕೆಗಳಲ್ಲಿ ಷೇರು ಮಾರುಕಟ್ಟೆ ಮತ್ತು ಹಣಕಾಸು ಕುರಿತಾದ ಅನೇಕ ಲೇಖನಗಳನ್ನು ಬರೆದಿದ್ದಾರೆ.
ಕೃಪಾಲ್ ಅವರು 2018ರವರೆಗೆ ಸುಮಾರು 13 ವರ್ಷಗಳ ಕಾಲ 'ಪ್ರಜಾವಾಣಿ' ದಿನಪತ್ರಿಕೆಯಲ್ಲಿ ಪ್ರತಿ ಸೋಮವಾರ ಪ್ರಕಟವಾಗುತ್ತಿದ್ದ ಷೇರುಪೇಟೆಗೆ ಸಂಬಂಧಿಸಿದ ಅಂಕಣಗಳನ್ನು “ಷೇರು ಸಮಾಚಾರ” ಎಂಬ ಶೀರ್ಷಿಕೆ ಅಡಿಯಲ್ಲಿ ಬರೆದು ಜನಪ್ರಿಯತೆಯನ್ನು ಗಳಿಸಿದರು. 'ಕರ್ಮವೀರ' ಸಾಪ್ತಾಹಿಕದಲ್ಲಿ “ಷೇರುಪೇಟೆ ಜ್ಞಾನವಾಹಿನಿ” ಶೀರ್ಷಿಕೆ
ಅಡಿಯಲ್ಲಿ ಅಂಕಣಗಳನ್ನು ಬರೆದರು. ಸ್ಟಾಕ್ ಮಾರ್ಕೆಟ್ಗೆ ಸಂಬಂಧಿಸಿದ ಹಲವಾರು ಲೇಖನಗಳನ್ನು ಉದಯವಾಣಿ, ಸಂಯುಕ್ತ ಕರ್ನಾಟಕ, ತರಂಗ ಮುಂತಾದವುಗಳಲ್ಲಿ ಮೂಡಿಸಿದರು. 2007ರಲ್ಲಿ ಇಕ್ವಿಟಿ ಮಾರ್ಕೆಟ್ಗೆ ಸಂಬಂಧಪಟ್ಟ ಇವರ ಲೇಖನ 'ತರಂಗ'ದ ರಕ್ಷಾ
ಪುಟದೊಂದಿಗೆ ಪ್ರಕಟಗೊಂಡಿತ್ತು. 'ಉಷಾಕಿರಣ' ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ “ಷೇರುಪೇಟೆ ನಿತ್ಯನೋಟ” ಎಂಬ ಅಂಕಣ ಓದುತ್ತಿದ್ದ ದೊಡ್ಡ ಓದುಗರ ಬಳಗವೊಂದು ಉಷಾ ಕಿರಣ ಪತ್ರಿಕೆ ನಿಂತಾಗ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಷೇರುಪೇಟೆ ನಿತ್ಯನೋಟ ಅಂಕಣವನ್ನು ಉಲ್ಲೇಖಿಸಿ ದಯಮಾಡಿ ಅದನ್ನು ಪ್ರಕಟಿಸಿ ಎಂದು ಪತ್ರ ಬರೆದಿದ್ದರು, ಇದು ಕೃಪಾಲರು ತಮ್ಮ ಬರವಣಿಗೆ ಮೂಲಕ ಜನಸಾಮಾನ್ಯರಿಗೆ ಎಷ್ಟು ಆಪ್ತರಾಗಿದ್ದರು
ಎಂಬುದರ ಉತ್ತಮ ನಿದರ್ಶನವಾಗಿದೆ.
ಕೃಪಾಲ್ ಅವರು, ಚಂದನ ವಾಹಿನಿಯಲ್ಲಿ ಪ್ರತಿ ಪರ್ಯಾಯ ಶುಕ್ರವಾರ ಬೆಳಿಗ್ಗೆ 8ರಿಂದ 8:30ರ ವರೆಗೆ ಪ್ರಸಾರವಾಗುತ್ತಿದ್ದ ನೇರ ಫೋನ್-ಇನ್ ಕಾರ್ಯಕ್ರಮಗಳಲ್ಲಿ ಷೇರು ಮಾರುಕಟ್ಟೆಯ ಬಗ್ಗೆ ಮಾರ್ಗದರ್ಶನವನ್ನು ನೀಡಿದ್ದಾರೆ. ಬೆಂಗಳೂರು ಸ್ಟಾಕ್ ಎಕ್ಸ್ಚೆಂಜ್ ಪ್ರಾಯೋಜಿತ ರೇಡಿಯೋ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಂಡು ತಮ್ಮ ಅನುಭವವನ್ನು ಧಾರೆಯೆರೆದಿದ್ದಾರೆ.
ಸೆಬಿ, ಬಾಂಬೆ ಸ್ಟಾಕ್ ಎಕ್ಸ್ಚೆಂಜ್, ನ್ಯಾಷನಲ್ ಸ್ಟಾಕ್ ಎಕ್ಸ್ಚೆಂಜ್, ಬೆಂಗಳೂರು ಸ್ಟಾಕ್ ಎಕ್ಸ್ಚೆಂಜ್, ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರಟರೀಸ್, ಇನ್ಸ್ಟಟ್ಕೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಮತ್ತು ಅನೇಕ ಬ್ರೋಕಿಂಗ್ ಹೌಸ್ಗಳ ಆಶ್ರಯದಲ್ಲಿ ರಾಜ್ಯದಾದ್ಯಂತ ವಿವಿಧೆಡೆ ಹೂಡಿಕೆದಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಸೆಬಿ ಮತ್ತು ಬಿಎಸ್ ಆಯೋಜಿಸಿದ್ದ ಸಭೆಗೆ ಸ೦ಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ವಿಭಾಗ, ದಾವಣಗೆರೆಯ ಬಾಪೂಜಿ ಇನ್ಸ್ಟಿಟ್ಯೂಟ್ ಮ್ಯಾನೇಜ್ಮೆಂಟ್, ವಿಷ್ಣುಪ್ರಿಯಾ ಕಾಲೇಜ್ ಆಫ್ ಬ್ಯುಸಿನೆಸ್
ಮ್ಯಾನೇಜ್ಮೆಂಟ್, ವಿಷ್ಣುಪ್ರಿಯಾ ಕಾಲೇಜ್ ಆಫ್ ಮ್ಯಾನೇಜ್ಮೆಂಟ್, ಚಿಕ್ಕಬಳ್ಳಾಪುರ, ಸುರಾನಾ ಕಾಲೇಜು, ಕೆನರಾ ಬ್ಯಾಂಕ್ ಸ್ಪಡಿ ಸರ್ಕಲ್, ಕ್ರೈಸ್ಟ್ ಯೂನಿವರ್ಸಿಟಿ, ನಾಗಾರ್ಜುನ ಪದವಿ ಕಾಲೇಜು ಮುಂತಾದ ಪ್ರಮುಖ ಸಂಸ್ಥೆಗಳಲ್ಲಿ ಅತಿಥಿ ಉಪನ್ಯಾಸಗಳನ್ನು ನೀಡಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯವು 2016-2019ರ ಅವಧಿಗೆ ಸ್ಟಾಕ್ ಮಾರ್ಕೆಟ್ನಲ್ಲಿ ಬಿಬಿಎಂ, ಬಿಸಿಎ, ಬಿಎಫ್ಡಿ,ಬಿಎಸ್ಇ ಕೋರ್ಸ್ಗಳಿಗೆ ಇವರ ಬರವಣಿಗೆಯನ್ನು ಒಂದು ಅಧ್ಯಾಯವಾಗಿಸಿತ್ತು.
ಕೃಪಾಲ್ ಅವರು ಆರು ಪುಸ್ತಕಗಳನ್ನು ಇಂಗ್ಲಿಷ್ನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಗಾಗಿ ಇಂಗ್ಲಿಷ್ನಿಂದ ಕನ್ನಡಕ್ಕೆ 'ಹಣಕಾಸು ಶಿಕ್ಷಣ ಮತ್ತು ಹೂಡಿಕೆಯ ಜಾಗೃತಿ' ಎಂಬ ಬೋಧಕರ ಕೃತಿ ಪುಸ್ತಕವನ್ನು ಸಹ ಅನುವಾದಿಸಿದ್ದಾರೆ. ಡಿಜಿಟಲ್ ಮೀಡಿಯಾ ವೇದಿಕೆಗಳಾದ ಪ್ರಗತಿ ವಾಹಿನಿ, ಕನ್ನಡ ಒನ್ ಇಂಡಿಯಾ, ಗುಡ್ ರಿಟರ್ನ್ಸ್, ಕನ್ನಡಪ್ರೆಸ್.ಕಾಮ್ ಇತ್ಯಾದಿಗಳಲ್ಲಿ ವಿವಿಧ ಹಣಕಾಸು ಸಂಬಂಧಿತ ಲೇಖನಗಳ ಕುರಿತು ವಿಶೇಷ ಅಂಕಣಗಳ ಕೊಡುಗೆ ನೀಡಿದ್ದಾರೆ.
'ಷೇರು ಜಗತ್ತು' 2010ರಲ್ಲಿ ಬಿಡುಗಡೆಯಾದ ಕೃಪಾಲ್ ಅವರ ಮೊದಲ ಕೃತಿ. ಈ ಕೃತಿ ನಾಲ್ಕು ಬಾರಿ ಮುದ್ರಣಗೊಂಡಿದೆ. ಷೇರು ಮಾರುಕಟ್ಟೆಯ ಅಧ್ಯಯನದ ದೃಷ್ಟಿಯಲ್ಲಿ ಬಹಳ ಜನರ ಮೆಚ್ಚುಗೆಯನ್ನು ಪಡೆದಿದೆ. 2014ರಲ್ಲಿ ಬಿಡುಗಡೆಯಾದ 'ಷೇರು ಜಗತ್ತಿನ ಸುತ್ತ' ಪುಸ್ತಕ, 2016ರಲ್ಲಿ ಬಿಡುಗಡೆಯಾದ
'ಷೇರು ಸಂಪತ್ತು" ಮತ್ತು 2023ರಲ್ಲಿ ಬಿಡುಗಡೆಯಾದ 'ಷೇರು ಸಂಜೀವಿನಿ' , 2024ರಲ್ಲಿ ಬಿಡುಗಡೆ ಆದ 'ಷೇರು ಹೂಡಿಕೆ ಕಲಿ ತಿಳಿ ನಲಿ' ಈ ಎಲ್ಲಾ ಪುಸ್ತಕಗಳಲ್ಲಿ ಷೇರು ವ್ಯವಹಾರದಲ್ಲಿ ಬಳಸುವ ಪದಗಳನ್ನು ಹಾಗೂ ತಾಂತ್ರಿಕ ವಿಷಯಗಳನ್ನು ಕನ್ನಡೀಕರಿಸಿ ಸರಳವಾಗಿ ವಿವರಿಸಿದ್ದಾರೆ.
ಕೃಪಾಲ್ ಅವರು ಸಾಮಾಜಿಕ ಜಾಲತಾಣದಲ್ಲಿ ಒಂದಾದ ಕ್ಲಬ್ ಹೌಸ್ ಮೂಲಕ ಕಳೆದ ನಾಲ್ಕು ವರ್ಷಗಳಿಂದ ಪ್ರತಿದಿನ ಷೇರುಪೇಟೆ ವಿಚಾರ ಮಂಟಪ ಎಂಬ ವೇದಿಕೆಯನ್ನು ಕಲ್ಪಿಸಿ ಆರ್ಥಿಕ ತಜ್ಞರನ್ನು ಒಟ್ಟುಗೂಡಿಸಿಕೊಂಡು ಅನೇಕ ರೀತಿಯಲ್ಲಿ ಆರ್ಥಿಕ ವಿಚಾರಗಳ ಚರ್ಚೆಗಳನ್ನು ನಡೆಸಿದ್ದಾರೆ. ಇಲ್ಲಿ ನಡೆದ ಷೇರುಪೇಟೆ ವಿಚಾರ ಮಂಟಪದ ವಿಚಾರಗಳನ್ನು ಒಳಗೊಂಡ 'ಷೇರು ಹೂಡಿಕೆ ಕಲಿ ತಿಳಿ ನಲಿ' ಪ್ರಕಟಗೊಂಡಿದೆ.
ಕೃಪಾಲ್ ಅವರಿಗೆ ರೇಡಿಯೋಸಿಟಿ 'ನಮ್ಕ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ನೀಡಿದೆ. ಸರ್. ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನವು 'ಕರ್ನಾಟಕ ವಿಭೂಷಣ ರಾಜ್ಯ ಪ್ರಶಸ್ತಿ' ಯನ್ನು ನೀಡಿದೆ. ಕನ್ನಡ ಪ್ರಭ, ಸುವರ್ಣ ನ್ಯೂಸ್, ಕರ್ನಾಟಕ ಆರ್ಯ ವೈಶ್ಯ ಮಹಾಸಭಾ ಜಂಟಿಯಾಗಿ 2017ರಲ್ಲಿ 'ವಾಸವಿ ಎಕ್ಸಲೆನ್ಸ್ ಅವಾರ್ಡ್' ನೀಡಿದೆ. ಮಾತೃಭೂಮಿ ಟಸ್ಟ್ 2018ರಲ್ಲಿ ವಾಣಿಜ್ಯದ ಅಡಿಯಲ್ಲಿ 'ಮಾತೃಭೂಮಿ ಪ್ರಶಸ್ತಿ' ನೀಡಿ ಗೌರವಿಸಿದೆ. 2025ರಲ್ಲಿ ಗಾರ್ಡನ್ ಸಿಟಿ ವಿಶ್ವವಿದ್ಯಾಲಯ Tribute of Honor ನೀಡಿದೆ.
ಕೃಪಾಲ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Krupal G Kangondhi🌷🙏🌷

ಕಾಮೆಂಟ್ಗಳು