ರಾಯರು ಬಂದರು ಮಾವನ ಮನೆಗೆ
ರಾಯರು
ಬಂದರು ಮಾವನ ಮನೆಗೆ
ರಾತ್ರಿಯಾಗಿತ್ತು;
ಹುಣ್ಣಿಮೆ ಹರಸಿದ ಬಾನಿನ ನಡುವೆ
ಚಂದಿರ ಬಂದಿತ್ತು - ತುಂಬಿದ
ಚಂದಿರ ಬಂದಿತ್ತು.
ರಾತ್ರಿಯಾಗಿತ್ತು;
ಹುಣ್ಣಿಮೆ ಹರಸಿದ ಬಾನಿನ ನಡುವೆ
ಚಂದಿರ ಬಂದಿತ್ತು - ತುಂಬಿದ
ಚಂದಿರ ಬಂದಿತ್ತು.
ಮಾವನ ಮನೆಯಲಿ ಮಲ್ಲಿಗೆ ಹೂಗಳ
ಪರಿಮಳ ತುಂಬಿತ್ತು.
ಬಾಗಿಲ ಬಳಿ ಕಾಲಿಗೆ ಬಿಸಿ ನೀರಿನ
ತಂಬಿಗೆ ಬಂದಿತ್ತು - ಒಳಗಡೆ
ದೀಪದ ಬೆಳಕಿತ್ತು.
ಘಮಘಮಿಸಿವ ಮೃಷ್ಟಾನ್ನದ ಭೋಜನ
ರಾಯರ ಕಾದಿತ್ತು.
ಬೆಳ್ಳಿಯ ಬಟ್ಟಲ ಗಸಗಸೆ ಪಾಯಸ
ರಾಯರ ಕರೆದಿತ್ತು - ಭೂಮಿಗೆ
ಸ್ವರ್ಗವೇ ಇಳಿದಿತ್ತು.
ಚಪ್ಪರಗಾಲಿನ ಮಂಚದ ಮೇಗಡೆ
ಮೆತ್ತನೆ ಹಾಸಿತ್ತು.
ಅಪ್ಪಟ ರೇಶಿಮೆ ದಿಂಬಿನ ಅಂಚಿಗೆ
ಚಿತ್ರದ ಹೂವಿತ್ತು - ಪದುಮಳು
ಹಾಕಿದ ಹೂವಿತ್ತು.
ಚಿಗುರೆಲೆ ಬಣ್ಣದ ಅಡಿಕೆಯ ತಂದಳು
ನಾದಿನಿ ನಗುನಗುತ;
ಬಿಸಿ ಬಿಸಿ ಹಾಲಿನ ಬಟ್ಟಲು ತಂದರು
ಅಕ್ಕರೆಯಲಿ ಮಾವ, ಮಡದಿಯ
ಸದ್ದೇ ಇರಲಿಲ್ಲ.
ಮಡದಿಯ ತಂಗಿಯ ಕರೆದಿಂತೆಂದರು:
‘ಅಕ್ಕನ ಕರೆಯಮ್ಮ’.
ಮೆಲುದನಿಯಲಿ ನಾದಿನಿ ಇಂತೆಂದಳು:
‘ಪದುಮಳು
ಒಳಗಿಲ್ಲ’ ನಕ್ಕಳು.
ರಾಯರು ನಗಲಿಲ್ಲ.
ರಾಯರು ನಗಲಿಲ್ಲ.
ಏರುತ
ಇಳಿಯುತ ಬಂದರು ರಾಯರು
ದೂರದ ಊರಿಂದ.
ಕಣ್ಣನು ಕಡಿದರು ನಿದ್ದೆಯು ಬಾರದು
ಪದುಮಳು ಒಳಗಿಲ್ಲ, ಪದುಮಳ
ಬಳೆಗಳ ದನಿಯಿಲ್ಲ.
ದೂರದ ಊರಿಂದ.
ಕಣ್ಣನು ಕಡಿದರು ನಿದ್ದೆಯು ಬಾರದು
ಪದುಮಳು ಒಳಗಿಲ್ಲ, ಪದುಮಳ
ಬಳೆಗಳ ದನಿಯಿಲ್ಲ.
ಬೆಳಗಾಯಿತು; ‘ಸರಿ, ಹೊರಡುವೆ’ನೆಂದರು
ರಾಯರು ಮುನಿಸಿನಲಿ.
ಒಳಮನೆಯಲಿ ‘ನೀರಾಯಿತು!’ ಎಂದಳು
ನಾದಿನಿ ರಾಗದಲಿ. ‘ಯಾರಿಗೆ?’
ಎನ್ನಲು ಹರುಷದಲಿ,
ಪದುಮಳು ಬಂದಳು ಹೂವನು ಮುಡಿಯುತ
ರಾಯರ ಕೋಣೆಯಲಿ.
ಸಾಹಿತ್ಯ: ಕೆ. ಎಸ್. ನರಸಿಂಹಸ್ವಾಮಿ
ಸಂಗೀತ: ಸಿ. ಅಶ್ವಥ್
ಗಾಯನ: ರತ್ನಮಾಲ ಪ್ರಕಾಶ್
Tag: Rayaru bandaru maavana manege
ಕಾಮೆಂಟ್ಗಳು