ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಾಯಾ ರಾವ್


 ಮಾಯಾರಾವ್ 


ಉತ್ತರ ಭಾರತದ ನೃತ್ಯ ಪ್ರಕಾರಗಳಲ್ಲಿ ಜನಪ್ರಿಯವಾದ ಕಥಕ್‌ ನೃತ್ಯವನ್ನು ಬೆಂಗಳೂರಿಗೆ ತಂದ ಅಂತರರಾಷ್ಟ್ರೀಯ ಖ್ಯಾತಿಯ ಕಥಕ್ ಗುರು ಡಾ. ಮಾಯಾ ರಾವ್‌.   1961ರಲ್ಲಿಯೇ ನೃತ್ಯ ಸಂಯೋಜನೆ ಕೋರ್ಸ್ (ಕೋರಿಯೋಗ್ರಫಿ) ಕಲಿಯಲೆಂದು ರಷ್ಯಾಕ್ಕೆ ಹೋದ ಮೊಟ್ಟಮೊದಲ ದಿಟ್ಟ ಮಹಿಳೆ ಮಾಯಾ ರಾವ್. ಮಾಸ್ಕೊದ ಸರ್ಕಾರಿ ರಂಗಕಲಾ ತರಬೇತಿ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಪಡೆದ ಏಕೈಕ ಭಾರತೀಯ ಮಹಿಳೆ ಎನ್ನುವುದು ಅವರ ಹೆಗ್ಗಳಿಕೆ. 

ಬೆಂಗಳೂರಿನ ಮಲ್ಲೇಶ್ವರದಲ್ಲಿ ‘ನಾಟ್ಯ ಇನ್‌ಸ್ಟಿಟ್ಯೂಟ್ ಆಫ್ ಕಥಕ್ ಅಂಡ್ ಕೋರಿಯೋಗ್ರಫಿ’ ಮೂಲಕ ನೂರಾರು ಕಲಾವಿದರನ್ನು ರೂಪಿಸಿದರೂ ‘ಗುರು’ ಎಂದು ಕರೆಸಿಕೊಳ್ಳಲು ಇಷ್ಟಪಡದ ಸಜ್ಜನಿಕೆ ಮಾಯಾ ರಾವ್ ಅವರದ್ದಾಗಿತ್ತು. ತಮ್ಮ ಕೊನೆಯ  86ರ ಇಳಿಯ ವಯಸ್ಸಿನಲ್ಲಿಯೂ ತಾವಿನ್ನೂ ನೃತ್ಯದ ವಿದ್ಯಾರ್ಥಿನಿಯೇ ಎನ್ನುತ್ತಿದ್ದವರು ಅವರು. ತಮ್ಮ ವಿದ್ಯಾರ್ಥಿಗಳ ಪಾಲಿಗೆ ಅವರು  ‘ಮಾಯಾ ದೀದಿ’ಯಾಗಿಯೇ ಇದ್ದರು.

ಅವರು  ಈ ಲೋಕವನ್ನಗಲಿದ  ಕೆಲವೇ ದಿನಗಳ ಹಿಂದೆ ಸಹಾ ಅವರು ‘ಕಥಕ್‌ ಥ್ರೂ ದಿ ಏಜಸ್‌’ ಎಂಬ ಹೊಸ  ನೃತ್ಯ ಸಂಯೋಜನೆ ಪ್ರಸ್ತುತ ಪಡಿಸಿದ್ದರು.

ಪರಿಸರ,ಭಾಷೆ, ಸಂಸ್ಕೃತಿ ಇವುಗಳನ್ನು ಆಧರಿಸಿ ಒಂದೊಂದು ಪ್ರದೇಶದಲ್ಲಿ ಒಂದೊಂದು ನೃತ್ಯ ಪ್ರಕಾರ ಬೆಳೆದುಬಂದಿರುವ ಬಗ್ಗೆ ಇತಿಹಾಸದಲ್ಲಿ ದಾಖಲೆಗಳಿವೆ. ಉದಾಹರಣೆಗೆ ಕರ್ನಾಟದಕದಲ್ಲಿ ಯಕ್ಷಗಾನ, ತಮಿಳುನಾಡಿನಲ್ಲಿ ಭರತನಾಟ್ಯ, ಆಂಧ್ರ ಪ್ರದೇಶದಲ್ಲಿ ಕೂಚಿಪುಡಿ, ಕೇರಳದಲ್ಲಿ ಮೋಹಿನಿ ಅಟ್ಟಂ ಮತ್ತು ಕಥಕ್ಕಳಿ, ಒರಿಸ್ಸಾದಲ್ಲಿ ಒಡಿಸ್ಸಿ ಹೀಗೆ… ಆದರೆ ನಮ್ಮ ಕರ್ನಾಟಕ ಹಿಂದಿನಿಂದಲೂ ಹೇಗೆ ಎಲ್ಲಾ ಧರ್ಮ, ಭಾಷೆಗಳನ್ನು ಪೋಸಿಸುತ್ತಿದೆಯೋ, ಹಾಗೆಯೇ ಹಲವು ನೃತ್ಯ ಶೈಲಿಗಳಗೆ ಆಶ್ರಯ ನೀಡುತ್ತಾ ಬಂದಿದೆ. ಹಾಗಾಗಿ ಇಲ್ಲಿ ಭರತನಾಟ್ಯ, ಕೂಚಿಪುಡಿ, ಮೋಹಿನಿ ಅಟ್ಟಂ, ಕಥಕ್ಕಳಿ, ಕಥಕ್‌ ಎಲ್ಲಾ ಶೈಲಿಗಳಿಗೂ ಜನಾಶ್ರಯ ಇದೆ. ಜೊತೆಗೆ ನಮ್ಮವರೂ ಈ ಶೈಲಿಗಳಲ್ಲಿ ಪರಿಣತಿ ಸಾಧಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಇಂದಿನ ಕನ್ನಡ ತಲೆಮಾರಿಗೆ ಉತ್ತರ ಭಾರತದ ಕಥಕ್‌ ನೃತ್ಯ ಸಂಪ್ರದಾಯವನ್ನು, ಅದರ ಮೂಲ ಬೇರಿನ ಅರಿವಿನ ಜೊತೆಗೆ ಪರಿಚಯಿಸಿದವರು ಡಾ. ಮಾಯಾರಾವ್‌.

ಈ ಹಿಂದೆ ಸೋಹನ್‌ ಲಾಲ್‌ ಗಣನೀಯ ಪ್ರಮಾಣದಲ್ಲಿ ಕಥಕ್‌ ನೃತ್ಯ ಸಂಪ್ರದಾಯಕ್ಕೆ ಸಂಬಂಧಪಟ್ಟ ಹಾಗೆ ಕರ್ನಾಟಕದಲ್ಲಿ ಕೆಲಸ ಮಾಡಿದ್ದರು. ಆದರೆ ಆ ಪರಂಪರೆಗೆ ಸುಭದ್ರತೆ ಒದಗಿಸಿದವರು ಡಾ.  ಮಾಯಾರಾವ್‌.

ಮಾಯಾರಾವ್ 1928ರ ಮೇ 2ರಂದು  ಎಚ್‌. ಸಂಜೀವರಾವ್‌ ಮತ್ತು  ಲಲಿತಾಬಾಯಿ ದಂಪತಿಗಳಿಗೆ ಜನಿಸಿದರು. ಬಹಳ ಸಂಪ್ರದಾಯದ ಸಾರಸ್ವತ ಕುಟುಂಬ ಅವರದು. ತಂದೆ ಸಂಜೀವ್‌ ರಾವ್‌ ಸಿವಿಲ್‌ ಇಂಜಿನಿಯರ್ ಆಗಿದ್ದು  ಅಂದಿನ ಕಾಲದಲ್ಲಿ ಬಹಳ ಹೆಸರು ಪಡೆದಿದ್ದರು.

ಮಾಯಾರಾವ್‌ ಅವರಿಗೆ ಬೆಂಗಳೂರಿನ ಕಂಟೋನ್ಮೆಂಟಿನಲ್ಲಿದ್ದ ಕಮಲಾಬಾಯಿ ಶಾಲೆಯಲ್ಲಿ ಪ್ರೈಮರಿ ಶಿಕ್ಷಣ ದೊರೆಯಿತು. ಮಹಾರಾಣಿ ಕಾಲೇಜಿನಲ್ಲಿ ಪದವಿ, ಸೆಂಟ್ರಲ್‌ ಕಾಲೇಜಿನಲ್ಲಿ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ, ಇದು ಮಾಯಾರಾವ್‌ ಅವರ ಶೈಕ್ಷಣಿಕ  ಹಿನ್ನೆಲೆ.

ಮಾಯಾರಾವ್‌ ಅವರು ಕಲಾಪ್ರಪಂಚಕ್ಕೆ ಅಡಿಯಿರಿಸಿದ್ದು ಹಿಂದುಸ್ತಾನಿ ಸಂಗೀತದ ಮೂಲಕ. ತಮ್ಮ ಆರರ ಪ್ರಾಯದಲ್ಲಿ ಪಂಡಿತ್‌ ರಾಮರಾವ್‌ ಹೊನ್ನಾವರ ಅವರ ಮಾರ್ಗದರ್ಶನದಲ್ಲಿ ಮಾಯಾ ಅವರಿಗೆ ಹಿಂದುಸ್ತಾನಿ ಸಂಗೀತದಲ್ಲಿ ಶಿಕ್ಷಣ ಪ್ರಾರಂಭವಾಗಿತ್ತು. ಕಟ್ಟಾ ಸಂಪ್ರದಾಯವಾದಿಗಳ ಕುಟುಂಬವಾಗಿದ್ದರಿಂದ ನೃತ್ಯದ ಬಗ್ಗೆ ಯೋಚಿಸುವ ವಾತಾವರಣ ಕೂಡ ಮನೆಯಲ್ಲಿರಲಿಲ್ಲ. ಸಂಗೀತವೂ ‘ಹಾಡು ಹಸೆ’ ಎನ್ನುವ ಮಟ್ಟಿಗೆ ಸೀಮಿತವಾಗಿತ್ತು. ಇಂತಹ ವಾತಾವರಣದಲ್ಲಿ ಬೆಳೆದ ಮಾಯಾರಾವ್‌ ಅವರಿಗೆ ನೃತ್ಯದ ಕಡೆ ಗಮನ ಹರಿಸಲು ಕಾರಣವಾದ ಒಂದು ಸಂದರ್ಭ ಒದಗಿ ಬಂತು. ನಲವತ್ತರ ದಶಕದಲ್ಲಿ ಆಗಿನ ಪ್ರಖ್ಯಾತ ನೃತ್ಯ ಕಲಾವಿದ ರಾಮ್‌ಗೋಪಾಲ್‌ ಕರ್ನಾಟಕಕ್ಕೆ ಬಂದಿದ್ದರು. ಅವರ ಪ್ರದರ್ಶನ ಬೆಂಗಳೂರಿನಲ್ಲಿ ಇದ್ದಾಗ, ಅವರ ಇಡೀ ತಂಡ ಸಂಜೀವ ರಾವ್‌ ಅವರ ಮನೆಗೆ ಬಂದು ಹೋಗುತ್ತಿದ್ದರು. ಆ ತಂಡದಲ್ಲಿ ಪ್ರಸಿದ್ಧ ಕಥಕ್‌ ನೃತ್ಯ ಕಲಾವಿದ ಸೋಹನ್‌ ಲಾಲ್‌ ಕೂಡ ಇದ್ದರು. ಮನೆಯಲ್ಲಿದ್ದ ಮಾಯಾ ಅವರ ತಂಗಿಯರಾದ ಉಮಾ ಮತ್ತು ಚಿತ್ರ ಸೋಹನ್‌ ಲಾಲ್‌ ಬಳಿ ಕಥಕ್‌ ಕಲಿಯಲು ಪ್ರಾರಂಭಿಸಿದರು. ಆ ಸಮಯದಲ್ಲಿ ಮಾಯಾ ಅವರಿಗೆ ಹದಿನಾಲ್ಕರ ವಯಸ್ಸು. ಆ ವಯಸ್ಸಿನ ಹುಡುಗಿಯರು ನೃತ್ಯ ಕಲಿಯಲು ಎನ್ನುವ ಕಲ್ಪನೆಯೆ ಇರದಿದ್ದ ವಾತಾವರಣದಲ್ಲಿ, ಸೋಹನ್‌ ಲಾಲ್‌ ಅವರ ಒತ್ತಾಯಕ್ಕೆ ಮಣಿದು ಸಂಜೀವರಾವ್‌ ದಂಪತಿಗಳು ಮಾಯಾ ಅವರೂ ತಂಗಿಯರ ಜೊತೆಯಲ್ಲಿ ನೃತ್ಯ ಕಲಿಯಲು ಅನುಮತಿ ನೀಡಿದರು. ಅಂದರೆ 1942ರಲ್ಲಿ ಮಾಯಾರಾವ್‌ ಅವರಿಗೆ ಸೋಹನ್‌ ಲಾಲ್‌ ಅವರಿಂದ ಜೈಪುರ್ ಘರಾನಾದ ಕಥಕ್‌ ಶೈಲಿಯ ಶಿಕ್ಷಣ ಪ್ರಾರಂಭವಾಯಿತು.

ಕಥಕ್‌ ಶೈಲಿಯಲ್ಲಿ ಮೊದಲ ನೃತ್ಯ ಪ್ರದರ್ಶನ ಮಾಯಾರಾವ್‌ ನೀಡಿದ್ದು 1944ರಲ್ಲಿ. ಅದು ಸಾರ್ವಜನಿಕ ಪ್ರದರ್ಶನವೇನಲ್ಲ. ಸಾರಸ್ವತ ಸಮಾಜದ ಒಂದು ಸಮಾವೇಶ ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ. 1942ರಿಂದ 1945ರತನಕ ಸೋಹನ್‌ ಲಾಲ್‌ ಅವರ ಮಾರ್ಗದರ್ಶನದಲ್ಲಿ ನೃತ್ಯ ಕಲಿತ ಮಾಯಾರಾವ್‌, ನಂತರ ತಮ್ಮ ಸಾಧನೆಯನ್ನು ತಾವೇ ಮುಂದುವರೆಸಿಕೊಂಡು ಬಂದರು. ಈ ಅವಧಿಯಲ್ಲೇ ಕಥಕ್‌ ನೃತ್ಯ ಶೈಲಿಯಲ್ಲಿ ಕೆಲವು ಕ್ರಿಯಾಶೀಲ ಪ್ರಯತ್ನಗಳನ್ನು ಮಾಯಾರಾವ್‌ ವೇದಿಕೆಗೆ ತಂದು ನೃತ್ಯಾಸಕ್ತರ ಗಮನ ಸೆಳೆದಿದ್ದರು.

1949ರಲ್ಲಿ ಎಂ.ಎಸ್‌. ನಟರಾಜ್‌ ಅವರನ್ನು ಭೇಟಿಯಾದ ನಂತರ ಮಾಯಾರಾವ್‌ ಬದುಕಿನಲ್ಲಿ ಒಂದು ಹೊಸ ತಿರುವು ಆರಂಭವಾಯಿತು. ಆ ಸಂದರ್ಭದಲ್ಲಿ  ಮಾಯಾರಾವ್‌ ಅವರ ಕಾಲೇಜು ವಿದ್ಯಾಭ್ಯಾಸ ನಡೆಯುತ್ತಿತ್ತು. ಸ್ಟೂಡೆಂಟ್‌ ಫೆಡರೇಷನ್‌ ಚಟುವಟಿಕೆಗಳಲ್ಲಿ ಮಾಯಾರಾವ್‌ ತಮ್ಮನ್ನು ಬಹಳವಾಗಿ ತೊಡಗಿಸಿಕೊಂಡಿದ್ದರು. ಸಮಾರಂಭ ಒಂದಕ್ಕೆ ಮಾಯಾ ಅವರ ಸಹಪಾಟಿ ಶ್ರೀಮತಿ ವಿಮಲಾ ರಂಗಾಚಾರ್ ಇಂಗ್ಲೀಷ್‌ ನಾಟಕ ಒಂದನ್ನು ಸಿದ್ಧಪಡಿಸುತ್ತಿದ್ದರು. ಮಾಯಾರಾವ್‌ ನೃತ್ಯ ರೂಪಕ ಒಂದಕ್ಕೆ ತಯಾರಿಮಾಡುತ್ತಿದ್ದರು. ಎಂ.ಎಸ್‌.ನಟರಾಜ್‌ ಸಂಗೀತ ಕಾರ್ಯಕ್ರಮ ಒಂದರ ಸಿದ್ಧತೆಯಲ್ಲಿದ್ದರು.

ಮಾಯಾರಾವ್‌ ಸಿದ್ಧಪಡಿಸುವ ರೂಪಕಕ್ಕೆ ಅವರ ಸಮಾಜದ ನೃತ್ಯ ಗುರುಗಳು ಸಂಗೀತದ ಸಹಾಯ ನೀಡಲು ಕಲಾವಿದನೊಬ್ಬನನ್ನು ಗೊತ್ತು ಮಾಡಿದ್ದರು. ಆದರೆ ಸರಿಯಾದ ಸಮಯಕ್ಕೆ ಆ ಕಲಾವಿದ ಕೈ ಕೊಟ್ಟುಬಿಟ್ಟ. ಸಂದಿಗ್ಧದ ಸಮಯದಲ್ಲಿ ಎಂ.ಎಸ್‌. ನಟರಾಜ್‌ ಸಹಾಯಕ್ಕೆ ಬಂದರು. ನಟರಾಜ್‌ ಅವರ ಸಲಹೆಯಂತೆ ಮಲ್ಲಾರಾಧ್ಯ ಅವರ ಪುತ್ರಿ ಸುಂದಾರ ಹಾಡುವುದಕ್ಕೆ, ನಟರಾಜ್‌ ಹಿನ್ನೆಲೆ ಸಂಗೀತ ನೀಡುವುದಕ್ಕೆ ವ್ಯವಸ್ಥೆಯಾಯಿತು. ರಿಹರ್ಸಲ್‌ ಸಮಯದಲ್ಲಿ ನಟರಾಜ್‌ ತಮ್ಮ ನೃತ್ಯ ರೂಪಕಕ್ಕೆ ಹಲವು ಸಲಹೆ ಸೂಚನೆಗಳನ್ನು ಕೊಡುತ್ತಿದ್ದುದು ಮಾಯಾ ಅವರ ಮನಸ್ಸು ನಟರಾಜ್‌ ಕಡೆ ತುಡಿಯಲು ಪ್ರಾರಂಭವಾಯಿತು.

ಆ ಹೊತ್ತಿಗಾಗಲೇ ನಟರಾಜ್‌ ತಮ್ಮ ಸರಸ್ವತಿ ಆರ್ಕೆಸ್ಟ್ರಾ ಮೂಲಕ ಜನಪ್ರಿಯರಾಗಿದ್ದರು. ಅಂದಿಗೆ ಸರಸ್ವತಿ ಆರ್ಕೆಸ್ಟ್ರಾ ದಕ್ಷಿಣ ಭಾರತದಲ್ಲಿ ಆ ರೀತಿಯ ಪ್ರಪ್ರಥಮ ಸಂಸ್ಥೆಯೆಂದು ಪ್ರಸಿದ್ಧಿಯಾಗಿತ್ತು. ಕ್ರಮೇಣ ಮಾಯಾ ಮತ್ತು ನಟರಾಜ್‌ ಒಳ್ಳೆಯ ಸ್ನೇಹಿತರಾಗಿ ಬೆಳೆಯ ತೊಡಗಿದರು. ಇಬ್ಬರೂ ಸೇರಿ ಆಗ ಹುಟ್ಟುಹಾಕಿದ ಸಂಗೀತ ನೃತ್ಯಗಳ ಸಂಸ್ಥೆ ‘ನಾಟ್ಯ ಸರಸ್ವತಿ’ ಈ ಸಂಸ್ಥೆಯ ಮೂಲಕ ಸಂಗೀತ ಮತ್ತು ನೃತ್ಯ ಎರಡೂ ಮಾಧ್ಯಮಗಳಲ್ಲಿ ಮಕ್ಕಳಿಗೆ ಒಳ್ಳೆಯ ತರಬೇತಿ ನೀಡುವುದು ಮಾಯಾ ಅವರ ಮುಖ್ಯ ಉದ್ದೇಶವಾಗಿತ್ತು.

ಇಷ್ಟರಲ್ಲಾಗಲೇ ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಮಾಯಾ ಅವರಿಗೆ ಜೈಪುರದಲ್ಲಿ ಇಂಗ್ಲೀಷ್‌ ಉಪನ್ಯಾಸಕಿಯಾಗಿ ಉದ್ಯೋಗ ದೊರೆಯಿತು. ಈ ಉದ್ಯೋಗದ ನೆಪದಿಂದ ಜೈಪುರದಲ್ಲಿ ಕಥಕ್‌ ನೃತ್ಯ ಶೈಲಿಯ ಅತ್ಯುತ್ತಮ ಗುರುಗಳಿಂದ ತಮ್ಮ ನೃತ್ಯ ಶಿಕ್ಷಣ ಇನ್ನಷ್ಟ ಗಟ್ಟಿಯಾಗಬಹುದೆಂಬ ಆಶಯದಿಂದ ಮಾಯಾ ಜೈಪುರಕ್ಕೆ ತೆರಳಿದರು. ಆದರೆ ಮಾಯಾ ಅವರು ಬಹಳ ಕೇಳಿದ್ದ ಹಿರಿಯ ನೃತ್ಯ ಗುರುಗಳಾದ ಜೈಲಾಲ್‌, ಸುಂದರ್ ಪ್ರಸಾದ್‌ ಮುಂತಾದವರು ಜೈಪುರ ಬಿಟ್ಟು ಮುಂಬೈ, ಕಲ್ಕತ್ತಾ ಮುಂತಾದ ಕಡೆಗಳಿಗೆ ಹೊರಟು ಹೋಗಿದ್ದರು. ಮಾಯಾ ಅವರಿಗೆ ಬಹಳ ನಿರಾಸೆಯಾಯಿತು. ಹೀಗೆ ಎರಡು ವರ್ಷಗಳ ಕಾಲ ಇಷ್ಟವಿಲ್ಲದ ಉಪನ್ಯಾಸಕಿ ಹುದ್ದೆಯಲ್ಲಿ ಮಾಯಾ ಮುಂದುವರಿದರು.

ಅದೇ ಸಮಯದಲ್ಲಿ ಶ್ರೀಲಂಕಾದಲ್ಲಿದ್ದ ಮಾಯಾ ಅವರ ಸಹೋದರ ಶ್ರೀಲಂಕಾದ ಕ್ಯಾಂಡಿಯನ್‌ ನೃತ್ಯ ಕಲಿಯಲು ಮಾಯಾ ಅವರನ್ನು ಶ್ರೀಲಂಕಾಗೆ ಆಹ್ವಾನಿಸಿದರು. ತಾನು ಕಲಿತ ಕಥಕ್‌ ನೃತ್ಯವನ್ನು ಸಿಂಹಳೀಯರಿಗೆ ಕಲಿಸಿ, ಅವರಿಂದ ತಾನು ಕ್ಯಾಂಡಿಯನ್‌ ನೃತ್ಯ ಕಲಿಯಬಹುದೆಂದು ಮಾಯಾ ಶ್ರೀಲಂಕಾಗೆ ತೆರಳಿದರು. ಅಲ್ಲಿ ಗುರು ಶ್ರೀ ಚಿತ್ರಾ ಸೇನ್‌ ಅವರಿಂದ ಮಾಯಾ ಕ್ಯಾಂಡಿಯನ್‌ ನೃತ್ಯ ಕಲಿತರು. ಅದು 1953ರ ಸಮಯ.

ಶ್ರೀಲಂಕಾದಲ್ಲಿದ್ದಾಗಲೇ ಜೈಪುರದಲ್ಲಿದ್ದ ಸಂಬಂಧಿಗಳೊಬ್ಬರು. ದಿನಪತ್ರಿಕೆ ಪ್ರಕಟಣೆಯೊಂದನ್ನು ಮಾಯಾರಾವ್‌ ಅವರ ಗಮನಕ್ಕೆ ತಂದರು. ಅದು ಭಾರತ ಸರ್ಕಾರ ಗುರು ಶಂಭು ಮಹಾರಾಜ್‌ ಅವರಿಂದ ಕಥಕ್‌ ನೃತ್ಯ ಕಲಿಯಲು ಪ್ರತಿಭಾವಂತರಿಗೆ ಶಿಷ್ಯವೇತನ ನೀಡುವ ವಿಷಯ. ತಕ್ಷಣ ಮಾಯಾ ಅರ್ಜಿ ಸಲ್ಲಿಸಿದರು. ಸುಮಾರು ತಿಂಗಳುಗಳ ನಂತರ ಲಕ್ನೋದಲ್ಲಿ ಸಂದರ್ಶನಕ್ಕೆ ಹಾಜರಾಗುವಂತೆ ಮಾಯಾ ಅವರಿಗೆ ಕರೆ ಬಂತು. ಕೇವಲ ಎರಡು ದಿನಗಳ ಸಮಯಾವಕಾಶದಲ್ಲಿ ಬಹಳ ಕಷ್ಟಪಟ್ಟು ಮಾಯಾ ಕೊಲಂಬೋದಿಂದ ಲಕ್ನೋಗೆ ಬಂದು ಸಂದರ್ಶನಕ್ಕೆ ಹಾಜರಾದರು.

1954ರ ಕೊನೆಯಲ್ಲಿ ಸಂದರ್ಶನದಲ್ಲಿ ಉತ್ತೀರ್ಣರಾಗಿ ದೆಹಲಿಯ ಭಾರತೀಯ ಕಲಾಕೇಂದ್ರದಲ್ಲಿ ಗುರು ಶಂಭು ಮಹಾರಾಜ ಅವರಲ್ಲಿ ಕಥಕ್‌ ನೃತ್ಯ ಕಲಿಯಲು ಆಯ್ಕೆಯಾದ ಪತ್ರ ಬಂತು. ಮಾಯಾ ತಮ್ಮ ಜೀವನದ ಮಹತ್ವದ ಕನಸೊಂದು ನನಸಾದ ಬಗ್ಗೆ ಸಂಭ್ರಮ ಪಟ್ಟರು. 1955ರಲ್ಲಿ ಮಾಯಾರಾವ್‌ ಅವರು ದೆಹಲಿಯ ಭಾರತೀಯ ಕಲಾಕೇಂದ್ರದಲ್ಲಿ ಗುರು ಶಂಭು ಮಹಾರಾಜ್‌ ಅವರಿಂದ ಕಥಕ್‌ ನೃತ್ಯಾಭ್ಯಾಸ ಆರಂಭಿಸಿದರು. ಭಾರತ ಸರ್ಕಾರ ಎರಡು ವರ್ಷಗಳ ಅವಧಿಗೆ ಶಿಷ್ಯವೇತನ ನೀಡಿದ್ದರೂ, ಮಾಯಾ ಅವರ ಶ್ರದ್ಧೆಯನ್ನು ಗಮನಿಸಿ ಇನ್ನೂ ಒಂದು ವರ್ಷ ಶಿಷ್ಯವೇತನವನ್ನು ಮುಂದುವರಿಸಿತು.

1958ರಿಂದ ಗುರು ಶಂಭು ಮಹಾರಾಜ್‌ ಅವರಿಗೆ ಸಹಾಯಕರಾಗಿ ಕೆಲಸ ಮಾಡಲು ಆರಂಭಿಸಿದ ಮಾಯಾ, ದೆಹಲಿಯ ಭಾರತೀಯ ಕಲಾಕೇಂದ್ರದಲ್ಲಿ ಈಗಿನ ಅನೇಕ ಪ್ರಸಿದ್ಧ ಕಥಕ್‌ ನೃತ್ಯ ಕಲಾವಿದರಿಗೆ ಶಿಕ್ಷಣ ನೀಡಿದರು. ಜೊತೆಗೆ ಇದೇ ಅವಧಿಯಲ್ಲಿ ಪಂಡಿತ್‌ ಸುಂದರ್ ಪ್ರಸಾದ್‌ ಅವರ ಮಾರ್ಗದರ್ಶನದಲ್ಲಿ ಜೈಪುರ್ ಘರಾನಾ ಪದ್ಧತಿ ಕಥಕ್‌ ಅಭ್ಯಾಸ ಮಾಡಿದರು. ಅಲ್ಲದೇ ಶಂಭು ಮಹಾರಾಜನರ ಅಣ್ಣ ಅಚನ್‌ ಮಹಾರಾಜ್‌ರ ಪುತ್ರ ಬ್ರಿಜು ಮಹಾರಾಜ್‌ ಅವರ ಜೊತೆಗೂಡಿ ಅನೇಕ ನೃತ್ಯರೂಪಕಗಳನ್ನು ಸಂಯೋಜಿಸಿದರು.

1958ರಿಂದ ಮಾಯಾರಾವ್‌ ಅವರ ಕಾರ್ಯಕ್ರಮಗಳ ಪರ್ವ ಕಾಲ ಆರಂಭವಾಯಿತು. ಕಲಾಕೇಂದ್ರದ ಎಲ್ಲ ರೂಪಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು. ಜೊತೆಗೆ ಸೋಲೋ ನರ್ತಕಿಯಾಗಿ ಭಾರತ ಮತ್ತು ಸಿಲೋನ್‌ ದೇಶಗಳ ಪ್ರಮುಖ ಕೇಂದ್ರಗಳಲ್ಲಿ ಮತ್ತು ಪ್ರಮುಖ ಉತ್ಸವಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದರು.

1961ರಿಂದ 64 ಮಾಯಾರಾವ್‌ ಅವರ ಬದುಕಿನ ಇನ್ನೊಂದು ಘಟ್ಟ. ರಷ್ಯಾದ ಮಾಸ್ಕೋದಲ್ಲಿರುವ State Institute of Theater Arts ಸಂಸ್ಥೆ ಕರೆದಿದ್ದ ಕೊರಿಯಾಗ್ರಫಿ ತರಬೇತಿಗೆ ಭಾರತ ಸರ್ಕಾರದಿಂದ ಆರಿಸಲ್ಪಟ್ಟು ರಷ್ಯಾ ಸರ್ಕಾರದ ಶಿಷ್ಯವೇತನ ಪಡೆದು ಕಲಿಯುವ ಅವಕಾಶ ಮಾಯಾ ಅವರಿಗೆ ಲಭಿಸಿತು. ನಂತರ ಅಲ್ಲಿನ Bolshoi Ballet ಸಂಸ್ಥೆಯ ನಿರ್ದೇಶಕರು ಮತ್ತು ಕಲಾವಿದರ ಜೊತೆ, ಅವರ ಮಕ್ಕಳಿಗಾಗಿ ನಿರ್ಮಿಸಿದ ರಾಮಾಯಣ ರೂಪಕಕ್ಕೆ ಕೆಲಸ ಮಾಡುವ ಅವಕಾಶ ಮಾಯಾ ಅವರಿಗೆ ದೊರೆಯಿತು. ಜೊತೆಗೆ ರಷ್ಯಾದ ಪ್ರತಿಷ್ಠಿತ ರಿಗಾ ಸಂಸ್ಥೆ ತನ್ನ ಶಕುಂತಲಾ ರೂಪಕಕ್ಕೆ ಸಂಯೋಜಕಿಯಾಗಿ ಕೆಲಸ ಮಾಡಲು ಮಾಯಾ ಅವರನ್ನು ಆಹ್ವಾನಿಸಿತು.

ಈ ಎಲ್ಲಾ ತರಬೇತಿಗಳ ನಂತರ ದೆಹಲಿಗೆ ಹಿಂದಿರುಗಿದ ಮಾಯಾರಾವ್‌, 1964ರಲ್ಲಿ ದೆಹಲಿಯಲ್ಲಿ Natya Institute of Kathak and Choregraphy ಸಂಸ್ಥೆ ಪ್ರಾರಂಭಿಸಿದರು. ಇಲ್ಲಿ ಕಥಕ್‌ ಮತ್ತು ಕೊರಿಯಾಗ್ರಫಿ ವಿಷಯಗಳಲ್ಲಿ ಉತ್ಕೃಷ್ಟ ಮಟ್ಟದ ತರಬೇತಿ ಸಿಗುತ್ತಿತ್ತು. ಜೊತೆಗೆ ಕೋರಿಯಾಗ್ರಫಿ ವಿಭಾಗದಲ್ಲಿ ಡಿಪ್ಲೊಮಾ ಪದವಿ ಕೂಡ ಈ ಸಂಸ್ಥೆಯಲ್ಲಿ ಕೊಡಲಾಗುತ್ತಿತ್ತು.

ನಿರಂತರ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಮಗ್ನರಾಗಿರುತ್ತಿದ್ದು ವೈಯಕ್ತಿಕ ಬದುಕಿನೆಡೆಗೆ  ಹೆಚ್ಚಿಗೆ  ಗಮನ ಹರಿಸದ  ಮಾಯಾ ರಾವ್ ಅವರು 1964 ವರ್ಷದಲ್ಲಿ ಎಂ. ಎಸ್‌. ನಟರಾಜ್‌ ಅವರನ್ನು ತಮ್ಮ 36ನೇ ವಯಸ್ಸಿನಲ್ಲಿ ವಿವಾಹವಾದರು. 1971ರಲ್ಲಿ ಜನಿಸಿದ ಅವರ ಒಬ್ಬಳೇ ಮಗಳು ಮಧು ನಟರಾಜ್‌ ಹೇರಿ ಈಗ ಕಥಕ್‌ ನೃತ್ಯಶೈಲಿ ಮತ್ತು ಆಧುನಿಕ ನೃತ್ಯಗಳಲ್ಲಿ ಸಾಕಷ್ಟು ಹೆಸರು ಮಾಡಿರುವ ಪ್ರತಿಭಾವಂತ ಕಲಾವಿದೆ.

ತುಳಸಿಕೆರಾಮ್‌, ಕೃಷ್ಣ ಲೀಲಾ, ವೆಂಕಟೇಶ್ವರ ವಿಲಾಸಂ, ಬಸವೇಶ್ವರ ವೈಭವ, ಶಾಂತಲಾ, ಪುಲಿಕೇಶಿ ಮತ್ತು ಹರ್ಷವರ್ಧನರ ಕೆಲವು ಘಟನೆಗಳನ್ನು ಆದರಿಸಿದ ಸಮರ್ ಶಾಂತಿ, ಕುವೆಂಪು ಅವರ ರಾಮಾಯಣ ದರ್ಶನಂ, ಮಾಸ್ತಿ ಅವರ ಕಾಮನ ಬಿಲ್ಲು, ಅಮೀರ್ ಖುಸ್ರು, ಊರು ಭಂಗ ಇವೆಲ್ಲಾ ತಮ್ಮ ನಾಟ್ಯ ಸಂಸ್ಥೆಯಲ್ಲಿ ಮಾಯಾರಾವ್‌ ನಿರ್ಮಿಸಿ, ನಿರ್ದೇಶಿಸಿದ ರೂಪಕಗಳು. ಈ ಒಂದೊಂದೂ  ರೂಪಕಗಳೂ  ವಸ್ತು ನಿರೂಪಣೆಯಲ್ಲಿ, ವಿಷಯ ಪ್ರತಿಪಾದನೆಯಲ್ಲಿ, ತಾಂತ್ರಿಕ ಅಳವಡಿಕೆಯಲ್ಲಿ ಮಾಯಾರಾವ್‌ ಅವರಿಗೆ ವಿಶ್ವವ್ಯಾಪಿ ಜನಮನ್ನಣೆ ಗಳಿಸಿಕೊಟ್ಟವು.

ಈ ನಡುವೆ ಮಾಯಾರಾವ್‌ ಅವರ ಕುಟುಂಬ ದೆಹಲಿ ಬೆಂಗಳೂರುಗಳ ನಡುವೆ ಓಡಾಡುತ್ತಿತ್ತು. ನಟರಾಜ್‌ ಸ್ವಲ್ಪ ತಿಂಗಳುಗಳು ದೆಹಲಿಯಲ್ಲಿದ್ದರೆ, ಮಾಯಾರಾವ್‌ ಕೆಲವು ತಿಂಗಳುಗಳು ಬೆಂಗಳೂರಿಗೆ ಬರುತ್ತಿದ್ದರು. ಒಮ್ಮೆ ತಮ್ಮಲ್ಲಿ ನೃತ್ಯ ಕಲಿಯುತ್ತಿದ್ದ ಬಜಾಜ್‌ ಕುಟುಂಬದ ಕಲಾವಿದರೊಬ್ಬರು, ತಮ್ಮ ಹಿರಿಯರಾದ ರಾಮ್‌ಗೋಪಾಲ್‌ ಬಜಾಜ್‌ ಅವರಿಗೆ ಬಹಳ ಆತ್ಮೀಯರಾಗಿದ್ದ ಕರ್ನಾಟಕದ ಮುಖ್ಯ ಮಂತ್ರಿ ಶ್ರೀ ರಾಮಕೃಷ್ಣ ಹೆಗಡೆ ಅವರನ್ನು ದೆಹಲಿಯ ನಾಟ್ಯ ಸಂಸ್ಥೆಗೆ ಅನುದಾನ ಕೇಳಲು ಪರಿಚಯಿಸಿದರು. ಹೊರನಾಡ ಕನ್ನಡ ಕಲಾವಿದೆ ಎಂದು ಒಂದಷ್ಟು ಅನುದಾನ ಕೊಡಲು ಸಾಧ್ಯವಿದ್ದರೂ, ರಾಮಕೃಷ್ಣ ಹೆಗಡೆ ಒಂದು ಬೃಹತ್‌ ಯೋಜನೆಗೆ ಮಾಯಾ ಅವರನ್ನು ಪ್ರೇರೇಪಿಸಿದರು. ಅದು ದೆಹಲಿಯ ನಾಟ್ಯ ಸಂಸ್ಥೆಯನ್ನು ಬೆಂಗಳೂರಿಗೆ ಸ್ಥಳಾಂತರಿಸುವುದು. ಬಹಳ ಯೋಚಿಸಿದ ಮಾಯಾರಾವ್‌ ಹೆಗಡೆಯವರ ಆಹ್ವಾನವನ್ನು ಒಪ್ಪಿಕೊಂಡರು. ಆಗ ಕರ್ನಾಟಕ ಸರ್ಕಾರದ ಸಂಸ್ಕೃತಿ ಸಚಿವರಾಗಿದ್ದ ಶ್ರೀ ಜೀವರಾಜ ಆಳ್ವ ಅವರು ಹೆಗಡೆಯವರ ಆದೇಶದಂತೆ ಹೃದಯ ಪೂರ್ವಕವಾಗಿ ಸಹಕಾರ ನೀಡಿದರು. ಬೆಂಗಳೂರಿನ ಸಮಾಜ ಸೇವಕಿ ವಿಮಲಾ ರಂಗಾಚಾರ್ ಅವರು  ಸಂಸ್ಥೆಗೆ ತಮ್ಮ ಉಸ್ತುವಾರಿಯಲ್ಲಿದ್ದ ಭೂಮಿಕಾದಲ್ಲಿ ವ್ಯವಸ್ಥೆ ಮಾಡಿಕೊಟ್ಟರು. ಹೀಗೆ ದೆಹಲಿಯ ನಾಟ್ಯ ಸಂಸ್ಥೆ ಬೆಂಗಳೂರಿಗೆ ಬಂತು. ಜೊತೆಗೆ ಕರ್ನಾಟಕದ ಕಲಾವಿದರಿಗೆ ಕಥಕ್‌ ನೃತ್ಯ ಸಂಪ್ರದಾಯ ಕಲಿಕೆಗೆ ಒಂದು ಶಿಸ್ತಿನ ಗುರುಕುಲ ದೊರೆಯಿತು. ಈಗ ನಾಟ್ಯ ಸಂಸ್ಥೆ ಕೊರಿಯಾಗ್ರಫಿ ವಿಭಾಗದಲ್ಲಿ ಬ್ಯಾಚುಲರ್ ಪದವಿ ನೀಡುತ್ತಿದ್ದು, ಈ ಪದವಿ ಕರ್ನಾಟದಕದಲ್ಲಿ ಪ್ರಥಮ ಎನಿಸಿಕೊಂಡಿದೆ ಮತ್ತು ಈ ಬ್ಯಾಚುಲರ್ ಪದವಿಗೆ ಬೆಂಗಳೂರು ವಿಶ್ವವಿದ್ಯಾಲಯದ ಮಾನ್ಯತೆ ಇದೆ.

ಮಾಯಾ ರಾವ್ ಅವರ ಕಾಯಕದಿಂದ ಇಂದು ಕಥಕ್‌ ಶೈಲಿಯಲ್ಲಿ ಅನೇಕ ವೃತ್ತಿಪರ ಕಲಾವಿದರು ಕರ್ನಾಟಕದಲ್ಲಿ ರೂಪುಗೊಂಡಿದ್ದಾರೆ. ಒಂದೇ ಇದ್ದ ಕಥಕ್‌ ನೃತ್ಯಶಾಲೆ ಕ್ರಮೇಣ ಹಲವಾಗುತ್ತಿವೆ. ದೇಶದ ಪ್ರತಿಷ್ಠಿತ ನೃತ್ಯೋತ್ಸವಗಳ ವ್ಯವಸ್ಥಾಪಕರು ಕಥಕ್‌ ಕಲಾವಿದರು ಬೇಕೆನಿಸಿದಾಗ ಕರ್ನಾಟಕದತ್ತ ಭರವಸೆಯಿಂಧ ನೋಡುತ್ತಿದ್ದಾರೆ.

ಮಾಯಾ ರಾವ್‌ ಅವರ ಸಾಧನೆಗೆ ಸಂದ ಪ್ರಶಸ್ತಿ, ಪುರಸ್ಕಾರಗಳು ಹಲವಾರು. ಹೆಲ್ಸಿಂಕಿಯಲ್ಲಿ ನಡೆದ world Theater Festival ನಲ್ಲಿ, 36 ದೇಶಗಳ ಕಲಾವಿದರನ್ನು ಹಿಂದಿಕ್ಕಿ, ತಮ್ಮ ಸೋಲೋ ಪ್ರದರ್ಶನಕ್ಕೆ ಚಿನ್ನದ ಪದಕ ಪಡೆದ ಹೆಗ್ಗಳಿಕೆ ಮಾಯಾರಾವ್‌ ಅವರದು. 1985ರಲ್ಲಿ ದೆಹಲಿಯ ಸಾಹಿತ್ಯ ಕಲಾ ಪರಿಷತ್‌ ಪ್ರಶಸ್ತಿ, 1986ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1996ರಲ್ಲಿ ದೆಹಲಿಯ choreofest Award, 1968ರ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, 1989ರ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ಪ್ರತಿಷ್ಠಿತ ನಾಟ್ಯರಾಣಿ ಶಾಂತಲಾ ಪ್ರಶಸ್ತಿ 2000, ಠಾಗೂರ್ ಪ್ರಶಸ್ತಿ ಇವೆಲ್ಲ ಅವರಿಗೆ  ಸಂದ ಕೆಲವು ಪ್ರಮುಖ ಪುರಸ್ಕಾರಗಳು.

ಕರ್ನಾಟಕ ಸರ್ಕಾರ 1987-90ರ ಅವಧಿಗೆ ಮಾಯಾರಾವ್‌ ಅವರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಮಾಯಾ ರಾವ್ ಅವರು ಹಲವು ಕ್ರಿಯಾಶೀಲ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದರು.

ಈ  ಕ್ರಿಯಾಶೀಲ, ಪ್ರತಿಭಾವಂತ ಕಲಾವಿದರು  2014 ವರ್ಷದ ಸೆಪ್ಟೆಂಬರ್ 1ರಂದು   ಈ ಲೋಕವನ್ನಗಲಿದರು.   

Photo Courtesy:  Nartaki Blog

On the birth anniversary of great Kathak  artiste and guru Dr Maya Rao 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ