ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಚ್. ಎಸ್. ರಾಘವೇಂದ್ರರಾವ್



ಎಚ್. ಎಸ್.‍ ರಾಘವೇಂದ್ರರಾವ್

ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಎಚ್. ಎಸ್.‍ ರಾಘವೇಂದ್ರರಾವ್ ಒಬ್ಬರು. ಅವರ ವಿಸ್ತೃತ ಓದು,  ವಿವಿಧ ಶಾಸ್ತ್ರಗಳ ಜೊತೆಗೆ ಸಂಬಂಧಗಳ ಹುಡುಕಾಟ ಹಾಗೂ ಸಂಶೋಧನೆಯ ಪರಿಶ್ರಮಗಳೆಲ್ಲ ಎದ್ದು ಕಾಣುವಂತಹದ್ದು. ಅವರ ವಿಮರ್ಶೆ ಮತ್ತು ಉಪನ್ಯಾಸಗಳು ಓದುಗನನ್ನು ವಿದ್ವತ್ಪೂರ್ಣ ಸಾಹಿತ್ಯದೆಡೆಗೆ  ಆಪ್ತವಾಗಿ ಕೈಹಿಡಿದು ಕರೆದೊಯ್ಯುವಂತಹ ಸ್ನೇಹಪರತೆ ತುಂಬಿಕೊಂಡಂತದ್ದು.  ಅವರಿಗೆ ಸಾಹಿತ್ಯ ಮತ್ತು ಸಂಸ್ಕೃತಿಗಳು ಕೇವಲ ವೈಚಾರಿಕ ಬದುಕಾಗಿರದೆ,  ಅವರ ಸುಶೀಲ, ಸೌಜನ್ಯ, ಆತ್ಮೀಯ ನಡೆಗಳಂತೆ ಅವರೊಡನೆ ಸಮ್ಮಿಳಿತಗೊಂಡಿರುವಂತಿವೆ.

ರಾಘವೇಂದ್ರರಾವ್  1948ರ ಆಗಸ್ಟ್ 1ರಂದು ಜನಿಸಿದರು. ಮೂಲತಃ ಚಿತ್ರದುರ್ಗದವರಾದ ರಾಘವೇಂದ್ರರಾವ್ ಅವರು ಸೆಂಟ್ರಲ್ ಕಾಲೇಜಿನ ಪೋಲಿ ಪಟಾಲಂ (ಪಿಪಿ) ಬಳಗದ ಸದಸ್ಯರಾಗಿದ್ದು  ಆ ಬಳಗ ತಂದ ‘ಅಂಕಣ’ದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು. ಕುವೆಂಪು, ಬೇಂದ್ರೆ, ಪು.ತಿ.ನ. ಅವರ ಕಾವ್ಯ ಕುರಿತು ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದ ಸಾಧನೆ ಅವರದ್ದು.

ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ  ಮೂರೂವರೆ ದಶಕಗಳಿಗೂ ಹೆಚ್ಚು ಕಾಲ ಕನ್ನಡ ಅಧ್ಯಾಪಕರಾಗಿದ್ದು ನಿವೃತ್ತರಾದ ರಾಘವೇಂದ್ರರಾವ್ ಅವರು ಕೆಲಕಾಲ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು.  ಅವರು ಹಂಪಿಯಲ್ಲಿ ಕರ್ನಾಟಕ ವಿಶ್ವಕೋಶದ ಸಂಪಾದಕರೂ ಆಗಿದ್ದರು. 

ರಾಘವೇಂದ್ರರಾವ್ ಪ್ರಮುಖವಾಗಿ ವಿಮರ್ಶಕರಾಗಿ ಜನಪ್ರಿಯರು.  ಅವರ ವಿಮರ್ಶಾ ಕೃತಿಗಳಲ್ಲಿ  ‘ವಿಶ್ಲೇಷಣೆ’, ‘ನಿಲುವು’, ‘ಹುಡುಕಾಟ’, ‘ಪ್ರಗತಿಶೀಲತೆ, ‘ಹಾಡೆ ಹಾದಿಯ ತೋರಿತು’, 'ಹತ್ತು ದಿಕ್ಕಿನ ಬೆಳಕು' 'ಸಂಸ್ಕೃತಿ ಸಂಗತಿ', 'ನಿಜವು ತೋರದಲ್ಲ', 'ರಂ.ಶ್ರೀ. ಮುಗಳಿ ಸಮಗ್ರ', 'ಇಂದಿನ ಕವಿತೆ', 'ಸಾಹಿತ್ಯ ಸಂವಾದ', 'ಸಂಗಡ' ಮುಂತಾದವು ಸೇರಿವೆ. ಅವರು 'ಜನಗಣಮನ’ ಎಂಬ ಲವಲವಿಕೆಯ ಪ್ರವಾಸ ಕಥನವನ್ನೂ ಪ್ರಕಟಿಸಿದ್ದಾರೆ. 

ವಿಶ್ಲೇಷಣೆ, ನಿಲುವು ಇವು ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ವಿ. ಎಮ್. ಇನಾಂದಾರ್ ಪ್ರಶಸ್ತಿ ವಿಜೇತ ವಿಮರ್ಶಾ ಕೃತಿಗಳು. ಇವರ ಜನ ಗಣ ಮನ ಪ್ರವಾಸ ಕಥನಕ್ಕೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಸಂದಿದೆ. 

ರಾಘವೇಂದ್ರ ರಾವ್ ಅವರು ಬಹು ಅಮೂಲ್ಯ ಅನುವಾದಿತ ಕೃತಿಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಬಾಲ ಮೇಧಾವಿ, ಶಿಕ್ಷಣ ಮತ್ತು ಜೀವನ (ಜೆ. ಕೃಷ್ಣಮೂರ್ತಿ ಅವರ ಚಿಂತನೆಗಳು), ಪ್ರೀತಿಸುವುದೆಂದರೆ, ಕಲೆಯಲ್ಲಿ ಮಾನವತವಾದ, ಕಪ್ಪು ಕವಿತೆ, ಮಂಜು ಮಣ್ಣು ಮೌನ, ಇರುವೆಗಳು ಮತ್ತು ಇತರ ಕಥೆಗಳು, ಕಾಳಜಿ ತೋರಿಸುವುದು ಎಂದರೇನು, ಭೃಂಗಮಾರ್ಗ, ತರುತಳೆದ ಪುಷ್ಪ, ನಮಸ್ಕಾರ, ಅವಘ, ಕಣ್ಣ ಹನಿಗಳೆ ಕಾಣಿಕೆ, ಚಕ್ರವರ್ತಿಯ ಬಟ್ಟೆಗಳು, ಮಂಜಿನ ಶಿವಾಲಯಕ್ಕೆ ಹೀಗೆ ಅವರ ಕೊಡುಗೆಗಳು ಅನೇಕ.

ಕನ್ನಡ ಸಾಹಿತ್ಯಲೋಕದ ಮಹನೀಯರ ಕುರಿತಾದ ಅನೇಕ ಸಂಪಾದನೆಗಳಲ್ಲೂ ಎಚ್. ಎಸ್. ರಾಘವೇಂದ್ರರಾವ್ ಅವರ ಕೊಡುಗೆ ಇದೆ. 

'ನುಡಿ ಬಾಗಿನ' ಎಂಬುದು ಡಾ. ಎಚ್. ಎಸ್. ರಾಘವೇಂದ್ರ ರಾವ್ ಅವರ ಸಾಹಿತ್ಯ ವಿಮರ್ಶೆ ಮತ್ತು ಸಂದರ್ಶನಗಳನ್ನೊಳಗೊಂಡ ಕೃತಿ. ಇದನ್ನು ಅಮರೇಶ ನುಗಡೋಣಿ ಮತ್ತು ವಿಕ್ರಮ ವಿಸಾಜಿ ಸಂಪಾದಿಸಿದ್ದಾರೆ.

ರಾಘವೇಂದ್ರ ರಾವ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಎಲ್. ಬಸವರಾಜು ಪ್ರಶಸ್ತಿ, ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ, ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಬರಗೂರು ರಾಮಚಂದ್ರಪ್ಪ ಪ್ರಶಸ್ತಿ ಮುಂತಾದ ಇನ್ನೂ ಅನೇಕ ಗೌರವಗಳು ಸಹಾ ಅರಸಿ ಬಂದಿವೆ.

ಆತ್ಮೀಯ ಹಿರಿಯರೂ ವಿದ್ವಾಂಸರೂ ಆದ ರಾಘವೇಂದ್ರರಾಯರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

On the birthday of our great writer H.S.raghavendra Rao Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ