ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶೈಲಜಾ ಉಡಚಣ



ಶೈಲಜಾ ಉಡಚಣ


ಶೈಲಜಾ ಉಡಚಣ ಬರಗಾರ್ತಿಯಾಗಿ ಮತ್ತು ಸಮಾಜ ಸೇವಕಿಯಾಗಿ ಹೆಸರಾಗಿದ್ದವರು.

ಶೈಲಜಾ ಉಡಚಣ ಅವರು 1935ರ ಜುಲೈ 26ರಂದು ರಾಯಚೂರಿನಲ್ಲಿ ಜನಿಸಿದರು. ಅವರಿಗೆ ತಂದೆ-ತಾಯಿ ಇಟ್ಟ ಹೆಸರು ಮಹಾಂತಮ್ಮ ಹಸಮಕಲ್‌. ಗುಲ್ಬರ್ಗದ 
ಬಸವಣ್ಣಪ್ಪ ಉಡಚಣರನ್ನು ವಿವಾಹವಾದ ನಂತರ ಶೈಲಜಾ ಉಡಚಣ ಎಂದಾದರು.

ಶೈಲಜಾ ಉಡಚಣ ಅವರು ನಿಜಾಮರ ಆಡಳಿತ ಕಾಲದ ಮಹಿಳಾ ಸ್ಕೂಲಿನಲ್ಲಿ ಏಳನೆಯ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದರು. ಹೆಣ್ಣು ಮಕ್ಕಳಿಗೆ ಓದಲು ಅವಕಾಶವಿಲ್ಲದ ಪರಿಸ್ಥಿತಿ, ರಜಾಕರ ಆಕ್ರಮಣ ಶೀಲ ಭಯಾನಕ ಪರಿಸ್ಥಿತಿಗಳ ನಡುವೆಯೂ  ಶಾಲೆಗೆ ಹೋಗಿ ಓದಿದರು. ಅಧ್ಯಯನಶೀಲ ಮನೋಧರ್ಮದ ಶೈಲಜಾ ಅವರು  ಬಿ.ಎ., ಬಿ.ಎಡ್‌., ಎಂ.ಎ. ಪದವಿಗಳನ್ನೆಲ್ಲಾ ಖಾಸಗಿಯಾಗಿ ಓದಿ ಪಡೆದರು. 

ಶೈಲಜಾ ಉಡಚಣ ಅವರು 1958ರಲ್ಲಿ ಗುಲ್ಬರ್ಗಾ  ಕಾಲೇಜಿಗೆ ಅಧ್ಯಾಪಕಿಯಾಗಿ ನೇಮಕಗೊಂಡರು.  ನಂತರ ಗುಲ್ಬರ್ಗಾ ಸರಕಾರಿ ಕಾಲೇಜು‌, ಮೈಸೂರು ಮತ್ತು ಬೆಂಗಳೂರಿನ ಮಹಾರಾಣಿ ಕಾಲೇಜುಗಳಲ್ಲಿ  ಕಾರ್ಯನಿರ್ವಹಿಸಿ 1991ರಲ್ಲಿ ನಿವೃತ್ತಿ ಪಡೆದರು. 

ಶೈಲಜಾ ಉಡಚಣ ಅವರು 9ನೆಯ ತರಗತಿಯಲ್ಲಿದ್ದಾಗಲೇ ಸ್ಥಳೀಯ ಪತ್ರಿಕೆಗಳಿಗೆ ಹಲವಾರು ಪದ್ಯಗಳನ್ನು ಬರೆದಿದ್ದರು. ಎಂ.ಎಂ. ಕಲಬುರ್ಗಿ ಮತ್ತು ಗುರುಲಿಂಗ ಕಾಪಸೆಯವರ ಒತ್ತಾಯದ ಮೇರೆಗೆ ಇವರ ಮೊದಲ ಕವನ ಸಂಕಲನ ‘ಒಂದು ಗಳಿಗೆ’ 1972ರಲ್ಲಿ ಪ್ರಕಟವಾಯಿತು.  ನಂತರ ಕಾದುನೋಡು, ಸ್ವಗತ, ಕಪ್ಪುನೆಲ ಸೊಕ್ಕಿದ ಸೂರ್ಯ, ತುಂತುರು ಹನಿಗಳು, ನನ್ನಂಥವರು ಮುಂತಾದ ಹಲವಾರು ಕವನ ಸಂಕಲನಗಳು ಪ್ರಕಟಗೊಂಡವು.  1977ರಲ್ಲಿ ‘ಕೇಳು ಮಗಾ’ ಎಂಬ ವಚನ ಸಂಕಲನವನ್ನು ಹೊರತಂದರು. ಇವರ ಕೆಲವು ಕವಿತೆಗಳು ಹಿಂದಿ ಹಾಗೂ ಮರಾಠಿ ಭಾಷೆಗೂ ಅನುವಾದಗೊಂಡಿವೆ. 

ಶೈಲಜಾ ಉಡಚಣ ಅವರು  1977ರಲ್ಲಿ ‘ವಚನಕಾರರ ದೃಷ್ಟಿಯಲ್ಲಿ ಸ್ತ್ರೀ’ ಎಂಬ ಪ್ರೌಢಪ್ರಬಂದಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯದಿಂದ  ಪಿಎಚ್‌.ಡಿ ಗೌರವ ಗಳಿಸಿದರು. ಈ ಗ್ರಂಥವು 1991ರಲ್ಲಿ ಪ್ರಕಟಗೊಂಡಿತು. 

ಶೈಲಜಾ ಉಡಚಣ ಅವರ  ಗದ್ಯ ಕೃತಿಗಳಲ್ಲಿ ವಚನಗಳಲ್ಲಿ ಸತಿಪತಿಭಾವ, ನನ್ನ ಲೇಖನಗಳು, ವಚನ ಸಾಹಿತ್ಯ ಮತ್ತು ಮಹಿಳೆ, ಮೂರು ಮಾತು ನೂರು ನೀತಿ, ನಾನು ಮತ್ತು ಸಾಹಿತ್ಯ, ಕಾಲ ನಮ್ಮ ಕೈಯಲ್ಲಿದೆ,  ಅಮೃತಾ ಪ್ರೀತಮ್‌ ಅವರ ಕೃತಿ ಅನುವಾದ 'ನುಡಿನೆರಳು' ಮುಂತಾದವು ಸೇರಿವೆ. 

ಶೈಲಜಾ ಉಡಚಣ ಅವರು ಗುಲ್ಬರ್ಗ ಜಿಲ್ಲಾ ಮಟ್ಟದ ಮಹಿಳಾ ಸಹಕಾರ ಬ್ಯಾಂಕ್‌  ಸ್ಥಾಪನೆಯಲ್ಲಿ ಪ್ರಮುಖ ಪಾತ್ರಧಾರಿಯಾದರು.  ಇದಕ್ಕಾಗಿ ದೆಹಲಿಯ ಮಹಿಳಾ ಆಯೋಗವು  1997ರಲ್ಲಿ ಸೇವಾ ಪುರಸ್ಕಾರ ನೀಡಿ ಗೌರವಿಸಿತು. 

ಶೈಲಜಾ ಉಡಚಣ ಅವರಿಗೆ ಕಲಬುರ್ಗಿ ಜಿಲ್ಲೆಯ ಮೂರನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 1992ರಲ್ಲಿ ಕೊಪ್ಪಳದಲ್ಲಿ ನಡೆದ ಅಖಿಲಭಾರತ ಸಾಹಿತ್ಯ ಸಮ್ಮೇಳನದ ಎರಡನೆಯ ಭಾವೈಕ್ಯ ಕವಿಗೋಷ್ಠಿಯ ಅಧ್ಯಕ್ಷತೆ, ಮುಧೋಳದಲ್ಲಿ 1995ರಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಗೌರವ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಅನುಪಮ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರ್ಕಾರದ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಮುಂತಾದ ಗೌರವಗಳು ಸಂದಿದ್ದವು.

ಶೈಲಜಾ ಉಡಚಣ ಅವರು 2010ರ ಡಿಸಂಬರ್ 6ರಂದು ಈ ಲೋಕವನ್ನಗಲಿದರು.

On the birth anniversary of writer, teacher and social worker Shylaja Udachana

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ