ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಿ. ಎಸ್. ಸಿದ್ಧಲಿಂಗಯ್ಯ

ಜಿ. ಎಸ್. ಸಿದ್ಧಲಿಂಗಯ್ಯ ನಮನ 🌷🙏🌷


ಕನ್ನಡ ನಾಡಿನ ಶಿಕ್ಷಕರಾಗಿ, ವಿದ್ವಾಂಸರಾಗಿ, ಬರಹಗಾರರಾಗಿ, ಭಾಷಣಕಾರರಾಗಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಮುಖ್ಯಸ್ಥರಾಗಿ ಕೆಲಸ ಮಾಡಿದ ನಾಡಿನ ಹಿರಿಯ ಚೇತನ ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯ ನಿಧನರಾಗಿದ್ದಾರೆ.  ನಾನು ಸ್ವಯಂ ಅವರ ಸನಿಹವನ್ನು ಗಳಿಸಿ, ಅವರ ಉಪನ್ಯಾಸಗಳನ್ನು ಹಲವು ಸಂದರ್ಭಗಳಲ್ಲಿ ಕೇಳಿ ಅತ್ಯಂತ ಸಂತೋಷಪಟ್ಟಿದ್ದೇನೆ. ನಾವು ಎಚ್ಎಮ್‍ಟಿ ಕನ್ನಡ ಸಂಪದದಿಂದ ಆಯೋಜಿಸಿದ್ದ ಅನೇಕ ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಗಳಾಗಿ ಆಗಮಿಸಿ ನಮ್ಮ ಆಶೀರ್ವದಿಸಿದ ಪೂಜ್ಯರು. 

ಸಿದ್ಧಲಿಂಗಯ್ಯನವರು 1931ರ ಫೆಬ್ರವರಿ 20ರಂದು ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ ಜನಿಸಿದರು.  1955ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ ಆನರ್ಸ್ ಪದವಿಯನ್ನೂ 1961ರಲ್ಲಿ ಕನ್ನಡ ಎಂ.ಎ ಪದವಿಯನ್ನೂ ಗಳಿಸಿದರು.  ಹಲವಾರು ವರ್ಷಗಳ ಕಾಲ ಸರ್ಕಾರಿ ಕಾಲೆಜುಗಳಲ್ಲಿ ಅಧ್ಯಾಪಕರಾಗಿ,  ಪ್ರಾಂಶುಪಾಲರಾಗಿ ಸಿದ್ಧಲಿಂಗಯ್ಯನವರು ಕಾರ್ಯ ನಿರ್ವಹಿಸಿದರು.  1988ರಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು.  ಮುಂದೆ 1974ರಲ್ಲಿ ಸ್ವತಃ ಹಿಂದುಳಿದ ಜಾತಿ ವರ್ಗದವರಿಗಾಗಿ ವಸತಿ ಶಿಕ್ಷಣ ಶಾಲೆಯನ್ನು ಪ್ರಾರಂಭಿಸಿದರು.

ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯನವರು ಗಣನೀಯ ಸಾಧನೆ ಮಾಡಿದ್ದಾರೆ.   ಅವರ ಮೊದಲ ಕೃತಿ ‘ಮಹಾನುಭಾವ ಬುದ್ಧ’ 1959ರಲ್ಲಿ ಪ್ರಕಟವಾಯಿತು.    ಕವಿ ಲಕ್ಷ್ಮೀಶ, ಚಾಮರಸ ಮುಂತಾದ ಬರಹಗಳಲ್ಲದೆ  ರಸಗಂಗೆ, ಉತ್ತರ, ಚಿತ್ರ ವಿಚಿತ್ರ, ಐವತ್ತರ ನೆರಳು, ಋಷ್ಯಶೃಂಗ, ಪಂಚಮುಖ ಮುಂತಾದ  ಕಥನ ಕವನಗಳನ್ನು ರಚಿಸಿದ್ದರು.  ಹೊಸಗನ್ನಡ ಕಾವ್ಯ, ವಚನ ಸಾಹಿತ್ಯ – ಒಂದು ಇಣುಕು ನೋಟ, ಶತಾಬ್ಧಿ ದೀಪ, ಜಂಗಮ ಜ್ಯೋತಿ, ಅಣ್ಣನ ನೂರೊಂದು ವಚನಗಳು ಅವರ ವಿಮರ್ಶಾ ಕೃತಿಗಳಲ್ಲಿ ಸೇರಿವೆ.  ಇವಲ್ಲದೆ ಹಲವಾರು ಗ್ರಂಥಗಳ ಸಂಪಾದನೆ, ವಿಶಿಷ್ಟ ಲೇಖನಗಳು ಹೀಗೆ ಅವರ ಬರಹಗಳ ಸಾಧನೆ ವೈಶಾಲ್ಯತೆ ಮತ್ತು ಆಳಗಳಿಂದ ವಿದ್ಮನ್ಮಣಿಗಳ ಪ್ರಶಂಸೆಗೆ ಪಾತ್ರವಾಗಿವೆ.   ಕನ್ನಡ ಸಂಪದದಲ್ಲಿ ಮೂಡಿಬಂದಿರುವ ದ.ರಾ. ಬೇಂದ್ರೆ, ಡಿ. ಆರ್. ನಾಗರಾಜ್ ಅಂತಹ ಲೇಖಕರ ಕುರಿತಾದ ಮಾಹಿತಿಗಳಿಗೆ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯನವರ ವಿಶಿಷ್ಟ ಬರಹಗಳು ಆಸರೆಯಾಗಿರುವುದನ್ನು ಕನ್ನಡ ಸಂಪದ ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ಸ್ಮರಿಸುತ್ತಿದೆ.  

1989-1992ರ ಅವಧಿಯಲ್ಲಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸಿದರು.  ಸಾಹಿತ್ಯ ಅಕಾಡೆಮಿ ವಿಶೇಷ ಪ್ರಶಸ್ತಿ, ಬಸವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಹಲಾವರು ಗೌರವಗಳಿಗೆ ಸಿದ್ಧಲಿಂಗಯ್ಯನವರು ಭಾಜನರಾಗಿದ್ದರು.

ಪೂಜ್ಯ ಆತ್ಮೀಯ ಹಿರಿಯ ಸಜ್ಜನ ವಿದ್ವಾಂಸರಾದ ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯನವರ ನಿಧನ ದುಃಖ ತಂದಿದೆ. ಈ ಮಹಾನ್ ಚೇತನಕ್ಕೆ ನಮನ🌷🙏🌷

Respects to departed soul Great scholar Prof. G S Siddalingaiah 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ