ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪದ್ಮರಾಜ ದಂಡಾವತಿ


 ಪದ್ಮರಾಜ ದಂಡಾವತಿ 


ಪತ್ರಕರ್ತರಾಗಿ ಮತ್ತು ಬರಹಗಾರರಾಗಿ ಡಾ. ಪದ್ಮರಾಜ ದಂಡಾವತಿ ಹೆಸರಾದವರು.

ಪದ್ಮರಾಜ ದಂಡಾವತಿ  ಅವರು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ 1955ರ ನವೆಂಬರ್ 8ರಂದು ಜನಿಸಿದರು. ತಂದೆ ದೇವೇಂದ್ರಪ್ಪ, ತಾಯಿ ಚಂಪಮ್ಮ. ಪ್ರಾಥಮಿಕ, ಪ್ರೌಢ ಹಾಗೂ ಪಿಯುಸಿ ಶಿಕ್ಷಣವನ್ನು ಮುದ್ದೇಬಿಹಾಳದಲ್ಲಿ ಮುಗಿಸಿ, ಪದವಿ ಶಿಕ್ಷಣವನ್ನು ರಾಮದುರ್ಗದಲ್ಲಿ ಪೂರೈಸಿದರು.ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು.  2022ರ ವರ್ಷದಲ್ಲಿ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದ "ಮುದ್ರಣ ಮಾಧ್ಯಮ: ಸಮಕಾಲೀನ ವಿದ್ಯಮಾನಗಳು" ಮಹಾಪ್ರಬಂಧಕ್ಕೆ ಡಿ.ಲಿಟ್ ಗೌರವ ಸಂದಿದೆ.

ಪದ್ಮರಾಜ ದಂಡಾವತಿ ಅವರು ಪತ್ರಕರ್ತರಾಗಿ 1982ರಲ್ಲಿ ಪ್ರಜಾವಾಣಿ ಸೇರಿ, ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ಸತತ ಎಂಟು ವರ್ಷಗಳ ಕಾಲ ಅವರು ಪ್ರತಿ ಭಾನುವಾರ ಪ್ರಜಾವಾಣಿಯಲ್ಲಿ ಬರೆದ ‘ನಾಲ್ಕನೇ ಆಯಾಮ’ ಅಂಕಣ, ತನ್ನ ವಿಚಾರ, ವಿಷಯ ವೈವಿಧ್ಯತೆಗಳಿಂದಾಗಿ ಜನಪ್ರಿಯತೆ ಪಡೆದಿತ್ತು. 

ಪತ್ರಿಕಾಭಾಷೆ, ರಿಪೋರ್ಟಿಂಗ್, ಅವಲೋಕನ, ನಾಲ್ಕನೇ ಆಯಾಮ (ಆರು ಸಂಪುಟಗಳು), ಗೊಮ್ಮಟ, ಕನ್ನಡ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಶ್ರವಣಬೆಳಗೊಳದ ಪ್ರಾಗೈತಿಹಾಸ ತಿಳಿಸುವ ಪುಸ್ತಕ,  ಆರಂಭ, ಚೌಕಟ್ಟಿನಾಚೆ, ಹೆಜ್ಜೆ ಮೂಡಿಸಿದ ಹಾದಿ, ಮಾಧ್ಯಮ ಮಾರ್ಗ, ಪತ್ರಿಕಾ ಭಾಷೆ, ಸುರಂಗದ ಕತ್ತಲೆ, ದೇವದತ್ತ ಪಟ್ನಾಯಕ್ ಅವರ 'ಸೀತಾ' ಕನ್ನಡದ ಅನುವಾದವಾದ  'ಸೀತಾ: ರಾಮಾಯಣದ ಸಚಿತ್ರ ಮರುಕಥನ’  ಮುಂತಾದವು ಪದ್ಮರಾಜ ದಂಡವತಿ ಅವರ ಕೃತಿಗಳಲ್ಲಿ ಸೇರಿವೆ.

ಪದ್ಮರಾಜ್ ದಂಡಾವತಿ ಅವರು ನೇಪಾಳ, ಥೈಲ್ಯಾಂಡ್, ಫ್ರಾನ್ಸ್, ದಕ್ಷಿಣ ಆಫ್ರಿಕಾ, ಸಿಂಗಾಪುರ, ಜೋರ್ಡಾನ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಸೇರಿದಂತೆ ಇತರೆ ವಿದೇಶಗಳಿಗೂ ಭೇಟಿ ನೀಡಿದ್ದಾರೆ.   

ಪದ್ಮರಾಜ್ ದಂಡಾವತಿ ಅವರ 'ಸೀತಾ: ರಾಮಾಯಣದ ಸಚಿತ್ರ ಮರುಕಥನ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡಮಿಯ ಜೀವಮಾನ ಸಾಧನೆಯ ಪ್ರಶಸ್ತಿ, ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ,  ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌, ಶ್ರವಣ ಬೆಳಗೊಳದ ಗೊಮ್ಮಟೇಶ ವಿದ್ಯಾಪೀಠ (ಮಾಧ್ಯಮ) ಪ್ರಶಸ್ತಿ, ದಕ್ಷಿಣ ಭಾರತ ಜೈನ ಮಹಾಸಭೆಯ ಆದರ್ಶ ಪತ್ರಕಾರ ಪ್ರಶಸ್ತಿ, ಆಳ್ವಾಸ್ ನುಡಿ ಸಿರಿ ಪ್ರಶಸ್ತಿ, ಬಿಎಂಶ್ರೀ ಪ್ರತಿಷ್ಠಾನ ಪ್ರಶಸ್ತಿ. ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿಗಳು ಸೇರಿದಂತೆ ಅನೇಕ  ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.

ಪತ್ರಿಕಾಲೋಕದ ಮತ್ತು ಸಾಹಿತ್ಯಲೋಕದ  ಸಾಧಕರಾದ ಪದ್ಮರಾಜ ದಂಡಾವತಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.



On the birthday of journalist, writer and affectionate Padmaraj Dandavati Sir 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ