ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹೀ. ಚಿ. ಶಾಂತವೀರಯ್ಯ

 


ಶಾಂತವೀರಯ್ಯ


ಹಿರಿಯ ವಿದ್ವಾಂಸರಾದ ಹೀ.  ಚಿ. ಶಾಂತವೀರಯ್ಯ ಸಾಹಿತ್ಯಲೋಕದಲ್ಲಿ ಅಮೂಲ್ಯ ಸೇವೆ ಮಾಡಿದವರಾಗಿದ್ದಾರೆ.

ಶಾಂತವೀರಯ್ಯ  ಅವರು ತಿಪಟೂರು ತಾಲ್ಲೂಕಿನ ಹೀಚನೂರಿನ ದೇವರ ಹಟ್ಟಿ ಮನೆತನದಲ್ಲಿ 1934ರ ಜೂನ್ 11ರಂದು ಜನಿಸಿದರು. ತಂದೆ ಚಿಕ್ಕಯ್ಯ. ತಾಯಿ ಚಿಕ್ಕಮ್ಮ. 

ಶಾಂತವೀರಯ್ಯನವರ ಪ್ರಾಥಮಿಕ ವಿದ್ಯಾಭ್ಯಾಸ ಹೀಚನೂರು, ತಿಪಟೂರಿನಲ್ಲಿ ನಡೆಯಿತು. ಕಾಲೇಜು ವಿದ್ಯಾಭ್ಯಾಸ ದಾವಣಗೆರೆ, ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯಿತು.

ಶಾಂತವೀರಯ್ಯನವರು  ಬಿ.ಎ. (ಆನರ್ಸ್) ಎಂ.ಎ. ಮತ್ತು ಬಿ.ಇಡಿ ಪದವಿ ಪಡೆದ  ನಂತರ ಚಿಕ್ಕನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಉದ್ಯೋಗ ಆರಂಭಿಸಿದರು. ನಂತರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಸಹಾಯಕ ಸಂಪಾದಕರಾಗಿ, ಉಪಸಂಪಾದಕರಾಗಿ, ಸಂಪಾದಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.

ಶಾಂತವೀರಯ್ಯ ಅವರು ಬಸವಪಥ, ಜನಪದ, ಸಿದ್ಧಗಂಗೆ, ಕನ್ನಡನುಡಿ, ಪ್ರಸಾದ, ತರಳಬಾಳು, ಪ್ರಜಾವಾಣಿ, ಪ್ರಜಾಮತ, ಸುಧಾ, ವಿನೋದ ಮುಂತಾದ ಪತ್ರಿಕೆಗಳಲ್ಲಿ ನೂರಾರು ಲೇಖನಗಳನ್ನು  ಪ್ರಕಟಿಸಿದರು. ತಾಯಿನಾಡು ಪತ್ರಿಕೆಯಲ್ಲಿ ‘ಕನ್ನಡ ಸಾಹಿತ್ಯ ಸಂಚಯ’ ಎಂಬ ಅಂಕಣದಲ್ಲಿ ಇಡೀ ವರ್ಷ ಇವರ ಲೇಖನಮಾಲೆ ಪ್ರಕಟಗೊಂಡಿತು. ‘ವಿನೋದ ದಾಸ’ ಎಂಬ ಗುಪ್ತನಾಮದಿಂದ ಹಲವಾರು ನಗೆಬರಹಗಳನ್ನು ಬರೆದರು. ಕನ್ನಡ ನಾಡು ನುಡಿಯ ಬಗ್ಗೆ ತಿಳಿಸಲು ವ್ಯಾಪಕ ಸಂಚಾರ ಕೈಗೊಂಡರು. ಧಾರ್ಮಿಕ ಸಭೆ, ಶರಣ ಸಾಹಿತ್ಯ ಗೋಷ್ಠಿ, ಸಾಂಸ್ಕೃತಿಕ ಗೋಷ್ಠಿ, ಸಮ್ಮೇಳನ ಸಮಾವೇಶಗಳಲ್ಲಿ, ಸಂಶೋಧನಾತ್ಮಕ ಉಪನ್ಯಾಸ ಪ್ರಬಂಧಗಳನ್ನು  ಮಂಡಿಸಿದರು. 

ಶಾಂತವೀರಯ್ಯ ಅವರು ಅರವತ್ತಕ್ಕೂ ಹೆಚ್ಚು ಗ್ರಂಥ ಪ್ರಕಟಿಸಿದ್ದಾರೆ. ಕನ್ನಡ ನಿಘಂಟು, ಸಾವಿರದ ಕೋಶ, ಹರಭಕ್ತಿಸಾರ, ಗಾದೆಗಳ ಸಾರ, ಒಗಟಿನಾಗರ, ಶಾಸನ ಪರಿಚಯ, ಶರಣ ಸಂಪದ ಮುಂತಾದವು ಸಂಪಾದಿತ ಕೃತಿಗಳು. ನಿಟ್ಟೂರು ಶಾಂತಿನಾಥ, ಬಿ. ಪುಟ್ಟಸ್ವಾಮಯ್ಯ, ಉಕ್ಕಡಗಾತ್ರಿ ಕರಿಬಸವೇಶ್ವರರು, ಐಜಿಪಿ ವೀರಭದ್ರಯ್ಯ, ಕೆ.ಎಸ್. ರಾಜಪ್ಪ ಮುಂತಾದವು ವ್ಯಕ್ತಿಚಿತ್ರಗಳು. ಜನಪದಗೀತೆ, ಕನ್ನಡ ಜನಪದ ಗೀತೆಗಳು ಮತ್ತು ಅನೇಕ ಜನಪದ ಗ್ರಂಥಗಳನ್ನೂ ಪ್ರಕಟಿಸಿದ್ದಾರೆ. 

ಶಾಂತವೀರಯ್ಯ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಕಿಟಲ್ ಪ್ರಶಸ್ತಿ, ಕನ್ನಡರತ್ನ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ, ಜಂಗಮ ವಿಶ್ವಕೋಶ, ನಡೆದಾಡುವ ನಿಘಂಟು ಮುಂತಾದ ಅನೇಕ ಗೌರವಗಳು ಸಂದಿವೆ.

ಮಹಾನ್ ವಿದ್ವಾಂಸರಾದ ಹಿ. ಚೀ. ಶಾಂತವೀರಯ್ಯನವರು 2020ರ ಸೆಪ್ಟೆಂಬರ್ 27ರಂದು ಈ ಲೋಕವನ್ನಗಲಿದರು.

On the birth anniversary of scholar H C Shanthaveeraiah 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ