ಜಡಭರತ
ಜಡಭರತ
ಭರತ
ಮಹಾಜ್ಞಾನಿಯಾದ ರಾಜ. ರಾಜನಾಗಿಯೂ ತುಂಬಾ
ಯಶಸ್ವಿ. ದೇಶವನ್ನು ಸಮೃದ್ಧವಾಗಿ ಕಟ್ಟಿ
ಆಳಿದ. ಕೊನೆಗೆ ವಿರಕ್ತನಾಗಿ ಎಲ್ಲವನ್ನೂ ತೊರೆದು
ಕಾಡಿಗೆ ತೆರಳಿದ.
ಒಮ್ಮೆ
ಆಶ್ರಮದ ಪಕ್ಕದ ನದಿಯಲ್ಲಿ ಸ್ನಾನ ಮಾಡಿ ಧ್ಯಾನಕ್ಕೆ ಕುಳಿತಿದ್ದಾಗ ಹೆಣ್ಣು ಜಿಂಕೆಯೊಂದು ನೀರು ಕುಡಿಯಲೆಂದು ಬಂತು. ತುಂಬು ಗರ್ಭಿಣಿ. ಇನ್ನೇನು ನೀರಿಗೆ ಬಾಯಿ ಹಾಕಬೇಕು. ಅಷ್ಟರಲ್ಲಿ ಭೀಕರವಾದ ಗರ್ಜನೆಯೊಂದು ಕೇಳಿಸಿತು. ಸಿಂಹದ ಗರ್ಜನೆ.
ಭಯದಿಂದ ಜಿಂಕೆ ನೆಗೆಯಿತು. ನೆಗೆಯುವ
ಭರದಲ್ಲಿ ಗರ್ಭ ಜಾರಿ ನೀರಿಗೆ ಬಿತ್ತು. ಪುಟ್ಟ
ಜಿಂಕೆಯ ಮರಿ. ತಾಯಿ ಜಿಂಕೆ ಸಿಂಹಕ್ಕೆ ಹೆದರಿ
ದಾರಿ ತಪ್ಪಿ ಓಡುತ್ತಾ ಸತ್ತಿತ್ತು. ಅನಾಥವಾದ
ಜಿಂಕೆಮರಿಯನ್ನು ಭರತ ತಂದು ಸಾಕಿದ.
ತಾನು
ಹಿರಿಯ ಜ್ಞಾನಿ. ಆದರೇನು? ಜಿಂಕೆ ಮರಿಯ ಮೋಹ ಅವನನ್ನು
ಮುತ್ತಿತ್ತು. ಅದಕ್ಕೆ ತಿನ್ನಿಸುವುದು; ಕಾಡುಪ್ರಾಣಿಗಳಿಂದ ಕಾಪಾಡುವುದು, ಪ್ರತಿಕ್ಷಣ ಅದರದೇ ಚಿಂತೆ.
ಸಾಯೋ ಕ್ಷಣ
ಸಮೀಪಿಸಿತು. ಆದರೂ ಭರತನಿಗೆ ಜಿಂಕೆ ಮರಿಯದೇ
ಚಿಂತೆ. ಇನ್ನಾರು ಗತಿ ಈ ಮರಿಗೆ? ತನ್ನ ನಂತರ ಇದನ್ನು
ಕಾಡುಪ್ರಾಣಿಗಳಿಂದ ರಕ್ಷಿಸಿ ಸಾಕುವವರು ಯಾರು?
ಇದೇ ಅನುಕಂಪ. ಇದೇ
ಧ್ಯಾನ. ಹೀಗೆ ಜಿಂಕೆಯ ಮರಿಯನ್ನು ನೆನೆಯುತ್ತಲೇ
ಪ್ರಾಣಬಿಟ್ಟ. ಪರಿಣಾಮವಾಗಿ ತಾನೂ ಜಿಂಕೆಯಾಗಿ
ಹುಟ್ಟಿದ. ಸಾಯೋ ಕ್ಷಣದಲ್ಲಿ ನಾವೇನನ್ನು
ಯೋಚಿಸುತ್ತೇವೆಯೋ ಅದನ್ನೇ ಪಡೆಯುತ್ತೇವೆ ಎನ್ನುತ್ತಾರೆ ಶಾಸ್ತ್ರಕಾರರು. ಭರತ ಚಕ್ರವರ್ತಿ ಇದಕ್ಕೊಂದು ಉದಾಹರಣೆ.
ಇಂಥ
ಅಪೂರ್ವ ಸಂದರ್ಭದಲ್ಲಿ ಪೂರ್ವಜನ್ಮದ ಸ್ಮೃತಿಯಿರುವುದುಂಟು. ಜಿಂಕೆಯಾದ ಭರತನಿಗೆ ಪೂರ್ವಸ್ಮೃತಿ ಇತ್ತು. ಆದ್ದರಿಂದ ಆ ಜನ್ಮದ ಬಗೆಯೇ ಆತನಿಗೆ ವಿರಕ್ತಿ. ಋಷಿಗಳ ತಪೋವನದಲ್ಲೇ ಅಡ್ಡಾಡುತ್ತಾ ಒಂದು ದಿನ
ಪುಣ್ಯತೀರ್ಥದಲ್ಲಿ ದೇಹತ್ಯಾಗ ಮಾಡಿದ.
ಮತ್ತೆ
ಸಿಂಧುದೇಶದಲ್ಲಿ ಬ್ರಾಹ್ಮಣದಂಪತಿಗಳ ಮಗನಾಗಿ ಹುಟ್ಟಿದ.
ಇಲ್ಲೂ ಅವನಿಗೇ ಭರತನೆಂದೇ ಹೆಸರು.
ಜನ್ಮತಃ ಮಹಾಜ್ಞಾನಿಯಾದರೂ ದಡ್ಡರಂತೆ ಅವಧೂತನಾಗಿ ಬದುಕಿದ. ಪಾಂಡಿತ್ಯ ಇದೆ. ಆದರೆ ಪ್ರದರ್ಶನ ಇಲ್ಲ. ಜನ ದಡ್ಡನೆಂದೇ ತಿಳಿದು ಜಡಭರತ ಎಂದು ಕರೆದರು.
ಒಮ್ಮೆ
ಸಿಂಧುದೇಶದ ರಾಜ ರಹೂಗಣ ಎತ್ತಲೋ ಪಲ್ಲಕ್ಕಿಯಲ್ಲಿ ಹೊರಟಿದ್ದ. ಅಲ್ಲೇ ಅರಮನೆಯ ಬಾಗಿಲಲ್ಲಿ ಈ ಜಡಭರತ ಕೂತಿದ್ದ. ರಾಜಭಟರು ಇವನನ್ನು ಪಲ್ಲಕ್ಕಿ ಹೊರಲು
ನಿಯಮಿಸಿದರು. ಆತ ಪಲ್ಲಕ್ಕಿಗೆ ಹೆಗಲು
ಕೊಟ್ಟ! ಪಲ್ಲಕ್ಕಿ ಮುಂದೆ ಸಾಗಿತು. ಹಳೆಯಕಾಲದ ಏರುಪೇರಾದ ದಾರಿ. ನಡೆಯುವುದೇ ಕಷ್ಟ. ಈತ ಪಲ್ಲಕ್ಕಿಗೆ ಹೊಸಬ ಬೇರೆ. ಅದರ ಜತೆಗೆ ನಿರ್ಲಕ್ಷ್ಯ. ಯದ್ವಾತದ್ವಾ ಹೆಜ್ಜೆಯಿಡುತ್ತ ನಡೆಯ ತೊಡಗಿದ. ಈತನಿಗೆ ಯಾವುದರ ಪರಿವೆಯೂ ಇದ್ದಂತಿರಲಿಲ್ಲ.
ಪಲ್ಲಕ್ಕಿ
ಏರುಪೇರಾಯಿತು. ರಾಜನಿಗೋ ಹಿಂಸೆ. ಪಲ್ಲಕ್ಕಿ ಹೊತ್ತಿದ್ದವರನ್ನು ಗದರಿದ. ಅವರು ಭಿನ್ನವಿಸಿಕೊಂಡರು. “ಪ್ರಭು,
ನಾವು ಸರಿಯಾಗಿಯೇ ಹೊರುತ್ತಿದ್ದೇವೆ.
ಇದೆಲ್ಲ ಈ ಹೊಸಬನ ತಪ್ಪು”.
ಅರಸ
ಜಡಭರತನನ್ನು ಗದರಿದ. ಸರಿಯಾಗಿ ಹೆಜ್ಜೆಯಿಟ್ಟು
ಜಾಗೃತೆಯಾಗಿ ಸಾಗುವಂತೆ ಎಚ್ಚರಿಸಿದ. ಆದರೆ
ಆತನಲ್ಲಿ ಯಾವ ಪರಿಣಾಮವೂ ಕಾಣಿಸಲಿಲ್ಲ. “ಇಷ್ಟು ಪುಷ್ಟವಾಗಿ ಬೆಳೆದಿದ್ದೀಯ ಏನಯ್ಯಾ ಕಷ್ಟ ನಿನಗೆ? ಪಾಪ, ನಿನಗೆ
ಭಾರ ಹೊರುವುದು ಕಷ್ಟ, ಮುದುಕ ಬೇರೆ ಅಂತ ಮೂದಲಿಸಿದ”. ಆದರೂ ಜಡಭರತ ತುಟಿ
ಬಿಚ್ಚಲಿಲ್ಲ. ಮತ್ತೆ ಪಲ್ಲಕ್ಕಿ ಮುಂದೆ
ಸಾಗಿತು. ಹಿಂದಿನಂತೆಯೇ ಅತ್ತಿಂದಿತ್ತ
ತೊನೆದಾಡಿತು. ರಾಜ ರೇಗಿ ನುಡಿದ: “ನಾನು, ಈ ದೇಶದ ರಾಜ ಪಲ್ಲಕ್ಕಿಯ ಮೇಲೆ ಕುಳಿತು ಆಜ್ಞಾಪಿಸುತ್ತಿದ್ದೇನೆ. ಎಚ್ಚರ!
ಸರಿಯಾಗಿ ನಡೆ”
ಮೂಕನಂತಿದ್ದ
ಜಡಭರತ ಈಗ ಬಾಯಿ ತೆರೆದ: “ಏನಯ್ಯಾ, ಏನೋ ಅಂದೆ.
ನನಗೆ ವಯಸ್ಸಾಯಿತು – ಮುದುಕನಾದೆ ಎಂದೆ! ಭಾರ ಹೊರೋದು ಕಷ್ಟ ಎಂದು ಮರುಕದ ಹಂಗಿನ
ನುಡಿಯಾಡಿದೆ. ಭಾರ ಹೊತ್ತವರಿಗೆ ಈ ಮಾತು
ಹೇಳಬೇಕು ನನಗೇಕೆ ಈ ಮಾತು. ನಾನು ಯಾವ ಭಾರವನ್ನೂ ಹೊತ್ತಿಲ್ಲವಲ್ಲ. ಹಾಗೆಯೇ ಸರಿಯಾಗಿ ನಡೆ ಎಂದೆ. ನಡೆಯುವವರಿಗೆ ತಾನೇ ಈ ಮಾತು? ಅಂಥವರಿಗೆ ಒಂದು ಗುರಿ ಬೇಕು. ಒಂದು ದಾರಿ ಬೇಕು. ನನಗೇನು? ನಾನೇನೂ ನಡೆಯುತ್ತಿಲ್ಲವಲ್ಲ! ನಾನು
ಪುಷ್ಟವಾಗಿ ಬೆಳೆದಿದ್ದೇನೆ ಎಂದೆಲ್ಲಾ ಏನೇನೋ ಹೇಳಿದೆ. ಇದು ತಿಳಿದವರು ಆಡುವ ಮಾತಲ್ಲ. ನಾನು ಪುಷ್ಟನಾಗಿಯೂ ಇಲ್ಲ; ಕೃಶನಾಗಿಯೂ ಇಲ್ಲ. ಇದಕ್ಕೂ ನನಗೂ ಏನೂ ಸಂಬಂಧವಿಲ್ಲ. ಅಲ್ಲಯ್ಯಾ, ನೀನು ಅರಸ
ಅಂದೆಯಲ್ಲಾ? ಯಾವ ಅರಸ
ನೀನು? ಎಲ್ಲಿಯ ಅರಸ ನೀನು? ನೀನು ಪಲ್ಲಕ್ಕಿಯಲ್ಲಿ ಕೂತವನು,
ನಾನು ಅದನ್ನು ಹೊರುವವನು ಎನ್ನುವಂತೆ ಮಾತನಾಡಿದೆಯಲ್ಲ? ಇದೆಲ್ಲ ಅರ್ಥವಿಲ್ಲದ ಮಾತು!”
“ಈ
ಮಣ್ಣಿನ ಮೈ, ಮಣ್ಣಿನ ಮೇಲೆ ಓಡಾಡುತ್ತಿದೆ. ಕೆಳಗೆ ಮಣ್ಣಿನ ನೆಲವಿದೆ. ನೆಲದ ಮೇಲೆ ಕಾಲಿದೆ. ಕಾಲಲ್ಲಿ ಹರಡುಗಳು. ಅದರ ಮೇಲೆ ಮೊಣಕಾಲು, ತೊಡೆಗಳು,
ತೊಡೆಯ ಮೇಲೆ ಸೊಂಟ ಇದೆ. ಅದರ
ಮೇಲೆ ಹೊಟ್ಟೆ ಇದೆ ಹೊಟ್ಟೆಯ ಮೇಲೆ ಎದೆ. ಎದೆಯ ಮೇಲೆ ಹೆಗಲು. ಹೆಗಲ ಮೇಲೆ ಮರದ ಮೇನೆಯಿದೆ. ಮೇನೆಯಲ್ಲಿ ‘ಸಿಂಧು –
ಸೌವೀರದೇಶದ ರಾಜ ತಾನು ಎಂದು ತಿಳಿದುಕೊಂಡವನು’ ಕೂತಿದ್ದಾನೆ. ಇದಕ್ಕೂ ನನಗೂ ಏನೂ ಸಂಬಂಧವಿಲ್ಲ. ನಾನು ಯಾರನ್ನೂ ಹೊತ್ತಿಲ್ಲವಲ್ಲ”
ರಾಜ
ಪಲ್ಲಕ್ಕಿಯಿಂದ ಇಳಿದ. ಅವನ ಕಣ್ಣು
ತೆರೆದಿತ್ತು. ಅವನು ವಿಸ್ಮಿತನಾಗಿ
ಕೇಳಿದ: “ನೀನು ಸಾಮಾನ್ಯ ಮನುಷ್ಯನಲ್ಲ. ಅವಧೂತ
ವೇಷದಲ್ಲಿ ತಿರುಗುವ ಮಹಾಜ್ಞಾನಿ ಎಂದು ಖಚಿತವಾಯಿತು.
ನನಗೂ ತಿಳಿವಿನ ಬೆಳಕು ನೀಡಿ ಉದ್ಧಾರ ಮಾಡಬೇಕು.”
ಜಡಭರತ
ಶಾಂತನಾಗಿ ನುಡಿದ. “ಅಪ್ಪಾ, ನೀನು ಸಿಂಧು-ಸೌವೀರ ಸಂಸ್ಥಾನದ ಅರಸ. ನಾವೆಲ್ಲಾ ನಿನ್ನ ಪ್ರಜೆಗಳು ಎಂದು
ತಿಳಿದುಕೊಂಡಿರುವೆ. ನೀನು ನಿಜವಾಗಿ ಈ ನೆಲದ
ದೊರೆಯೇ ಅಲ್ಲ. ಹೇಳಿಕೇಳಿ, ನೀನು ರಾಜನಾದದ್ದು ಯಾವಾಗ? ಮೊದಲು ನೀನು ತಾಯಿಯ ಹೊಟ್ಟೆಯಲ್ಲಿದ್ದೆ.
ಆಗ ಬರಿಯ ಭ್ರೂಣವಾಗಿದ್ದೆ.
ರಾಜನಾಗಿರಲಿಲ್ಲ. ಮುಂದೆ ಮಗುವಾಗಿ
ಹುಟ್ಟಿದೆ. ಆಗಲೂ ಬರಿಯ ಮಗುವಾಗಿದ್ದೆ. ಎಲ್ಲ ಮಕ್ಕಳಂತೆಯೇ. ರಾಜನಾಗಿರಲಿಲ್ಲ. ಮುಂದೊಂದು ದಿನ ಸಿಂಹಾಸನದಲ್ಲಿ ಕೂತೆ! ನಾನೇ ಈ ನೆಲದ ದೊರೆ ಎಂದು ಭ್ರಮಿಸಿಕೊಂಡೆ.”
“ಹಿಂದೆ
ನೀನೇನಾಗಿದ್ದಿ? ಈ
ದೇಹಕ್ಕೆ ಬರುವ ಮುನ್ನ ನೀನೆಲ್ಲಿದ್ದಿ? ಯಾವ ದೊರೆ? ಯಾವ
ರಾಜ್ಯ? ಏನು ಕಥೆ? ಮುಂದೊಂದು ದಿನ ಎಲ್ಲರಂತೆ ನೀನೂ
ಸಾಯುವೆ. ನೀನು ಹುಟ್ಟುವ ಮುನ್ನ ಈ ನೆಲ
ಇತ್ತು. ನೀನು ಸತ್ತ ಮೇಲೂ ಈ ನೆಲ
ಇರುತ್ತದೆ. ನಿನ್ನದು ಈ ನಾಕು ದಿನದ ಬಾಳು. ಎಂಥ ಒಡೆತನ!”
“ಈಗ
ನೀನು ಈ ಶಿಬಿಕೆಯಲ್ಲಿ ದೊರೆಯೆಂದುಕೊಂಡು ಕುಳಿತಿರುವೆ.
ನೀನು ಸತ್ತಾಗ ಉಳಿಯುವುದೇನು? ಬೂದಿ. ಈ ಶಿಬಿಕೆ-ಮರದ ಕೊರಡನ್ನೂ ಈ
ದೇಹವನ್ನೂ ಜತೆಯಾಗಿ ಸುಟ್ಟರೆ ಇದು ಮಹಾರಾಜರ ಬೂದಿ ಎಂದು ಗುರುತಿಸೋದು ಸಾಧ್ಯವೆ? ಸತ್ತ ಮೇಲೆ ನೀನು ಸಿಂಧು ಸೌವೀರದ
ರಾಜನಲ್ಲ; ಬರಿಯ ಒಂದು ಹಿಡಿ ಬೂದಿ.”
“ಹೋಗಲಿ
ಬಿಡು. ನೀನು ಬದುಕಿದ್ದಾಗಲೇ, ಇನ್ನೊಬ್ಬ ವೀರ ನಿನ್ನನ್ನು ಆಕ್ರಮಿಸಿ ನಿನ್ನ ಸಿಂಹಾಸನದಲ್ಲಿ ಕೂಡಬಹುದು. ಆಗ ನೀನು
ರಾಜ ಹೌದಾ? ಯಾವ
ರಾಜ್ಯಕ್ಕೆ ಯಾರ ಅಧಿಕಾರವೂ ಶಾಶ್ವತ ಅಲ್ಲ. ಈ
ನೆಲ ಯಾರ ಅಪ್ಪನ ಆಸ್ತಿಯೂ ಅಲ್ಲ. ಇಲ್ಲಿ ಒಬ್ಬನ
ಅಧಿಕಾರ ಮಾತ್ರ ಶಾಶ್ವತವಾದುದು. ಒಬ್ಬನು
ಮಾತ್ರವೇ ಇದರ ಚಿರಂತನ ದೊರೆ. ಅದು ಭಗವಂತ. ಈ ನೆಲವೆಲ್ಲ ಅವನೊಬ್ಬನದೆ ಆಸ್ತಿ. “ಈಶಾವಾಸ್ಯಮಿದಂ ಸರ್ವಂ”.
“ಇಲ್ಲಿ
ನೀನು-ನಾನು ಏನೂ ಅಲ್ಲ. ನೀನು ನನ್ನ ದೊರೆಯೂ
ಅಲ್ಲ. ನಾನು ನಿನ್ನ ಪ್ರಜೆಯೂ ಅಲ್ಲ. ನಾನು ಆಳುವವ ಎಂಬ ಭ್ರಮೆ ಬಿಟ್ಟುಬಿಡು. ಎಲ್ಲರ ದೊರೆಯಾದ ಭಗವಂತನಿಗೆ ಶರಣಾಗು.”
ಜಡಭರತನ
ಮಾತು ಕೇಳಿ ಅರಸ ಕರಗಿಹೋದ. ಕುಗ್ಗಿಹೋದ. ಭಕ್ತಿಗೌರವಗಳಿಂದ ಕೈಜೋಡಿಸಿ ನುಡಿದ: “ನಾವೆಂಥ ದೊಡ್ಡ ಭ್ರಮೆಯ ಪ್ರಪಂಚದಲ್ಲಿ ಬದುಕುತ್ತಿದ್ದೇವೆ. ಒಳಗಿನ ಯೋಗ್ಯತೆಗೆ ಹೊರಗಿನ ಥಳಕನ್ನು ಮಾನದಂಡ
ಮಾಡುತ್ತೇವೆ. ವೇಷ-ಭೂಷಣನೋಡಿ ಮಣೆ
ಹಾಕುತ್ತೇವೆ. ಜನರ ನಿಜವಾದ ಯೋಗ್ಯತೆಯನ್ನು
ಕಾಣುವ ಕಣ್ಣು, ಅಳೆಯುವ ಅರ್ಹತೆ ನಮಗಿಲ್ಲ. ಈ ದೇಶದಲ್ಲಿ ಎಂಥೆಂಥ ಮಹಾನುಭಾವರು ಇದ್ದಾರೋ! ನಮಗೆ ಅಗೋಚರವಾಗಿ, ಗುಪ್ತವಾಗಿ,
ಜನರ ತಿರಸ್ಕಾರಕ್ಕೆ ಪಾತ್ರರಾಗಿ – ಈ
ಜಡಭರತನಂತೆ. ಅಂಥ ಎಲ್ಲರಿಗೂ ನನ್ನ
ನಮಸ್ಕಾರ. ಎಲ್ಲಿ ಜ್ಞಾನದ ಗಣಿಯಿದೆ, ಅಲ್ಲಿ ನನ್ನ ತಲೆ ಮಣಿಯಲಿ. ಯಾವ ಶಿಶು
ಎಂಥ ಬೆಳಕಿನ ಪುಂಜವೋ ಯಾರಿಗೆ ಗೊತ್ತು.
ದೊಡ್ಡವರಿಗೆ ನಮಸ್ಕಾರ. ಚಿಕ್ಕವರಿಗೆ ನಮಸ್ಕಾರ. ಪುಟ್ಟ ಮಕ್ಕಳಿಗೂ ನಮಸ್ಕಾರ.”
ರಾಜ
ರಹೂಗಣನ ಕಣ್ಣು ತೆರೆದಿತ್ತು. ಹೀಗೆ ಅರಸನಿಗೆ ಜ್ಞಾನೋಪದೇಶ ನೀಡಿ ಉದ್ಧಾರ ಮಾಡಿದ ಮಹಾಜ್ಞಾನಿ
ಜಡಭರತ.
(ಆಧಾರ: ಸಂಗ್ರಹ ಭಾರತ – ಬನ್ನಂಜೆ ಗೋವಿಂದಾಚಾರ್ಯರು)
Tag: Jadabharata
ಕಾಮೆಂಟ್ಗಳು