ಎಸ್. ಆರ್. ರಂಗನಾಥನ್
ಗ್ರಂಥಾಲಯ ಪಿತಾಮಹ ಡಾ. ಎಸ್. ಆರ್. ರಂಗನಾಥನ್
ಗ್ರಂಥಾಲಯ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಓರಣಗೊಳಿಸಿದ ಕೀರ್ತಿಗೆ ಪಾತ್ರರಾದ ಡಾ. ಎಸ್. ಆರ್. ರಂಗನಾಥನ್ ಅವರ ಜನ್ಮದಿನವಿದು.
ನಮ್ಮ ಬದುಕಿನ ಕಾಲಘಟ್ಟದಲ್ಲಿ ಗ್ರಂಥಾಲಯಗಳು ವಹಿಸಿದ ಪಾತ್ರ ಅತ್ಯಂತ ಮಹತ್ವವಾದದ್ದು. "ನೀವು ನಿಜವಾಗಿ ತಿಳಿದಿರಬೇಕಾದದ್ದು ಗ್ರಂಥಾಲಯಕ್ಕೆ ಹೋಗಬೇಕಾದ ದಾರಿ ಮಾತ್ರಾ" ಎಂಬ ಆಲ್ಬರ್ಟ್ ಐನ್ಸ್ಟೈನ್ ಅವರ ಮಾತು ನೆನಪಾಗುತ್ತದೆ. ಈ ಮಾತು "ಗೂಗಲ್ ಇದೆಯೆಲ್ಲ ನಾನು ಯಾಕೆ ಯೋಚಿಸಬೇಕು" ಎಂಬ ಮಟ್ಟದ ಮಾತಲ್ಲ ಎಂಬುದು ಗ್ರಂಥಾಲಯದ ಭಾಗ್ಯ ಅನುಭವಿಸಿದವರಿಗೆ ಮಾತ್ರಾ ಗೊತ್ತಿರುವಂತದ್ದು. ಭಾರತದಲ್ಲಿನ ಮೂಲೆ ಮೂಲೆಗಳ ಜನತೆಗೆ ಗ್ರಂಥಾಲಯ ಸೌಭಾಗ್ಯವನ್ನು ತಲುಪಿಸುವಲ್ಲಿ ಶಿಯಾಳಿ ರಾಮಾಮೃತ ರಂಗನಾಥನ್ ಅವರು ನಿರ್ವಹಿಸಿದ ಪಾತ್ರ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಗ್ರಂಥಾಲಯ ವಿಜ್ಞಾನ, ದಾಖಲೀಕರಣ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರಗಳಲ್ಲಿ ಅವರ ಹೆಸರು ಪ್ರಮುಖವಾದುದು.
ಎಸ್. ಆರ್. ರಂಗನಾಥನ್ ಅವರು ತಮಿಳುನಾಡಿನ ತಿರುವಾರೂರು ಪ್ರಾಂತ್ಯಕ್ಕೆ ಸೇರಿದ ಶಿಯಾಳಿ ಎಂಬ ಗ್ರಾಮವೊಂದರಲ್ಲಿ 1892ರ ಆಗಸ್ಟ್ 9ರಂದು ಜನಿಸಿದರು (ಆಗಸ್ಟ್ 12, 1892 ಎಂದು ಎಲ್ಲೆಡೆ ಪ್ರಖ್ಯಾತಗೊಂಡಿದೆಯಾದರೂ ಸ್ವಯಂ ರಂಗನಾಥನ್ ಅವರು ತಮ್ಮ ಜನ್ಮದಿನವನ್ನು ಆಗಸ್ಟ್ 9 ಎಂದು ತಿಳಿಸಿದ್ದಾರೆ). ತಂದೆ ಎನ್ ರಾಮಾಮೃತ ರಂಗನಾಥನ್ ಮತ್ತು ತಾಯಿ ಸೀತಾಲಕ್ಷ್ಮಿ ಅವರು. ಬಡ ಕುಟುಂಬದಲ್ಲಿ ಜೀವನ ಸಾಗಿದರೂ ಉತ್ತಮವಾಗಿ ಓದಿ ಬಿ. ಎ ಮತ್ತು ಎಂ.ಎ ಪದವಿಗಳನ್ನು ಗಳಿಸಿ ಮಹತ್ವದ ಗಣಿತಜ್ಞರಾಗಿ ರೂಪುಗೊಂಡರು. ಮದ್ರಾಸು, ಮಂಗಳೂರು ಮತ್ತು ಕೊಯಂಬತ್ತೂರು ಪ್ರದೇಶಗಳಲ್ಲಿ ಗಣಿತ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದ ರಂಗನಾಥನ್ ಅವರು, ಗ್ರಂಥಾಲಯ ವಿಜ್ಞಾನದ ಕ್ಷೇತ್ರದಲ್ಲಿನ ಸೇವೆಯ ಕರೆ ಬಂದಾಗ ಆ ಕೆಲಸಕ್ಕೆ ಇರುವ ಮಹತ್ವವನ್ನು ಪರಿಗಣಿಸಿ ಬಹಳ ಶ್ರದ್ಧೆ, ಪ್ರೀತಿ ಮತ್ತು ಆಸಕ್ತಿಗಳಿಂದ ತಮ್ಮನ್ನು ತೊಡಗಿಸಿಕೊಂಡರು. ದೆಹಲಿ ವಿಶ್ವವಿದ್ಯಾಲಯ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯಗಳಲ್ಲಿ ಗ್ರಂಥಪಾಲಕರಾಗಿ ಮತ್ತು ಗ್ರಂಥಾಲಯ ವಿಜ್ಞಾನದ ಬೋಧಕರಾಗಿ ಅವರ ಮಹತ್ವದ ಸೇವೆ ಸಂದಿತು.
ಡಾ. ರಂಗನಾಥನ್ ಅವರು 1944 - 1953 ಅವಧಿಯಲ್ಲಿ ಇಂಡಿಯನ್ ಲೈಬ್ರರಿ ಅಸೋಸಿಯೇಷನ್ ಅಧ್ಯಕ್ಷರಾಗಿ ಉತ್ಕೃಷ್ಟ ಸೇವೆ ಸಲ್ಲಿಸಿದರು. 1957 ವರ್ಷದಲ್ಲಿ ಅವರು ಪ್ರತಿಷ್ಠಿತ ಇಂಟರ್ನ್ಯಾಶನಲ್ ಫೆಡರೇಷನ್ ಆಫ್ ಇನ್ಫರ್ಮೇಷನ್ ಅಂಡ್ ಡಾಕ್ಯುಮೆಂಟೇಶನ್ ಒಕ್ಕೊಟದ ಗೌರವ ಪ್ರತಿನಿಧಿಗಳಾಗಿ ಹಾಗೂ ಗ್ರೇಟ್ ಬ್ರಿಟನ್ನಿನ ಲೈಬ್ರೆರಿ ಅಸೋಸಿಯೇಷನ್ನಿನ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಕೆಲಕಾಲ ಸ್ವಿಟ್ಜರ್ಲೆಂಡ್ ದೇಶದ ಜ್ಯೂರಿಚ್ನಲ್ಲಿ ನೆಲೆಸಿದ್ದ ಅವರಿಗೆ ವಿಶ್ವದಾದ್ಯಂತ ಶ್ರೇಷ್ಠ ಜ್ಞಾನಿಗಳೊಂದಿಗಿನ ಸಂಪರ್ಕವಿತ್ತು.
ಗ್ರಂಥಾಲಯ ವಿಜ್ಞಾನವನ್ನು ಭಾರತದಾದ್ಯಂತ ಪಸರಿಸುವಲ್ಲಿ ಡಾ. ಎಸ್.ಆರ್.ರಂಗನಾಥನ್ ಅವರ ಸೇವೆ ಅಮೂಲ್ಯವಾದದ್ದು. ಹೀಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಅವರನ್ನು 'ಗ್ರಂಥಾಲಯ ಪಿತಾಮಹ' ಎಂದು ಗೌರವದಿಂದ ಸ್ಮರಿಸಲಾಗುತ್ತಿದೆ. ಸ್ನಾತಕೋತ್ತರ ಮಟ್ಟದ ಗ್ರಂಥಾಲಯ ವಿಜ್ಞಾನವನ್ನು ಕಲಿಸುವ ವ್ಯವಸ್ಥೆ ಮೂಡಿಸುವಲ್ಲಿ ಸಹಾ ಅವರ ಪಾತ್ರ ಪ್ರಮುಖವಾದದ್ದು.
ಡಾ. ಎಸ್. ಆರ್. ರಂಗನಾಥನ್ ಅವರು ಗ್ರಂಥಾಲಯ, ಗ್ರಂಥಾಲಯ ವಿಜ್ಞಾನ, ದಾಖಲೆ ಶಾಸ್ತ್ರ, ಮಾಹಿತಿ ವಿಜ್ಞಾನ ಮತ್ತು ಗಣಿತಶಾಸ್ತ್ರಗಳ ಕುರಿತು 60ಕ್ಕೂ ಹೆಚ್ಚು ಮಹತ್ವದ ಗ್ರಂಥಗಳನ್ನು ಹಾಗೂ ಸುಮಾರು 2500ಕ್ಕೂ ಮೀರಿದ ಲೇಖನಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಗ್ರಂಥಾಲಯದ ಪಂಚ ಸೂತ್ರಗಳು, ರಾಮಾನುಜನ್-ದ ಮ್ಯಾನ್ ಆ್ಯಂಡ್ ಮ್ಯಾತಮೆಟೀಷಿಯನ್, ಕ್ಲಾಸಿಫೈಡ್ ಕೆಟ್ಲಾಗ್, ಡಿಕ್ಷನರಿ ಕೆಟ್ಲಾಗ್, ಲೈಬ್ರರಿ ಅಡ್ಮಿನಿಸ್ಟ್ರೇಷನ್, ಇಂಡಿಯನ್ ಲೈಬ್ರರಿ ಮ್ಯಾನಿಫೆಸ್ಟೋ, ಲೈಬ್ರರಿ ಮ್ಯಾನುವಲ್ ಫಾರ್ ಲೈಬ್ರರಿ ಅಥಾರಿಟೀಸ್, ಲೈಬ್ರರಿಯನ್ಸ್ ಆ್ಯಂಡ್ ಲೈಬ್ರರಿ ವರ್ಕರ್ಸ್, ಕ್ಲಾಸಿಫಿಕೇಷನ್ -ಕಮ್ಯುನಿಕೇಶನ್, ಕಂಪ್ಯಾರಿಟಿವ್ ಸ್ಟಡಿ ಆಫ್ ಫೈವ್ ಕ್ಯಾಟಲಾಗ್ಸ್ ಮುಂತಾದವು ಅವರಿಗಿದ್ದ ಆಳವಾದ ವಿದ್ವತ್ತನ್ನು ಮತ್ತು ಅನುಭವನ್ನು ಎತ್ತಿ ತೋರಿಸುತ್ತಿವೆ.
ರಂಗನಾಥನ್ ಅವರಿಗೆ ದೆಹಲಿ ವಿಶ್ವವಿದ್ಯಾಲಯ ಮತ್ತು ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯಗಳು ಡಿ.ಲಿಟ್ ಪದವಿಯನ್ನು, ಬ್ರಿಟಿಷ್ ಸರಕಾರವು ರಾವ್ ಸಾಹೇಬ್ ಬಿರುದನ್ನೂ, ಭಾರತ ಸರಕಾರವು ಪದ್ಮಶ್ರೀ ಪ್ರಶಸ್ತಿಯನ್ನೂ ನೀಡಿ ಗೌರವಿಸಿದವು.1970ರಲ್ಲಿ ಅಮೆರಿಕದ ಮಾರ್ಗರೇಟ್ ಮಾನ್ ಪಾರಿತೋಷಕವನ್ನು ಪಡೆದ ಪ್ರಥಮ ಭಾರತೀಯರಿವರು.
ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಬೆಳೆಯುವುದಕ್ಕೆ ಡಾ. ಎಸ್. ಆರ್. ರಂಗನಾಥನ್ ಪ್ರಮುಖ ಕಾರಣಕರ್ತರು. ಕರ್ನಾಟಕದಲ್ಲಿ ಸಾರ್ವಜನಿಕ ಗ್ರಂಥಾಲಯ ಕಾನೂನು 1965ರಲ್ಲಿ ಸರಕಾರದಿಂದ ಸ್ವೀಕೃತವಾಗಿ 1966ರಲ್ಲಿ ಕಾರ್ಯರೂಪಕ್ಕೆ ಬರುವಲ್ಲಿ ಅವರೇ ಮೂಲ ಪುರುಷರು. ಅವರ ಅದ್ವಿತೀಯ ಸೇವೆಯನ್ನು ಪರಿಗಣಿಸಿ ಸರ್ಕಾರವು 2007ರಿಂದ ಅಗಸ್ಟ್ 12ನ್ನು ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯಾಗಿ ಆಚರಿಸಬೇಕೆಂದು ಆದೇಶ ಹೊರಡಿಸಿದೆ. ಅವರ ಕುರಿತ ಅಂಚೆ ಚೀಟಿಯನ್ನು ಸಹಾ ಬಿಡುಗಡೆ ಮಾಡಿ ಗೌರವ ಸೂಚಿಸಲಾಗಿದೆ.
ಅನೇಕ ಮಹತ್ವದ ಸಾಧನೆಗಳನ್ನು ಕೈಗೊಂಡ ಎಸ್. ಆರ್. ರಂಗನಾಥನ್ ಅವರ ಕೊಡುಗೆಗಳಲ್ಲಿ 1962 ವರ್ಷದಲ್ಲಿ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ವಿಭಾಗವಾಗಿ ಬೆಂಗಳೂರಿನಲ್ಲಿ ಮೂಡಿದ ಡಾಕ್ಯುಮೆಂಟೇಶನ್ ರಿಸರ್ಚ್ ಅಂಡ್ ಟ್ರೈನಿಂಗ್ ಸೆಂಟರ್ ಕೂಡಾ ಮುಖ್ಯವಾದದ್ದು. ಅಲ್ಲಿ ಅವರು ನಿರ್ದೇಶಕರಾಗಿ ಸಹಾ 5 ವರ್ಷ ಸೇವೆ ಸಲ್ಲಿಸಿದರು. ಇವರ ಮಹತ್ವದ ಕೊಡುಗೆಗಾಗಿ ಭಾರತ ಸರ್ಕಾರವು 'ನ್ಯಾಷನಲ್ ರಿಸರ್ಚ್ ಪ್ರೊಫೆಸರ್' ಎಂಬ ವಿಶಿಷ್ಟ ಗೌರವವನ್ನು ಸಹಾ ಸಲ್ಲಿಸಿತು.
ಹೀಗೆ ವೈವಿಧ್ಯಮಯ ವಿಶಿಷ್ಟ ಕೊಡುಗೆಗಳಿಂದ ಪ್ರಖ್ಯಾತರಾಗಿ ಬೆಂಗಳೂರಿನ ನಿವಾಸಿಗರಾಗಿದ್ದ ಡಾ. ಎಸ್.ಆರ್. ರಂಗನಾಥನ್ ಅವರು ಸೆಪ್ಟೆಂಬರ್ 27, 1972 ವರ್ಷದಲ್ಲಿ ಈ ಲೋಕವನ್ನಗಲಿದರು. 'ಎ ಲೈಬ್ರರಿಯನ್ ಲುಕ್ಸ್ ಬ್ಯಾಕ್' ಎಂಬುದು ಅವರ ಆತ್ಮಚರಿತ್ರೆ.
Tag: National Librarians' Day, Dr. S.R.Ranganathan
ಕಾಮೆಂಟ್ಗಳು